
ಬೆಂಗಳೂರು, ಆಗಸ್ಟ್ 24: ರಾಜ್ಯದ ಸರ್ಕಾರಿ ಉದ್ಯಾನವನಗಳು ಮತ್ತು ತೋಟಗಳ ಒಟ್ಟು ವಿಸ್ತೀರ್ಣದ ಗರಿಷ್ಠ ಶೇ 5ರಷ್ಟು ಭೂಮಿಯನ್ನು ಇತರೆ ಸಾರ್ವಜನಿಕ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ಕಲ್ಪಿಸುವ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತವಾಗಿತ್ತು. ವಿರೋಧದ ಮಧ್ಯೆ ಇಂದು ವಿಧಾನಮಂಡಲದಲ್ಲಿ ಕರ್ನಾಟಕ ಉದ್ಯಾನವನಗಳ ವಿಧೇಯಕ ಅಂಗೀಕರಿಸಲಾಗಿದೆ. ಈ ಕುರಿತಾಗಿ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್ಗೆ ಪತ್ರ ಬರೆದಿರುವ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ (Tejasvi Surya), ‘ಸಾರ್ವಜನಿಕ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ವಿಧೇಯಕವನ್ನು ಸರ್ಕಾರಕ್ಕೆ ಮರುಪರಿಶೀಲನೆಗೆ ವಾಪಸ್ ಕಳುಹಿಸಬೇಕು’ ಎಂದು ಮನವಿ ಮಾಡಿದ್ದಾರೆ.
ಈ ಕುರಿತಾಗಿ ಟ್ವೀಟ್ ಮಾಡಿರುವ ಸಂಸದ ತೇಜಸ್ವಿ ಸೂರ್ಯ, ‘ಕರ್ನಾಟಕದಾದ್ಯಂತ ಶೇ. 5ರಷ್ಟು ಉದ್ಯಾನವನದ ಭೂಮಿಯನ್ನು ಇತರ ಉದ್ದೇಶಗಳಿಗೆ ಬಳಸಿಕೊಳ್ಳಲು ಅವಕಾಶ ನೀಡುವ ವಿಧೇಯಕವು ಇಂದು ಅಂಗೀಕಾರವಾಗಿರುವುದು ದುರದೃಷ್ಟಕರ’ ಎಂದಿದ್ದಾರೆ.
The Bill allowing the diversion of up to 5% of parkland across Karnataka has been passed today. This has been brought specifically to facilitate projects like the Tunnel Road through Lalbagh.
It is a sad day for everyone who cares about protecting our environment, our parks and… pic.twitter.com/7KLXPFxV2x
— Tejasvi Surya (@Tejasvi_Surya) August 24, 2026
‘ಲಾಲ್ಬಾಗ್ ಮೂಲಕ ಹಾದುಹೋಗುವ ಸುರಂಗ ರಸ್ತೆಯಂತಹ ಯೋಜನೆಗಳಿಗೆ ಅನುಕೂಲ ಮಾಡಿಕೊಡಲು ವಿಶೇಷವಾಗಿ ಈ ವಿಧೇಯಕವನ್ನು ತರಲಾಗಿದ್ದು, ನಮ್ಮ ಪರಿಸರ, ನಮ್ಮ ಉದ್ಯಾನವನಗಳು ಮತ್ತು ನಮ್ಮ ನಗರಗಳಲ್ಲಿ ಕ್ಷಿಪ್ರವಾಗಿ ಕುಗ್ಗುತ್ತಿರುವ ಹಸಿರು ಪ್ರದೇಶಗಳನ್ನು ರಕ್ಷಿಸಲು ಕಾಳಜಿ ವಹಿಸುವ ಪ್ರತಿಯೊಬ್ಬರಿಗೂ ಇದು ಅತ್ಯಂತ ದುಃಖದ ದಿನವಾಗಿದೆ’ ಎಂದು ಹೇಳಿದ್ದಾರೆ.
ಇದನ್ನೂ ಓದಿ: ಉದ್ಯಾನವನಗಳ ಮೇಲೆ ಸರ್ಕಾರದ ಕಣ್ಣು: ಶೇ 5ರಷ್ಟು ಜಾಗ ಸಾರ್ವಜನಿಕ ಬಳಕೆಗೆ, ಬೆಂಗಳೂರಿಗರ ತೀವ್ರ ವಿರೋಧ
‘ಈ ವಿಧೇಯಕವನ್ನು ಮರುಪರಿಶೀಲನೆಗಾಗಿ ಶಾಸನಸಭೆಗೆ ವಾಪಸ್ ಕಳುಹಿಸುವಂತೆ ಕೋರಿ ನಾನು ರಾಜ್ಯಪಾಲರಿಗೆ ಪತ್ರ ಬರೆದಿದ್ದೇನೆ. ಏನೇ ಆದರೂ, ಲಾಲ್ಬಾಗ್ ಮತ್ತು ಬೆಂಗಳೂರಿನ ಹಸಿರು ಪ್ರದೇಶಗಳನ್ನು ರಕ್ಷಿಸುವ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.