
ಬೆಂಗಳೂರು, (ಮೇ 20): NEET UG ಪ್ರಶ್ನೆಸೋರಿಕೆಯಿಂದ 4 ವಿದ್ಯಾರ್ಥಿಗಳು ಆತ್ಮಹತ್ಯೆ ಹಿನ್ನೆಲೆಯಲ್ಲಿ
ಕೇಂದ್ರದ ವಿರುದ್ಧ ನಾಳೆ (ಗುರುವಾರ) ಯುವ ಕಾಂಗ್ರೆಸ್ ಫ್ರೀಡಂಪಾರ್ಕ್ನಲ್ಲಿ ಪ್ರತಿಭಟನೆ (Youth Congress Protest) ನಡೆಸಲಿದೆ. ಇದರಿಂದ ಮೇ 21ರ ಬೆಳಗ್ಗೆ 7.30ರಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ (Bengaluru) ಫ್ರೀಡಂಪಾರ್ಕ್ ಸುತ್ತಮುತ್ತ ವಾಹನ ಸಂಚಾರ ಮಾರ್ಗ ಬದಲಾವಣೆ (Traffic diversions) ಮಾಡಲಾಗಿದೆ. ಫ್ರೀಡಂಪಾರ್ಕ್ (Freedom Park) ಜಂಕ್ಷನ್ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದ್ದು, ಇದಕ್ಕೆ ಪರ್ಯಾಯ ಮಾರ್ಗ ಈ ಕೆಳಗಿನಂತಿದೆ ನೋಡಿ.
ಫ್ರೀಡಂಪಾರ್ಕ್ ಜಂಕ್ಷನ್ನಿಂದ ಕನಕದಾಸ ವೃತ್ತದ ಕಡೆಗೆ ಬರುವ ಮತ್ತು ಹೋಗುವ ವಾಹನಗಳ ಸಂಚಾರ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಹೀಗಾಗಿ ಕೆ.ಜಿ.ರಸ್ತೆ ಮೂಲಕ ಮೈಸೂರು ಬ್ಯಾಂಕ್ ವೃತ್ತದಿಂದ ಬಲತಿರುವು ಪಡೆದು ಫ್ರೀಡಂಪಾರ್ಕ್ ಕಡೆಗೆ ಬರುವ ವಾಹನಗಳು ಅರಮನೆ ರಸ್ತೆ ಮೂಲಕ ಮಹಾರಾಣಿ ಅಂಡರ್ಪಾಸ್ ರಸ್ತೆಯನ್ನು ಕಡ್ಡಾಯವಾಗಿ ಬಳಸಬೇಕು ಎಂದು ಸಂಚಾರಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಪ್ರತಿಭಟನೆಕಾರರು ರೈಲು ನಿಲ್ದಾಣದಿಂದ ಫ್ಲೈಓವರ್ ರಸ್ತೆಯಲ್ಲಿ ಆಗಮಿಸಲಿದ್ದಾರೆ. ಕಾಲ್ನಡಿಗೆಯಲ್ಲಿ ಬರುವುದರಿಂದ ಖೋಡೆ ಜಂಕ್ಷನ್ ಕಡೆಯಿಂದ ಕೆ.ಆರ್.ಸರ್ಕಲ್ ಕಡೆಗೆ ಹೋಗುವ ವಾಹನ ಸವಾರರು ಹಳೇ ಜೆಡಿಎಸ್ ಕಚೇರಿ ರಸ್ತೆಯನ್ನು ಬಳಸಲು ಟ್ರಾಫಿಕ್ ಪೊಲೀಸರು ಸೂಚಿಸಿದ್ದಾರೆ.
ತಾತ್ಕಾಲಿಕವಾಗಿ ಸುಬ್ಬಣ್ಣ ಜಂಕ್ಷನ್ನಿಂದ ಎಂಟಿಆರ್ ಜಂಕ್ಷನ್ ಕಡೆಗೆ ದ್ವಿಮುಖ ಸಂಚಾರಕ್ಕೆ ಅವಕಾಶ ನೀಡಲಾಗಿದ್ದು, ಗಾಂಧಿನಗರ ಕಡೆಗೆ ಬರುವ ವಾಹನಗಳು ಈ ರಸ್ತೆ ಬಳಸಬಹುದಾಗಿದೆ. ಇನ್ನು ಖೋಡೆ ಜಂಕ್ಷನ್ನಿಂದ ಮಹಾರಾಣಿ ಜಂಕ್ಷನ್ವರೆಗೆ, ವೈ.ರಾಮಚಂದ್ರ ರಸ್ತೆ, ಕಾಳಿದಾಸ ರಸ್ತೆ, ಅರಮನೆ ರಸ್ತೆ, ಕೆ.ಜಿ.ರಸ್ತೆಯಲ್ಲಿ ಪಾರ್ಕಿಂಗ್ ನಿಷೇಧಿಸಲಾಗಿದೆ.