ಅನುಮತಿ ಇಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ಎಫ್ಐಆರ್ ಆಗುತ್ತೆ ಹುಷಾರ್!: ಕರ್ನಾಟಕ ಪೊಲೀಸ್ ಮುಖ್ಯಸ್ಥರ ಕಡಕ್ ಆದೇಶ
ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರ ಹಾಗೂ ವೀಡಿಯೊಗಳನ್ನು ಹಂಚಿಕೊಂಡರೆ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ಕರ್ನಾಟಕ ಪೊಲೀಸ್ ಮಹಾನಿರ್ದೇಶಕ ಎಂ.ಎ. ಸಲೀಮ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ. ಆರಂಭದಲ್ಲಿ ಚಿತ್ರೀಕರಣಕ್ಕೆ ಒಪ್ಪಿಗೆ ಇದ್ದರೂ, ಅದನ್ನು ಇತರರೊಂದಿಗೆ ಹಂಚಿಕೊಳ್ಳುವುದು ಅಪರಾಧವಾಗಲಿದ್ದು, ದೂರು ದಾಖಲಿಸಲು ನಿರಾಕರಿಸುವ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

ಬೆಂಗಳೂರು, ಜೂನ್ 18: ವ್ಯಕ್ತಿಯೊಬ್ಬರ ಒಪ್ಪಿಗೆಯಿಲ್ಲದೆ ಅವರ ಖಾಸಗಿ ಅಥವಾ ಆಪ್ತ ಚಿತ್ರಗಳು ಹಾಗೂ ವೀಡಿಯೊಗಳನ್ನು ಸಾಮಾಜಿಕ ಜಾಲತಾಣ ಅಥವಾ ಇತರೆಡೆ ಹಂಚಿಕೊಂಡರೆ, ಆನ್ಲೈನ್ ಬ್ಲ್ಯಾಕ್ಮೇಲ್, ರಿವೆಂಜ್ ಪೋರ್ನೋಗ್ರಫಿ ಮತ್ತು ಸೆಕ್ಸ್ಟಾರ್ಷನ್ ಪ್ರಕರಣಗಳಲ್ಲಿ ತಕ್ಷಣವೇ ಎಫ್ಐಆರ್ (FIR) ದಾಖಲಿಸಬೇಕು ಎಂದು ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕ ಮತ್ತು ಐಜಿಪಿ (DG & IGP) ಎಂ.ಎ. ಸಲೀಮ್ ಕಟ್ಟುನಿಟ್ಟಿನ ಆದೇಶ ಹೊರಡಿಸಿದ್ದಾರೆ.
ಮುಖ್ಯಾಂಶಗಳು
- ಅನುಮತಿಯಿಲ್ಲದೆ ಖಾಸಗಿ ಚಿತ್ರ ಹಂಚಿಕೊಂಡರೆ ತಕ್ಷಣ ಎಫ್ಐಆರ್ ದಾಖಲಿಸುವುದು ಕಡ್ಡಾಯವಾಗಿದೆ.
- ಚಿತ್ರೀಕರಣದ ಒಪ್ಪಿಗೆ ಹಾಗೂ ಹಂಚಿಕೆಯ ಒಪ್ಪಿಗೆ ಸಂಪೂರ್ಣ ವಿಭಿನ್ನ ಎಂದು ಸ್ಪಷ್ಟಪಡಿಸಲಾಗಿದೆ.
- ನಿಯಮ ಉಲ್ಲಂಘಿಸುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಜರುಗಿಸಲಾಗುವುದು.
ಸೆಕ್ಸ್ಟಾರ್ಷನ್, ಬ್ಲ್ಯಾಕ್ಮೇಲ್ ಮತ್ತು ರಿವೆಂಜ್ ಪೋರ್ನೋಗ್ರಫಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸಿಕೊಳ್ಳಲು ಪೊಲೀಸರು ವಿಳಂಬ ಮಾಡುತ್ತಿದ್ದಾರೆ ಅಥವಾ ತಿರಸ್ಕರಿಸುತ್ತಿದ್ದಾರೆ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಜೂನ್ 16 ರಂದು ಈ ಮಹತ್ವದ ಆದೇಶ ಹೊರಡಿಸಲಾಗಿದೆ. ಕೆಲವು ಪ್ರಕರಣಗಳಲ್ಲಿ, ಸಂತ್ರಸ್ತರು ಈ ಹಿಂದೆ ಚಿತ್ರ ಅಥವಾ ವೀಡಿಯೊ ಚಿತ್ರೀಕರಣಕ್ಕೆ ಒಪ್ಪಿಗೆ ನೀಡಿದ್ದರು ಎಂಬ ಕಾರಣ ಒಡ್ಡಿ ದೂರುಗಳನ್ನು ಸ್ವೀಕರಿಸಲು ನಿರಾಕರಿಸಲಾಗಿತ್ತು. ಈ ಗೊಂದಲಕ್ಕೆ ಪೊಲೀಸ್ ಮುಖ್ಯಸ್ಥರು ತಮ್ಮ ಆದೇಶದಲ್ಲಿ ಸ್ಪಷ್ಟನೆ ನೀಡಿದ್ದಾರೆ.
ಆದೇಶದಲ್ಲಿರುವ ಅಂಶಗಳೇನು?
ಚಿತ್ರ ಅಥವಾ ವೀಡಿಯೊ ರೆಕಾರ್ಡ್ ಮಾಡಲು ಒಪ್ಪಿಗೆ ನೀಡುವುದು ಮತ್ತು ಅದನ್ನು ಇತರರೊಂದಿಗೆ ಹಂಚಿಕೊಳ್ಳಲು ಒಪ್ಪಿಗೆ ನೀಡುವುದು ಸಂಪೂರ್ಣವಾಗಿ ಎರಡು ವಿಭಿನ್ನ ಕಾನೂನು ಪರಿಕಲ್ಪನೆಗಳಾಗಿವೆ. ಸಂತ್ರಸ್ತರು ಆರಂಭದಲ್ಲಿ ಫೋಟೋ ಅಥವಾ ವೀಡಿಯೊ ತೆಗೆಯಲು ಒಪ್ಪಿದ್ದರೂ ಸಹ, ಅವರ ಅನುಮತಿಯಿಲ್ಲದೆ ಅದನ್ನು ಮೂರನೇ ವ್ಯಕ್ತಿಗೆ ಅಥವಾ ಸಾರ್ವಜನಿಕವಾಗಿ ಹಂಚಿಕೊಳ್ಳುವುದು ಗಂಭೀರ ಅಪರಾಧವಾಗಿದೆ. ಎಂದು ಎಂ.ಎ. ಸಲೀಮ್ ಆದೇಶದಲ್ಲಿ ಸ್ಪಷ್ಟಪಡಿಸಿದ್ದಾರೆ.
ಸಂತ್ರಸ್ತರ ಒಪ್ಪಿಗೆ ಇತ್ತು ಎಂಬ ಕಾರಣ ನೀಡಿ ಯಾವುದೇ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಿಸುವುದನ್ನು ವಿಳಂಬ ಮಾಡುವಂತಿಲ್ಲ ಅಥವಾ ನಿರಾಕರಿಸುವಂತಿಲ್ಲ ಎಂದು ಪುನರುಚ್ಚರಿಸಲಾಗಿದೆ. 2017ರ ಸುಪ್ರೀಂ ಕೋರ್ಟ್ನ ಐತಿಹಾಸಿಕ ‘ಜಸ್ಟಿಸ್ ಕೆ.ಎಸ್. ಪುಟ್ಟಸ್ವಾಮಿ ವರ್ಸಸ್ ಯೂನಿಯನ್ ಆಫ್ ಇಂಡಿಯಾ’ ಪ್ರಕರಣದ ತೀರ್ಪನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಶಾರೀರಿಕ ಖಾಸಗಿತನ ಮತ್ತು ವೈಯಕ್ತಿಕ ಮಾಹಿತಿಯ ಹಂಚಿಕೆಯನ್ನು ನಿಯಂತ್ರಿಸುವ ಹಕ್ಕು ಸಂವಿಧಾನದ ವಿಧಿ 21ರ ಅಡಿಯಲ್ಲಿ ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದೆ ಎಂದು ನೆನಪಿಸಲಾಗಿದೆ.
ನಿಯಮವನ್ನು ಉಲ್ಲಂಘಿಸಿ ಖಾಸಗಿ ದೃಶ್ಯಗಳನ್ನು ಹಂಚಿಕೊಳ್ಳುವುದು ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 77 ರ ಅಡಿಯಲ್ಲಿ ವೊಯರಿಸಂ (ಖಾಸಗಿತನಕ್ಕೆ ಧಕ್ಕೆ) ಅಪರಾಧವಾಗುತ್ತದೆ. ಇಂತಹ ಸೈಬರ್ ಅಪರಾಧಗಳ ದೂರು ಬಂದಾಗ ಎಫ್ಐಆರ್ ದಾಖಲಿಸಲು ನಿರಾಕರಿಸುವ ಅಥವಾ ವಿಳಂಬ ಮಾಡುವ ಪೊಲೀಸ್ ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಡಿಜಿ ಮತ್ತು ಐಜಿಪಿ ಎಚ್ಚರಿಸಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:07 pm, Thu, 18 June 26




