Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರು: ಆನೇಕಲ್​ನಲ್ಲಿ ಪಾಕಿಸ್ತಾನ ಪ್ರಜೆಯ ಬಂಧನ

ಇತ್ತೀಚಿಗೆ ಎನ್​ಐಎ ಅಧಿಕಾರಿಗಳು ಜಿಗಣಿಯಲ್ಲಿ ಶಂಕಿತ ಉಗ್ರನನ್ನು ಬಂಧಿಸಿದ್ದರು. ಈ ಬೆನ್ನಲ್ಲೇ ಜಿಗಣಿ ಪೊಲೀಸರು ಜಿಗಣಿಯ ಅಪಾರ್ಟ್​ಮೆಂಟ್​ನಲ್ಲಿ ವಾಸವಿದ್ದ ಓರ್ವ ಪಾಕಿಸ್ತಾನ ಪ್ರಜೆಯನ್ನು ಬಂಧಿಸಿದ್ದಾರೆ. ಬಂಧಿತ ಪಾಕಿಸ್ತಾನ ಪ್ರಜೆ ಕುಟುಂಬ ಸಮೇತವಾಗಿ ಜಿಗಣಿಯಲ್ಲಿ ವಾಸವಾಗಿದ್ದ. ಆತನನ್ನು ಪೊಲೀಸರು ಪತ್ತೆ ಮಾಡಿದ್ಹೇಗೆ? ಪೊಲೀಸರಿಗೆ ಏನು ಸುಳಿವು ಸಿಕ್ಕಿತ್ತು? ವಿವರಗಳು ಇಲ್ಲಿವೆ.

ಬೆಂಗಳೂರು: ಆನೇಕಲ್​ನಲ್ಲಿ ಪಾಕಿಸ್ತಾನ ಪ್ರಜೆಯ ಬಂಧನ
ಜಿಗಣಿ ಪೊಲೀಸ್ ಠಾಣೆ
Follow us
ರಾಮು, ಆನೇಕಲ್​
| Updated By: ವಿವೇಕ ಬಿರಾದಾರ

Updated on:Sep 30, 2024 | 2:22 PM

ಆನೇಕಲ್​ ​, ಸೆಪ್ಟೆಂಬರ್​ 30: ಬೆಂಗಳೂರು (Bengaluru) ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಯಲ್ಲಿ ವಾಸವಿದ್ದ ಪಾಕಿಸ್ತಾನ ಪ್ರಜೆಯನ್ನು (Pakistan citizen) ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಪ್ರಜೆ ಸೇರಿಂದತೆ ಒಟ್ಟು ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪಾಕಿಸ್ತಾನ ಪ್ರಜೆ ರಷೀದ್ ಸಿದ್ದಿಕಿ ಅಲಿಯಾಸ್​ ಶಂಕರ್ ಶರ್ಮಾ (48), ಆಯುಷಾ ಅನಿಫ್ ಅಲಿಯಾಸ್​ ಆಶಾ ಶರ್ಮಾ (38), ಮೊಹಮ್ಮದ್ ಹನೀಫ್ ಅಲಿಯಾಸ್​ ರಾಮ್ ಬಾಬಾ ಶರ್ಮಾ (73), ರುಬೀನಾ ಅಲಿಯಾಸ್​ ರಾಣಿ ಶರ್ಮಾ (61) ಬಂಧಿತರು.

ಧರ್ಮದ ವಿಚಾರಕ್ಕೆ ಪಾಕಿಸ್ತಾನದಲ್ಲಿ ಭಿನ್ನಾಭಿಪ್ರಾಯ ಉಂಟಾದ ಸಂದರ್ಭದಲ್ಲಿ ರಷೀದ್ ಸಿದ್ದಿಕಿ ಪಾಕಿಸ್ತಾನ ತೊರೆದು ಬಾಂಗ್ಲಾದೇಶದ ಢಾಕಾದಲ್ಲಿ ನೆಲಸಿದ್ದನು. ಢಾಕಾದಲ್ಲಿ ಓರ್ವ ಯುವತಿಯನ್ನು ವಿವಾಹವಾಗಿದ್ದಾನೆ. ಬಳಿಕ, ರಷೀದ್ ಸಿದ್ದಿಕಿ ತನ್ನ ಪತ್ನಿ ಮತ್ತು ಇಬ್ಬರು ಮಕ್ಕಳೊಂದಿಗೆ 2014ರಲ್ಲಿ ಅಕ್ರಮವಾಗಿ ದೆಹಲಿಗೆ ಬಂದಿದ್ದಾನೆ.

ಅಲ್ಲಿ, ಸ್ಥಳೀಯ ವ್ಯಕ್ತಿಯ ನೆರವಿನಿಂದ ಆಧಾರ್ ಕಾರ್ಡ್, ಡ್ರೈವಿಂಗ್ ಲೈಸೆನ್ಸ್, ಪಾಸ್‌ಪೋರ್ಟ್ ಮಾಡಿಸಿಕೊಂಡಿದ್ದಾನೆ. ನಂತರ, 2018ರಲ್ಲಿ ಕುಟುಂಬ ಸಮೇತ ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಜಿಗಣಿಗೆ ಬಂದು ವಾಸವಾಗಿದ್ದನು.

ಧರ್ಮ ಪ್ರಚಾರಕ್ಕೆ ಬೆಂಗಳೂರಿಗೆ ಬಂದ ರಷೀದ್ ಸಿದ್ದಿಕಿ

ಧರ್ಮದ ವಿಚಾರವಾಗಿ ರಷೀದ್ ಸಿದ್ದಿಕಿ ಅಲಿಯಾಸ್​ ಶಂಕರ್​ ಶರ್ಮಾನ್ನು ಪಾಕಿಸ್ತಾನದಿಂದ ಓಡಿಸಲಾಗಿತ್ತು. ಅಲ್ಲಿಂದ, ರಷೀದ್ ಸಿದ್ದಿಕಿ ಬಾಂಗ್ಲಾ ದೇಶಕ್ಕೆ ಹೋಗಿದ್ದನು. ಬಾಂಗ್ಲಾದಿಂದ ನೇಪಾಳಕ್ಕೆ ತೆರಳಿದ್ದನು. ನೇಪಾಳದಲ್ಲಿ ಮೆಹದಿ ಪೌಂಡೇಷನ್ ಸೇರಿಕೊಂಡಿದ್ದನು. ಧರ್ಮಗುರುಗಳ ಜೊತೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದನು. ನೇಪಾಳದಲ್ಲಿ ಮೆಹದಿ ಪೌಂಡೇಷನ್ ಧರ್ಮಗುರು ಯೂನಸ್ ಅಲ್ಗೋರ್ ಬೆಂಗಳೂರಿಗೆ ಹೋಗಿ ಧರ್ಮ ಪ್ರಚಾರ ಮಾಡುವಂತೆ ರಷೀದ್ ಸಿದ್ದಿಕಿ ಸೂಚನೆ ನೀಡಿದರು.

ಫುಡ್​ ಡೆಲಿವರಿ ಬಾಯ್ ಆಗಿ ಕೆಲಸ

ಆಗ, ರಷೀದ್ ಸಿದ್ದಿಕಿ ಬೆಂಗಳೂರಿಗೆ ಬಂದನು. ಬೆಂಗಳೂರಿನಲ್ಲಿ ವಾಸಿಮ್ ಮತ್ತು ಅಲ್ತಾಪ್ ಎಂಬುವರ ಪರಿಚಯ ಮಾಡಿಕೊಂಡಿದ್ದಾನೆ. ಬಳಿಕ, ವಾಸಿಮ್ ಮತ್ತು ಅಲ್ತಾಪ್ ಇದೇ ಸಂಘಟನೆಗೆ ಸೇರಿಕೊಂಡರು. ವಾಸಿಮ್ ಮತ್ತು ಅಲ್ತಾಪ್ ಸಹಕಾರ ಪಡೆದು ರಷೀದ್ ಸಿದ್ದಿಕಿ ಜಿಗಣಿಗೆ ಶಿಪ್ಟ್ ಆಗಿದ್ದನು. ರಷೀದ್ ಸಿದ್ದಿಕಿ ಜಿಗಣಿಯಲ್ಲಿ ಮನೆ‌ಮಾಡಿ ಆನ್ಲೈನ್ ಪುಡ್ ಡೆಲಿವರಿ ಮಾಡುತ್ತಿದ್ದನು. ಬಿರಿಯಾನಿ ತಯಾರು‌‌ ಮಾಡಿ ಆನ್ಲೈನ್ ಮೂಲಕ ವ್ಯಾಪಾರ ಮಾಡುತ್ತಿದ್ದನು.

ಕೇಂದ್ರ ಗುಪ್ತಚರ ಇಲಾಖೆ ಮಾಹಿತಿ ಆಧರಿಸಿ ದಾಳಿ

ಈತನ ಚಲನವಲನದ ಮೇಲೆ ಕಣ್ಣಿಟ್ಟಿದ್ದ ಕೇಂದ್ರ ಗುಪ್ತಚರ ಇಲಾಖೆ ಅಧಿಕಾರಿಗಳು, ರಷೀದ್ ಸಿದ್ದಿಕಿ ಜಿಗಣಿಯಲ್ಲಿ ವಾಸವಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಗುಪ್ತಚರ ಇಲಾಖೆ ಅಧಿಕಾರಿಗಳ ಮಾಹಿತಿ ಆಧರಿಸಿ, ಜಿಗಣಿ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿದರು. ಈ ವೇಳೆ ಕುಟುಂಬ ಸಮೇತ ರಷೀದ್ ಸಿದ್ದಿಕಿಯನ್ನು ಬಂಧಿಸಿದ್ದಾರೆ. ಜಿಗಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಶಂಕಿತ ಉಗ್ರನ ಬಂಧನ

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 10:09 am, Mon, 30 September 24