ನಿಮ್ಮ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸ್ಗೆ ಸೇರಿಸುತ್ತೀರಾ? ಈ ವಿಚಾರ ತಿಳಿದಿರಲಿ
ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ 17ರಷ್ಟು ಮಂದಿ ಮಾತ್ರ ಉದ್ಯೋಗಕ್ಕೆ ಅರ್ಹರಾಗಿದ್ದಾರೆ ಎಂದು ತಜ್ಞರ ಸಮಿತಿ ವರದಿ ನೀಡಿದೆ. ಶಿಕ್ಷಣದ ಗುಣಮಟ್ಟ ಕುಸಿತ ಮತ್ತು ಕಂಪ್ಯೂಟರ್ ಸೈನ್ಸ್ ವ್ಯಾಮೋಹದಿಂದ ಉದ್ಯೋಗ ಬಿಕ್ಕಟ್ಟು ಸೃಷ್ಟಿಯಾಗಿದ್ದು, ಇದನ್ನು ಸರಿಪಡಿಸಲು ಸರ್ಕಾರ 'ಕೀರಾ' (KEERA) ಪ್ರಾಧಿಕಾರ ರಚಿಸಲು ಮುಂದಾಗಿದೆ.

ಬೆಂಗಳೂರು, ಮೇ 01: ದ್ವಿತೀಯ ಪಿಯುಸಿ ಪರೀಕ್ಷೆ ಮುಗಿದು ಸಿಇಟಿಯಲ್ಲಿ ರ್ಯಾಂಕ್ ಬಂದ ಕೂಡಲೇ ಮಕ್ಕಳನ್ನು ಇಂಜಿನಿಯರಿಂಗ್ ಕೋರ್ಸಿಗೆ (Engineering) ಸೇರಿಸಿ ಬಿಟ್ಟರೆ ಮುಗಿಯಿತು. ನಾಲ್ಕು ವರ್ಷ ಕಳೆಯುತ್ತಿದ್ದಂತೆ ಕ್ಯಾಂಪಸ್ ಸಂದರ್ಶನದಲ್ಲಿ ಉದ್ಯೋಗ ಸಿಕ್ಕಿಯೇ ಬಿಡುತ್ತದೆ ಎಂಬ ಭಾವನೆ ಬಹುತೇಕ ಪೋಷಕರಲ್ಲಿದೆ. ಆದರೆ, ಇದಕ್ಕೆ ತದ್ವಿರುದ್ಧವಾದ ಮತ್ತು ಆಘಾತಕಾರಿಯಾದ ವಿಚಾರ ಒಂದು ಈಗ ಬಹಿರಂಗವಾಗಿದೆ. ಕರ್ನಾಟಕದ ಇಂಜಿನಿಯರಿಂಗ್ ಪದವೀಧರರಲ್ಲಿ ಕೇವಲ ಶೇ. 17ರಷ್ಟು ಜನರಿಗೆ ಮಾತ್ರ ಉದ್ಯೋಗ ಸಿಗುತ್ತಿದೆ ಎಂದು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಪರಿವರ್ತನೆ ಸುಧಾರಣಾ ಸಮಿತಿ ಸಲ್ಲಿಸಿರುವ ವರದಿ ಬಹಿರಂಗಪಡಿಸಿದೆ. ಅಂದರೆ, ರಾಜ್ಯದ ಬರೋಬ್ಬರಿ ಶೇ. 83ರಷ್ಟು ಇಂಜಿನಿಯರಿಂಗ್ ಪದವೀಧರರು ಉದ್ಯೋಗ ಮಾರುಕಟ್ಟೆಗೆ ಬೇಕಾದ ಕೌಶಲ್ಯ ಹೊಂದಿಲ್ಲದೆ ನಿರುದ್ಯೋಗಿಗಳಾಗುತ್ತಿದ್ದಾರೆ.
ಉದ್ಯೋಗ ಬಿಕ್ಕಟ್ಟಿಗೆ ಕಾರಣವೇನು?
ಪ್ರೊ. ಸಾದಗೋಪನ್ ನೇತೃತ್ವದ ತಜ್ಞರ ಸಮಿತಿಯು ಉದ್ಯೋಗದ ಈ ಗಂಭೀರ ಕುಸಿತಕ್ಕೆ ಹಲವು ಪ್ರಮುಖ ಕಾರಣಗಳನ್ನು ಪಟ್ಟಿ ಮಾಡಿದೆ. ಕಂಪ್ಯೂಟರ್ ಸೈನ್ಸ್ ಪದವೀಧರರಿಗೆ ಉದ್ಯೋಗಾವಕಾಶಗಳ ಕೊರತೆಯಿಂದಾಗಿ ಹೆಚ್ಚಿನ ಪ್ರಮಾಣದ ನಿರುದ್ಯೋಗ ಸೃಷ್ಟಿಯಾಗಿದೆ. ಮೆಕ್ಯಾನಿಕಲ್, ಸಿವಿಲ್ ಮತ್ತು ಎಲೆಕ್ಟ್ರಿಕಲ್ನಂತಹ ಮೂಲ ಇಂಜಿನಿಯರಿಂಗ್ ವಿಭಾಗಗಳಿಗೆ ದಾಖಲಾತಿ ತೀವ್ರವಾಗಿ ಕುಸಿದಿದೆ. ಒಂದು ಕಾಲದಲ್ಲಿ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿದ್ದ ರಾಜ್ಯದ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಈಗ ಶಿಕ್ಷಣದ ಗುಣಮಟ್ಟ ಕುಸಿದಿದೆ. ವಿದ್ಯಾರ್ಥಿಗಳಲ್ಲಿ ಇಂದಿನ ಮಾರುಕಟ್ಟೆಗೆ ಬೇಕಾದ ಸ್ಪರ್ಧಾತ್ಮಕ ಕೌಶಲ್ಯಗಳ ಕೊರತೆ ಎದ್ದು ಕಾಣುತ್ತಿದೆ.
ಸೆಮಿಕಂಡಕ್ಟರ್ ಮತ್ತು ಏರೋಸ್ಪೇಸ್ ಕ್ಷೇತ್ರದಲ್ಲಿ ಭಾರಿ ಬೇಡಿಕೆ
ಆಶ್ಚರ್ಯಕರ ವಿಷಯವೆಂದರೆ, ಕಂಪ್ಯೂಟರ್ ಸೈನ್ಸ್ ಹೊರತುಪಡಿಸಿ ಇತರ ಕ್ಷೇತ್ರಗಳಲ್ಲಿ ತಜ್ಞರ ಭಾರಿ ಕೊರತೆ ಇದೆ. 2027ರ ವೇಳೆಗೆ ಭಾರತದಲ್ಲಿ ಸುಮಾರು 2.50 ರಿಂದ 3 ಲಕ್ಷ ವೃತ್ತಿಪರರ ಅಗತ್ಯವಿದ್ದು, ಕರ್ನಾಟಕದಲ್ಲಿಯೇ 10,000-15,000 ಜನರ ಕೊರತೆ ಎದುರಾಗಲಿದೆ. ಏರೋಸ್ಪೇಸ್ ಮತ್ತು ಡಿಫೆನ್ಸ್ (4,500-8,500), ಎಲೆಕ್ಟ್ರಿಕ್ ವೆಹಿಕಲ್ಸ್ (6,000-11,000) ಮತ್ತು ಕ್ಲೀನ್ ಎನರ್ಜಿ ಕ್ಷೇತ್ರಗಳಲ್ಲಿ ಭಾರಿ ಬೇಡಿಕೆ ಇದ್ದರೂ, ಇದನ್ನು ಸಿಎಸ್ ಅಥವಾ ಐಟಿ ಪದವೀಧರರಿಂದ ತುಂಬಲು ಸಾಧ್ಯವಿಲ್ಲ.
‘ಕೀರಾ’ (KEERA) ರಚನೆ
ಈ ಶಿಕ್ಷಣ ಬಿಕ್ಕಟ್ಟನ್ನು ಸರಿಪಡಿಸಲು ರಾಜ್ಯ ಸರ್ಕಾರವು ಕರ್ನಾಟಕ ಇಂಜಿನಿಯರಿಂಗ್ ಶಿಕ್ಷಣ ಸುಧಾರಣಾ ಪ್ರಾಧಿಕಾರ (KEERA) ರಚಿಸಲು ನಿರ್ಧರಿಸಿದೆ. ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಅವರು ಈ ಕುರಿತು ಶೀಘ್ರವೇ ಪ್ರತ್ಯೇಕ ಕಾಯ್ದೆ ತರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ Engineering Career After PUC: ಪಿಯುಸಿ ನಂತರ ವೃತ್ತಿಜೀವನಕ್ಕೆ ಬಿ.ಟೆಕ್ ಅಥವಾ ಪಾಲಿಟೆಕ್ನಿಕ್, ಯಾವುದು ಉತ್ತಮ?
ಪ್ರಮುಖ ಶಿಫಾರಸುಗಳು
ಖಾಸಗಿ ಕಾಲೇಜುಗಳಲ್ಲಿ ಯಾವುದೇ ಹೊಸ ಕೋರ್ಸ್ಗೆ ಆರಂಭದಲ್ಲಿ 60 ಸೀಟುಗಳಿಗೆ ಮಾತ್ರ ಮಿತಿ ಹೇರಲಾಗುವುದು. ಪ್ರತಿ ವರ್ಷ ಸೀಟುಗಳ ಹೆಚ್ಚಳ ಮಾಡಲು ಕಾಲೇಜುಗಳು ಎನ್ಬಿಎ (NBA) ಮಾನ್ಯತೆ ಪಡೆಯುವುದು ಕಡ್ಡಾಯ. ಯಾವುದೇ ವಿಭಾಗದಲ್ಲಿ ಗರಿಷ್ಠ ಸೀಟುಗಳ ಸಂಖ್ಯೆ 300 ಮೀರಬಾರದು. ಒಂದು ಸಂಸ್ಥೆಯಲ್ಲಿ ಐದಕ್ಕಿಂತ ಹೆಚ್ಚು ಕಂಪ್ಯೂಟರ್ ಸಂಬಂಧಿತ ವಿಭಾಗಗಳನ್ನು ಆರಂಭಿಸುವಂತಿಲ್ಲ ಮತ್ತು ಒಟ್ಟು ವಿದ್ಯಾರ್ಥಿಗಳ ಸಂಖ್ಯೆ 900 ಮೀರಬಾರದು.’ಕೋರ್ + ಎಐ’ (CORE + AI) ಮಾದರಿಯ ಪಠ್ಯಕ್ರಮ ಜಾರಿಗೆ ತರಲು ಸಮಿತಿ ಸೂಚಿಸಿದೆ.
ಹೀಗಾಗಿ, ಪೋಷಕರು ತಮ್ಮ ಮಕ್ಕಳನ್ನು ಕೇವಲ ‘ಕಂಪ್ಯೂಟರ್ ಸೈನ್ಸ್’ ಎಂಬ ವ್ಯಾಮೋಹಕ್ಕೆ ಬಿದ್ದು ಕಾಲೇಜುಗಳಿಗೆ ಸೇರಿಸುವ ಮುನ್ನ, ಮಾರುಕಟ್ಟೆಯ ವಾಸ್ತವತೆ ಮತ್ತು ಕಾಲೇಜಿನ ಗುಣಮಟ್ಟವನ್ನು ಪರಿಶೀಲಿಸುವುದು ಅತ್ಯಗತ್ಯವಾಗಿದೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




