ಸರಳವಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಯಾಕೆ? ಇಲ್ಲಿದೆ ಇಂಟರೆಸ್ಟಿಂಗ್ ಮಾಹಿತಿ
ಕರ್ನಾಟಕದ ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಜೂನ್ 3ರ ಬುಧವಾರ ಸರಳವಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಅವರ ಈ ನಿರ್ಧಾರಕ್ಕೆ ಕಾರಣವಾಗಿರೋದು ಹೈಕಮಾಂಡ್ ಕಟ್ಟಾಜ್ಞೆ ಎನ್ನಲಾಗಿದ್ದು, ಸಿದ್ದರಾಮಯ್ಯ ಅಭಿಮಾನಿಗಳಿಗೆ ಮತ್ತು ಜನ ಸಾಮಾನ್ಯರಿಗೆ ತಪ್ಪು ಸಂದೇಶ ಹೋಗಬಾರದೆಂಬ ಕಾರಣಕ್ಕೆ ಕೆಲ ಸೂಚನೆಗಳನ್ನು ಕಾಂಗ್ರೆಸ್ ವರಿಷ್ಠರು ನೀಡಿದ್ದಾರಂತೆ. ಅಲ್ಲದೆ, ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಯಾತ್ರೆ ಕೈಗೊಳ್ಳಬೇಕೆಂದೂ ಹೈಕಮಾಂಡ್ ತಿಳಿಸಿದೆ ಎನ್ನಲಾಗಿದೆ.

ಬೆಂಗಳೂರು, ಮೇ 31: ಯಾವುದೇ ಅಡೆತಡೆ ಇಲ್ಲದೆ ಸಿದ್ದರಾಮಯ್ಯನವರಿಂದ ಡಿ.ಕೆ. ಶಿವಕುಮಾರ್ (DK Shivakumar) ಅವರಿಗೆ ಅಧಿಕಾರ ಹಸ್ತಾಂತರ ನಡೆದಿದೆ. ಸಿಎಲ್ಪಿ ಸಭೆಯಲ್ಲಿ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ಡಿಕೆಶಿ, ಜೂನ್ 3ರ ಬುಧವಾರ ಸಿಎಂ ಆಗಿ ಪ್ರಮಾಣವಚನವನ್ನೂ ಸ್ವೀಕರಿಸಲಿದ್ದಾರೆ. ಆರಂಭದಲ್ಲಿ ವಿಧಾನಸೌಧದಲ್ಲಿ ಕಾರ್ಯಕ್ರಮ ನಡೆಯಲಿದೆ ಎನ್ನಲಾಗಿತ್ತಾದರೂ ಅದೀಗ ಲೋಕಭವನಕ್ಕೆ ಶಿಫ್ಟ್ ಆಗಿದೆ. ಅದರಲ್ಲೂ ಬಹಳ ಸರಳವಾಗಿ ಶಿವಕುಮಾರ್ ಪದಗ್ರಹಣ ಮಾಡಲು ನಿರ್ಧರಿಸಿದ್ದಾರೆ. ಅಷ್ಟಕ್ಕೂ ಅವರ ಈ ತೀರ್ಮಾನದ ಹಿಂದಿರೋದು ಹೈಕಮಾಂಡ್ನ ಕಟ್ಟಾಜ್ಞೆ ಎಂಬ ವಿಚಾರವೀಗ ಬಹಿರಂಗಗೊಂಡಿದೆ.
ಹೌದು, ಸಿಎಂ ಸ್ಥಾನದಿಂದ ಇಳಿದಿರುವ ಸಿದ್ದರಾಮಯ್ಯನವರಿಗೆ ದೊಡ್ಡ ಬೆಂಬಲಿಗ ವರ್ಗವಿದೆ. ಅದರಲ್ಲೂ ಅಹಿಂದ ಮತಗಳನ್ನು ಅವರು ಹಿಡಿದಿಟ್ಟುಕೊಂಡಿದ್ದಾರೆ. ಕಳೆದ ವಿಧಾನಸಭಾ ಚುನಾವಣೆ ವೇಳೆಯೂ ಇದೇ ಮತಗಳು ರಾಜ್ಯದಲ್ಲಿ ಕಾಂಗ್ರೆಸ್ಗೆ ದೊಡ್ಡ ಮಟ್ಟದ ವಿಜಯ ತಂದುಕೊಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದವು. ಹೀಗಾಗಿ ಅಧಿಕಾರ ಹಸ್ತಾಂತರದಿಂದ ಯಾವುದೇ ಕಾರಣಕ್ಕೂ ಜನರಿಗೆ ತಪ್ಪು ಸಂದೇಶ ಹೋಗಬಾರದೆಂಬ ನಿಟ್ಟಿನಲ್ಲಿ ಕಾಂಗ್ರೆಸ್ ವರಿಷ್ಠರು ಒಂದಿಷ್ಟು ಮುನ್ನೆಚ್ಚರಿಕೆಗಳನ್ನು ವಹಿಸಿದ್ದಾರೆ. ಅದರ ಭಾಗವಾಗಿಯೇ ಡಿಕೆಶಿ ಪ್ರಮಾಣವಚನ ಸರಳವಾಗಿರಬೇಕೆಂದು ಸೂಚಿಸಲಾಗಿದೆಯಂತೆ.
ಇದನ್ನೂ ಓದಿ: ಪ್ರಿಯ ಶಿವಕುಮಾರ್.. ಚುನಾವಣೆಯಲ್ಲಿ ಸೋಲಬಹುದು, ಸೈದ್ಧಾಂತಿಕವಾಗಿ ಸೋಲಬೇಡಿ: ಡಿಕೆಶಿಗೆ ಸಿದ್ದರಾಮಯ್ಯ ಭಾವುಕ ಪತ್ರ
ಹೈಕಮಾಂಡ್ ಸೂಚನೆಯೇನು?
ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಇಳಿಸಿ ಡಿ.ಕೆ.ಶಿವಕುಮಾರ್ಗೆ ಪಟ್ಟಕಟ್ತಿರುವ ಕಾರ್ಯಕ್ರಮ ಇದಾಗಿದ್ದು, ನಮ್ಮವರನ್ನೇ ಇಳಿಸಿ ಮತ್ತೊಬ್ಬರನ್ನು ಮುಖ್ಯಮಂತ್ರಿ ಮಾಡಲಾಗುತ್ತಿದೆ. ಇದು ಸಂಭ್ರಮ ಪಡುವ ವಿಚಾರ ಅಲ್ಲ ಎಂದು ಹೈಕಮಾಂಡ್ ಸೂಚಿಸಿದೆ. ಜೊತೆಗೆ ಜನರ ವಿಶ್ವಾಸ ಗಳಿಸಲು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಜಂಟಿ ಯಾತ್ರೆ ಕೈಗೊಳ್ಳಬೇಕೆಂದೂ ತಿಳಿಸಿದೆ. ಕನಿಷ್ಠ 8ರಿಂದ 10 ಜನಾಶೀರ್ವಾದ ಯಾತ್ರೆಯನ್ನು ನಡೆಸುವಂತೆ ಸೂಚಿಸಲಾಗಿದ್ದು, ನಾನೇ ಒಪ್ಪಿ ಡಿಕೆಶಿಗೆ ಪಟ್ಟ ಕಟ್ಟಿದ್ದೇನೆ ಎಂದು ಯಾತ್ರೆಯಲ್ಲಿ ಸಿದ್ದರಾಮಯ್ಯ ಜನರಿಗೆ ತಿಳಿಸಲಿದ್ದಾರೆ. ಮುಂದೆ ಗೊಂದಲ ಆಗಬಾರದೆಂಬ ಕಾರಣಕ್ಕೆ ಹೈಕಮಾಂಡ್ ಈ ನಿರ್ಧಾರ ಮಾಡಿದೆ ಎನ್ನಲಾಗಿದ್ದು, 2-3 ಜಿಲ್ಲೆ ಅಥವಾ ಪ್ರಾದೇಶಿಕವಾರು ಜನಾಶೀರ್ವಾದ ಯಾತ್ರೆ ನಡೆಯುವ ಮಾಹಿತಿ ಇದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.





