ಡಿಕೆ ಶಿವಕುಮಾರ್ ಗೊಡ್ಡು ಬೆದರಿಕೆಗಳಿಗೆ ಬಗ್ಗಲ್ಲ, ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ: ಹೆಚ್​ಡಿ ಕುಮಾರಸ್ವಾಮಿ

| Updated By: ಗಣಪತಿ ಶರ್ಮ

Updated on: Aug 05, 2024 | 12:31 PM

ಮುಡಾ ಹಗರಣ ಖಂಡಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆ ರಾಮನಗರ ತಲುಪಿದೆ. ಜತೆಗೆ, ಹೆಚ್​ಡಿ ಕುಮಾರಸ್ವಾಮಿ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ನಡುವಣ ವಾಕ್ಸಮರವೂ ತೀವ್ರಗೊಂಡಿದೆ. ‘ಟಿವಿ9’ಗೆ ಹೇಳಿಕೆ ನೀಡಿದ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಪತನದ ಬಗ್ಗೆ ಮಾತನಾಡಿದ್ದಾರೆ. ಆ ವಿವರ ಇಲ್ಲಿದೆ.

ಡಿಕೆ ಶಿವಕುಮಾರ್ ಗೊಡ್ಡು ಬೆದರಿಕೆಗಳಿಗೆ ಬಗ್ಗಲ್ಲ, ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ: ಹೆಚ್​ಡಿ ಕುಮಾರಸ್ವಾಮಿ
ಹೆಚ್​ಡಿ ಕುಮಾರಸ್ವಾಮಿ & ಡಿಕೆ ಶಿವಕುಮಾರ್
Follow us on

ರಾಮನಗರ, ಆಗಸ್ಟ್ 5: ಡಿಸಿಎಂ ಡಿಕೆ ಶಿವಕುಮಾರ್​ ಗೊಡ್ಡು ಬೆದರಿಕೆಗಳಿಗೆಲ್ಲ ಬಗ್ಗುವುದಿಲ್ಲ. ನನ್ನ ಬಗ್ಗೆ ಅದೇನು ಬಿಚ್ಚಿಡುತ್ತಾರೋ ಬಿಚ್ಚಿಡಲಿ ಎಂದು ಕೇಂದ್ರ ಸಚಿವ ಹೆಚ್​ಡಿ ಕುಮಾರಸ್ವಾಮಿ ಸವಾಲು ಹಾಕಿದರು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಪಾದಯಾತ್ರೆಗೆ ಆಗ್ರಹಿಸಿ ಬಿಜೆಪಿ ಜೆಡಿಎಸ್ ನಡೆಸುತ್ತಿರುವ ಪಾದಯಾತ್ರೆಯಲ್ಲಿ ಭಾಗವಹಿಸಿ ಚನ್ನಪಟ್ಟಣ ತಾಲೂಕಿನ ಕೆಂಗಲ್​ನಲ್ಲಿ ‘ಟಿವಿ9’ಗೆ ಅವರು ಹೇಳಿಕೆ ನೀಡಿದರು.

ನನ್ನ ಬಗ್ಗೆ ಏನು ಬಿಚ್ಚಿಡುತ್ತಾರೋ ಬಿಚ್ಚಿಡಲಿ. ಅಲ್ಲಿ ಯಾದಗಿರಿಯಲ್ಲಿ ಪಿಎಸ್​ಐ ಪತ್ನಿ ಕಣ್ಣೀರು ಇಡುತ್ತಿದ್ದಾಳೆ. ಮೃತ ಪಿಎಸ್​ಐ ಪತ್ನಿಗೆ ನ್ಯಾಯಕೊಡಿಸಲು ಈ ಸರ್ಕಾರಕ್ಕೆ ಆಗಿಲ್ಲ. ಮೊದಲು ಈ ಸರ್ಕಾರ ಆಕೆಗೆ ನ್ಯಾಯ ಒದಗಿಸುವ ಕೆಲಸ ಮಾಡಲಿ ಎಂದು ಕುಮಾರಸ್ವಾಮಿ ಹೇಳಿದರು.

ಪ್ರಾಯಶ್ಚಿತ್ತ ಮಾಡಿಕೊಳ್ಳಬೇಕಾಗಿದ್ದು ಡಿಕೆ ಶಿವಕುಮಾರ್. ತಪ್ಪು ಮಾಡಿಕೊಂಡು ಪ್ರಾಯಶ್ಚಿತ ಮಾಡಿಕೊಳ್ಳಲ್ಲ ಎಂದು ಭಡ ಮಾತು ಆಡುತ್ತಿದ್ದಾರೆ. ಡಿಕೆ ಶಿವಕುಮಾರ್ ಮಾತಿಗೆ ಯಾರೂ ಗೌರವ ಕೊಡುತ್ತಿಲ್ಲ. ಅವರ ಈಗಿನ ಪರಿಸ್ಥಿತಿ ನೋಡಿದರೆ ನನಗೆ ಅಯ್ಯೋ ಅನಿಸುತ್ತದೆ. ರಾಜ್ಯದ ಉಪಮುಖ್ಯಮಂತ್ರಿಯಾಗಿ ಜನರ ಸಮಸ್ಯೆ ಬಗೆಹರಿಸುವುದು ಬಿಟ್ಟು ನನ್ನನ್ನು ಗುಣಗಾನ ಮಾಡಿಕೊಂಡು ಕೂತಿದ್ದಾರೆ. ಮಾತನಾಡಲು ಶಕ್ತಿ ಇಲ್ಲದೆ ಹುಚ್ಚರಂತೆ ಪದ ಬಳಕೆ ಮಾಡಿಕೊಂಡು ಹೋಗುತ್ತಿದ್ದಾರೆ. ನನ್ನ ಹತ್ತಿರ ಇರುವ ದಾಖಲೆಗಳನ್ನು ತೆಗೆದರೆ ಈ ವ್ಯಕ್ತಿ ಮಾಡಿರುವ ಅವ್ಯವಹಾರದ ಸಂಪುಟವನ್ನೇ ಮಾಡಬಹುದು ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಸಂಪತ್ತಿಗೆ ಸವಾಲ್​: ಮೊದ್ಲು ನಿನ್ನ ಸೋದರನ ಲೆಕ್ಕ ಕೊಡು ಕುಮಾರಸ್ವಾಮಿ ಎಂದ ಡಿಕೆ ಶಿವಕುಮಾರ್​

‘ಕಾಂಗ್ರೆಸ್ ಸರ್ಕಾರ ಪತನದ ಸಮಯ ಹತ್ತಿರವಾಗಿದೆ’

ಕಾಂಗ್ರೆಸ್ ಸರ್ಕಾರದ ಪಾಪದ ಕೊಡ ತುಂಬಿದೆ. ಇದು ಪತನವಾಗುವ ಸಮಯ ಹತ್ತಿರವಾಗಿದೆ ಎಂದು ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಪತನದ ಸುಳಿವು ಕೊಟ್ಟಿದ್ದಾರೆ. ಅಧಿಕಾರ ಮಾಡಲು ನಿಮಗೆ (ಕಾಂಗ್ರೆಸ್​​ನವರಿಗೆ) ಯೋಗ್ಯತೆ ಇದೆಯಾ? ಯಡಿಯೂರಪ್ಪರನ್ನ ನಾನು ಜೈಲಿಗೆ ಕಳುಹಿಸಿಲ್ಲ, ಅವತ್ತಿನ ಸಂದರ್ಭದಲ್ಲಿ ವಿಚಾರ ಹಾಗಿತ್ತು ಎಂದು ಕುಮಾರಸ್ವಾಮಿ ಹೇಳಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ