ಪಿಎಸ್​ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಸಬ್​ಇನ್ಸ್​ಪೆಕ್ಟರ್ ಸಿಸಿಬಿ​ ವಶಕ್ಕೆ

| Updated By: ಗಂಗಾಧರ​ ಬ. ಸಾಬೋಜಿ

Updated on: Jan 19, 2024 | 10:55 PM

ಈಗಾಗಲೇ ಪಿಎಎಸ್​ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದ್ದು, ಈ ಪ್ರಕರಣ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿತ್ತು. ಅಲ್ಲದೇ ಈ ಪ್ರಕರಣ ಇನ್ನೂ ತನಿಖೆಯಲ್ಲಿರುವಾಗಲೇ ಮತ್ತೆ ಪಿಎಎಸ್​ಐ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಆರೋಪ ಕೇಳಿಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಂಟೆಲಿಜೆನ್ಸ್ ವಿಭಾಗದ ಸಬ್ ಇನ್ಸ್ ಪೆಕ್ಟರ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ.

ಪಿಎಸ್​ಐ ಮರುಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ: ಸಬ್​ಇನ್ಸ್​ಪೆಕ್ಟರ್ ಸಿಸಿಬಿ​ ವಶಕ್ಕೆ
ವಾಟ್ಸಾಪ್​ ಚಾಟ್ ವೈರಲ್, ಸಬ್​ ಇನ್ಸ್​ಪೆಕ್ಟರ್​ ಲಿಂಗಯ್ಯ
Follow us on

ಬೆಂಗಳೂರು, ಜನವರಿ 19: 545 ಪಿಎಸ್‌ಐ ಹುದ್ದೆಗಳ ನೇಮಕಾತಿಯಲ್ಲಿ ಭಾರಿ ಅಕ್ರಮ (PSI Exam Scam) ನಡೆದ ಹಿನ್ನೆಲೆಯಲ್ಲಿ ಇದೀಗ ಮರು ಪರೀಕ್ಷೆ ನಡೆಸಲಾಗುತ್ತಿದೆ. ಇದೇ ಜನವರಿ 23ರಂದು ಮರು ಪರೀಕ್ಷೆ ನಡೆಯಲಿದ್ದು, ಇದಕ್ಕೆ ಅಭ್ಯರ್ಥಿಗಳು ಸಹ ತಯಾರಿ ಮಾಡಿಕೊಂಡಿದ್ದಾರೆ. ಆದರೆ, ಈಗ ಪಿಎಸ್‌ಐ ಮರು ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಇಂಟೆಲಿಜೆನ್ಸ್ ವಿಭಾಗದ ಸಬ್​ ಇನ್ಸ್​ಪೆಕ್ಟರ್​ ಆಗಿರುವ ಲಿಂಗಯ್ಯ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಈ ಸಂಬಂಧ ಅಭ್ಯರ್ಥಿಗಳು ಪ್ರತಿಭಟನೆಗಿಳಿದಿದ್ದಾರೆ. ಇದರ ಬೆನ್ನಲ್ಲೇ ಇದೀಗ ಸಿಸಿಬಿ ಪೊಲೀಸರು, ಇನ್ಸ್​ಪೆಕ್ಟರ್​ ಲಿಂಗಯ್ಯನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದ್ದಾರೆ.

ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದಾರೆ: ಕಾಂತಕುಮಾರ್

ಅಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕಾಂತಕುಮಾರ್ ಪ್ರತಿಕ್ರಿಯಿಸಿದ್ದು, 1 ಲಕ್ಷ 60 ಸಾವಿರ ಅಭ್ಯರ್ಥಿಗಳು ಸಿಟಿಐ ಪರೀಕ್ಷೆ ಬರೆಯಲಿದ್ದಾರೆ. ಲಿಂಗಯ್ಯ ಎಂಬ ಪಿಎಸ್ಐ ಮಾತನಾಡಿದ ಆಡಿಯೋ ಲಭ್ಯವಾಗಿದೆ. ಪ್ರಶ್ನೆ ಪತ್ರಿಕೆ ನಾವೇ ಕೊಡುತ್ತೇವೆ, ಪೋಸ್ಟಿಂಗ್ ಕೊಡಿಸುತ್ತೇವೆ ಎಂದಿದ್ದಾರೆ. ಪಿಎಸ್​​ಐ ಪರೀಕ್ಷೆ ಕೂಡ ಬರೆಸುತ್ತೇವೆ ಅಂತಾ ಮಾತನಾಡಿದ್ದಾರೆ. ಕೆಪಿಎಸ್​​ಸಿ ಬೋರ್ಡ್​ ಮುಂದೆ ವಿದ್ಯಾರ್ಥಿಗಳಿಗೆ ಪ್ರವೇಶ ಇಲ್ಲ. ಆದರೆ ಪೋಷಕರನ್ನು ಭೇಟಿಮಾಡಲು ಒಳಗಡೆ ಕರೆಸಿಕೊಳ್ಳುತ್ತಿದ್ದಾರೆ ಎಂದಿದ್ದಾರೆ.

ಇದನ್ನೂ ಓದಿ: ಕಲಬುರಗಿಯಲ್ಲಿ ಮತ್ತೊಂದು ಪರೀಕ್ಷೆ ಅಕ್ರಮ: ಅವಧಿ ಮುಗಿದ ನಂತರವೂ ಪರೀಕ್ಷೆ ಬರೆಸಿದ ಖಾಸಗಿ ಕಾಲೇಜು

ಜ.21ರಂದು ಕಮರ್ಷಿಯಲ್ ಟ್ಯಾಕ್ಸ್ ಇನ್ಸ್​ಪೆಕ್ಟರ್ ಪರೀಕ್ಷೆ ಇದೆ. ಜ.23ರಂದು ನಡೆಯುವ ಪಿಎಸ್​ಐ ಪರೀಕ್ಷೆಗೆ ಸಂಚು ನಡೆಸಿದ್ದಾರೆ. ಎರಡೂ ಪರೀಕ್ಷೆಗಳ ಅಕ್ರಮಕ್ಕೆ ಸಂಚು ರೂಪಿಸಿದ್ದಾರೆ. ಒಂದು ಹುದ್ದೆಗೆ 80 ಲಕ್ಷ ರೂಪಾಯಿ ಡಿಮ್ಯಾಂಡ್ ಮಾಡುತ್ತಿದ್ದಾರೆ. ಆಡಿಯೋದಲ್ಲಿ ಪವನ್ ಮತ್ತು ರಜತ್ ಎಂಬುವರ ಹೆಸರು ಉಲ್ಲೇಖಿಸಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಇನ್ನು 15 ದಿನಕ್ಕೆ 545 ಪಿಎಸ್‌ಐ ನೇಮಕಾತಿ ಮರುಪರೀಕ್ಷೆ, ವೇಳಾಪಟ್ಟಿ ಹೀಗಿದೆ

ರಾಜಕಾರಣಿಗಳ ಹೆಸರು ಕೂಡ ಬಳಕೆ ಮಾಡಿದ್ದಾರೆ. ಪರೀಕ್ಷೆ ಮುಂದೂಡುವಂತೆ ಕೆಪಿಎಸ್​​ಸಿಗೆ ನಾವು ಆಗ್ರಹಿಸುತ್ತಿದ್ದೇವೆ. ಚಂದ್ರಲೇಔಟ್ ಪೊಲೀಸ್​ ಠಾಣೆಗೆ ಈಗಾಗಲೇ ದೂರು ನೀಡಿದ್ದೇವೆ. ಸಿಬಿಆರ್​​ಟಿ ಮೂಲಕ ಪರೀಕ್ಷೆ ನಡೆಸುವಂತೆ ಕಾಂತಕುಮಾರ್ ಆಗ್ರಹಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:26 pm, Fri, 19 January 24