ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರ್ಯಾರು? ರೌಡಿಶೀಟರ್ ಅರ್ಜಿ ವಜಾ
ರೌಡಿಶೀಟರ್ಗಳು ಆರಂಭಿಸಿದ್ದ ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಎಂಬ ಟ್ರಸ್ಟ್ನ ನೈತಿಕ ಪೊಲೀಸ್ಗಿರಿ ಪ್ರಕರಣಕ್ಕೆ ಸಂಬಂಧಿಸಿದಂತೆ ತುಮಕೂರಿನಲ್ಲಿ ದಾಖಲಾದ ಎಫ್ಐಆರ್ ರದ್ದುಪಡಿಸಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಆ ಮೂಲಕ ರೌಡಿಶೀಟರ್ಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಕುರಿತು ಮಾಹಿತಿ ಇಲ್ಲಿದೆ.

ಬೆಂಗಳೂರು, ಏಪ್ರಿಲ್ 01: ರೌಡಿಶೀಟರ್ನಿಂದ ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿನ ಟ್ರಸ್ಟ್ನಡಿ ನೈತಿಕ ಪೊಲೀಸ್ಗಿರಿ ಆರೋಪದ ಮೇಲೆ ದಾಖಲಾಗಿದ್ದ ಪ್ರಕರಣ ರದ್ದುಪಡಿಸಲು ನಕಾರ ಎತ್ತಿರುವ ಕರ್ನಾಟಕ ಹೈಕೋರ್ಟ್ (High Court), ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಿ ಬುಧವಾರ ಆದೇಶ ಹೊರಡಿಸಿದೆ.
ತುಮಕೂರಿನ ತಿಲಕ್ಪಾರ್ಕ್ ಠಾಣೆಯಲ್ಲಿ ಕೇಸ್ ದಾಖಲಿಸಲಾಗಿತ್ತು. ಪ್ರಕರಣ ರದ್ದುಪಡಿಸುವಂತೆ ಕೋರಿ ಮೊಹಮ್ಮದ್ ಖಲಂದರ್, ಗೌಸ್ ಪಾಷಾ ಮತ್ತು ಆಶಿಯಾ ಸಲ್ಲಿಸಿದ್ದ ಅರ್ಜಿಯನ್ನು ಇಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ವಿಚಾರಣೆ ಮಾಡಿ ರೌಡಿಶೀಟರ್ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ: ಸಣ್ಣ ವೈವಾಹಿಕ ಜಗಳಗಳು ಅಪರಾಧವಲ್ಲ: ಅತ್ತೆ-ಮಾವ, ನಾದಿನಿ ವಿರುದ್ಧದ ಕೇಸ್ ರದ್ದುಗೊಳಿಸಿದ ಹೈಕೋರ್ಟ್
ಪಬ್ಲಿಕ್ ಪ್ರೆಸ್ ಆರ್ಮಿ ಹೆಸರಿಡಲು ಅಧಿಕಾರ ಕೊಟ್ಟವರು ಯಾರು? ಈ ಟ್ರಸ್ಟ್ಗೆ ನಿಮಗೆ ಅಧಿಕಾರ ನೀಡಿದವರು ಯಾರು? ಈ ಟ್ರಸ್ಟ್ಗೆ ತಡೆ ನೀಡುವ ಪ್ರಶ್ನೆಯೇ ಇಲ್ಲ ಎಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರಿದ್ದ ಪೀಠ ಅಭಿಪ್ರಾಯಪಟ್ಟಿದೆ. ಆ ಮೂಲಕ ಪ್ರಕರಣಕ್ಕೆ ತಡೆ ನೀಡಲು ಸಾಧ್ಯವಿಲ್ಲವೆಂದು ಅರ್ಜಿಯನ್ನು ವಜಾಗೊಳಿಸಲಾಗಿದೆ. ಅರ್ಜಿದಾರರ ಪರ ವಕೀಲ ಜಿ.ಎ ಪ್ರೇಮ್ ಕುಮಾರ್ ಅವರು ವಾದ ಮಂಡಿಸಿದರು.
ಪ್ರಕರಣದ ಹಿನ್ನೆಲೆ
ರೌಡಿಶೀಟರ್ಗಳು ಪೊಲೀಸ್ ಪಬ್ಲಿಕ್ ಪ್ರೆಸ್ ಆರ್ಮಿ ಎಂಬ ಟ್ರಸ್ಟ್ ಆರಂಭಿಸಿದ್ದರು. ಆ ಮೂಲಕ ಅಮಾಯಕ ಯುವಕರಿಗೆ ಪ್ರಚೋದನೆ ನೀಡುವುದು, ಜೊತೆಗೆ ಸದಾಶಿವನಗರದ ಕನ್ನಿಕಾ ಶಾಲೆಯ ಬಳಿ ಎಲ್ಲರನ್ನು ಸೇರಿಸುತ್ತಿದ್ದರು. ನಾವು ಪೊಲೀಸರು ನಿಮ್ಮ ಯಾವುದೇ ದೂರುಗಳನ್ನು ನಮ್ಮ ಸಂಸ್ಥೆಯ ಸದಸ್ಯರಿಗೆ ತಿಳಿಸಿದರೆ ನಾವು ಪರಿಹರಿಸುತ್ತೇವೆ ಎಂದು ಸುಳ್ಳು ಹೇಳುತ್ತಿದ್ದರು.
ಇದನ್ನೂ ಓದಿ: ಪುರುಷರಿಗಿಂತ ದುರ್ಬಲರೆಂದು ಭಾವಿಸುತ್ತಾರೆ: ಋತುಚಕ್ರ ರಜೆ ಆದೇಶ ರದ್ದು ಕೋರಿ ಹೈಕೋರ್ಟ್ ಮೆಟ್ಟಿಲೇರಿದ ಮಹಿಳೆಯರು
ಇನ್ನು ಸಂಸ್ಥೆಯ ಸದಸ್ಯರು ತಾವು ಸಾರ್ವಜನಿಕ ನೌಕರರಂತೆ ವರ್ತಿಸುತ್ತಿದ್ದರು. ಪೊಲೀಸ್ ಇಲಾಖೆಯ ಹೆಸರನ್ನು ದುರುಪಯೋಗಪಡಿಸಿಕೊಂಡು, ಇಲಾಖೆಯ ಗೌರವಕ್ಕೆ ಧಕ್ಕೆ ತರುವ ರೀತಿಯಲ್ಲಿ ನಡೆದುಕೊಳ್ಳುತ್ತಿದ್ದರು. ಅಲ್ಲದೆ, ಸಾರ್ವಜನಿಕರಿಗೆ ಸುಳ್ಳು ಮಾಹಿತಿ ನೀಡುವ ಮೂಲಕ ನೈತಿಕ ಪೊಲೀಸ್ಗಿರಿ ನಡೆಸುತ್ತಿದ್ದರು ಎಂಬ ಆರೋಪದ ಮೇರೆಗೆ, ತುಮಕೂರಿನ ತಿಲಕ್ ನಗರ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತವಾಗಿ ಬಿಎನ್ಎಸ್ ಸೆಕ್ಷನ್ 204, 353(1)(b), 190 ಅಡಿ ಪ್ರಕರಣ ದಾಖಲಿಸಲಾಗಿತ್ತು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 3:07 pm, Wed, 1 April 26