ಸಿಡಿ ಸಂತ್ರಸ್ತ ಯುವತಿ ಹೇಳಿಕೆ ದಾಖಲು ವೇಳೆ ಕೆಪಿಸಿಸಿ ಪದಾಧಿಕಾರಿ ಸೂರ್ಯ ಮುಕುಂದರಾಜ್ ಇದ್ದರು: ವಕೀಲ ಜಗದೀಶ್
ಯುವತಿಯ ಹೇಳಿಕೆ ದಾಖಲಾತಿಯ ವೇಳೆ ನಾನು ಉಪಸ್ಥಿತರಿರಲಿಲ್ಲ ಎಂದು ವಕೀಲ ಸೂರ್ಯ ಮುಕುಂದರಾಜ್ ಸ್ಪಷ್ಟನೆ ನೀಡಿದ್ದರು. ಆದರೆ ಸೂರ್ಯ ಮುಕುಂದರಾಜ್ ಹೇಳಿದ್ದು ಸುಳ್ಳು, ಆ ವೇಳೆ ಅವರು ಉಪಸ್ಥಿತರಿದ್ದರು ಎಂದು ಕೆ.ಎನ್.ಜಗದೀಶ್ ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.

ಬೆಂಗಳೂರು: ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತೆ ಹೇಳಿಕೆ ದಾಖಲು ವೇಳೆ ಕೆಪಿಸಿಸಿ ಕಾನೂನು ಘಟಕದ ಪದಾಧಿಕಾರಿ, ವಕೀಲ ಸೂರ್ಯ ಮುಕುಂದರಾಜ್ ಇದ್ದಿದ್ದು ನಿಜ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ತಿಳಿಸಿದ್ದಾರೆ. ಟಿವಿ9 ಕನ್ನಡಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಭಾರತೀಯ ದಂಡಸಂಹಿತೆ (CRPC) 164ರ ಅಡಿ ಸಂತ್ರಸ್ತೆ ಹೇಳಿಕೆ ದಾಖಲಿಸುವಾಗ ವಕೀಲ ಸೂರ್ಯ ಮುಕುಂದರಾಜ್ ಅವರು ಉಪಸ್ಥಿತರಿದ್ದರು. ನಾನೇ ಸೂರ್ಯ ಮುಕುಂದರಾಜ್ ಅವರನ್ನು ಸಂಪರ್ಕಿಸಿದ್ದೆ. ಈ ಪ್ರಕರಣವನ್ನು ಮುಂದುವರೆಸಲು ನನಗೆ ಅತ್ಯಂತ ಹಿರಿಯ, ಅನುಭವಿ ವಕೀಲರ ಸಹಕಾರ ಬೇಕಿತ್ತು. ವಕೀಲಿ ವೃತ್ತಿಯಲ್ಲಿ ನಾನು ಹೊಸಬ, ಈ ಪ್ರಕರಣವನ್ನು ಸಮರ್ಥವಾಗಿ ಮುನ್ನಡೆಸಲು ಹಲವು ವಕೀಲರನ್ನು ನಾನಾಗಿಯೇ ಸಂಪರ್ಕಿಸಿದೆ. ಹೀಗೆ ನಾನಾಗಿಯೇ ಸಂಪರ್ಕಸಿದ ವಕೀಲರ ಪೈಕಿ ಸೂರ್ಯ ಮುಕುಂದರಾಜ್ ಅವರೂ ಒಬ್ಬರಾಗಿದ್ದರು’ ಎಂದು ಯುವತಿ ಪರ ವಕೀಲ ಕೆ.ಎನ್.ಜಗದೀಶ್ ತಿಳಿಸಿದ್ದಾರೆ.
ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣದ ಸಂತ್ರಸ್ತ ಯುವತಿಯ ಹೇಳಿಕೆ ದಾಖಲು ಮಾಡುವಾಗ ಕೆಪಿಸಿಸಿ ಕಾನೂನು ಘಟಕದ ಪದಾಧಿಕಾರಿಯೂ ಆಗಿರುವ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತರಿದ್ದರು ಎಂದು ಯುವತಿಯ ಪೋಷಕರು ಆರೋಪಿಸಿದ್ದರು. ಹೈಕೋರ್ಟ್ಗೆ ಸಲ್ಲಿಸಿದ ರಿಟ್ ಅರ್ಜಿಯಲ್ಲೂ ಯುವತಿಯ ಪೋಷಕರು ಆಕ್ಷೇಪಣೆ ವ್ಯಕ್ತಪಡಿಸಿದ್ದರು. ಕಾಂಗ್ರೆಸ್ ಪದಾಧಿಕಾರಿ ಆ ವೇಳೆ ಅಲ್ಲಿದ್ದದ್ದೇಕೆ ಎಂದು ಯುವತಿಯ ತಂದೆ ಪ್ರಶ್ನಿಸಿದ್ದರು.
ಆದರೆ ಸೂರ್ಯ ಮುಕುಂದರಾಜ್ ಹೇಳಿದ್ದು ಸುಳ್ಳು, ಆ ವೇಳೆ ಅವರು ಉಪಸ್ಥಿತರಿದ್ದರು ಎಂದು ಕೆ.ಎನ್.ಜಗದೀಶ್ ಟಿವಿ9 ಕನ್ನಡಕ್ಕೆ ತಿಳಿಸಿದ್ದಾರೆ.
ಸಿಡಿ ಲೇಡಿ ತಂದೆಗೆ ಯಾರು ಹೇಳಿದರೋ ಗೊತ್ತಿಲ್ಲ. ಅವರು ಸೂರ್ಯ ಮುಕುಂದರಾಜ್ ಅಲ್ಲಿದ್ದಾರೆಂದು ಹೇಳುತ್ತಾರೆ. ನಾನು ಕಾಂಗ್ರೆಸ್ ಸೇರುವ ಮುನ್ನ ವಕೀಲನಾಗಿದ್ದೆ. ನನ್ನ ಸೇವೆ ಬಯಸುವವರ ಪರ ವಕಾಲತ್ತು ವಹಿಸುತ್ತೇನೆ ಎಂದು ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಸೂರ್ಯ ಮುಕುಂದರಾಜ್ ಬೆಂಗಳೂರಿನಲ್ಲಿ ಪ್ರತಿಕ್ರಿಯೆ ನೀಡಿದ್ದರು.
ಜಗದೀಶ್ ಅವರು ನನ್ನ ಸಹಕಾರ ಕೇಳಿದ್ದಕ್ಕೆ ಅಲ್ಲಿ ಹಾಜರಿದ್ದೆ. ಅವರು ಏನು ಬೇಕಾದರೂ ಹೇಳಲಿ ನಾನು ಉತ್ತರಿಸಲ್ಲ. ಸಿಡಿಯಲ್ಲಿರುವ ಯುವತಿ, ವಕೀಲ ಜಗದೀಶ್ ನನ್ನನ್ನು ಪ್ರಕರಣ ಮುನ್ನಡೆಸಿ ಎಂದು ಕೇಳಿಕೊಂಡಿದ್ದಾರೆ. ಇದರಲ್ಲಿ ನಮ್ಮ ಒತ್ತಡ ಇಲ್ಲ ಎಂದು ಸೂರ್ಯ ಮುಕುಂದರಾಜ್ ಹೇಳಿದ್ದರು.
ಯುವತಿಗೆ ರಕ್ಷಣೆ ಕೊಡಲು ಸರ್ಕಾರ ಮುಂದೆ ಬರಬೇಕು. ಸರ್ಕಾರ ಜನರ ದಾರಿ ತಪ್ಪಿಸುವ ಕೆಲಸವನ್ನು ಮಾಡುತ್ತಿದೆ. ಸರ್ಕಾರ ವಕೀಲರ ಫೋನ್ ಕರೆಗಳನ್ನ ಕದ್ದಾಲಿಕೆ ಮಾಡಿದೆ. ಈವರೆಗೆ ಯಾವ ಸರ್ಕಾರವೂ ಈ ರೀತಿ ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪನವರೇ ಇದು ಒಳ್ಳೆಯದಲ್ಲ. ತುರ್ತು ಪರಿಸ್ಥಿತಿಯಲ್ಲೂ ವಕೀಲರ ಕರೆ ಕದ್ದಾಲಿಕೆ ಆಗಿಲ್ಲ. ಗೃಹಸಚಿವರೇ ನ್ಯಾಯಾಂಗ ವ್ಯವಸ್ಥೆ ಬುಡಮೇಲು ಮಾಡ್ಬೇಡಿ. ನೀವು ಆರೋಪ ಮಾಡುತ್ತಿರುವುದು ನನ್ನ ಮೇಲೆ ಅಲ್ಲ. ನ್ಯಾಯಾಂಗ, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ಮೇಲೆ ಎಂದು ಸರ್ಕಾರದ ವಿರುದ್ಧ ಮಾತನಾಡಿದ್ದಾರೆ.
ಇದನ್ನೂ ಓದಿ: ಸ್ವಾಮೀಜಿ ಮೂಲಕ ಪೋಷಕರ ಮೇಲೆ ಒತ್ತಡ: ಯುವತಿ ಪರ ವಕೀಲ ಸೂರ್ಯ ಮುಕುಂದರಾಜ್
ಎಸ್ಐಟಿ ತನಿಖೆಗೆ ಸಂತ್ರಸ್ತ ಯುವತಿ ಹಾಜರ್, ಶಾಸಕ ರಮೇಶ್ ಜಾರಕಿಹೊಳಿ ಆಬ್ಸೆಂಟ್; ಮುಂದೇನು?