ಯುವತಿಯ ಖಾಸಗಿ ಅಂಗ ಸ್ಪರ್ಶಿಸಿ ಅನುಚಿತ ವರ್ತನೆ, ಕೃತ್ಯದ ವಿಡಿಯೋ ವೈರಲ್
ಬೆಂಗಳೂರಿನ ಸುದ್ದಗುಂಟೆಪಾಳ್ಯದಲ್ಲಿ ಅಪರಿಚಿತ ವ್ಯಕ್ತಿ ಹಿಂದಿನಿಂದ ಬಂದು ಯುವತಿಯ ಖಾಸಗಿ ಅಂಗವನ್ನು ಸ್ಪರ್ಶಿಸಿದ್ದಾನೆ. ಸ್ಥಳೀಯ ನಿವಾಸಿ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ ಮತ್ತು ಸಾಕ್ಷಿಗಳ ಹೇಳಿಕೆಗಳನ್ನು ಸಂಗ್ರಹಿಸಲಾಗುತ್ತಿದೆ. ಪ್ರದೇಶದ ನಿವಾಸಿಗಳು ಹೆಚ್ಚಿನ ಪೊಲೀಸ್ ಗಸ್ತು ಏರ್ಪಾಡು ಮಾಡುವಂತೆ ಒತ್ತಾಯಿಸಿದ್ದಾರೆ.
ಬೆಂಗಳೂರು, ಏಪ್ರಿಲ್ 06: ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಯ (Young Girl) ಹಿಂದಿನಿಂದ ಬಂದು ಯುವಕನೋರ್ವ ಖಾಸಗಿ ಅಂಗ ಸ್ಪರ್ಶಿಸಿ ಅಸಭ್ಯವಾಗಿ ವರ್ತಿಸಿರುವ ಘಟನೆ ಏಪ್ರಿಲ್ 4ರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ಬೆಂಗಳೂರಿನ (Bengaluru) ಸುದ್ದಗುಂಟೆಪಾಳ್ಯದಲ್ಲಿ ನಡೆದಿದೆ. ಕೃತ್ಯದ ಸಿಸಿಟಿವಿ ವಿಡಿಯೋ ಈಗ ವೈರಲ್ ಆಗಿದೆ. ಸ್ಥಳೀಯ ನಿವಾಸಿ ದೂರಿನ ಮೇರೆಗೆ ಲೈಂಗಿಕ ದೌರ್ಜನ್ಯ ಕಾಯ್ದೆಯಡಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಸುದ್ದಗುಂಟೆಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಆರೋಪಿಯ ಗುರುತಿಗಾಗಿ ಪೊಲೀಸರು ಏರಿಯಾದಲ್ಲಿನ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾದ ದೃಶ್ಯಾವಳಿಗಳನ್ನು ಪರಿಶೀಲನೆ ನಡೆಸುತ್ತಿದ್ದಾರೆ. ಹಾಗೇ, ಏರಿಯಾದ ಜನರ ಬಳಿಯೂ ಮಾಹಿತಿ ಕಲೆಹಾಕುತ್ತಿದ್ದಾರೆ.
ಘಟನೆ ಬಗ್ಗೆ ಏರಿಯಾ ನಿವಾಸಿ ಮುನಿರಾಜು ಎಂಬುವರು ಮಾತನಾಡಿ, ನಮ್ಮ ಏರಿಯಾದಲ್ಲಿ ಈ ಹಿಂದೆ ಈ ರೀತಿ ಆಗಿರಲಿಲ್ಲ. ಈಗ ಆಗಿರುವುದು ನಮಗೆ ಬೇಸರ ತಂದಿದೆ. ಇಲ್ಲಿ ಪಿಜಿಗಳು ಹೆಚ್ಚಾಗಿವೆ, ಪೊಲೀಸರು ಬೀಟ್ ಜಾಸ್ತಿ ಮಾಡಬೇಕು. ಹುಡುಗಿಯರು ರಾತ್ರಿ ವೇಳೆ ಓಡಾಡಿದ್ದರು. ಹುಡುಗ ಆ ರೀತಿ ಮಾಡಬಾರದಿತ್ತು. ಕೃತ್ಯ ಎಸಗಿದ ವ್ಯಕ್ತಿ ಯಾರು ಅಂತ ಗೊತ್ತಾಗಿಲ್ಲ. ಇಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.
ಮಹಿಳಾ ಇನ್ಫ್ಲುಯೆನ್ಸರ್ ಒಬ್ಬರು ವ್ಲಾಗ್ ಮಾಡುವಾಗ ಬಾಲಕನೊಬ್ಬ ಆಕೆಯ ಎದೆಯನ್ನು ಸ್ಪರ್ಶಿಸಿ ಓಡಿ ಹೋದ ಘಟನೆ ಬಿಟಿಎಂ ಲೇಔಟ್ನಲ್ಲಿ ನಡೆದಿತ್ತು. ಇದೀಗ ಅಂಥದ್ದೇ ಘಟನೆ ಮತ್ತೆ ನಗರದಲ್ಲಿ ಸಂಭವಿಸಿದೆ.
ಬೈಕ್ನಲ್ಲಿ ಬಂದು ಯುವತಿಗೆ ಬ್ಯಾಡ್ ಟಚ್
ಕೆಲ ದಿನಗಳ ಹಿಂದೆ ರಾಮಮೂರ್ತಿ ನಗರದಲ್ಲಿ ಕತ್ತಲಲ್ಲಿ ನಡೆದುಕೊಂಡು ಹೋಗುತ್ತಿದ್ದ ಯುವತಿಗೆ ಬೈಕ್ನಲ್ಲಿ ಬಂದ ಕಾಮುಕನೊಬ್ಬ ಬ್ಯಾಡ್ ಟಚ್ ಮಾಡಿದ ಘಟನೆ ನಡೆದಿತ್ತು. ಕೃತ್ಯದ ಸಿಸಿಟಿವಿ ವಿಡಿಯೋ ವೈರಲ್ ಆಗಿತ್ತು. ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಘಟನೆ ನಡೆದಿತ್ತು.
ಇದನ್ನೂ ಓದಿ: ಬಾಲಕಿ ಮೇಲೆ ಬ್ಯಾಡ್ಮಿಂಟನ್ ಕೋಚ್ ಅತ್ಯಾಚಾರ: ಫೋನ್ನಲ್ಲಿ ಹಲವು ಹುಡುಗಿಯರ ವಿಡಿಯೋ ಪತ್ತೆ
ಬೈಕ್ ಸವಾರ ಅರುಣ್ ಎಂಬಾತ ಅಸಭ್ಯ ವರ್ತನೆ ತೋರಿದ್ದು, ಈ ಬಗ್ಗೆ ರಾಮಮೂರ್ತಿ ನಗರ ಠಾಣೆಯಲ್ಲಿ ಯುವತಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ಆರೋಪಿ ಅರುಣ್ನನ್ನು ಪೊಲೀಸರು ಬಂಧಿಸಿದ್ದರು. ದೂರು ನೀಡಿದ ಎರಡೇ ಗಂಟೆಗಳಲ್ಲಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದರು. ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ವರದಿ: ಪ್ರದೀಪ್ ಚಿಕ್ಕಾಟಿ
ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:43 pm, Sun, 6 April 25