AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನಮ್ಮ ಮೆಟ್ರೋದಿಂದ ಪರಿಸರಸ್ನೇಹಿ ಹೆಜ್ಜೆ: ಬೆಂಗಳೂರಿನಲ್ಲಿ 2 ಲಕ್ಷ ಗಿಡ ನೆಡಲು ಮುಂದಾದ ಬಿಎಂಆರ್‌ಸಿಎಲ್

ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯಕ್ಕೆ ಬ್ರೇಕ್ ಹಾಕಲು ಬಿಎಂಆರ್‌ಸಿಎಲ್ ಮಹತ್ವದ ಹೆಜ್ಜೆ ಇಟ್ಟಿದೆ. ನಮ್ಮ ಮೆಟ್ರೋ ಹಳದಿ ಮತ್ತು ಹಸಿರು ಮಾರ್ಗಗಳ ಪ್ರಮುಖ ನಿಲ್ದಾಣಗಳ ಸುತ್ತಮುತ್ತ ಪರಿಸರಸ್ನೇಹಿ ಯೋಜನೆ ಅಡಿಯಲ್ಲಿ 2 ಲಕ್ಷ ಗಿಡಗಳನ್ನು ನೆಡಲು ಮುಂದಾಗಿದೆ. ಈ ಕಾರ್ಯಕ್ಕೆ ಜನರಿಂದ ಭಾರಿ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ನಮ್ಮ ಮೆಟ್ರೋದಿಂದ ಪರಿಸರಸ್ನೇಹಿ ಹೆಜ್ಜೆ: ಬೆಂಗಳೂರಿನಲ್ಲಿ 2 ಲಕ್ಷ ಗಿಡ ನೆಡಲು ಮುಂದಾದ ಬಿಎಂಆರ್‌ಸಿಎಲ್
ಹಂತ ಹಂತವಾಗಿ ಲಕ್ಷಾಂತರ ಗಿಡಗಳನ್ನು ಈಗಾಗಲೇ ಯಶಸ್ವಿಯಾಗಿ ನೆಡಲಾಗಿದೆ.Image Credit source: tv9
ಕಿರಣ್​ ಸೂರ್ಯ
| Edited By: |

Updated on:Jun 06, 2026 | 8:01 AM

Share

ಬೆಂಗಳೂರು, ಜೂನ್ 6: ಬೆಂಗಳೂರಿನಲ್ಲಿ ದಿನದಿಂದ ದಿನಕ್ಕೆ ವಾಹನಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗುತ್ತಿದ್ದು, ವಾಯುಮಾಲಿನ್ಯ ಹೆಚ್ಚಾಗುತ್ತಿದೆ. ಇದರಿಂದ ಸಾರ್ವಜನಿಕರ ಆರೋಗ್ಯ ಸಮಸ್ಯೆಗಳು ಕೂಡ ತೀವ್ರಗೊಳ್ಳುತ್ತಿವೆ. ಈ ಗಂಭೀರ ಪರಿಸ್ಥಿತಿಗೆ ಬ್ರೇಕ್ ಹಾಕಲು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ (BMRCL) ಭಾರಿ ಪರಿಸರಸ್ನೇಹಿ ಯೋಜನೆಯೊಂದನ್ನು ಕೈಗೆತ್ತಿಕೊಂಡಿದೆ. ಮೆಟ್ರೋ ಕಾಮಗಾರಿಗಳಿಗಾಗಿ ಕತ್ತರಿಸಲಾಗಿದ್ದ ಸಾವಿರಾರು ಮರಗಳಿಗೆ ಪರ್ಯಾಯವಾಗಿ, ನಗರದ ವಿವಿಧ ಮೆಟ್ರೋ ಕಾರಿಡಾರ್‌ಗಳಲ್ಲಿ ಒಟ್ಟು ಎರಡು ಲಕ್ಷ ಗಿಡಗಳನ್ನು ನೆಡಲು ಬಿಎಂಆರ್‌ಸಿಎಲ್ ಮುಂದಾಗಿದ್ದು, ನಮ್ಮ ಮೆಟ್ರೋದ ಈ ನಡೆಗೆ ಪ್ರಯಾಣಿಕರು ಹಾಗೂ ಪರಿಸರ ಪ್ರೇಮಿಗಳು ಫುಲ್ ಖುಷ್ ಆಗಿದ್ದಾರೆ.

ಮುಖ್ಯಾಂಶಗಳು

  • ನಮ್ಮ ಮೆಟ್ರೋದಿಂದ 2 ಲಕ್ಷ ಗಿಡ ನೆಡುವ ಯೋಜನೆ.
  • ಮೆಟ್ರೋ ಮಾರ್ಗವನ್ನು ಹಸಿರು ಕಾರಿಡಾರ್ ಆಗಿ ಪರಿವರ್ತನೆ.
  • ಬಿಎಂಆರ್​ಸಿಎಲ್ ನಡೆಗೆ ಪ್ರಯಾಣಿಕರಿಂದ ಭಾರಿ ಪ್ರಶಂಸೆ.

ಮೆಟ್ರೋ ಹಳದಿ, ಹಸಿರು ಮಾರ್ಗಗಳಲ್ಲಿ ಹಸಿರೀಕರಣ

ಬೆಂಗಳೂರಿನ ರಸ್ತೆಗಳಿಗೆ ಪ್ರತಿದಿನ ಸುಮಾರು ಎರಡು ಸಾವಿರ ಹೊಸ ವಾಹನಗಳು ಇಳಿಯುತ್ತಿವೆ ಎಂದು ಅಂದಾಜಿಸಲಾಗಿದ್ದು, ಇದರಿಂದ ಹೊರಸೂಸುವ ವಿಷಕಾರಿ ಅನಿಲ ನಗರದ ವಾತಾವರಣವನ್ನು ಕಲುಷಿತಗೊಳಿಸುತ್ತಿದೆ. ಇದಕ್ಕೆ ಸೂಕ್ತ ಪರಿಹಾರ ಕಂಡುಕೊಳ್ಳಲು ಮುಂದಾಗಿರುವ ಬಿಎಂಆರ್‌ಸಿಎಲ್, ಆರ್.ವಿ. ರಸ್ತೆ ಹಾಗೂ ಬೊಮ್ಮಸಂದ್ರ ನಡುವಿನ ಹಳದಿ ಮಾರ್ಗದ (Yellow Line) ಪ್ರಮುಖ ನಿಲ್ದಾಣಗಳಾದ ಆರ್.ವಿ. ರಸ್ತೆ, ಬಿಟಿಎಂ ಲೇಔಟ್, ರಾಗಿಗುಡ್ಡ, ಜಯದೇವ ಆಸ್ಪತ್ರೆ ಹಾಗೂ ಮಾದಾವರ ಮತ್ತು ಸಿಲ್ಕ್ ಇನ್‌ಸ್ಟಿಟ್ಯೂಟ್ ಮಾರ್ಗದ ಹಸಿರು ಲೈನಿನಲ್ಲಿ ಬರುವ ಜೆ.ಪಿ. ನಗರ ಮೆಟ್ರೋ ನಿಲ್ದಾಣಗಳ ಸುತ್ತಮುತ್ತ ಭಾರಿ ಪ್ರಮಾಣದಲ್ಲಿ ಗಿಡಗಳನ್ನು ನೆಡಲು ಸಿದ್ಧತೆ ನಡೆಸಿದೆ. ಈ ಭಾಗಗಳಲ್ಲಿ ಈಗಾಗಲೇ ಹಂತ ಹಂತವಾಗಿ ಲಕ್ಷಾಂತರ ಗಿಡಗಳನ್ನು ಯಶಸ್ವಿಯಾಗಿ ನೆಡಲಾಗಿದ್ದು, ಉಳಿದ ಸಸಿಗಳನ್ನು ನೆಡುವ ಪ್ರಕ್ರಿಯೆ ಪ್ರಗತಿಯಲ್ಲಿದೆ.

ಹಸಿರು ಸಾರಿಗೆ ಕಾರಿಡಾರ್ ಪರಿಕಲ್ಪನೆ: ಸಂಘಸಂಸ್ಥೆಗಳ ಸಾಥ್

ಬಿಎಂಆರ್‌ಸಿಎಲ್ ಈಗಾಗಲೇ ಆರ್.ವಿ. ರಸ್ತೆ, ಬಿಟಿಎಂ ಲೇಔಟ್, ರಾಗಿಗುಡ್ಡ, ಜಯದೇವ ಆಸ್ಪತ್ರೆ ಮತ್ತು ಜೆ.ಪಿ. ನಗರ ಮೆಟ್ರೋ ನಿಲ್ದಾಣಗಳ ಸುತ್ತಲಿನ ಪ್ರದೇಶಗಳನ್ನು ಪರಿಸರಸ್ನೇಹಿ ‘ಹಸಿರು ಸಾರಿಗೆ ಕಾರಿಡಾರ್‌’ಗಳಾಗಿ (Green Transit Corridors) ಯಶಸ್ವಿಯಾಗಿ ಪರಿವರ್ತಿಸಿದೆ. ಮೆಟ್ರೋ ಮಾರ್ಗಗಳ ನಿರ್ಮಾಣದ ಸಂದರ್ಭದಲ್ಲಿ ಅನಿವಾರ್ಯವಾಗಿ ಸಾವಿರಾರು ಮರಗಳನ್ನು ಕತ್ತರಿಸಲಾಗಿತ್ತು. ಇದರ ನಷ್ಟವನ್ನು ಸರಿದೂಗಿಸಲು ಈ ವಿನೂತನ ಕ್ರಮ ಕೈಗೊಳ್ಳಲಾಗಿದೆ. ಸದ್ಯ ಸಾರ್ವಜನಿಕ ವಲಯದ ಸಂಘ-ಸಂಸ್ಥೆಗಳ ಮತ್ತು ವಿವಿಧ ಎನ್‌ಜಿಒಗಳ ಸಕ್ರಿಯ ಸಹಯೋಗದೊಂದಿಗೆ ಬಾಕಿ ಉಳಿದಿರುವ ಗಿಡಗಳನ್ನು ನೆಡುವ ಕಾರ್ಯವನ್ನು ಚುರುಕುಗೊಳಿಸಲಾಗಿದೆ. ಬಿಎಂಆರ್‌ಸಿಎಲ್‌ನ ಈ ಬೃಹತ್ ಪರಿಸರ ಕಾಳಜಿಯು ಮುಂದಿನ ದಿನಗಳಲ್ಲಿ ಬೆಂಗಳೂರಿನ ಮಾಲಿನ್ಯ ನಿಯಂತ್ರಣಕ್ಕೆ ದಾರಿಯಾಗಲಿದ್ದು, ಪ್ರಯಾಣಿಕರಿಂದ ವ್ಯಾಪಕ ಶ್ಲಾಘನೆ ವ್ಯಕ್ತವಾಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 7:56 am, Sat, 6 June 26

Follow Us
Kiran Surya
Kiran Surya

ಕಿರಣ್ ಸೂರ್ಯ (Kiran Surya) ಅವರು ಟಿವಿ9 ಕನ್ನಡ (TV9 Kannada) ವಾಹಿನಿಯಲ್ಲಿ ಹಿರಿಯ ವರದಿಗಾರರಾಗಿ (Senior Reporter) ಕಾರ್ಯನಿರ್ವಹಿಸುತ್ತಿದ್ದಾರೆ

Read More