ಜಡ್ಜ್ ಮುಂದೆ ಸಿಡಿ ಯುವತಿಯ ಹೇಳಿಕೆ ವಿರುದ್ಧ ತಂದೆಯ ರಿಟ್ ಅರ್ಜಿ; ಎಸ್ಐಟಿ, ಗೃಹ ಇಲಾಖೆಗೆ ಹೈಕೋರ್ಟ್ ನೋಟಿಸ್
ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ನಿಯಮಬಾಹಿರವಾಗಿ ಸೆಕ್ಷನ್ 164ರಡಿ ಹೇಳಿಕೆ ದಾಖಲಿಸಿದ ಆರೋಪ ಮಾಡಿರುವ ಯುವತಿಯ ತಂದೆ ಹೇಳಿಕೆ ರದ್ದು ಕೋರಿ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.

ಬೆಂಗಳೂರು: ರಮೇಶ್ ಜಾರಕಿಹೊಳಿ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಆರ್ಪಿಸಿ ಸೆಕ್ಷನ್ 164 ರ ಅಡಿ ನಿಯಮಬಾಹಿರವಾಗಿ ತಮ್ಮ ಪುತ್ರಿಯ ಹೇಳಿಕೆ ದಾಖಲಿಸಿದ್ದಾರೆಂದು ಆಕ್ಷೇಪಿಸಿ ಯುವತಿಯ ತಂದೆ ಸಲ್ಲಿಸಿದ್ದ ರಿಟ್ ಅರ್ಜಿ ವಿಚಾರಣೆ ಇಂದು ಹೈಕೋರ್ಟ್ ನಲ್ಲಿ ನಡೆಯಿತು. ಕೆಪಿಸಿಸಿ ಕಾನೂನು ಘಟಕದ ಪ್ರಧಾನ ಕಾರ್ಯದರ್ಶಿ ಹಾಗೂ ವಕೀಲ ಸೂರ್ಯ ಮುಕುಂದರಾಜ್ ಉಪಸ್ಥಿತಿಯಲ್ಲಿ ನಿಯಮಬಾಹಿರವಾಗಿ ಸಿಆರ್ಪಿಸಿ ಸೆಕ್ಷನ್ 164ರ ಅಡಿಹೇಳಿಕೆ ದಾಖಲಿಸಿದ ಆರೋಪ ಮಾಡಿರುವ ಯುವತಿಯ ತಂದೆ ಹೇಳಿಕೆ ರದ್ದು ಕೋರಿ ಹೈಕೋರ್ಟ್ ಗೆ ರಿಟ್ ಸಲ್ಲಿಸಿದ್ದರು.
ಆದರೆ ರಿಟ್ ಅರ್ಜಿಯೊಂದಿಗೆ ಸಿಆರ್ಪಿಸಿ ಸೆ. 164 ಹೇಳಿಕೆಯ ಪ್ರತಿ ಸಲ್ಲಿಸಿಲ್ಲವೆಂದು ಕಚೇರಿ ಆಕ್ಷೇಪಣೆ ಎತ್ತಿತ್ತು. ಸಿಆರ್ಪಿಸಿ ಸೆ. 164ರಡಿ ಹೇಳಿಕೆ ಕೋರ್ಟ್ ನಲ್ಲಿದೆ. ಆರೋಪಪಟ್ಟಿ ಸಲ್ಲಿಕೆಯಾಗುವವರೆಗೆ ಹೇಳಿಕೆಯ ಪ್ರತಿ ಸಿಗುವುದಿಲ್ಲ. ಹೀಗಾಗಿ ಕಚೇರಿ ಆಕ್ಷೇಪಣೆಯಿಂದ ವಿನಾಯಿತಿ ನೀಡಲು ಯುವತಿಯ ತಂದೆ ಪರ ವಕೀಲರು ಮನವಿ ಮಾಡಿದ್ದರು. ಈ ಹಿನ್ನೆಲೆಯಲ್ಲಿ ಸಿಆರ್ಪಿಸಿ ಸೆಕ್ಷನ್164ರಡಿ ಹೇಳಿಕೆ ಹಾಜರುಪಡಿಸುವುದಕ್ಕೆ ತಾತ್ಕಾಲಿಕ ವಿನಾಯಿತಿ ನೀಡಿದ ಹೈಕೋರ್ಟ್ ಹೇಳಿಕೆ ರದ್ದು ಕೋರಿದ್ದ ರಿಟ್ ಅರ್ಜಿಗೆ ಸಂಬಂಧಿಸಿದಂತೆ ಎಸ್ಐಟಿ, ಗೃಹ ಇಲಾಖೆಗೆ ನೋಟಿಸ್ ಜಾರಿಗೊಳಿಸಿ ನ್ಯಾ. ಅಶೋಕ್ ಜಿ. ನಿಜಗಣ್ಣವರ್ ಪೀಠ ಆದೇಶಿಸಿದೆ.
ಇತ್ತ ಶಾಸಕ ರಮೇಶ್ ಜಾರಕಿಹೊಳಿಗೆ ಕರೊನಾ ಪಾಸಿಟಿವ್ ಅಶ್ಲೀಲ ಸಿಡಿ ಪ್ರಕರಣದಲ್ಲಿ ಎಸ್ಐಟಿ ತನಿಖೆಯನ್ನು ಎದುರು ನೋಡುತ್ತಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಕಳೆದೊಂದು ವಾರದಿಂದ ರಮೇಶ್ ಜಾರಕಿಹೊಳಿ ಅನಾರೋಗ್ಯಪೀಡಿತರಾಗಿರುವುದಾಗಿ, ಕೊರೊನಾಕ್ಕೆ ತುತ್ತಾಗಿರುವುದಾಗಿ ಅನುಮಾನ, ಆತಂಕ, ಗೊಂದಲಗಳು ಹರಿದಾಡುತ್ತಿದ್ದವು. ಅದ್ಯ ಇದಕ್ಕೆಲ್ಲಾ ತೆರೆ ಬಿದ್ದಿದ್ದು ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ತಗುಲಿರುವುದಾಗಿ ಗೋಕಾಕ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಮುತ್ತಣ್ಣ ಕೊಪ್ಪದ ಸ್ಪಷ್ಟನೆ ನೀಡಿದ್ದಾರೆ. ಏಪ್ರಿಲ್ 1ರಂದು ಗೋಕಾಕ ಆಸ್ಪತ್ರೆಗೆ ಬಂದು ಕೊವಿಡ್ ಟೆಸ್ಟ್ ಮಾಡಿಸಿದ್ದ ರಮೇಶ್ ಜಾರಕಿಹೊಳಿಗೆ ಕೊರೊನಾ ಸೋಂಕು ಇರುವುದು ಖಚಿತವಾಗಿದೆ ಎಂದು ಆರೋಗ್ಯಾಧಿಕಾರಿಗಳು ಟಿವಿ9ಗೆ ತಿಳಿಸಿದ್ದಾರೆ.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಕೆಲ ಹೊತ್ತಿನ ಮುಂಚೆಯೇ ಮಾತನಾಡಿದ್ದ ಸಚಿವ ಭೈರತಿ ಬಸವರಾಜು, ರಮೇಶ್ ಜಾರಕಿಹೊಳಿಗೆ ಕೊರೊನಾ ಪಾಸಿಟಿವ್ ಇದೆ ಎಂದು ಗೊತ್ತಾಗಿದೆ. ಹೀಗಾಗಿ ಅವರು ಬೈಎಲೆಕ್ಷನ್ ಪ್ರಚಾರಕ್ಕೆ ಬರುವ ಸಾಧ್ಯತೆ ಕಡಿಮೆ ಎಂದು ಬೆಳಗಾವಿಯಲ್ಲಿ ಹೇಳಿದ್ದರು. ಉಪಚುನಾವಣೆ ಪ್ರಚಾರಕ್ಕೆ ಕರೆಯುವ ಸಲುವಾಗಿ ನಾನು ರಮೇಶ್ ಜಾರಕಿಹೊಳಿ ಅವರಿಗೆ ಕರೆ ಮಾಡಿದ್ದೆ. ಆದರೆ, ಅವರು ಪ್ರಚಾರಕ್ಕೆ ಬರುವುದು ಅನುಮಾನ. ನಾನು ಫೋನ್ ಮಾಡಿದ್ದಾಗ ರಮೇಶ್ ಜಾರಕಿಹೊಳಿ ಅವರೇ ತಮಗೆ ಕೊರೊನಾ ಇರುವುದಾಗಿ ಮಾಹಿತಿ ನೀಡಿದ್ದಾರೆಂದು ಭೈರತಿ ಬಸವರಾಜು ತಿಳಿಸಿದ್ದರು. ಸದ್ಯ ಎಸ್ಐಟಿ ವಿಚಾರಣೆಗೂ ಅನಾರೋಗ್ಯ ನೆಪವೊಡ್ಡಿ ತಪ್ಪಿಸಿಕೊಳ್ಳುತ್ತಿರುವ ರಮೇಶ್ ಜಾರಕಿಹೊಳಿ ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಕೆಲ ದಿನಗಳ ಹಿಂದೆಯಷ್ಟೇ ರಮೇಶ್ ಜಾರಕಿಹೊಳಿ ಉಪಚುನಾವಣೆ ಪ್ರಚಾರಕ್ಕೆ ಬರುತ್ತಾರೆ ಎಂದು ಸ್ವತಃ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದರು. ಆದರೆ, ಇದೀಗ ಕೊರೊನಾ ದೃಢಪಟ್ಟಿರುವುದರಿಂದ ಕೆಲದಿನಗಳ ಕಾಲ ರಮೇಶ್ ಜಾರಕಿಹೊಳಿ ಬಹಿರಂಗವಾಗಿ ಕಾಣಿಸಿಕೊಳ್ಳುವುದು ಕಷ್ಟವಾಗಲಿದೆ.
ಇದನ್ನೂ ಓದಿ: Coronavirus India Update: ಒಂದೇ ದಿನ 1 ಲಕ್ಷಕ್ಕಿಂತಲೂ ಹೆಚ್ಚು ಕೊವಿಡ್ ಪ್ರಕರಣ ಪತ್ತೆ; ಮಹಾರಾಷ್ಟ್ರದಲ್ಲಿ ಗರಿಷ್ಠ ಪ್ರಕರಣ
ಬಸವಕಲ್ಯಾಣ ಬಿಜೆಪಿ ಸಮಾವೇಶದಲ್ಲಿ ಕೊವಿಡ್ ನಿಯಮ ಉಲ್ಲಂಘನೆ; 5,000ಕ್ಕೂ ಹೆಚ್ಚು ಜನರನ್ನು ಸೇರಿಸಿ ಕಾರ್ಯಕ್ರಮ
(writ against cd lady 164 statement: high court issues notice to sit and karnataka home ministry)



