TV9 Kannada News Live: ನಾಲ್ಕನೇ ದಿನದ ಮಳೆಗಾಲದ ಅಧಿವೇಶನ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Live Updates: ಹನೂರು ಎನ್‌ಕೌಂಟರ್ ವಿಚಾರದಲ್ಲಿ ತಮಿಳುನಾಡು ನಾಯಕರ ಹೇಳಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತ ಹನೂರು ಶೂಟೌಟ್ ಸಾಕ್ಷ್ಯಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು FSL ತನಿಖೆ ಮುಂದುವರಿದಿದೆ. ಮತ್ತೊಂದೆಡೆ KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್ ನಡೆಸಿದೆ. ರಾಜ್ಯದ ಇಂದಿನ ಪ್ರಮುಖ ಅಪ್‌ಡೇಟ್ಸ್ ಓದಿ.

TV9 Kannada News Live: ನಾಲ್ಕನೇ ದಿನದ ಮಳೆಗಾಲದ ಅಧಿವೇಶನ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
ನಾಲ್ಕನೇ ದಿನದ ಮಳೆಗಾಲದ ಅಧಿವೇಶನ

Updated on: Aug 18, 2026 | 12:36 PM

LIVE NEWS & UPDATES

  • 18 Aug 2026 12:36 PM (IST)

    ಶಿವಶಂಕರಪ್ಪ ಮಗಳ ಮನೆಯಿಂದ ಮಹತ್ವದ ದಾಖಲೆ ಜಪ್ತಿ ಮಾಡಿದ ಇಡಿ!

    KPSC ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ ಮಗಳ ಮನೆಯಲ್ಲಿ ದಾಳಿ ನಡೆಸಿರುವ ಇಡಿ ಅಧಿಕಾರಿಗಳು, ಪರಿಶೀಲನೆ ವೇಳೆ ಸಿಕ್ಕ ಪ್ರಮುಖ ದಾಖಲೆಗಳನ್ನು ಬ್ಯಾಗ್‌ಗಳಲ್ಲಿ ಜಪ್ತಿ ಮಾಡಿ ಕೊಂಡೊಯ್ದಿದ್ದಾರೆ. ಸ್ಥಳದಲ್ಲೇ ಇರುವ ಉಳಿದ ಅಧಿಕಾರಿಗಳಿಂದ ದಾಖಲೆಗಳ ಪರಿಶೀಲನೆ ಮುಂದುವರಿದಿದೆ.

  • 18 Aug 2026 12:34 PM (IST)

    ಮಂಡ್ಯದಲ್ಲಿ ರೈತ ಸಮಿತಿಯಿಂದ ತುರ್ತು ಸಭೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಮಂಡ್ಯದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ಆರಂಭವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ರಾಜ್ಯದ ವಾಸ್ತವ ನೀರಾವರಿ ಸ್ಥಿತಿಯನ್ನು ಪ್ರಾಧಿಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • 18 Aug 2026 12:31 PM (IST)

    AKSSA ಅಧ್ಯಕ್ಷ ಕಾಂತಕುಮಾರ್ ಸೇರಿ ಪ್ರಮುಖ ನಾಯಕರು ಪೊಲೀಸ್ ವಶಕ್ಕೆ!

    ಸರ್ಕಾರಿ ಹುದ್ದೆಗಳ ತಕ್ಷಣದ ಭರ್ತಿಗೆ ಆಗ್ರಹಿಸಿ ಹೋರಾಟಕ್ಕೆ ಕರೆ ನೀಡಿದ್ದ ‘ಆಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ’ (AKSSA) ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ಕೊನೆಗೂ ವಶಕ್ಕೆ ಪಡೆದಿದ್ದಾರೆ. ಧಾರವಾಡದ ಜಯನಗರ ಬಡಾವಣೆಯ ಅಜ್ಞಾತ ಸ್ಥಳದಲ್ಲಿದ್ದ ಕಾಂತಕುಮಾರ್ ಅವರೊಂದಿಗೆ ಸಂಘಟನೆಯ ಪ್ರಮುಖ ನಾಯಕರಾದ ನಾಗರಾಜರೆಡ್ಡಿ, ಶ್ರೀಶೈಲ ತೇಲಿ ಹಾಗೂ ನಾಗರಾಜ್ ಅವರನ್ನು ಖಾಕಿ ಪಡೆ ವಶಕ್ಕೆ ಪಡೆದುಕೊಂಡಿದೆ. ಯಾರಿಗೂ ಸುಳಿವು ಸಿಗದಂತೆ ಎಲ್ಲರನ್ನೂ ಹುಬ್ಬಳ್ಳಿಯ ಹಳೆಯ ಸಿಎಆರ್ (CAR) ಮೈದಾನದ ಕಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ಈ ಪ್ರತಿಭಟನೆ ಮತ್ತು ಸುದೀರ್ಘ ಹೋರಾಟಕ್ಕೆ ಬ್ರೇಕ್ ಹಾಕಿದ್ದಾರೆ.

  • 18 Aug 2026 12:30 PM (IST)

    ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿ ಮಂಕಾಳು ವೈದ್ಯ ಸರ್ವಾನುಮತದಿಂದ ಆಯ್ಕೆ

    ಕರ್ನಾಟಕ ವಿಧಾನಸಭೆಯ ನೂತನ ಡೆಪ್ಯುಟಿ ಸ್ಪೀಕರ್ (ಉಪಸಭಾಪತಿ) ಆಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಸಭಾಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಕಾಳು ವೈದ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಹಿರಿಯ ಸಚಿವ ಲಕ್ಷ್ಮಣ ಸವದಿ ಅನುಮೋದಿಸಿದರು. ಯಾರಿಂದಲೂ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸದನದಲ್ಲಿ ಮಂಕಾಳು ವೈದ್ಯ ಅವರ ಆಯ್ಕೆಯನ್ನು ಸರ್ವಾನುಮತದಿಂದ ಅಧಿಕೃತವಾಗಿ ಘೋಷಿಸಲಾಯಿತು.

  • 18 Aug 2026 12:29 PM (IST)

    ಯಾರೇ ಜೈಲಿಗೆ ಹಾಕಿದರೂ ನಾವು ಹಾಡುವುದೇ 2 ಪ್ಯಾರಾ: ಬಿ.ಕೆ. ಹರಿಪ್ರಸಾದ್ ಆಕ್ರೋಶ!

    ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಕುರಿತಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ನಾವು ಮೊದಲಿನಿಂದಲೂ ಹಾಡಿಕೊಂಡು ಬಂದಿರುವಂತೆ ಎರಡು ಪ್ಯಾರಾಗಳನ್ನು (ಸ್ಟಾಂಜಾ) ಮಾತ್ರ ಹಾಡುತ್ತೇವೆ. ನಮ್ಮನ್ನು ಯಾರೇ ನೇಣಿಗೆ ಹಾಕಲಿ ಅಥವಾ ಜೈಲಿಗೆ ಹಾಕಲಿ, ನಾವು ಎರಡು ಪ್ಯಾರಾ ಮಾತ್ರ ಹಾಡುತ್ತೇವೆ” ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ. ರವೀಂದ್ರನಾಥ ಠಾಗೋರ್ ಅವರ ಸೂಚನೆಯಂತೆಯೇ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡುವ ಸಂಪ್ರದಾಯವಿದೆ ಎಂದು ಅವರು ತಿಳಿಸಿದ್ದಾರೆ.

  • 18 Aug 2026 12:28 PM (IST)

    ಜಿಬಿಎ ಕೇಂದ್ರ ಕಚೇರಿಯಲ್ಲಿ ಕೃಷ್ಣಬೈರೇಗೌಡ ಸಭೆ

    ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕೇಂದ್ರ ಕಚೇರಿಯ ಪೌರಸಂಭಾಂಗಣದಲ್ಲಿ ಮೊದಲ ಬಾರಿಗೆ ಪ್ರಮುಖ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, 5 ನಗರಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬೆಂ.ಸಾ.ಸಂಸ್ಥೆ, ಟ್ರಾಫಿಕ್ ಪೊಲೀಸ್ ಮತ್ತು ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖಾ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

  • 18 Aug 2026 12:01 PM (IST)

    ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಚುನಾವಣೆ: ಭಟ್ಕಳ ಶಾಸಕ ಮಂಕಾಳು ವೈದ್ಯ ಹೆಸರು ಸೂಚಿಸಿದ ಸಿಎಂ!

    ಕರ್ನಾಟಕ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ (ಉಪಸಭಾಪತಿ) ಸ್ಥಾನದ ಚುನಾವಣೆಗೆ ಪ್ರಕ್ರಿಯೆ ಆರಂಭಗೊಂಡಿದೆ. ಉಪಸಭಾಪತಿ ಹುದ್ದೆಗೆ ಭಟ್ಕಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಉಪಮುಖ್ಯಮಂತ್ರಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಪ್ರಸ್ತಾಪಿಸಿ ಸೂಚನೆ ಸಲ್ಲಿಕೆ ಮಾಡಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಸೂಚನೆಯನ್ನು ಹಿರಿಯ ಸಚಿವ ಲಕ್ಷ್ಮಣ ಸವದಿ ಅನುಮೋದಿಸಿದರು.

  • 18 Aug 2026 11:59 AM (IST)

    KPSC ಅಕ್ರಮ ಪ್ರಕರಣ: ಇಡಿ ವಶಕ್ಕೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್!

    KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಹೊಯ್ಸಳ ಡ್ರೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ (ಮಗಳು ಸುಮಾ ಎಸ್ ಸಾಹುಕಾರ್ ಫ್ಲ್ಯಾಟ್) ಸುದೀರ್ಘ ದಾಳಿ ನಡೆಸಿ, ಅವರ ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • 18 Aug 2026 11:20 AM (IST)

    ವಿಧಾನಪರಿಷತ್‌ಗೆ ನೂತನ ಉಪಸಭಾಪತಿ: ಉಮಾಶ್ರೀ ಸರ್ವಾನುಮತದಿಂದ ಆಯ್ಕೆ!

    ಕರ್ನಾಟಕ ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಸಭಾಪತಿ ಹುದ್ದೆಗೆ ಪರಿಷತ್ ಸದಸ್ಯರು ಉಮಾಶ್ರೀ ಅವರ ಹೆಸರನ್ನು ಸೂಚಿಸಿದ್ದು, ಯಾವುದೇ ವಿರೋಧವಿಲ್ಲದೆ ಸರ್ವಸಮ್ಮತಿಯಿಂದ ಈ ಆಯ್ಕೆ ನೆರವೇರಿದೆ.

Breaking News Today Live Updates in Kannada: ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಾಯಕರ ಮಧ್ಯಪ್ರವೇಶಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. “ನಮ್ಮದು ಫೆಡರಲ್ ಒಕ್ಕೂಟ, ಬೇರೆ ರಾಜ್ಯಗಳು ನಮ್ಮ ಆಡಳಿತದಲ್ಲಿ ತಲೆಹಾಕಬಾರದು. ನಮ್ಮ ರಾಜ್ಯವನ್ನು ಹೇಗೆ ರಕ್ಷಿಸಬೇಕೆಂದು ನಮಗೆ ಗೊತ್ತಿದೆ” ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಹನೂರು ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳ ಫೋಟೋದಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಕಂಡುಬಂದಿದ್ದು, ನಕಲಿ ಸಾಕ್ಷಿ ಸೃಷ್ಟಿಯ ದೊಡ್ಡ ಅನುಮಾನ ಮೂಡಿಸಿದೆ. ಪ್ರಸ್ತುತ FSL ಮತ್ತು ಬ್ಯಾಲೆಸ್ಟಿಕ್ ತಜ್ಞರು ಘಟನಾ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.ಅತ್ತ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಲಂಚ ಹಾಗೂ ಅಕ್ರಮ ಆರೋಪದಡಿ, ಅಮಾನತುಗೊಂಡ ಸದಸ್ಯ ಶಿವಶಂಕರಪ್ಪ ಸಾಹುಕಾರ್ ಮನೆ, KPSC ಕಚೇರಿ ಸೇರಿದಂತೆ ರಾಜ್ಯದ 21 ಕಡೆಗಳಲ್ಲಿ ಇಡಿ (ED) ಮೆಗಾ ರೇಡ್ ನಡೆಸಿ ತನಿಖೆ ಚುರುಕುಗೊಳಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

Published On - 11:19 am, Tue, 18 August 26

Loading...
Unable to load recommendations.
Follow Us