ಡಿಆರ್​ಡಿಒ, ಇಸ್ರೋ ಸೇರಿದಂತೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ

ಪಹಲ್ಗಾಮ್ ಉಗ್ರ ದಾಳಿ ನಂತರ ಪರಿಸ್ಥಿತಿ ಉದ್ವಿಗ್ನಗೊಂಡಿದ್ದು ಕರ್ನಾಟಕದಲ್ಲಿ ಭದ್ರತೆ ಹೆಚ್ಚಿಸಲಾಗಿದೆ. ಬೆಂಗಳೂರಿನ ಇಸ್ರೋ, ಡಿಆರ್‌ಡಿಒ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ ಭದ್ರತೆ ಬಿಗಿಗೊಳಿಸಲಾಗಿದೆ. ಕರಾವಳಿ ಪ್ರದೇಶಗಳಲ್ಲೂ ಹೈ ಅಲರ್ಟ್ ಘೋಷಿಸಲಾಗಿದೆ. ವಿವಿಧ ಜಿಲ್ಲೆಗಳಲ್ಲಿ ಮಾಕ್ ಡ್ರಿಲ್‌ಗಳನ್ನು ನಡೆಸಲು ಯೋಚಿಸಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ್​ ತಿಳಿಸಿದ್ದಾರೆ.

ಡಿಆರ್​ಡಿಒ, ಇಸ್ರೋ ಸೇರಿದಂತೆ ಬೆಂಗಳೂರಿನ ಸೂಕ್ಷ್ಮ ಪ್ರದೇಶಗಳಲ್ಲಿ ಭದ್ರತೆ ಹೆಚ್ಚಳ
ಜಿ. ಪರಮೇಶ್ವರ್​
Updated By: ವಿವೇಕ ಬಿರಾದಾರ

Updated on: May 07, 2025 | 6:50 PM

ಬೆಂಗಳೂರು, ಮೇ 07: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್​ನಲ್ಲಿ ನಡೆದ ಉಗ್ರರ ದಾಳಿ (Pahalgam Terror Attack) ನಂತರ ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ರಾಜ್ಯದ ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸ್ ಇಲಾಖೆಯಲ್ಲಿನ ಇಂಡಸ್ಟ್ರಿಯಲ್ ಫೋರ್ಸ್ ಅನ್ನು ನಿಯೋಜನೆ ಮಾಡಲಾಗಿದೆ. ಈ ಸಂಬಂಧ ಬೆಂಗಳೂರಿನ ಹಲಸೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಗೃಹಸಚಿವ ಡಾ. ಜಿ. ಪರಮೇಶ್ವರ್, ರಕ್ಷಣಾ ಇಲಾಖೆಗೆ ಸಂಬಂಧಿಸಿದ ಜಾಗಕ್ಕೂ ಭದ್ರತೆ ಹೆಚ್ಚಿಸಿದ್ದೇವೆ. ಹೊರಭಾಗದಲ್ಲಿ ಪೊಲೀಸರು ಭದ್ರತಾ ಕ್ರಮ ಕೈಗೊಂಡಿದ್ದಾರೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಭದ್ರತೆ ಕೈಗೊಳ್ಳಲಾಗಿದೆ ಎಂದು ಹೇಳಿದರು.

ಇಸ್ರೋ, ಡಿಆರ್​ಡಿಒನಲ್ಲಿ ಭದ್ರತೆ ಹೆಚ್ಚಳ

ಬೆಂಗಳೂರಿನಲ್ಲಿರುವ ಇಸ್ರೋ, ಡಿಆರ್​ಡಿಒ, ಹೆಚ್​ಎಎಲ್​ ಮತ್ತು ರಕ್ಷಣಾ ಇಲಾಖೆಗೆ ಸಂಬಂಧಿಸದ ಸ್ಥಳಗಳಲ್ಲೆ ಕೇಂದ್ರ ಸರ್ಕಾರ ಭದ್ರತೆಯನ್ನು ಹೆಚ್ಚಿಸಿದೆ. ಈ ಸ್ಥಳಗಳಲ್ಲಿನ ಭದ್ರತೆಯನ್ನು ಕೇಂದ್ರ ಸರ್ಕಾರ ನೇರವಾಗಿ ನಿರ್ವಹಣೆ ಮಾಡುತ್ತದೆ. ಪಹೆಲ್ಗಾಮ್ ದಾಳಿ ನಂತರ ಸಹಜವಾಗಿ ಭದ್ರತೆಯನ್ನು ಹೆಚ್ಚಿಸಿದೆ. ಇಂತಹ ಸೂಕ್ಷ್ಮ ಪ್ರದೇಶಗಳ ಸುತ್ತಮುತ್ತ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿದೆ.

ಕರಾವಳಿಯಲ್ಲಿ ಕಟ್ಟೆಚ್ಚರ

ಜಮ್ಮು ಕಾಶ್ಮೀರ ಪಹೆಲ್ಗಾಮ್​ನಲ್ಲಿ ಉಗ್ರರು ದಾಳಿ ನಡೆಸಿದ​ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಕರ್ನಾಟಕದ ಕರಾವಳಿ ತೀರದಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಕಾವಲು ಪಡೆ ಪೊಲೀಸರು ಅರಬ್ಬೀ ಸಮುದ್ರದಲ್ಲಿ ತೀವ್ರ ನಿಗಾ ವಹಿಸಿದ್ದಾರೆ. ಕರಾವಳಿ ಕಾವಲು ಪಡೆ ಅಧಿಕಾರಿಗಳು ಮಂಗಳೂರಿನ ಬಂದರು ತೀರದಲ್ಲಿ ಪರಿಶೀಲನೆ ನಡೆಸಿದಿದ್ದಾರೆ. ಸಮುದ್ರ ಮಾರ್ಗದ ಮೀನುಗಾರಿಕಾ ಬೋಟ್, ಮೀನುಗಾರರನ್ನು ತಪಾಸಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ
ಪಾಕಿಸ್ತಾನದೊಳಗೆ ಭಾರತದ ಅತಿ ಆಳದ ದಾಳಿ; 1947ರಿಂದ ಆಗಿದ್ದೇನು?
ಭಾರತದ ದಾಳಿ ಬಗ್ಗೆ ಮಹಿಳಾ ಅಧಿಕಾರಿಗಳಿಂದಲೇ ಸುದ್ದಿಗೋಷ್ಠಿ ನಡೆಸಿದ್ದೇಕೆ?
ಮೋದಿಗೆ ಹೋಗಿ ಹೇಳು ಎಂದಿದ್ದವರಿಗೆ ದಿಟ್ಟ ಉತ್ತರ: #Itoldmodi ವೈರಲ್‌!
ಇಂಟರ್ನೆಟ್​​​ನಲ್ಲಿ ಪಾಕ್ ಜನಸಾಮಾನ್ಯರು ಹೆಚ್ಚು ಹುಡುಕಿದ್ದು ಏನನ್ನು?

ವಿವಿಧ ಜಿಲ್ಲೆಗಳಲ್ಲೂ ಮಾಕ್​ ಡ್ರಿಲ್​

ಬೆಂಗಳೂರಿನಲ್ಲಿ ಬುಧವಾರ ಮೇ.7 ರಂದು ಮಾಕ್ ಡ್ರಿಲ್​ ನಡೆಯಿತು. ಹಲಸೂರಿನಲ್ಲಿ ನಡೆದ ಮಾಕ್​ ಡ್ರಿಲ್​ನಲ್ಲಿ ಗೃಹ ಸಚಿವ ಜಿ. ಪರಮೇಶ್ವರ ಭಾಗಿಯಾಗಿದ್ದರು. ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಮಾಕ್​ಡ್ರಿಲ್ ನಡೆದರೆ ಇಡೀ ರಾಜ್ಯಕ್ಕೆ ತಿಳಿಯುತ್ತೆ. ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಲ್ಲೂ ಮಾಕ್​ಡ್ರಿಲ್ ನಡೆಯುತ್ತೆ ಎಂದು ಹೇಳಿದರು.

ಇದನ್ನೂ ನೋಡಿ: ನಮ್ಮ ದೇಶದ ಮುಗ್ಧರನ್ನು ಕೊಂದವರನ್ನು ಮಾತ್ರ ನಾವು ಕೊಂದಿದ್ದೇವೆ; ರಾಜನಾಥ್ ಸಿಂಗ್

ಉತ್ತರ ಕನ್ನಡ ಜಿಲ್ಲೆ ಮಾಕ್​ಡ್ರಿಲ್​ಗೆ ಸಿದ್ಧತೆ

ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾಕ್​ಡ್ರಿಲ್​ಗೆ ಜಿಲ್ಲಾಡಳಿತ ಸಿದ್ಧತೆ ನಡೆಸಿದೆ. ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಎಂ.ನಾರಾಯಣ ನೇತೃತ್ವದಲ್ಲಿ ಸಿದ್ಧತೆ ನಡೆಯುತ್ತಿದ್ದು, ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಕಡೆ ಮಾಕ್​ ಡ್ರಿಲ್ ನಡೆಯುವ ಸಾಧ್ಯತೆ ಇದೆ. ಕದಂಬ ನೌಕಾನೆಲೆ, ಕೈಗಾ ಅಣುಸ್ಥಾವರ ಇರುವುದರಿಂದ ಹೆಚ್ಚಿನ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಮಾಕ್ ಡ್ರಿಲ್ ನಡೆಯುವ ಸ್ಥಳಗಳನ್ನು ಜಿಲ್ಲಾಡಳಿತ ಗೌಪ್ಯವಾಗಿಟ್ಟಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:50 pm, Wed, 7 May 25