RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ: ಏಕಾಏಕಿ ಖಡಕ್​​ ಎಚ್ಚರಿಕೆ ಕೊಟ್ಟಿದ್ದೇಕೆ ಗೃಹ ಸಚಿವ?

ಗೃಹ ಸಚಿವರಾಗಿ ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಪ್ರಿಯಾಂಕ್ ಖರ್ಗೆ ಆರ್‌ಎಸ್‌ಎಸ್ (RSS) ನೋಂದಣಿ ದಾಖಲೆ ಸಿದ್ಧವಿಟ್ಟುಕೊಳ್ಳುವಂತೆ ಎಚ್ಚರಿಸಿದ್ದಾರೆ. ಇದಕ್ಕೆ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ರಾಜಕೀಯ ಜಟಾಪಟಿ ಆರಂಭವಾಗಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿಯೂ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವರಾಗಿದ್ದ ಪ್ರಿಯಾಂಕ್​​, ಆರ್​​ಎಸ್​ಎಸ್​​ ವಿರುದ್ಧ ಸಮರ ಸಾರಿದ್ದರು ಎನ್ನುವುದಿಲ್ಲಿ ಗಮನಾರ್ಹ.

RSS ವಿರುದ್ಧ ಮತ್ತೆ ಸಮರ ಸಾರಿದ ಪ್ರಿಯಾಂಕ್​​ ಖರ್ಗೆ: ಏಕಾಏಕಿ ಖಡಕ್​​ ಎಚ್ಚರಿಕೆ ಕೊಟ್ಟಿದ್ದೇಕೆ ಗೃಹ ಸಚಿವ?
ಪ್ರಿಯಾಂಕ್​​ ಖರ್ಗೆ
Image Credit source: Priyank Khrage X Account and PTI

Updated on: Jun 09, 2026 | 5:30 PM

ಬೆಂಗಳೂರು, ಜೂನ್​​ 09: ಸಿದ್ದರಾಮಯ್ಯ (Siddaramaiah) ನೇತೃತ್ವದ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಐಟಿಬಿಟಿ ಸಚಿವರಾಗಿದ್ದಾಗ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ವಿರುದ್ಧ ಬಹಿರಂಗ ಸಮರ ಸಾರಿದ್ದ ಪ್ರಿಯಾಂಕ್​​ ಖರ್ಗೆ ಈಗಿನ ಸಿಎಂ ಡಿ.ಕೆ. ಶಿವಕುಮಾರ್​​ ಅವರ ಸಚಿವ ಸಂಪುಟದಲ್ಲಿ ಗೃಹ ಸಚಿವರು. ಅಧಿಕಾರ ಸ್ವೀಕರಿಸುತ್ತಿದ್ದಂತೆ ಬಿಜೆಪಿಯನ್ನು ಉದ್ದೇಶಿಸಿ ಎಕ್ಸ್​​ ಪೋಸ್ಟ್​​ ಮಾಡಿರುವ ಪ್ರಿಯಾಂಕ್, RSSಗೆ ಪರೋಕ್ಷ ಎಚ್ಚರಿಕೆ ನೀಡಿರೋದೀಗ ಮತ್ತೊಂದು ಸುತ್ತಿನ ರಾಜಕೀಯ ಜಟಾಪಟಿಗೆ ಕಾರಣವಾಗಿದೆ.

ಪ್ರಿಯಾಂಕ್​​ ಖರ್ಗೆ ಪೋಸ್ಟ್​​ನಲ್ಲಿ ಏನಿದೆ?

ರಾಜ್ಯ ಬಿಜೆಪಿ ನಾಯಕರೇ ಏಕಿಷ್ಟು ಚಿಂತೆಗೊಳಗಾಗಿದ್ದೀರಿ? ಎಂದು ಜೂನ್​​ 7ರಂದು ಎಕ್ಸ್ ಪೋಸ್ಟ್​​​ ಮೂಲಕ  ಗೃಹ ಸಚಿವ ಪ್ರಿಯಾಂಕ್ ಖರ್ಗೆ​​ ಪ್ರಶ್ನೆ ಮಾಡಿದ್ದರು. ಗೃಹ ಸಚಿವನಾಗಿ ಅಧಿಕಾರ ವಹಿಸಿಕೊಂಡು 48 ಗಂಟೆ ಕೂಡ ಆಗಿಲ್ಲ. ನಿಮ್ಮಲ್ಲಿನ ಭಯ, ಆತಂಕ, ನಿಮ್ಮಲ್ಲಿನ ದುಗುಡ ಎಲ್ಲವೂ ವ್ಯಕ್ತವಾಗುತ್ತಿದೆ. ಈಗಾಗಲೇ ಆರ್‌ಎಸ್‌ಎಸ್‌ನ್ನು ಬಳಸಿಕೊಂಡು ನನ್ನನ್ನು ನಿಂದಿಸುತ್ತಿದ್ದೀರಿ. ನನಗೆ ಜೀವ ಬೆದರಿಕೆ ಹಾಕುತ್ತಿದ್ದೀರಿ, ನೀವು ಮಾಡೋದನ್ನ ಮಾಡಿ. ಮುಖ್ಯವಾಗಿ, ನಿಮ್ಮ ‘ವ್ಯಕ್ತಿಗಳ ಸಂಘ’ಕ್ಕೆ ನನ್ನ ನಮಸ್ಕಾರವನ್ನೂ ತಿಳಿಸಿ. ನಿಮ್ಮ ರಾಜಕೀಯ ಮೇಲಧಿಕಾರದ ಸಂಘಟನೆಯ ನೋಂದಣಿಗಾಗಿ ದಾಖಲೆಗಳನ್ನು ಸಿದ್ಧವಾಗಿಡಲು ಹೇಳಿ ಎಂದು ಬರೆದುಕೊಂಡಿದ್ದೀಗ ಬಿಜೆಪಿಗರನ್ನು ಕೆರಳಿಸಿದೆ.

ಇದನ್ನೂ ಓದಿ: ದೇವೇಗೌಡರಿಗೆ ರಾಜ್ಯಸಭಾ ಟಿಕೆಟ್​​ ಕೈತಪ್ಪಿದ್ದೇಕೆ?; ಅಸಲಿ ಸತ್ಯ ಬಹಿರಂಗಪಡಿಸಿದ ಕುಮಾರಸ್ವಾಮಿ

‘ಯಾರೂ ಕಾನೂನಿಗಿಂತ ದೊಡ್ಡವರಲ್ಲ’

ಇನ್ನು RSS ನೋಂದಣಿ ವಿಚಾರವಾಗಿ ಪ್ರಿಯಾಂಕ್ ಹೇಳಿಕೆ ವಿಚಾರ ಸಂಬಂಧ ಪ್ರತಿಕ್ರಿಯಿಸಿರುವ ಸಚಿವ ಡಾ.ಶರಣಪ್ರಕಾಶ್ ಪಾಟೀಲ್, ಗೃಹ ಸಚಿವರ ಹೇಳಿಕೆ ಸರಿ ಇದೆ. ಕಾನೂನು ಪ್ರಕಾರ ಕೆಲಸ ಮಾಡಲು ನೋಂದಣಿ ಅವಶ್ಯಕತೆ ಇದೆ. ನೋಂದಣಿ ಮಾಡಿಕೊಳ್ಳಲು ಆರ್​ಎಸ್​ಎಸ್​​ಗೆ ಏನು ಸಮಸ್ಯೆ? ಯಾರೂ ಕಾನೂನಿಗಿಂತ ದೊಡ್ಡವರಲ್ಲ ಎಂದಿದ್ದಾರೆ.

ಕಾಂಗ್ರೆಸಿಗರ ಹೇಳಿಕೆಗೆ ಸಂಸದ ಕೋಟ ಕಿಡಿ

ಕಾಂಗ್ರೆಸಿಗರ ಈ ಹೇಳಿಕೆಗಳಿಗೆ ಬಿಜೆಪಿ ಸಂಸದ ಕೋಟ ಶ್ರೀನಿವಾಸ್ ಪೂಜಾರಿ ಕಿಡಿ ಕಾರಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಕರ್ನಾಟಕದಲ್ಲಿ ಮಾತ್ರ ಅಲ್ಲ, ಭಾರತ ಸೇರಿ ವಿಶ್ವದ 50 ದೇಶಗಳಲ್ಲಿ ಶಾಖೆಗಳನ್ನು ಹೊಂದಿದೆ. ಸಂಘದ ಹಿರಿಯರು ನೋಂದಣಿ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ನಾವು ಉತ್ತರ ಕೊಡುವ ಅಗತ್ಯವಿಲ್ಲ, ಸಂಘವೇ ಉತ್ತರ ನೀಡುತ್ತೆ. ಆರ್​ಎಸ್​ಎಸ್​ನ್ನು ಜವಾಹರಲಾಲ್ ನೆಹರು ಬ್ಯಾನ್ ಮಾಡಿದ್ದರು. ನಿಷೇಧಿಸಿದ ಬಳಿಕ ಗಣರಾಜೋತ್ಸವ ಪರೇಡ್​ನಲ್ಲಿ ಭಾಗಿಯಾಗಲು ಮನವಿ ಮಾಡಿದರು. ಇಂದಿರಾ ಗಾಂಧಿ ಬ್ಯಾನ್ ಮಾಡಲು ಪ್ರಯತ್ನ ಪಟ್ಟರು ಸಾಧ್ಯವಾಗಲಿಲ್ಲ ಎಂಬುದನ್ನು ಅವರು ಕಾಂಗ್ರೆಸಿಗರಿಗೆ ನೆನಪಿಸಿದ್ದಾರೆ.

ಸಿಎಂ ಶಿವಕುಮಾರ್ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗ್ತೇವೆ ಅಂತಾರೆ. ಆದರೆ ಅಪಪ್ರಚಾರ ಮಾಡುವ ವ್ಯಕ್ತಿಯನ್ನು ಗೃಹ ಮಂತ್ರಿ ಮಾಡಿದ್ದಾರೆ. ಆರ್‌ಎಸ್‌ಎಸ್​ಗೆ ಕಿರುಕುಳ ಕೊಡುವ ಬಗ್ಗೆ ಸಿಎಂ ಡಿಕೆಶಿ ಗಮನಹರಿಸಲಿ. ಸಚಿವ ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಬೇಕು. ಆರ್‌ಎಸ್‌ಎಸ್ ವೈರಿ ರಾಷ್ಟ್ರ ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ. ಇದನ್ನು ಪ್ರಿಯಾಂಕ್ ಖರ್ಗೆ ಅರ್ಥ ಮಾಡಿಕೊಳ್ಳುತ್ತಾರೆ ಅನ್ನೋದು ನನ್ನ ಭಾವನೆ ಎಂದವರು ತಿಳಿಸಿದ್ದಾರೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 5:21 pm, Tue, 9 June 26

Follow Us