TV9 Kannada News highlights: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ

Karnataka News Today Updates: ಹನೂರು ಎನ್‌ಕೌಂಟರ್ ವಿಚಾರದಲ್ಲಿ ತಮಿಳುನಾಡು ನಾಯಕರ ಹೇಳಿಕೆಗೆ ಸಿಎಂ ಡಿ.ಕೆ. ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ. ಇತ್ತ ಹನೂರು ಶೂಟೌಟ್ ಸಾಕ್ಷ್ಯಗಳ ಬಗ್ಗೆ ಅನುಮಾನ ವ್ಯಕ್ತವಾಗಿದ್ದು FSL ತನಿಖೆ ಮುಂದುವರಿದಿದೆ. ಮತ್ತೊಂದೆಡೆ KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಶಿವಶಂಕರಪ್ಪ ಸಾಹುಕಾರ್ ಮನೆ ಸೇರಿ 21 ಕಡೆ ಇಡಿ ಮೆಗಾ ರೇಡ್ ನಡೆಸಿದೆ. ರಾಜ್ಯದ ಇಂದಿನ ಪ್ರಮುಖ ಅಪ್‌ಡೇಟ್ಸ್ ಓದಿ.

TV9 Kannada News highlights: ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ ; ಈ ಹೊತ್ತಿನ ಪ್ರಮುಖ ಸುದ್ದಿಗಳು ಇಲ್ಲಿವೆ
Former Karnataka Education Minister
Edited By:

Updated on: Aug 18, 2026 | 11:19 PM

Breaking News Today highlights Updates in Kannada: ಹನೂರು ಎನ್‌ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತಮಿಳುನಾಡು ನಾಯಕರ ಮಧ್ಯಪ್ರವೇಶಕ್ಕೆ ಸಿಎಂ ಡಿ.ಕೆ. ಶಿವಕುಮಾರ್ ವಿಧಾನಸೌಧದಲ್ಲಿ ಖಡಕ್ ತಿರುಗೇಟು ನೀಡಿದ್ದಾರೆ. “ನಮ್ಮದು ಫೆಡರಲ್ ಒಕ್ಕೂಟ, ಬೇರೆ ರಾಜ್ಯಗಳು ನಮ್ಮ ಆಡಳಿತದಲ್ಲಿ ತಲೆಹಾಕಬಾರದು. ನಮ್ಮ ರಾಜ್ಯವನ್ನು ಹೇಗೆ ರಕ್ಷಿಸಬೇಕೆಂದು ನಮಗೆ ಗೊತ್ತಿದೆ” ಎಂದು ಅವರು ಹೇಳಿದ್ದಾರೆ. ಮತ್ತೊಂದೆಡೆ, ಹನೂರು ಘಟನಾ ಸ್ಥಳದಲ್ಲಿ ಸಿಕ್ಕ ಸಾಕ್ಷ್ಯಗಳ ಫೋಟೋದಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಕಂಡುಬಂದಿದ್ದು, ನಕಲಿ ಸಾಕ್ಷಿ ಸೃಷ್ಟಿಯ ದೊಡ್ಡ ಅನುಮಾನ ಮೂಡಿಸಿದೆ. ಪ್ರಸ್ತುತ FSL ಮತ್ತು ಬ್ಯಾಲೆಸ್ಟಿಕ್ ತಜ್ಞರು ಘಟನಾ ಸ್ಥಳ ಪರಿಶೀಲನೆ ನಡೆಸುತ್ತಿದ್ದಾರೆ.ಅತ್ತ ಕೆಪಿಎಸ್‌ಸಿ ಪಶುವೈದ್ಯಾಧಿಕಾರಿ ನೇಮಕಾತಿ ಲಂಚ ಹಾಗೂ ಅಕ್ರಮ ಆರೋಪದಡಿ, ಅಮಾನತುಗೊಂಡ ಸದಸ್ಯ ಶಿವಶಂಕರಪ್ಪ ಸಾಹುಕಾರ್ ಮನೆ, KPSC ಕಚೇರಿ ಸೇರಿದಂತೆ ರಾಜ್ಯದ 21 ಕಡೆಗಳಲ್ಲಿ ಇಡಿ (ED) ಮೆಗಾ ರೇಡ್ ನಡೆಸಿ ತನಿಖೆ ಚುರುಕುಗೊಳಿಸಿದೆ. ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜ್ಯ, ರಾಜಕೀಯ, ಸಿನಿಮಾ, ಕ್ರೀಡೆ ಇತ್ಯಾದಿ ಲೇಟೆಸ್ಟ್ ಮಾಹಿತಿ ತಿಳಿಯಲು ಈ ಪುಟವನ್ನು ರಿಫ್ರೆಶ್ ಮಾಡುತ್ತಿರಿ.

Tv9 Kannada Live TV ಇಲ್ಲಿ ವೀಕ್ಷಿಸಿ

YouTube video player

LIVE NEWS & UPDATES

The liveblog has ended.
  • 18 Aug 2026 10:55 PM (IST)

    ಮಾಜಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ನಿಧನ

    ಬಿಜೆಪಿಯ ಹಿರಿಯ ನಾಯಕ, ರಾಜ್ಯದ ಮಾಜಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಬಿ.ಸಿ. ನಾಗೇಶ್ (67) ಅವರು ಅನಾರೋಗ್ಯದಿಂದ ಇಂದು ಕೊನೆಯುಸಿರೆಳೆದಿದ್ದಾರೆ.

  • 18 Aug 2026 10:39 PM (IST)

    ದೊಡ್ಡೇರಿಯಲ್ಲಿ 5 ಕೋಟಿ ಮೌಲ್ಯದ ನಕಲಿ ಕ್ಯಾನ್ಸರ್ ಔಷಧಿ ಜಪ್ತಿ

    ಖ್ಯಾತ ‘ಫೈಜರ್’ (Pfizer) ಕಂಪನಿಯ ಹೆಸರಿನಲ್ಲಿ ಅಕ್ರಮವಾಗಿ ನಕಲಿ ಕ್ಯಾನ್ಸರ್ ಗಂಭೀರ ರೋಗದ ಔಷಧ ತಯಾರಿಸುತ್ತಿದ್ದ ಬೃಹತ್ ದಂಧೆಯನ್ನು ತಾವರೆಕೆರೆ ಠಾಣೆ ಪೊಲೀಸರು ಭೇದಿಸಿದ್ದಾರೆ. ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದ ಪೊಲೀಸರು ಸುಮಾರು ₹5 ಕೋಟಿ ಮೌಲ್ಯದ ನಕಲಿ ಔಷಧಗಳನ್ನು ಜಪ್ತಿ ಮಾಡಿದ್ದಾರೆ.

  • 18 Aug 2026 08:57 PM (IST)

    ಕಾಂಗ್ರೆಸ್ ಸಿಎಲ್​ಪಿ ಸಭೆಯಿಂದ ಮಾಜಿ ಸಿಎಂ ಸಿದ್ದರಾಮಯ್ಯ ಗೈರು

    ನಗರದಲ್ಲಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸದೇ ದೂರ ಉಳಿದಿರುವುದು ತೀವ್ರ ಕುತೂಹಲ ಹಾಗೂ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಸಿದ್ದರಾಮಯ್ಯ ಅವರ ಅಸಮಾಧಾನ ಇನ್ನೂ ತಣಿದಿಲ್ಲ ಎಂಬ ಮಾತುಗಳು ಕೇಳಿಬರುತ್ತಿದ್ದು, ಅವರ ಆಪ್ತ ವಲಯದ ಪ್ರಮುಖ ನಾಯಕರು ಸಹ ಸಭೆಯಿಂದ ಗೈರುಹಾಜರಾಗಿರುವುದು ಕಾಂಗ್ರೆಸ್ ಪಳೆಯಾರದಲ್ಲಿ ಸಂಚಲನ ಮೂಡಿಸಿದೆ.

  • 18 Aug 2026 08:22 PM (IST)

    ಸಿಎಲ್​ಪಿ ಸಭೆಯಲ್ಲಿ ನೂತನ ಎಂಎಲ್​ಸಿಗಳಿಗೆ ಅಭಿನಂದನೆ: ಮಳವಳ್ಳಿ ಶಿವಣ್ಣ ವಿರುದ್ಧ ಡಿಕೆಶಿ ಗರಂ

    ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ನೂತನವಾಗಿ ಆಯ್ಕೆಯಾದ ವಿಧಾನಪರಿಷತ್ ಸದಸ್ಯರಿಗೆ (MLC) ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೂಗುಚ್ಚ ನೀಡಿ ಹಾರ್ದಿಕವಾಗಿ ಸ್ವಾಗತಿಸಿ ಅಭಿನಂದಿಸಿದರು. ಆದರೆ, ಇದೇ ಸಭೆಯ ವೇಳೆ ನೂತನ ಎಂಎಲ್​ಸಿ ಮಳವಳ್ಳಿ ಶಿವಣ್ಣ ಅವರ ವಿರುದ್ಧ ಡಿಸಿಎಂ ಡಿ.ಕೆ. ಶಿವಕುಮಾರ್ ಗರಂ ಆಗಿದ್ದರು. “ಏನಯ್ಯ ಕನಕಪುರದ ಪ್ರಶ್ನೆ ಹಾಕಿದ್ದೀಯಾ?”  ಎಂದು ಮಳವಳ್ಳಿ ಶಿವಣ್ಣ  ಗದರಿದ್ದಾರೆ.

  • 18 Aug 2026 07:42 PM (IST)

    ತಾವರೆಕೆರೆ ಪೊಲೀಸರ ಭರ್ಜರಿ ಕಾರ್ಯಾಚರಣೆ: 3 ಕೋಟಿ ರೂ. ಮೌಲ್ಯದ ನಕಲಿ ಕ್ಯಾನ್ಸರ್ ಔಷಧ ಜಾಲ ಭೇದಿಸಿದ ಖಾಕಿ

    ಬೆಂಗಳೂರು ದಕ್ಷಿಣ ತಾಲೂಕಿನ ದೊಡ್ಡೇರಿ ಗ್ರಾಮದ ಬಳಿಯ ತೋಟದ ಮನೆಯೊಂದರ ಮೇಲೆ ದಾಳಿ ನಡೆಸಿದ ತಾವರೆಕೆರೆ ಠಾಣೆ ಪೊಲೀಸರು, ಭಾರಿ ಪ್ರಮಾಣದ ನಕಲಿ ಕ್ಯಾನ್ಸರ್ ಔಷಧ (ಡ್ರಗ್) ತಯಾರಿಕಾ ಜಾಲವನ್ನು ಭೇದಿಸಿ ₹3 ಕೋಟಿ ಮೌಲ್ಯದ ಸರಕನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಕಾರ್ಯಾಚರಣೆ ನಡೆಸಿದ ಪೊಲೀಸರು, ನಕಲಿ ಡ್ರಗ್ಸ್ ಜಾಲದಲ್ಲಿದ್ದ ಕೆಲವರನ್ನು ವಶಕ್ಕೆ ಪಡೆದಿದ್ದು, ಪ್ರಮುಖ ಆರೋಪಿ ಚೇತನ್ ಎಂಬಾತನಿಗಾಗಿ ಜಾಲ ಬೀಸಿದ್ದಾರೆ.

  • 18 Aug 2026 06:07 PM (IST)

    ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್ ಭೇಟಿ ಮಾಡಿದ ನಟ ಧನ್ವೀರ್

    ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ (Renukaswamy Murder Case) ಬಂಧನಕ್ಕೊಳಗಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ನಟ ದರ್ಶನ್ ತೂಗುದೀಪ ಅವರನ್ನು ಭೇಟಿ ಮಾಡಲು ಯುವ ನಟ ಧನ್ವೀರ್ (Dhanveerrah) ಜೈಲಿಗೆ ಆಗಮಿಸಿದ್ದರು. ಖಾಸಗಿ ವಾಹನದಲ್ಲಿ ಜೈಲಿನ ಆವರಣಕ್ಕೆ ಬಂದ ನಟ ಧನ್ವೀರ್, ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ದರ್ಶನ್ ಅವರೊಂದಿಗೆ ಮಾತುಕತೆ ನಡೆಸಿ ಬಳಿಕ ಜೈಲಿನಿಂದ ಹೊರಟುಹೋದರು.

  • 18 Aug 2026 06:05 PM (IST)

    ಹಾಸನ ನಗರಸಭೆ ಮೇಲೆ ಲೋಕಾಯುಕ್ತ ಭರ್ಜರಿ ದಾಳಿ: ಕಚೇರಿ ಬಾಗಿಲು ಹಾಕಿ ಇಂಚಿಂಚೂ ಶೋಧ

    ಸಾರ್ವಜನಿಕರ ದೂರುಗಳು ಹಾಗೂ ಭ್ರಷ್ಟಾಚಾರದ ಆರೋಪಗಳ ಬೆನ್ನಲ್ಲೇ ಹಾಸನ ನಗರಸಭೆ/ಮಹಾನಗರಪಾಲಿಕೆ ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿ ಬಾಗಿಲು ಬಂದ್ ಮಾಡಿ ಪರಿಶೀಲನೆ ನಡೆಸಿದ್ದಾರೆ. ಲೋಕಾಯುಕ್ತ ಎಸ್ಪಿ ನಂದಿನಿ ಅವರ ನೇತೃತ್ವದಲ್ಲಿ ಆರು ವಾಹನಗಳಲ್ಲಿ ಆಗಮಿಸಿದ 30ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿಯ ತಂಡ, ಸರ್ಚ್ ವಾರಂಟ್‌ನೊಂದಿಗೆ ಕಚೇರಿ ಪ್ರವೇಶಿಸಿ ಇಂಚಿಂಚು ಶೋಧ ನಡೆಸಿದೆ.

  • 18 Aug 2026 05:08 PM (IST)

    ಹೊಸಕೋಟೆ ಬಳಿ ಖಾಸಗಿ ಬಸ್-ಕ್ಯಾಂಟರ್ ಭೀಕರ ಡಿಕ್ಕಿ: ಚಾಲಕ ದುರ್ಮರಣ

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ದೊಡ್ಡಹುಲ್ಲೂರು ಗ್ರಾಮದ ಬಳಿ ಖಾಸಗಿ ಬಸ್ ಮತ್ತು ಕ್ಯಾಂಟರ್ ವಾಹನದ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ್ದು, ಕ್ಯಾಂಟರ್ ಚಾಲಕ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದ್ದಾನೆ. ಅಪಘಾತದ ಭೀಕರತೆಗೆ ಬಸ್‌ನಲ್ಲಿದ್ದ ಹಲವು ಪ್ರಯಾಣಿಕರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳೀಯರ ನೆರವಿನಿಂದ ಗಾಯಾಳುಗಳನ್ನು ತಕ್ಷಣವೇ ಹೊಸಕೋಟೆ ತಾಲೂಕು ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

  • 18 Aug 2026 05:07 PM (IST)

    ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ತಾರಕಕ್ಕೇರಿದ ಗಲಾಟೆ: ಕರ್ನಾಟಕದ ಅವಿಭಾಜ್ಯ ಅಂಗ ಗೊತ್ತುವಳಿಗೆ ಪಟ್ಟು

    ಬೆಳಗಾವಿ ಮಹಾನಗರ ಪಾಲಿಕೆಯ ಸಾಮಾನ್ಯ ಸಭೆಯಲ್ಲಿ “ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ” ಎಂಬ ಗೊತ್ತುವಳಿ (Resolution) ಅಂಗೀಕಾರಕ್ಕೆ ಒತ್ತಾಯಿಸಿ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರ ನಡುವೆ ತೀವ್ರ ವಾಗ್ವಾದ ಹಾಗೂ ಗದ್ದಲ ಉಂಟಾಗಿದೆ. ಕೌನ್ಸಿಲ್ ಸಭೆ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷದ ಕಾಂಗ್ರೆಸ್ ಸದಸ್ಯರು ಈ ವಿಷಯವನ್ನು ಪ್ರಸ್ತಾಪಿಸಿ, ತಕ್ಷಣವೇ ಸಭೆಯಲ್ಲಿ ಗೊತ್ತುವಳಿ ಸ್ವೀಕರಿಸಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸಭೆಯ ವಾತಾವರಣ ಕಾವೇರಿತು.

  • 18 Aug 2026 04:51 PM (IST)

    ಪರಪ್ಪನ ಅಗ್ರಹಾರ ಜೈಲಿಗೆ ಮಹಿಳಾ ಆಯೋಗ ದಿಢೀರ್ ಎಂಟ್ರಿ: ಮಹಿಳಾ ಕೈದಿಗಳ ಕಷ್ಟ ಆಲಿಸಿದ ನಾಗಲಕ್ಷ್ಮೀ ಚೌಧರಿ

    ನಗರದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಸಾಲು ಸಾಲು ಅಕ್ರಮಗಳು ಮತ್ತು ಅವ್ಯವಸ್ಥೆಗಳು ನಡೆಯುತ್ತಿವೆ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಡಾ. ನಾಗಲಕ್ಷ್ಮೀ ಚೌಧರಿ ನೇತೃತ್ವದ ತಂಡ ಜೈಲಿಗೆ ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೈಲಿನಲ್ಲಿರುವ ಮಹಿಳಾ ವಿಭಾಗಕ್ಕೆ ತೆರಳಿದ ಆಯೋಗದ ಅಧ್ಯಕ್ಷರು ಮತ್ತು ಅಧಿಕಾರಿಗಳ ತಂಡ, ಮಹಿಳಾ ವಿಚಾರಣಾಧೀನ ಹಾಗೂ ಶಿಕ್ಷೆಗೊಳಗಾದ ಕೈದಿಗಳ ಸ್ಥಿತಿಗತಿ ಮತ್ತು ಕುಂದುಕೊರತೆಗಳನ್ನು ಸುದೀರ್ಘವಾಗಿ ಪರಿಶೀಲಿಸಿತು.

  • 18 Aug 2026 04:33 PM (IST)

    ಫ್ರೀಡಂ ಪಾರ್ಕ್ ಪ್ರತಿಭಟನಾಕಾರರ ಅಹವಾಲು ಸ್ವೀಕರಿಸಲು ಸಚಿವರ ನಿಯೋಜನೆ

    ರಾಜಧಾನಿ ಬೆಂಗಳೂರಿನ ಫ್ರೀಡಂ ಪಾರ್ಕ್ ಸೇರಿದಂತೆ ವಿವಿಧೆಡೆ ವಿವಿಧ ಬೇಡಿಕೆಗಳಿಗಾಗಿ ಧರಣಿ ನಡೆಸುತ್ತಿರುವ ಪ್ರತಿಭಟನಾಕಾರರ ಕುಂದುಕೊರತೆ ಹಾಗೂ ಅಹವಾಲುಗಳನ್ನು ಸ್ವೀಕರಿಸಲು ಪ್ರತಿದಿನ ಮೂವರು ಸಚಿವರನ್ನು ನಿಯೋಜಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಆಗಸ್ಟ್ 27ರವರೆಗೆ ಈ ವ್ಯವಸ್ಥೆ ಜಾರಿಯಲ್ಲಿದ್ದು, ನಿಗದಿತ ಸಚಿವರು ಪ್ರತಿದಿನ ಪ್ರತಿಭಟನಾ ಸ್ಥಳಗಳಿಗೆ ಖುದ್ದಾಗಿ ಭೇಟಿ ನೀಡಿ ಹೋರಾಟಗಾರರಿಂದ ಮನವಿ ಸ್ವೀಕರಿಸಲಿದ್ದಾರೆ.

  • 18 Aug 2026 04:11 PM (IST)

    ಸದನ ಕಲಾಪ ಸಲಹಾ ಸಮಿತಿ ಸಭೆಯಲ್ಲೂ ಮೂಡದ ಒಮ್ಮತ: ಸಚಿವ ನಾಗೇಂದ್ರ ರಾಜೀನಾಮೆಗೆ ಬಿಜೆಪಿ ಪಟ್ಟು

    ವಿಧಾನಸಭಾ ಸಭಾಪತಿ ಜಿ.ಎಸ್. ಪಾಟೀಲ್ ನೇತೃತ್ವದಲ್ಲಿ ನಡೆದ ಸದನ ಕಲಾಪ ಸಲಹಾ ಸಮಿತಿ (BAC) ಸಭೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆ ವಿಚಾರವಾಗಿ ಸರ್ಕಾರ ಮತ್ತು ವಿರೋಧ ಪಕ್ಷದ ನಡುವೆ ತೀವ್ರ ಕಸರತ್ತು ನಡೆದಿದ್ದು, ಯಾವುದೇ ಒಮ್ಮತ ಮೂಡದೆ ಸಭೆ ಅಂತ್ಯಗೊಂಡಿದೆ. ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದ ಹಿನ್ನೆಲೆಯಲ್ಲಿ ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಬಿಜೆಪಿ ನಾಯಕರು ಕಟ್ಟುನಿಟ್ಟಿನ ಪಟ್ಟು ಹಿಡಿದಿದ್ದರೆ, ರಾಜೀನಾಮೆ ಪ್ರಶ್ನೆಯೇ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

  • 18 Aug 2026 03:50 PM (IST)

    ಸಚಿವ ಬಿ.ನಾಗೇಂದ್ರ ರಾಜೀನಾಮೆಗೆ ಆಗ್ರಹ: ಕಪ್ಪು ಶಾಲು ಧರಿಸಿ ವಿಧಾನಸಭೆಗೆ ಆಗಮಿಸಿದ ಬಿಜೆಪಿ ಶಾಸಕರು

    ರಾಜ್ಯ ಸರ್ಕಾರದ ವಿರುದ್ಧ ವಿರೋಧ ಪಕ್ಷ ಬಿಜೆಪಿ ಸಮರ ಸಾರಿದ್ದು, ಸಚಿವ ಬಿ. ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಶಾಸಕರು ವಿಧಾನಸಭೆಗೆ ಕಪ್ಪು ಶಾಲು ಧರಿಸಿ ಆಗಮಿಸುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿಸ್ದಾರೆ.

  • 18 Aug 2026 03:47 PM (IST)

    ಆಗಸ್ಟ್ 26ಕ್ಕೆ ವೀರನಹೊಸಹಳ್ಳಿಯಿಂದ ಗಜಪಯಣ: ‘ಕ್ಯಾಪ್ಟನ್ ಅಭಿಮನ್ಯು’ ನೇತೃತ್ವದಲ್ಲಿ ದಸರಾ ಆನೆಗಳ ಪಯಣ

    ವಿಶ್ವಪ್ರಸಿದ್ಧ ಮೈಸೂರು ದಸರಾ ಮಹೋತ್ಸವ-2026ರ ತಯಾರಿಗಳು ಭರದಿಂದ ಸಾಗಿದ್ದು, ಜಂಬೂಸವಾರಿ ಹಾಗೂ ದಸರಾ ಮೆರವಣಿಗೆಯಲ್ಲಿ ಭಾಗವಹಿಸಲಿರುವ 16 ಆನೆಗಳ ಆಯ್ಕೆ ಪ್ರಕ್ರಿಯೆ ಯಶಸ್ವಿಯಾಗಿ ಪೂರ್ಣಗೊಂಡಿದೆ. ವಿಧಾನಸೌಧದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ದಸರಾ ಗಜಪಡೆಯ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಲಾಗಿದ್ದು, ಕ್ಯಾಪ್ಟನ್ ಅಭಿನಮನ್ಯು ನೇತೃತ್ವದಲ್ಲಿ ಆನೆಗಳು ಸಾಂಸ್ಕೃತಿಕ ನಗರಿ ಮೈಸೂರಿನತ್ತ ಪಯಣ ಬೆಳೆಸಲಿವೆ.

  • 18 Aug 2026 02:50 PM (IST)

    ಕೃಷ್ಣ ಬೈರೇಗೌಡಗೆ ಹೆಚ್ಚುವರಿಯಾಗಿ ಸಂಸದೀಯ ವ್ಯವಹಾರ ಖಾತೆ ನೀಡಲು ರಾಜ್ಯಪಾಲರಿಗೆ ಸಿಎಂ ಪತ್ರ

    ರಾಜ್ಯ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆಯೊಂದರ ಬದಲಾವಣೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಸದ್ಯ ಮುಖ್ಯಮಂತ್ರಿಗಳ ಬಳಿ ಇದ್ದ ಸಂಸದೀಯ ವ್ಯವಹಾರ ಹಾಗೂ ಶಾಸನ ರಚನೆ ಖಾತೆಯನ್ನು ಸಚಿವ ಕೃಷ್ಣ ಬೈರೇಗೌಡ ಅವರಿಗೆ ಹೆಚ್ಚುವರಿಯಾಗಿ ವಹಿಸಲು ನಿರ್ಧರಿಸಲಾಗಿದೆ.

  • 18 Aug 2026 02:05 PM (IST)

    ವಿವಿ ಪುರಂನಲ್ಲಿ ರಸ್ತೆಗೆ ಬಿದ್ದ ಬೃಹತ್ ಮರದ ಕೊಂಬೆ: ಹಣ್ಣಿನ ವ್ಯಾಪಾರಿಗಳು ಸೇರಿ ಇಬ್ಬರಿಗೆ ಗಾಯ!

    ವಿವಿ ಪುರಂನ ಸಜ್ಜನ್ ರಾವ್ ಸರ್ಕಲ್‌ನಲ್ಲಿ ಮಧ್ಯಾಹ್ನ 2 ಗಂಟೆಗೆ ಬೃಹದಾಕಾರದ ಮರದ ಕೊಂಬೆ ಬಿದ್ದು ತಳ್ಳುವ ಗಾಡಿ ಹಣ್ಣು ವ್ಯಾಪಾರಿಗಳು ಸೇರಿ ಇಬ್ಬರಿಗೆ ಗಾಯಗಳಾಗಿವೆ. ಸ್ಥಳಕ್ಕೆ ವಿವಿ ಪುರಂ ಪೊಲೀಸರು ಭೇಟಿ ನೀಡಿದ್ದು, ಜಿಬಿಎ (GBA) ಅಧಿಕಾರಿಗಳು ಮರ ತೆರವುಗೊಳಿಸಿದ್ದಾರೆ.

  • 18 Aug 2026 01:22 PM (IST)

    ಅರಣ್ಯ ಸಿಬ್ಬಂದಿ ಫೈರಿಂಗ್‌ಗೆ ಬಲಿಯಾದವರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ

    ಹನೂರು ತಾಲೂಕಿನ ಶಾಗ್ಯ ಸಮೀಪ ಕಾವೇರಿ ವನ್ಯಧಾಮದಲ್ಲಿ ಅರಣ್ಯ ಸಿಬ್ಬಂದಿ ನಡೆಸಿದ ಫೈರಿಂಗ್‌ನಲ್ಲಿ ತಮಿಳುನಾಡು ಮೂಲದ ಮೂವರು (ಪೀಟರ್, ಕುಮಾರ್, ಅಂತೋಣಿಸ್ವಾಮಿ) ಮೃತಪಟ್ಟ ಪ್ರಕರಣ ತಮಿಳುನಾಡು ವಿಧಾನಸಭೆಯಲ್ಲೂ ತೀವ್ರ ಸದ್ದು ಮಾಡಿದೆ. ಸದನದಲ್ಲಿ ಡಿಎಂಕೆ ಮತ್ತು ಎಐಡಿಎಂಕೆ ನಾಯಕರು ಪ್ರಕರಣವನ್ನು ಪ್ರಸ್ತಾಪಿಸಿದ್ದು, ಮೃತರ ಕುಟುಂಬಗಳಿಗೆ ತಮಿಳುನಾಡು ಸರ್ಕಾರ ತಲಾ 10 ಲಕ್ಷ ರೂ. ಪರಿಹಾರ ಘೋಷಿಸಿದೆ. ಅರಣ್ಯ ಸಚಿವ ರಂಜಿತ್ ಕುಮಾರ್ ಪರಿಹಾರ ಪ್ರಕಟಿಸಿದ್ದು, ಈ ಘಟನೆಯನ್ನು ಕರ್ನಾಟಕ ಸರ್ಕಾರ ತಕ್ಷಣವೇ ಸಿಬಿಐ ತನಿಖೆಗೆ ವಹಿಸಬೇಕೆಂದು ಸದನದಲ್ಲಿ ಒತ್ತಾಯಿಸಲಾಗಿದೆ.

  • 18 Aug 2026 01:20 PM (IST)

    ಸಚಿವ ನಾಗೇಂದ್ರ ವಜಾಕ್ಕೆ ಆಗ್ರಹಿಸಿ ಡಿಸಿ ಕಚೇರಿ ಮುಂದೆ ಪ್ರತಿಭಟನೆ!

    ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣ ಆರೋಪಿತ ಸಚಿವ ಬಿ. ನಾಗೇಂದ್ರ ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸುವಂತೆ ಆಗ್ರಹಿಸಿ ಬಿಜೆಪಿ ಕಾರ್ಯಕರ್ತರು ಜಿಲ್ಲಾಧಿಕಾರಿ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಮುಂದುವರಿಸಿದ್ದಾರೆ. ಜಿಲ್ಲಾಧ್ಯಕ್ಷ ಓಂಶಕ್ತಿ ಚಲಪತಿ ಹಾಗೂ ಮಾಜಿ ಶಾಸಕ ಸಂಪಂಗಿ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ನೂರಾರು ಜನರು ಭಾಗವಹಿಸಿದ್ದರು.

  • 18 Aug 2026 12:36 PM (IST)

    ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಕುಳಿತ ಮಾಜಿ ಸಿಎಂ ಸಿದ್ದರಾಮಯ್ಯ!

    ವಿಧಾನಸಭೆ ಕಲಾಪದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಭಾಗಿಯಾಗಿದ್ದು, ಆಡಳಿತ ಪಕ್ಷದ ಕೊನೆಯ ಸಾಲಿನಲ್ಲಿ ಆಸೀನರಾಗಿದ್ದರು. ಈ ವೇಳೆ ಮಧುಗಿರಿ ಶಾಸಕ ಕೆ.ಎನ್. ರಾಜಣ್ಣ ಅವರು ಸಿದ್ದರಾಮಯ್ಯ ಅವರ ಪಕ್ಕದಲ್ಲೇ ಕುಳಿತು ಕೆಲಕಾಲ ಸಮಾಲೋಚನೆ ನಡೆಸಿದರು.

  • 18 Aug 2026 12:34 PM (IST)

    ಮಂಡ್ಯದಲ್ಲಿ ರೈತ ಸಮಿತಿಯಿಂದ ತುರ್ತು ಸಭೆ

    ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನದಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿದ್ದ ಆದೇಶವನ್ನು ಪಾಲಿಸುವಂತೆ ಸುಪ್ರೀಂ ಕೋರ್ಟ್ ಸೂಚಿಸಿರುವ ಹಿನ್ನೆಲೆಯಲ್ಲಿ, ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯಿಂದ ಮಂಡ್ಯದ ಪ್ರವಾಸಿ ಮಂದಿರದಲ್ಲಿ ತುರ್ತು ಸಭೆ ಆರಂಭವಾಗಿದೆ. ಸುಪ್ರೀಂ ಕೋರ್ಟ್‌ನಲ್ಲಿ ರಾಜ್ಯಕ್ಕೆ ಹಿನ್ನಡೆಯಾಗಿರುವ ಬಗ್ಗೆ ಸಭೆಯಲ್ಲಿ ತೀವ್ರ ಚರ್ಚೆ ನಡೆಯುತ್ತಿದ್ದು, ರಾಜ್ಯದ ವಾಸ್ತವ ನೀರಾವರಿ ಸ್ಥಿತಿಯನ್ನು ಪ್ರಾಧಿಕಾರ ಹಾಗೂ ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ರೈತ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

  • 18 Aug 2026 12:31 PM (IST)

    AKSSA ಅಧ್ಯಕ್ಷ ಕಾಂತಕುಮಾರ್ ಸೇರಿ ಪ್ರಮುಖ ನಾಯಕರು ಪೊಲೀಸ್ ವಶಕ್ಕೆ!

    ಸರ್ಕಾರಿ ಹುದ್ದೆಗಳ ತಕ್ಷಣದ ಭರ್ತಿಗೆ ಆಗ್ರಹಿಸಿ ಹೋರಾಟಕ್ಕೆ ಕರೆ ನೀಡಿದ್ದ ‘ಆಖಿಲ ಕರ್ನಾಟಕ ರಾಜ್ಯ ವಿದ್ಯಾರ್ಥಿ ಸಂಘದ’ (AKSSA) ಅಧ್ಯಕ್ಷ ಕಾಂತಕುಮಾರ್ ಅವರನ್ನು ಪೊಲೀಸರು ಕೊನೆಗೂ ವಶಕ್ಕೆ ಪಡೆದಿದ್ದಾರೆ. ಧಾರವಾಡದ ಜಯನಗರ ಬಡಾವಣೆಯ ಅಜ್ಞಾತ ಸ್ಥಳದಲ್ಲಿದ್ದ ಕಾಂತಕುಮಾರ್ ಅವರೊಂದಿಗೆ ಸಂಘಟನೆಯ ಪ್ರಮುಖ ನಾಯಕರಾದ ನಾಗರಾಜರೆಡ್ಡಿ, ಶ್ರೀಶೈಲ ತೇಲಿ ಹಾಗೂ ನಾಗರಾಜ್ ಅವರನ್ನು ಖಾಕಿ ಪಡೆ ವಶಕ್ಕೆ ಪಡೆದುಕೊಂಡಿದೆ. ಯಾರಿಗೂ ಸುಳಿವು ಸಿಗದಂತೆ ಎಲ್ಲರನ್ನೂ ಹುಬ್ಬಳ್ಳಿಯ ಹಳೆಯ ಸಿಎಆರ್ (CAR) ಮೈದಾನದ ಕಡೆಗೆ ಕರೆದೊಯ್ಯಲಾಗಿದ್ದು, ಪೊಲೀಸರು ಈ ಪ್ರತಿಭಟನೆ ಮತ್ತು ಸುದೀರ್ಘ ಹೋರಾಟಕ್ಕೆ ಬ್ರೇಕ್ ಹಾಕಿದ್ದಾರೆ.

  • 18 Aug 2026 12:30 PM (IST)

    ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಆಗಿ ಮಂಕಾಳು ವೈದ್ಯ ಸರ್ವಾನುಮತದಿಂದ ಆಯ್ಕೆ

    ಕರ್ನಾಟಕ ವಿಧಾನಸಭೆಯ ನೂತನ ಡೆಪ್ಯುಟಿ ಸ್ಪೀಕರ್ (ಉಪಸಭಾಪತಿ) ಆಗಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ-ಹೊನ್ನಾವರ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಸಭಾಪತಿ ಸ್ಥಾನಕ್ಕೆ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಂಕಾಳು ವೈದ್ಯ ಅವರ ಹೆಸರನ್ನು ಪ್ರಸ್ತಾಪಿಸಿದ್ದು, ಹಿರಿಯ ಸಚಿವ ಲಕ್ಷ್ಮಣ ಸವದಿ ಅನುಮೋದಿಸಿದರು. ಯಾರಿಂದಲೂ ವಿರೋಧ ವ್ಯಕ್ತವಾಗದ ಹಿನ್ನೆಲೆಯಲ್ಲಿ ಸದನದಲ್ಲಿ ಮಂಕಾಳು ವೈದ್ಯ ಅವರ ಆಯ್ಕೆಯನ್ನು ಸರ್ವಾನುಮತದಿಂದ ಅಧಿಕೃತವಾಗಿ ಘೋಷಿಸಲಾಯಿತು.

  • 18 Aug 2026 12:29 PM (IST)

    ಯಾರೇ ಜೈಲಿಗೆ ಹಾಕಿದರೂ ನಾವು ಹಾಡುವುದೇ 2 ಪ್ಯಾರಾ: ಬಿ.ಕೆ. ಹರಿಪ್ರಸಾದ್ ಆಕ್ರೋಶ!

    ರಾಷ್ಟ್ರಗೀತೆ ಹಾಗೂ ವಂದೇ ಮಾತರಂ ಕುರಿತಾಗಿ ಎದ್ದಿರುವ ವಿವಾದಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ಹಿರಿಯ ನಾಯಕ ಬಿ.ಕೆ. ಹರಿಪ್ರಸಾದ್ ದೆಹಲಿಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಕಾಂಗ್ರೆಸ್ ಪಕ್ಷದ ಯಾವುದೇ ಕಾರ್ಯಕ್ರಮಗಳಲ್ಲೂ ವಂದೇ ಮಾತರಂ ಗೀತೆಯನ್ನು ಪೂರ್ಣವಾಗಿ ಹಾಡುವುದಿಲ್ಲ. ನಾವು ಮೊದಲಿನಿಂದಲೂ ಹಾಡಿಕೊಂಡು ಬಂದಿರುವಂತೆ ಎರಡು ಪ್ಯಾರಾಗಳನ್ನು (ಸ್ಟಾಂಜಾ) ಮಾತ್ರ ಹಾಡುತ್ತೇವೆ. ನಮ್ಮನ್ನು ಯಾರೇ ನೇಣಿಗೆ ಹಾಕಲಿ ಅಥವಾ ಜೈಲಿಗೆ ಹಾಕಲಿ, ನಾವು ಎರಡು ಪ್ಯಾರಾ ಮಾತ್ರ ಹಾಡುತ್ತೇವೆ” ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ. ರವೀಂದ್ರನಾಥ ಠಾಗೋರ್ ಅವರ ಸೂಚನೆಯಂತೆಯೇ ಮೊದಲ ಎರಡು ಪ್ಯಾರಾಗಳನ್ನು ಮಾತ್ರ ಹಾಡುವ ಸಂಪ್ರದಾಯವಿದೆ ಎಂದು ಅವರು ತಿಳಿಸಿದ್ದಾರೆ.

  • 18 Aug 2026 12:28 PM (IST)

    ಜಿಬಿಎ ಕೇಂದ್ರ ಕಚೇರಿಯಲ್ಲಿ ಕೃಷ್ಣಬೈರೇಗೌಡ ಸಭೆ

    ನಗರಾಭಿವೃದ್ಧಿ ಸಚಿವ ಕೃಷ್ಣಬೈರೇಗೌಡ ಅವರ ಅಧ್ಯಕ್ಷತೆಯಲ್ಲಿ ಇಂದು ಮಧ್ಯಾಹ್ನ 2 ಗಂಟೆಗೆ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಕೇಂದ್ರ ಕಚೇರಿಯ ಪೌರಸಂಭಾಂಗಣದಲ್ಲಿ ಮೊದಲ ಬಾರಿಗೆ ಪ್ರಮುಖ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಸಭೆಯಲ್ಲಿ ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್, 5 ನಗರಪಾಲಿಕೆಗಳ ಆಯುಕ್ತರು, ಜಂಟಿ ಆಯುಕ್ತರು, ಮುಖ್ಯ ಎಂಜಿನಿಯರ್‌ಗಳು ಹಾಗೂ ಬೆಸ್ಕಾಂ, ಬಿಡಬ್ಲ್ಯೂಎಸ್‌ಎಸ್‌ಬಿ, ಬಿಎಂಆರ್‌ಸಿಎಲ್, ಬೆಂ.ಸಾ.ಸಂಸ್ಥೆ, ಟ್ರಾಫಿಕ್ ಪೊಲೀಸ್ ಮತ್ತು ತೋಟಗಾರಿಕೆ ಸೇರಿದಂತೆ ವಿವಿಧ ಇಲಾಖಾ ಮುಖ್ಯಸ್ಥರು ಭಾಗವಹಿಸಲಿದ್ದಾರೆ.

  • 18 Aug 2026 12:01 PM (IST)

    ವಿಧಾನಸಭೆ ಡೆಪ್ಯುಟಿ ಸ್ಪೀಕರ್ ಚುನಾವಣೆ: ಭಟ್ಕಳ ಶಾಸಕ ಮಂಕಾಳು ವೈದ್ಯ ಹೆಸರು ಸೂಚಿಸಿದ ಸಿಎಂ!

    ಕರ್ನಾಟಕ ವಿಧಾನಸಭೆಯ ಡೆಪ್ಯುಟಿ ಸ್ಪೀಕರ್ (ಉಪಸಭಾಪತಿ) ಸ್ಥಾನದ ಚುನಾವಣೆಗೆ ಪ್ರಕ್ರಿಯೆ ಆರಂಭಗೊಂಡಿದೆ. ಉಪಸಭಾಪತಿ ಹುದ್ದೆಗೆ ಭಟ್ಕಳ ಕ್ಷೇತ್ರದ ಕಾಂಗ್ರೆಸ್ ಶಾಸಕ ಮಂಕಾಳು ವೈದ್ಯ ಅವರ ಹೆಸರನ್ನು ಉಪಮುಖ್ಯಮಂತ್ರಿ ಹಾಗೂ ಸಚಿವ ಡಿ.ಕೆ. ಶಿವಕುಮಾರ್ ಪ್ರಸ್ತಾಪಿಸಿ ಸೂಚನೆ ಸಲ್ಲಿಕೆ ಮಾಡಿದರು. ಸಿಎಂ ಡಿ.ಕೆ. ಶಿವಕುಮಾರ್ ಅವರ ಈ ಸೂಚನೆಯನ್ನು ಹಿರಿಯ ಸಚಿವ ಲಕ್ಷ್ಮಣ ಸವದಿ ಅನುಮೋದಿಸಿದರು.

  • 18 Aug 2026 11:59 AM (IST)

    KPSC ಅಕ್ರಮ ಪ್ರಕರಣ: ಇಡಿ ವಶಕ್ಕೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್!

    KPSC ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬೆಳಿಗ್ಗೆ 6 ಗಂಟೆಯಿಂದ ಬೆಂಗಳೂರಿನ ಡಾಲರ್ಸ್ ಕಾಲೋನಿಯ ಹೊಯ್ಸಳ ಡ್ರೀಮ್ಸ್ ಅಪಾರ್ಟ್‌ಮೆಂಟ್‌ನಲ್ಲಿರುವ (ಮಗಳು ಸುಮಾ ಎಸ್ ಸಾಹುಕಾರ್ ಫ್ಲ್ಯಾಟ್) ಸುದೀರ್ಘ ದಾಳಿ ನಡೆಸಿ, ಅವರ ಮೊಬೈಲ್‌ಗಳನ್ನು ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದ್ದಾರೆ.

  • 18 Aug 2026 11:20 AM (IST)

    ವಿಧಾನಪರಿಷತ್‌ಗೆ ನೂತನ ಉಪಸಭಾಪತಿ: ಉಮಾಶ್ರೀ ಸರ್ವಾನುಮತದಿಂದ ಆಯ್ಕೆ!

    ಕರ್ನಾಟಕ ವಿಧಾನಪರಿಷತ್‌ನ ನೂತನ ಉಪಸಭಾಪತಿಯಾಗಿ ಕಾಂಗ್ರೆಸ್ ಸದಸ್ಯೆ ಉಮಾಶ್ರೀ ಅವರು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಉಪಸಭಾಪತಿ ಹುದ್ದೆಗೆ ಪರಿಷತ್ ಸದಸ್ಯರು ಉಮಾಶ್ರೀ ಅವರ ಹೆಸರನ್ನು ಸೂಚಿಸಿದ್ದು, ಯಾವುದೇ ವಿರೋಧವಿಲ್ಲದೆ ಸರ್ವಸಮ್ಮತಿಯಿಂದ ಈ ಆಯ್ಕೆ ನೆರವೇರಿದೆ.

Published On - 11:19 am, Tue, 18 August 26

Loading...
Unable to load recommendations.
Follow Us