AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

“ಯಾವುದೇ ಧರ್ಮದಲ್ಲೂ ತೀರ್ಥ ಪಡೆಯಬೇಡಿ ಎಂದು ಹೇಳಿಲ್ಲ”: ಸಮಾಜಕ್ಕೆ ಸೌಹಾರ್ದದ ಸಂದೇಶ ನೀಡಿದ ಯು.ಟಿ. ಖಾದರ್

ಸಚಿವ ಯುಟಿ ಖಾದರ್ ಸೌಹಾರ್ದ ರಾಜಕಾರಣದ ತಮ್ಮ ದೃಷ್ಟಿಕೋನವನ್ನು ಹಂಚಿಕೊಂಡಿದ್ದಾರೆ. ಇಸ್ಕಾನ್‌ನೊಂದಿಗಿನ ತಮ್ಮ ನಂಟನ್ನು ವಿವರಿಸುತ್ತಾ, ವಕ್ಫ್ ಮಂಡಳಿಯ ಡಿಜಿಟಲೀಕರಣ, ಅಲ್ಪಸಂಖ್ಯಾತರಿಗೆ ಕೌಶಲ್ಯ ಅಭಿವೃದ್ಧಿ ಮತ್ತು ಭಾಷಾ ಪ್ರಯೋಗಾಲಯಗಳ ಸ್ಥಾಪನೆ ಕುರಿತು ಮಾತನಾಡಿದ್ದಾರೆ. ಅಲ್ಲದೆ, ಕಡಿಮೆ ವೆಚ್ಚದಲ್ಲಿ ಉಮ್ರಾ ಯಾತ್ರೆಗೆ ಅವಕಾಶ ಕಲ್ಪಿಸುವ ತಮ್ಮ ಯೋಜನೆಯನ್ನು ಪ್ರಸ್ತಾಪಿಸಿದ್ದಾರೆ.

ಯಾವುದೇ ಧರ್ಮದಲ್ಲೂ ತೀರ್ಥ ಪಡೆಯಬೇಡಿ ಎಂದು ಹೇಳಿಲ್ಲ: ಸಮಾಜಕ್ಕೆ ಸೌಹಾರ್ದದ ಸಂದೇಶ ನೀಡಿದ ಯು.ಟಿ. ಖಾದರ್
ಯುಟಿ ಖಾದರ್
ಅಕ್ಷಯ್​ ಪಲ್ಲಮಜಲು​​
|

Updated on: Aug 24, 2026 | 8:13 PM

Share

ಬೆಂಗಳೂರು, ಆ.24: ಸಚಿವ ಯು.ಟಿ. ಖಾದರ್ ಅವರು ಸಮಾಜದಲ್ಲಿ ಸೌಹಾರ್ದ ಮತ್ತು ಸಹಬಾಳ್ವೆಯನ್ನು ಉತ್ತೇಜಿಸುವ ತಮ್ಮ ದೃಷ್ಟಿಕೋನ ಹಾಗೂ ಪ್ರಮುಖ ಆಡಳಿತಾತ್ಮಕ ಸುಧಾರಣೆಗಳ ಕುರಿತು ವಿಸ್ತೃತವಾಗಿ ಟಿವಿ9 ಪಾಡ್‌ಕ್ಯಾಸ್ಟ್ ನಲ್ಲಿ ಮಾತನಾಡಿದ್ದಾರೆ. ಸಾರ್ವಜನಿಕ ಜೀವನದಲ್ಲಿ ಜಾತಿ, ಮತ ಅಥವಾ ಯಾವುದೇ ಸಂಕುಚಿತ ಮನೋಭಾವಕ್ಕೆ ಅವಕಾಶ ನೀಡಬಾರದು ಎಂಬ ತಮ್ಮ ದೃಢ ನಿಲುವನ್ನು ಅವರು ಪುನರುಚ್ಚರಿಸಿದರು.

ತಾವು ರಾಜಕೀಯಕ್ಕೆ ಬಂದಾಗಿನಿಂದಲೂ ಎಲ್ಲ ಧರ್ಮದವರ ಪ್ರೀತಿ ಮತ್ತು ಬೆಂಬಲವನ್ನು ಗಳಿಸಿದ್ದಾರೆ ಎಂದು ಖಾದರ್ ಹೇಳುತ್ತಾರೆ. “ಜನ ಆಶೀರ್ವಾದ ಕೊಟ್ಟಿದ್ದಾರೆ. ನಾವು ಸೌಹಾರ್ದತೆಯ ಒಂದು ಹೆಜ್ಜೆ ಮುಂದಿಟ್ಟರೆ, ಜನ ನಮ್ಮ ಜೊತೆಗೆ ಹತ್ತು ಹೆಜ್ಜೆ ಮುಂದೆ ಬರುತ್ತಾರೆ” ಎಂದು ಅವರು ಹೇಳಿದರು. ರಾಜಕಾರಣಿಗಳು ಯಾವುದೇ ಕಾರಣಕ್ಕೂ ಜಾತಿವಾದಿಗಳು ಅಥವಾ ಮತೀಯವಾದಿಗಳು ಆಗಬಾರದು; ಅಂಥವರು ನಾಯಕರಲ್ಲ, ನಾಲಾಯಕ್ ಎಂದು ಖಾರವಾಗಿ ನುಡಿದರು.

ಎಲ್ಲ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವ ತಮ್ಮ ಅಭ್ಯಾಸವನ್ನು ಸಮರ್ಥಿಸಿಕೊಂಡ ಖಾದರ್, ದೇವಸ್ಥಾನಗಳಲ್ಲಿ ತೀರ್ಥ ಸ್ವೀಕರಿಸುವ ಕುರಿತು ಕೆಲವರಿಂದ ಟೀಕೆಗಳನ್ನು ಎದುರಿಸಿದ ಉದಾಹರಣೆಯನ್ನು ನೀಡಿದರು. “ನಮ್ಮ ಧರ್ಮದಲ್ಲಿ ಎಲ್ಲಿಯೂ ಕೂಡ ತೀರ್ಥ ತೆಗೆದುಕೊಳ್ಳಬಾರದು ಎಂದು ಹೇಳಿಲ್ಲ. ಎಲ್ಲ ಧರ್ಮವನ್ನು ಗೌರವಿಸಿ, ಸಂಸ್ಕೃತಿಗೆ ಒಳಪಡಿ ಎಂದು ಹೇಳಿದ್ದಾರೆ” ಎಂದು ಅವರು ಸ್ಪಷ್ಟಪಡಿಸಿದರು. ದ್ವೇಷಿಸುವ ಕೆಲವೇ ಕೆಲವು ಶೇಕಡಾ ಜನರು ಸಮಾಜದಲ್ಲಿ ಸಂಕುಚಿತ ಮನೋಭಾವವನ್ನು ಹರಡುತ್ತಿದ್ದು, ಅದನ್ನು ದೂರ ಮಾಡುವ ಕೆಲಸ ಆಗಬೇಕಿದೆ ಎಂದು ಅವರು ಕರೆ ನೀಡಿದರು.

ಇಲ್ಲಿದೆ ನೋಡಿ ವಿಡಿಯೋ:

ಇಸ್ಕಾನ್‌ನೊಂದಿಗಿನ ತಮ್ಮ ನಂಟಿನ ಕುರಿತು ಮಾತನಾಡಿದ ಖಾದರ್, ಶಾಸಕರಾಗಿದ್ದಾಗ ಮತ್ತು ನಂತರ ಆರೋಗ್ಯ ಸಚಿವರಾದ ಸಂದರ್ಭದಲ್ಲಿ ಅವರೊಂದಿಗೆ ಪರಿಚಯ ಬೆಳೆಯಿತು ಎಂದು ವಿವರಿಸಿದರು. ಇಸ್ಕಾನ್ ಸದಸ್ಯರು ಎಲ್ಲರಿಗೂ ಭಗವದ್ಗೀತೆಯ ಪುಸ್ತಕಗಳನ್ನು ನೀಡುತ್ತಿದ್ದು, ಅದರ ಮೂಲಕ ಸಂವಾದ ಬೆಳೆಯಿತು. “ಅವರು ಬಹಳ ಬುದ್ಧಿವಂತರು. ಎಂಜಿನಿಯರ್ಸ್, ಐಐಟಿ ಕಲಿತವರು ಇಸ್ಕಾನ್‌ಗೆ ಬಂದಿದ್ದಾರೆ. ಅವರದು ಕೇವಲ ಆಧ್ಯಾತ್ಮಿಕ ಮಾತ್ರವಲ್ಲ, ಸಾಮಾಜಿಕವಾಗಿಯೂ ಅದ್ಭುತ ಸಲಹೆಗಳನ್ನು ನೀಡುತ್ತಾರೆ. ಅವರು ಎಲ್ಲವನ್ನು ತ್ಯಜಿಸಿ ಜನರ ಸೇವೆಗೆ ಬಂದಿದ್ದಾರೆ. ಮಾತು ಮೃದು, ತಾಳ್ಮೆ ಇರುತ್ತದೆ, ಇದು ಎಲ್ಲ ಮನುಷ್ಯರಿಗೂ ಬೇಕಾದ ಗುಣ” ಎಂದು ಖಾದರ್ ಇಸ್ಕಾನ್ ಸದಸ್ಯರನ್ನು ಶ್ಲಾಘಿಸಿದರು. ತಮ್ಮನ್ನು ಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮಗಳಿಗೆ ಪ್ರತಿ ವರ್ಷವೂ ಆಹ್ವಾನಿಸುವುದಾಗಿ ಮತ್ತು ತಾವು ಭಾಗವಹಿಸುವುದಾಗಿ ತಿಳಿಸಿದರು.

ವಕ್ಫ್, ಅಲ್ಪಸಂಖ್ಯಾತರ ಕಲ್ಯಾಣ ಮತ್ತು ಹಜ್ ಸಚಿವರಾಗಿ ತಮ್ಮ ಆಡಳಿತಾತ್ಮಕ ಸುಧಾರಣೆಗಳ ಕುರಿತು ಖಾದರ್ ಮಹತ್ವದ ಯೋಜನೆಗಳನ್ನು ಪ್ರಸ್ತಾಪಿಸಿದರು. ಮೊದಲನೆಯದಾಗಿ, ವಕ್ಫ್ ಸಂಸ್ಥೆಗಳನ್ನು ಸಂಪೂರ್ಣವಾಗಿ ಡಿಜಿಟಲೀಕರಣಗೊಳಿಸುವುದು ಅವರ ಗುರಿಯಾಗಿದೆ. “ಇವತ್ತು ನಾವು ಕೃತಕ ಬುದ್ಧಿಮತ್ತೆಯ ಯುಗದಲ್ಲಿ ಇದ್ದೇವೆ. ಆದರೆ ನಮ್ಮ ವಕ್ಫ್ ಸಂಸ್ಥೆಗಳು ಇನ್ನೂ ಸಂಪೂರ್ಣವಾಗಿ ಡಿಜಿಟಲೈಸ್ ಆಗಿಲ್ಲ. ಸಣ್ಣ ಮಸೀದಿಗಳಿಗೂ ಲಿಂಕ್ ಆಗುವಂತೆ ಮೇಲಿಂದ ಕೆಳಗೆ ತನಕ ಒಂದು ಲಿಂಕ್ ಆಗಬೇಕು” ಎಂದು ಖಾದರ್ ಹೇಳಿದರು. ಇದರಿಂದ ಸಣ್ಣ ಗ್ರಾಮಗಳಿಂದ ಬೆಂಗಳೂರಿಗೆ ಬರುವ ಅನಿವಾರ್ಯತೆ ತಪ್ಪುತ್ತದೆ, ಅರ್ಜಿಗಳು ಆನ್‌ಲೈನ್ ಮೂಲಕ ಸಲ್ಲಿಕೆಯಾಗುತ್ತವೆ ಮತ್ತು ಅನುದಾನಗಳ ಬಳಕೆಯಲ್ಲಿ ಪಾರದರ್ಶಕತೆ ಬರುತ್ತದೆ ಎಂದು ಅವರು ವಿವರಿಸಿದರು.

ಇದನ್ನೂ ಓದಿ: “ಭ್ರಷ್ಟಾಚಾರ ನಡೆದರೆ ಫೋನ್ ಮಾಡಿ ಅಂದಿದ್ರಿ, ಈಗ ಆನ್ ಮಾಡಿ ನೋಡೋಣ”: ಸಿಎಂ ಡಿಕೆಶಿಗೆ ಶಾಸಕ ಸುನಿಲ್ ಕುಮಾರ್ ಸವಾಲು

ಎರಡನೆಯದಾಗಿ, ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮದ ಮೂಲಕ ನಡೆಯುವ ಯೋಜನೆಗಳಲ್ಲಿ ಗುಣಾತ್ಮಕ ಬದಲಾವಣೆ ತರಲು ಅವರು ಉದ್ದೇಶಿಸಿದ್ದಾರೆ. ಆಟೋ, ಟ್ಯಾಕ್ಸಿ ವಿತರಣೆಯಂತಹ ಯೋಜನೆಗಳ ಬದಲು, ಭವಿಷ್ಯದ ಅಗತ್ಯಗಳಿಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿ ತರಬೇತಿ ಕೇಂದ್ರಗಳನ್ನು ಸ್ಥಾಪಿಸುವುದು ಅವರ ಆದ್ಯತೆಯಾಗಿದೆ. “ಕಂಪನಿಗಳಿಗೆ ಯಾವ ಕೌಶಲ್ಯಗಳು ಬೇಕು ಎಂಬುದನ್ನು ಗುರುತಿಸಿ, ಹತ್ತನೇ ತರಗತಿ ಅಥವಾ ಪಿಯುಸಿ ಪೂರೈಸಿದ ಯುವಕರಿಗೆ ತರಬೇತಿ ನೀಡಿದರೆ ಅವರಿಗೆ ದೊಡ್ಡ ಸ್ಥಾನಗಳಿಗೆ ಹೋಗಲು ಸಾಧ್ಯವಾಗುತ್ತದೆ” ಎಂದರು. ಮಹಿಳೆಯರಿಗೆ ಹೊಲಿಗೆ ಯಂತ್ರಗಳನ್ನು ವಿತರಿಸುವ ಬದಲು, 50 ಮಹಿಳೆಯರ ತಂಡವನ್ನು ರಚಿಸಿ, ಉತ್ತಮ ಯಂತ್ರೋಪಕರಣಗಳೊಂದಿಗೆ ಗಾರ್ಮೆಂಟ್ ಫ್ಯಾಕ್ಟರಿಗಳ ಸಹಯೋಗದಲ್ಲಿ ಕೆಲಸ ಮಾಡುವ ಅವಕಾಶ ಕಲ್ಪಿಸುವುದು, ಇದರಿಂದ ಪ್ರತಿ ಮಹಿಳೆಗೂ 20-25 ಸಾವಿರ ರೂಪಾಯಿ ಆದಾಯ ಗಳಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು. ಅಲ್ಲದೆ, ಜರ್ಮನಿ, ಜಪಾನ್‌ನಂತಹ ದೇಶಗಳಲ್ಲಿರುವ ಉದ್ಯೋಗಾವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಲು ಭಾಷಾ ಪ್ರಯೋಗಾಲಯಗಳನ್ನು (Language Labs) ಸ್ಥಾಪಿಸಿ, ತಾಲೂಕು ಮತ್ತು ಜಿಲ್ಲಾ ಮಟ್ಟದಲ್ಲಿ ಯುವಕರಿಗೆ ವಿದೇಶಿ ಭಾಷೆಗಳ ತರಬೇತಿ ನೀಡುವ ಯೋಜನೆಯನ್ನು ಸಹ ಪ್ರಸ್ತಾಪಿಸಿದರು.

ಮೂರನೆಯದಾಗಿ, ಹಜ್ ಮತ್ತು ಉಮ್ರಾ ಯಾತ್ರೆಯ ಕುರಿತು ಖಾದರ್ ಮಹತ್ವದ ಘೋಷಣೆ ಮಾಡಿದರು. ಪ್ರಸ್ತುತ ಹಜ್ ಯಾತ್ರೆಗೆ ಮಾತ್ರ ಸೀಮಿತವಾಗಿರುವ ವ್ಯವಸ್ಥೆಯಲ್ಲಿ ಬದಲಾವಣೆ ತಂದು, ಹಜ್ ಸಮಿತಿ ಮೂಲಕ ಉಮ್ರಾ ಯಾತ್ರೆಗೂ ಅವಕಾಶ ಕಲ್ಪಿಸಲು ಉದ್ದೇಶಿಸಿದ್ದಾರೆ. “ಖಾಸಗಿಯಾಗಿ ಹೋದರೆ ಒಂದು ಲಕ್ಷ ರೂಪಾಯಿ ಆಗುವ ಉಮ್ರಾ ಯಾತ್ರೆಯನ್ನು, ಸರ್ಕಾರ ಹಜ್ ಸಮಿತಿ ಮೂಲಕ ಪ್ರಾರಂಭ ಮಾಡಿದರೆ 45-50 ಸಾವಿರ ರೂಪಾಯಿಗಳಲ್ಲಿ ಹೋಗಿ ಬರಲು ಸಾಧ್ಯವಾಗುತ್ತದೆ” ಎಂದು ಅವರು ಹೇಳಿದರು. ಇದು ಯಾತ್ರಾರ್ಥಿಗಳಿಗೆ ಆರ್ಥಿಕವಾಗಿ ಅನುಕೂಲ ಮಾಡಿಕೊಡುವುದರ ಜೊತೆಗೆ, ಅವರಿಗೆ ಭದ್ರತೆ ಮತ್ತು ಹಜ್ ಸಮಿತಿಗೆ ಆದಾಯವನ್ನೂ ತಂದುಕೊಡುತ್ತದೆ ಎಂದು ಖಾದರ್ ಅಭಿಪ್ರಾಯಪಟ್ಟರು.

ಸಮಗ್ರವಾಗಿ, ಯು.ಟಿ. ಖಾದರ್ ಅವರ ದೃಷ್ಟಿಕೋನವು ಸೌಹಾರ್ದ ಸಮಾಜ ನಿರ್ಮಾಣ, ಅಲ್ಪಸಂಖ್ಯಾತರ ಸಬಲೀಕರಣ ಮತ್ತು ಆಡಳಿತದಲ್ಲಿ ಪಾರದರ್ಶಕತೆ ಹಾಗೂ ಆಧುನೀಕರಣಕ್ಕೆ ಒತ್ತು ನೀಡುತ್ತದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
H1N1 ಫ್ಲೂ ಆತಂಕ: ಪೋಷಕರು, ಶಾಲೆಗಳಿಗೆ ಆರೋಗ್ಯ ಸಚಿವರಿಂದ ಮಹತ್ವದ ಮಾಹಿತಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ಕರ್ನಾಟಕದ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಸುದ್ದಿಗೋಷ್ಠಿ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ನೀರು ಸಂಸ್ಕರಣಾ ಘಟಕದಲ್ಲಿ ವಿಷಾನಿಲ ಸೋರಿಕೆ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ತುಂಗಭದ್ರೆಗೆ ಕಂಟಕ ತಂದ ‘ಅಂತರಗಂಗೆ’! ಕಲುಷಿತಗೊಂಡ ಗದಗ ಜಿಲ್ಲೆಯ ಜೀವನಾಡಿ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ಸರ್ಕಾರಿ ಆಸ್ಪತ್ರೆಗಳಲ್ಲಿ ನಕಲಿ ಔಷಧಿ ಇಲ್ಲ: ಸಚಿವ ಯು.ಟಿ. ಖಾದರ್ ಸ್ಪಷ್ಟನೆ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ತಮಿಳುನಾಡಿಗೆ ನೀರು ಬಿಡುಗಡೆ ವಿರೋಧಿಸಿ ಮಂಡ್ಯದಲ್ಲಿ ರೈತರ ಪ್ರತಿಭಟನೆ ತೀವ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
ಆಯುರ್ವೇದಿಕ್ ಕಾಲೇಜಿಗೆ ಬೀಗ: 300ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅತಂತ್ರ
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
'ಪನ್ನೀರ್ ಮಾತ್ರವಲ್ಲ, ಎಲ್ಲಾ ಕೃತಕ ಉತ್ಪನ್ನಗಳೂ ಬ್ಯಾನ್'
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಹಾಸನ ಜಿಲ್ಲಾಧಿಕಾರಿ ವಿರುದ್ಧ ಎಚ್.ಡಿ. ರೇವಣ್ಣ ವಾಗ್ದಾಳಿ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ
ಸಚಿವ ನಾಗೇಂದ್ರ ರಾಜೀನಾಮೆಗೆ ಆಗ್ರಹಿಸಿ ವಿಧಾನಸೌಧ ಮುತ್ತಿಗೆಗೆ ಬಿಜೆಪಿ ಯತ್ನ