TV9 Kannada News Highlights: ಕರ್ನಾಟಕದಲ್ಲಿ ಶೇ.80.85ರಷ್ಟು ISR ಅರ್ಜಿ ವಿತರಣೆ: ಅನ್ಬುಕುಮಾರ್ ಮಾಹಿತಿ
Karnataka News Today Highlights: ರಾಜ್ಯಾದ್ಯಂತ ಭ್ರಷ್ಟ ಅಧಿಕಾರಿಗಳ ಮೇಲೆ ಲೋಕಾಯುಕ್ತ ದಾಳಿ, ಆದಾಯ ಮೀರಿ ಆಸ್ತಿ ಗಳಿಕೆ ಆರೋಪ. ಮಹಾರಾಷ್ಟ್ರ ಮಳೆಯಿಂದ ಬೆಳಗಾವಿ ಕಾರದಗಾ ಗ್ರಾಮಕ್ಕೆ ಪ್ರವಾಹ ಭೀತಿ. ಬಿಬಿಎಂಪಿ ಫುಟ್ಪಾತ್ ತೆರವು ವಿರೋಧಿಸಿ ಬೀದಿ ಬದಿ ವ್ಯಾಪಾರಿಗಳ ಪ್ರತಿಭಟನೆ. ಬದರಿನಾಥ ದೇವಾಲಯದ ಕೋಟ್ಯಂತರ ರೂ. ಅಕ್ರಮಗಳ ಬಗ್ಗೆ ಉತ್ತರಾಖಂಡ ಸರ್ಕಾರದಿಂದ ಉನ್ನತ ಮಟ್ಟದ ತನಿಖೆಗೆ ಆದೇಶ. ಇಂದಿನ ಪ್ರಮುಖ ಲೈವ್ ಸುದ್ದಿಗಳ ಸಂಪೂರ್ಣ ಅಪ್ಡೇಟ್ ಇಲ್ಲಿದೆ.

Breaking News Today Highlights in Kannada: ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕಂಕಣ ಬದ್ಧವಾಗಿರುವ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ. ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ಪ್ರವಾಹದ ಆತಂಕ ಶುರುವಾಗಿದೆ. ಒತ್ತುವರಿ ತೆರವು ಹೆಸರಿನಲ್ಲಿ ಬಿಬಿಎಂಪಿ ನಡೆಸುತ್ತಿರುವ ಫುಟ್ಪಾತ್ ತೆರವು ಕಾರ್ಯಾಚರಣೆಯನ್ನು ವಿರೋಧಿಸಿ ರಾಜಧಾನಿಯ ಬೀದಿ ಬದಿ ವ್ಯಾಪಾರಿಗಳು ಇಂದು ಫ್ರೀಡಂ ಪಾರ್ಕ್ನಲ್ಲಿ ಬೃಹತ್ ಪ್ರತಿಭಟನೆಗೆ ಸಜ್ಜಾಗಿದ್ದಾರೆ. ಪ್ರಸಿದ್ಧ ಬದರಿನಾಥ ದೇವಾಲಯದಲ್ಲಿ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಸಮಿತಿ ತನಿಖೆಗೆ ಆದೇಶಿಸಿದೆ. ಹೀಗೆ ಇಂದಿನ ಪ್ರಮುಖ ಸುದ್ದಿಗಳ ಲೈವ್ ಅಪ್ಡೇಟ್ ಇಲ್ಲಿದೆ ನೋಡಿ.
LIVE NEWS & UPDATES
-
ಇರಾನ್ ಮೇಲೆ ಮತ್ತೆ ದಾಳಿ ಎಚ್ಚರಿಕೆ ಕೊಟ್ಟ ಟ್ರಂಪ್
ಇರಾನ್ ಹಾಗೂ ಅಮೆರಿಕದ ನಡುವಿನ ಕದನ ವಿರಾಮ ಬಿಕ್ಕಟ್ಟು ಮುಂದುವರದಿದ್ದು, ಈ ನಡುವೆ ಇರಾನ್ ಮೇಲೆ ಇವತ್ತು ರಾತ್ರಿ ಮತ್ತೆ ಮೇಲೆ ದಾಳಿ ಮಾಡುವ ಬೆದರಿಕೆಯನ್ನು ಟ್ರಂಪ್ ಹಾಇದ್ದಾರೆ. ಈಗಾಗಲೇ ಇರಾನ್ಗೆ ಸಾಕಷ್ಟು ಎಚ್ಚರಿಕೆ ನೀಡಿದ್ದೇವೆ. ಅವರು ಕೇಳದಿದ್ದರೆ ಮತ್ತೆ ದಾಳಿ ನಡೆಸಿ ಇರಾನ್ನ ಖರ್ಗ್ ದ್ವೀಪವನ್ನ ವಶಕ್ಕೆ ಪಡೆಯುತ್ತೇವೆ. ಇರಾನ್ ಕೈಯಿಂದ ಏನೂ ಮಾಡಿಕೊಳ್ಳಲು ಆಗಲ್ಲ ಎಂದು ಟ್ರಂಪ್ ಹೇಳಿದ್ದಾರೆ.
-
ಮಹಾರಾಷ್ಟ್ರದ ಚಿಂಚವಾಡ್ನಲ್ಲಿ ಅನಾಹುತ: ನಿರಂತರ ಮಳೆಗೆ ಕಟ್ಟಡ ಕುಸಿತ
ಮಹಾರಾಷ್ಟ್ರದ ಪುಣೆಯಲ್ಲಿ ನಿರಂತರ ಮಳೆಗೆ ಕಟ್ಟಡ ಕುಸಿದಿರುವ ಘಟನೆ ಪುಣೆ ಜಿಲ್ಲೆಯ ಪಿಂಪ್ರಿ-ಚಿಂಚವಾಡ್ನಲ್ಲಿ ನಡೆದಿದೆ. ಕಟ್ಟಡದ ಅವಶೇಷದಡಿ ಸಿಲುಕಿದ್ದ 16 ಮಂದಿ ಪೈಕಿ 7 ಜನರ ರಕ್ಷಣೆ ಮಾಡಲಾಗಿದ್ದು,ಇನ್ನುಳಿದವರ ರಕ್ಷಣೆಗಾಗಿ ಸಿಬ್ಬಂದಿಯಿಂದ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.
-
-
ರಾಜ್ಯದ ಸರ್ಕಾರಿ ಬಸ್ಗಳಲ್ಲಿ ತಂಬಾಕು ಸೇವನೆ ನಿಷೇಧ?
ರಾಜ್ಯದ ಸರ್ಕಾರಿ ಬಸ್ಗಳಲ್ಲಿ ತಂಬಾಕು ಸೇವನೆ ನಿಷೇಧದ ಮುನ್ಸೂಚನೆ ಸಿಕ್ಕಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಸಾರಿಗೆ ಇಲಾಖೆ ಈ ನಿರ್ಧಾರಕ್ಕೆ ಮುಂದಾಗಿದೆ. ಬಸ್ನಲ್ಲಿ ತಂಬಾಕು ಸೇವನೆ, ಧೂಮಪಾನ ಮಾಡುವವರ ವಿರುದ್ಧ ಕ್ರಮಕ್ಕೆ ಸಾರಿಗೆ ನಿಗಮಗಳಿಗೆ ಸಾರಿಗೆ ಸಚಿವ ಭೈರತಿ ಸುರೇಶ್ ಸೂಚನೆ ನೀಡಿದ್ದು, ಈ ಸಂಬಂಧ ರಾಜ್ಯ ಪೊಲೀಸ್ ದೂರುಗಳ ಪ್ರಾಧಿಕಾರ ಸದಸ್ಯ ಮೋಹನ್ ಕುಮಾರ್ ದಾನಪ್ಪ ಆಗ್ರಹಿಸಿದ್ದರು. ಈ ಪತ್ರದ ಹಿನ್ನೆಲೆ ನಿಯಮಾನುಸಾರ ಕ್ರಮ ಕೈಗೊಳ್ಳಲು ಸಚಿವರು ಸೂಚಿಸಿದ್ದಾರೆ ಎನ್ನಲಾಗಿದೆ.
-
10 ಅಧಿಕಾರಿಗಳ ಮನೆಗಳಲ್ಲಿ ಲೋಕಾಯುಕ್ತ ಪರಿಶೀಲನೆ ಅಂತ್ಯ
ರಾಜ್ಯದ ವಿವಿಧೆಡೆ 10 ಅಧಿಕಾರಿಗಳ ಮನೆಗಳ ಮೇಲೆ ರೇಡ್ ಮಾಡಿದ್ದ ಲೋಕಾಯುಕ್ತ ಅಧಿಕಾರಿಗಳ ಪರಿಶೀಲನೆ ಅಂತ್ಯಗೊಂಡಿದೆ. 7 ಜಿಲ್ಲೆಗಳಲ್ಲಿ ಅಧಿಕಾರಿಗಳಿಗೆ ಸೇರಿದ 54 ಕಡೆ ದಾಳಿ ನಡೆದಿತ್ತು. ರೇಡ್ ವೇಳೆ ಕೋಟಿ ಕೋಟಿ ಮೌಲ್ಯದ ಆಸ್ತಿ ಪಾಸ್ತಿ ಪತ್ತೆಯಾಗಿದ್ದು, ಆದಾಯ ಮೀರಿದ ಆಸ್ತಿ ಗಳಿಕೆ ಹಿನ್ನೆಲೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ. ಇನ್ನಷ್ಟು ಓದಿ
-
ಪ್ರತಿಭಟನೆ ಮಾಡುತ್ತಿದ್ದ TMC ನಾಯಕರ ಮೇಲೆ ಮೊಟ್ಟೆ ಎಸೆತ
ಪ್ರತಿಭಟನೆ ಮಾಡುತ್ತಿದ್ದ ಟಿಎಂಸಿ ನಾಯಕರ ಮೇಲೆ ಮೊಟ್ಟೆ ಎಸೆದಿರುವ ಘಟನೆ ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತಾದಲ್ಲಿ ನಡೆದಿದೆ. ಬರುಯಿಪುರದಲ್ಲಿ ನಡೆದ ಅತ್ಯಾಚಾರ ಖಂಡಿಸಿ ನಡೆಯುತ್ತಿದ್ದ ಪ್ರತಿಭಟನಾ ಮೆರವಣಿಗೆ ವೇಳೆ ಕೆಲವರು ಚೋರ್ ಚೋರ್ ಎಂದು ಘೋಷಣೆ ಕೂಗುತ್ತಾ ಮೊಟ್ಟೆ ಎಸೆದಿದ್ದಾರೆ ಎನ್ನಲಾಗಿದೆ.
IS THIS THE POLITICAL CULTURE BJP WANTS TO NORMALISE IN BENGAL?@BJP4Bengal workers hurling eggs at Sikhs, Punjabis, and anyone who refuses to submit to their regressive ideology👇🏼 pic.twitter.com/p6eqRjVQDu
— All India Trinamool Congress (@AITCofficial) July 8, 2026
-
-
ಕೆಲಾಡಿಯಲ್ಲಿ ಭೂಕುಸಿತ ನಡೆದ ಸ್ಥಳಕ್ಕೆ ಕೇರಳ ಸಿಎಂ ಭೇಟಿ
ಕೇರಳಂನ ವಯನಾಡು ಜಿಲ್ಲೆಯ ಕೆಲಾಡಿಯಲ್ಲಿ ಭೂಕುಸಿತ ನಡೆದ ಸ್ಥಳಕ್ಕೆ ಕೇರಳ ಸಿಎಂ ಸತೀಷನ್ ಭೇಟಿ ನೀಡಿದ್ದಾರೆ. ಭೂಕುಸಿತದಿಂದಾದ ಪರಿಣಾಮಗಳನ್ನು ಈ ವೇಳೆ ಕೇರಳಂ ಸಿಎಂ ವೀಕ್ಷಣೆ ಮಾಡಿದ್ದು, ಸ್ಥಳದಲ್ಲಿ ನಡೆಯುತ್ತಿರುವ ಕಾರ್ಯಾಚರಣೆ ಬಗ್ಗೆ ಅಧಿಕಾರಿಗಳು ಅವರಿಗೆ ಮಾಹಿತಿ ನೀಡಿದ್ದಾರೆ.
-
ಭಾರಿ ಗಾತ್ರದ ವಾಹನಗಳಿಗೆ ನಿರ್ಬಂಧ
ಚಿಕ್ಕಮಗಳೂರು ಜಿಲ್ಲೆಯಲ್ಲಿ ನಿರಂತರ ಭಾರಿ ಮಳೆಯಿಂದ ಅವಾಂತರ ನಡೆಯುತ್ತಿರವ ಹಿನ್ನೆಲೆ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಭಾರಿ ಗಾತ್ರದ ವಾಹನಗಳಿಗೆ ನಿರ್ಬಂಧ ವಿಧಿಸಲಾಗಿದೆ. ಶೃಂಗೇರಿ ತಾಲೂಕಿನ ತನಿಕೋಡ್ನಿಂದ ಎಸ್.ಕೆ.ಬಾರ್ಡರ್ವರೆಗೆ 2026ರ ಸೆಪ್ಟೆಂಬರ್ 30ರವರೆಗೆ 12 ಟನ್ಗಿಂತಲೂ ಹೆಚ್ಚು ಭಾರವಾದ ವಾಹನಗಳ ಸಂಚಾರಕ್ಕೆ ನಿಷೇಧಿಸಿ ಡಿಸಿ ಭನ್ವರ್ ಸಿಂಗ್ ಆದೇಶಿಸಿದ್ದಾರೆ. ಈ ಮಾರ್ಗದಲ್ಲಿ ಮಣ್ಣುಕುಸಿತ, ಸೇತುವೆಗಳ ಬಿರುಕು ಬೆನ್ನಲ್ಲೇ ಶಿವಮೊಗ್ಗ-ಮಂಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾರಿ ವಾಹನಗಳ ಸಂಚಾರಕ್ಕೆ ಬ್ರೇಕ್ ಹಾಕಲಾಗಿದೆ.
-
ಶಾಸಕಿ ನಯನಾ ಮೋಟಮ್ಮ ವಿರುದ್ಧ ಅಸಮಾಧಾನ ಸ್ಫೋಟ
ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ವಿರುದ್ಧ ಕಾಂಗ್ರೆಸ್ನಲ್ಲಿಯೇ ಅಸಮಾಧಾನ ಸ್ಫೋಟಗೊಂಡಿದ್ದು, ಕೆಪಿಸಿಸಿ ಅಧ್ಯಕ್ಷರಿಗೆ ದೂರುಗಳ ಪಟ್ಟಿಯನ್ನುಹಿರಿಯ ಮುಖಂಡರು ನೀಡಿದ್ದಾರೆ. ಶಾಸಕಿ ವಿರುದ್ಧ 16 ಅಂಶಗಳನ್ನೊಳಗೊಂಡ ದೂರು ಸಲ್ಲಿಕೆ ಮಾಡಲಾಗಿದ್ದು, ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿದ ಕಾರ್ಯಕರ್ತರ ಕಡೆಗಣಿಸಿದ್ದಾರೆ. 2023ರಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡ ಬಳಿಕ RSS, ಬಜರಂಗದಳ ಜೊತೆ ಆಪ್ತತೆ ಹೊಂದಿದ್ದಾರೆ. ಇವು ಮುಂದಿನ ಚುನಾವಣೆಯಲ್ಲಿ ಪಕ್ಷದ ಹಿನ್ನಡೆಗೆ ಕಾರಣವಾಗುತ್ತದೆ ಎಂದು ಆರೋಪಿಸಲಾಗಿದೆ.
-
ಹೆಚ್ಡಿಡಿ ಭೇಟಿಯಾದ ST ಸಮುದಾಯದ ಮುಖಂಡರ ನಿಯೋಗ
ST ಸಮುದಾಯದ ಮುಖಂಡರ ನಿಯೋಗವು ಮಾಜಿ ಪ್ರಧಾನಿ H.D.ದೇವೇಗೌಡರನ್ನು ಭೇಟಿ ಮಾಡಿದೆ. ಮಾಜಿ ಸಂಸದ ವಿ.ಎಸ್.ಉಗ್ರಪ್ಪ ನೇತೃತ್ವ ನಿಯೋಗ ಇಂದು (ಜುಲೈ 08) ಬೆಂಗಳೂರಿನ ಪದ್ಮನಾಭನಗರದಲ್ಲಿ ಭೇಟಿ ಮಾಡಿದ್ದು, SC, ST, ಒಬಿಸಿ ಮೀಸಲಾತಿ ಹೆಚ್ಚಳ ಕುರಿತು ಚರ್ಚೆ ಮಾಡಿದೆ.
-
2 ದಿನ ಬಳಿಕ ಕೆರೆಯಿಂದ ತಾನಾಗಿಯೇ ಹೊರಬಂದ ಕಾಡಾನೆ
ಕಳೆದ ಎರಡು ದಿನಗಳಿಂದ ಕರೆತಲ್ಲೇ ಸಿಲುಕಿ ಒದ್ದಾಡುತ್ತಿದ್ದ ಕಾಡಾನೆ ಕೊನೆಗೂ ತಾನಾಗಿ ಹೊರಬಂದಿದೆ. ಕೊಡಗು ಜಿಲ್ಲೆ ಪೊನ್ನಂಪೇಟೆ ತಾಲೂಕಿನ ದೇವರಪುರ ಗ್ರಾಮದ ಕೆರೆಯ ಕೆಸರಿನಲ್ಲಿ ಕಾಡಾನೆ ಕಳೆದ ಎರಡು ದಿನಗಳಿಂದ ಸಿಲುಕಿ ಒದ್ದಾಡಿದ್ದು, ಇಂದು (ಜುಲೈ 08) ತಾನಾಗಿಯೇ ಕರೆಯಿಂದ ಆಚೆ ಬಂದು ನಿಟ್ಟುಸಿರುಬಿಟ್ಟಿದೆ.
-
ಜಿಲ್ಲಾಸ್ಪತ್ರೆಗೆ ಭೇಟಿ ನೀಡಿ ಕಣ್ಣು ತಪಾಸಣೆ ಮಾಡಿಸಿಕೊಂಡ ಡಿಸಿಎಂ
ಉಪಮುಖ್ಯಮಂತ್ರಿ ಡಾ ಜಿ ಪರಮೇಶ್ವರ್ ಅವರು ಇಂದು (ಜುಲೈ 08) ದಿಢೀರ್ ತುಮಕೂರು ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ್ದು, ಜಿಲ್ಲಾಸ್ಪತ್ರೆಯ ಕೊಠಡಿಗಳನ್ನ ಪರಿಶೀಲನೆ ಮಾಡಿದರು. ಇನ್ನು ಇದೇ ವೇಳೆ ಈ ವೇಳೆ ತಾವೇ ಖುದ್ದು ಕಣ್ಣಿನ ತಪಾಸಣೆ ಮಾಡಿಸಿಕೊಂಡರು. ಜಿಲ್ಲಾಸ್ಪತ್ರೆಯ ಡಿ.ಎಸ್ ಆಗಿರುವ ನೇತ್ರ ತಜ್ಞ ಡಾ ಅಸ್ಗರ್ ಬೇಗ್ ಅವರು ಪರಮೇಶ್ವರ್ ಅವರ ಕಣ್ಣಿನ ತಪಾಸಣೆ ಮಾಡಿದರು.
-
ಅಕ್ಟೋಬರ್ 1ರ ವೇಳೆಗೆ 18 ವರ್ಷ ತುಂಬಿದ್ರೆ ಐಡಿ ಕಾರ್ಡ್
ಇನ್ನು ಹೊಸಬರು ಅಂದ್ರೆ 2026 ಅಕ್ಟೋಬರ್ 1ರ ವೇಳೆಗೆ 18 ವರ್ಷ ತುಂಬಲಿದೆ ಅನ್ನೋರು ಫಾರ್ಮ್ ನಂಬರ್ 6 ನಲ್ಲಿ ಅರ್ಜಿ ಕೊಡಬಹುದು. ಪ್ರತಿ ಬಿಎಲ್ ಓ ಗೆ ನಾವು 30 ಫಾರ್ಮ್ ಕೊಟ್ಟಿದ್ದೇವೆ . ಆ ಮೂಲಕ ನೀವೂ ಮತದಾನ ಐಡಿ ಪಡೆಯಬಹುದು ಎಂದು ತಿಳಿಸಿದರು.
-
ಚೇಂಜ್ ಮಾಡಬೇಕು ಅಂದ್ರೆ ಫಾರ್ಮ್ ಭರ್ತಿ ಮಾಡ್ಬೇಕು
2002ರ SIR ನಲ್ಲಿ ನಿಮ್ಮ ಮಾಹಿತಿ ಇಲ್ಲ ಅಂದ್ರು ಪರವಾಗಿಲ್ಲ ಮತ್ತೊಮ್ಮೆ ಈಗ ನೀವೂ ಅರ್ಜಿ ಕೊಡಬಹುದು. ಈಗಿರುವ ಕೊಟ್ಟಿರುವ ಅರ್ಜಿಯಲ್ಲಿ ಸ್ಪೆಲ್ಲಿಂಗ್ ಮಿಸ್ಟೇಕ್ ಅಥವಾ ಬೇರೆ ಏನಾದ್ರು ಚೇಂಜ್ ಮಾಡಬೇಕು ಅಂದ್ರೆ ಫಾರ್ಮ್ ನಂಬರ್ 8 ಫಿಲ್ ಮಾಡಬೇಕು. ಜುಲೈ 29 ರೊಳಗೆ ಕೊಡಬಹುದು, ಇಲ್ಲವಾದಲ್ಲಿ ಆಗಸ್ಟ್ 5 ರ ನಂತರ ನಿಮಗೆ ಫಾರ್ಮ್ ಸಿಗುತ್ತೆ ಎಂದರು
-
ಆನ್ಲೈನ್ ಅಪ್ಲೈ ಬಗ್ಗೆ ಮಾಹಿತಿ
ಇನ್ನು ಎಸ್ಐಆರ್ ಪ್ರಕ್ರಿಯೆಯನ್ನು ಆನ್ಲೈನ್ನಲ್ಲಿ ಮಾಡುವ ಬಗ್ಗೆ ಮಾಹಿತಿ ನೀಡಿದ ಅನ್ಬುಕುಮಾರ್, ಆನ್ಲೈನ್ನಲ್ಲಿ ಅಪ್ಲೈ ಮಾಡಿದ್ರಿ ಮತ್ತೆ ಬಿಎಲ್ ಒಗಳಿಗೆ ಅರ್ಜಿ ಫಿಲ್ ಮಾಡಿ ಕೊಡುವ ಅವಶ್ಯಕತೆ ಇಲ್ಲ. ಅದು ಆಟೋಮ್ಯಾಟಿಕ್ ಆಗಿ ಬಿಎಲ್ ಒ ಲಾಗಿನ್ ಗೆ ಹೋಗುತ್ತೆ. ಅರ್ಜಿ ತುಂಬಿ ಬೇಕಾದ್ರು ಬಿಎಲ್ ಒಗಳಿಗೆ ಕೊಡಬಹುದು ಎಂದು ಹೇಳಿದರು.
-
ಗುಂಪಾಗಿ ಒಂದೇ ಕಡೆ ಅರ್ಜಿ ಕೊಡುವಂತಿಲ್ಲ
ಜುಲೈ 29 ರವರೆಗೆ ಈ ಪ್ರಕ್ರಿಯೆ ನಿರಂತರವಾಗಿ ನೆಡೆಯಲಿದ್ದು, ಇದರಲ್ಲಿ ಎಲ್ಲರೂ ಭಾಗವಹಿಸಬೇಕು. ಎಸ್ಐಆರ್ ಪ್ರಕ್ರಿಯೆ ಸಂಬಂಧ ಈಗ ಕೆಲ ದೂರುಗಳು ಬಂದಿವೆ. ಅದರ ಬಗ್ಗೆ ಜಂಟಿ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಪರಿಶೀಲಿಸುತ್ತಿದ್ದಾರೆ. ಗುಂಪಾಗಿ ಒಂದೇ ಕಡೆ ಅರ್ಜಿ ಕೊಡುವಂತಿಲ್ಲ.ಮನೆ ಮನೆಗೆ ಹೋಗಿ ಕೊಡಲೇಬೇಕು. ಇದರ ಬಗ್ಗೆ ಜಿಲ್ಲಾಧಿಕಾರಿಗಳು ಕ್ರಮವಹಿಸುತ್ತಾರೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಭುಕುಮಾರ್ ತಿಳಿಸಿದರು.
-
ಕರ್ನಾಟಕದಲ್ಲಿ ಶೇ. 80.85ರಷ್ಟು SIR ಅರ್ಜಿ ವಿತರಣೆ
ರಾಜ್ಯದಲ್ಲಿ ಮತಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ ನಡೆಯುತ್ತಿದೆ. 5 ಕೋಟಿ 54 ಲಕ್ಷ 32 ಸಾವಿರದ 314 ಮಂದಿಗೆ ಅರ್ಜಿ ವಿತರಣಾ ಕಾರ್ಯ ನಡೆಯುತ್ತಿದೆ . ಇದುವರೆಗೂ 44816723 ಮಂದಿಗೆ ಅರ್ಜಿ ಕೊಟ್ಟಿದ್ದು, ಶೇಕಡಾ 80.85ನಷ್ಟು ಅರ್ಜಿ ವಿತರಣೆ ಆಗಿದೆ ಎಂದು ಕರ್ನಾಟಕ ಮುಖ್ಯ ಚುನಾವಣಾಧಿಕಾರಿ ಅನ್ಭುಕುಮಾರ್ ಮಾಹಿತಿ ನೀಡಿದ್ದಾರೆ.
-
ಮಂಗಳೂರು-ಕಾರ್ಕಳ ಹೆದ್ದಾರಿಯಲ್ಲಿ ಭೂಕುಸಿತ
ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು-ಕಾರ್ಕಳ ನಡುವಿನ ರಾಷ್ಟ್ರೀಯ ಹೆದ್ದಾರಿ 169 ವಿಸ್ತರಣೆ ಕಾಮಗಾರಿ ವೇಳೆ ನಡೆದ ಅವೈಜ್ಞಾನಿಕ ನಿರ್ಮಾಣವು ಭೂಕುಸಿತವಾಗಿದೆ. ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ಕೆತ್ತಿಕಲ್ನಲ್ಲಿ ಗುಡ್ಡವನ್ನು ಲಂಬಾಕೃತಿಯಲ್ಲಿ ಅಗೆದಿದ್ದು ಪ್ರತಿ ಮಳೆಗಾಲದಲ್ಲೂ ಭೂಕುಸಿತಕ್ಕೆ ಕಾರಣವಾಗಿದೆ. ಸಂಪೂರ್ಣ ಸ್ಟೋರಿ ಓದಲು ಇಲ್ಲಿ ಕ್ಲಿಕ್ ಮಾಡಿ
-
ಶಿರಾಡಿ ಘಾಟ್ನಲ್ಲಿ ಮತ್ತೆ ಭೂಕುಸಿತ ಭೀತಿ
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್ನ ಹಲವೆಡೆ ಭೂಕುಸಿತದ ಭೀತಿ ಎದುರಾಗಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಸಕಲೇಶಪುರ ತಾಲೂಕು ಆಡಳಿತವು ಪ್ರವಾಸಿಗರು ಮತ್ತು ಸಾರ್ವಜನಿಕರಿಗೆ ಜಲಪಾತ, ನದಿ ಹಾಗೂ ಗುಡ್ಡಗಾಡು ಪ್ರದೇಶಗಳಿಗೆ ಭೇಟಿ ನೀಡದಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ. ಹೆಚ್ಚಿನ ಸುದ್ದಿಗಳು ಇಲ್ಲಿದೆ ನೋಡಿ
-
ತೆರೆಗೆ ಬರುತ್ತಿದೆ ‘ದಾದಾ’ನ ದಾದಾಗಿರಿ
ಅದ್ಭುತ ಬ್ಯಾಟ್ಸ್ಮನ್ ಆಗಿದ್ದ ಜೊತೆಗೆ ಭಾರತ ಕ್ರಿಕೆಟ್ ತಂಡಕ್ಕೆ ‘ವಿನ್ನಿಂಗ್ ಮೈಂಡ್ಸೆಟ್’ ತೋರಿಸಿಕೊಟ್ಟ ನಾಯಕ. ವಿಶ್ವಕಪ್ ಗೆದ್ದಿಲ್ಲವಾದರೂ ಭಾರತ ಕ್ರಿಕೆಟ್ ಕಂಡ ಅತ್ಯುತ್ತಮ ನಾಯಕರಲ್ಲಿ ಮೊದಲಿಗರು ಎನ್ನಬಹುದು ಸೌರವ್ ಗಂಗೂಲಿ ಅವರನ್ನು. ಇದೀಗ ಭಾರತ ಕ್ರಿಕೆಟ್ ಕಂಡ ಅದ್ಭುತ ನಾಯಕನ ಜೀವನ ಕುರಿತಾದ ಕತೆ ಸಿನಿಮಾ ಆಗಿದೆ. ಮಾತ್ರವಲ್ಲದೆ ಇಂದು (ಜುಲೈ 8) ಸೌರವ್ ಗಂಗೂಲಿ ಹುಟ್ಟುಹಬ್ಬದ ಪ್ರಯುಕ್ತ ಸಿನಿಮಾದ ಬಿಡುಗಡೆ ದಿನಾಂಕವನ್ನು ಸಹ ಘೋಷಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿದೆ
-
ಭಯೋತ್ಪಾದನ ಪಿತೂರಿ: ಕರ್ನಾಟಕ ಸೇರಿದಂತೆ 9 ರಾಜ್ಯಗಳಲ್ಲಿ ಎನ್ಐಎ ಜಂಟಿ ಕಾರ್ಯಾಚರಣೆ
ದೇಶಾದ್ಯಂತ ಭಯೋತ್ಪಾದನಾ ಜಾಲಗಳನ್ನು ಮಟ್ಟಹಾಕಲು ರಾಷ್ಟ್ರೀಯ ತನಿಖಾ ದಳ (NIA) ಇಂದು ಮುಂಜಾನೆಯಿಂದಲೇ ಭಾರಿ ಕಾರ್ಯಾಚರಣೆ ಕೈಗೊಂಡಿದೆ. ಭಯೋತ್ಪಾದನಾ ಪಿತೂರಿ ಪ್ರಕರಣಗಳಿಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿದಂತೆ ದೇಶದ ಹಲವು ರಾಜ್ಯಗಳ ಒಟ್ಟು 22ಕ್ಕೂ ಹೆಚ್ಚು ಪ್ರಮುಖ ಸ್ಥಳಗಳಲ್ಲಿ ಏಕಕಾಲಕ್ಕೆ ಎನ್ಐಎ ಅಧಿಕಾರಿಗಳು ದಾಳಿ ನಡೆಸಿ, ತೀವ್ರ ಶೋಧ ನಡೆಸುತ್ತಿದ್ದಾರೆ.
-
ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ: ಜೆಡಿಎಸ್ ಆರೋಪ
ಕಾವೇರಿ ನೀರು ಹಂಚಿಕೆ ವಿಚಾರವಾಗಿ ಹೆಚ್.ಡಿ. ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ (JDS) ಪಕ್ಷವು ಎಕ್ಸ್ (X) ಖಾತೆಯಲ್ಲಿ ರಾಜ್ಯ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದೆ. ಕನ್ನಡಿಗರ ಹಾಗೂ ರಾಜ್ಯದ ರೈತರ ಹಿತಾಸಕ್ತಿಯನ್ನು ಬಲಿಕೊಟ್ಟು ತಮಿಳುನಾಡಿಗೆ ಕದ್ದುಮುಚ್ಚಿ ನೀರು ಹರಿಸಲಾಗುತ್ತಿದೆ ಎಂದು ಜೆಡಿಎಸ್ ಗಂಭೀರವಾಗಿ ಆರೋಪಿಸಿದೆ.
-
ವಯನಾಡು ಸುರಂಗ ಮಾರ್ಗ ಕಾಮಗಾರಿ ಪ್ರದೇಶದಲ್ಲಿ ಭೀಕರ ಭೂಕುಸಿತ: ಮೂವರು ಸಾವು, ಐವರು ನಾಪತ್ತೆ
ಕೇರಳದ ವಯನಾಡು ಜಿಲ್ಲೆಯ ಕಲ್ಲಾಡಿ ಬಳಿ ಭೀಕರ ಭೂಕುಸಿತ ಸಂಭವಿಸಿದ್ದು, ಸುರಂಗ ಕಾಮಗಾರಿಗೆ ನಿಯೋಜನೆಗೊಂಡಿದ್ದ ಮೂವರು ಸಿಬ್ಬಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ ಸೈಟ್ ಇಂಜಿನಿಯರ್ಗಳು ಸೇರಿದಂತೆ ಐವರು ಸಿಬ್ಬಂದಿ ನಾಪತ್ತೆಯಾಗಿದ್ದು, ಒಂಬತ್ತು ಜನರು ಗಾಯಗೊಂಡಿದ್ದಾರೆ.
-
ಬದರಿನಾಥ ದೇವಾಲಯದ ದೇಣಿಗೆ ಅಕ್ರಮ ಹಗರಣ: ಉನ್ನತ ಮಟ್ಟದ ತನಿಖೆಗೆ ಸಿಎಂ ಆದೇಶ
ಪ್ರಸಿದ್ಧ ಬದರಿನಾಥ ದೇವಾಲಯದಲ್ಲಿ ಭಕ್ತರು ನೀಡುವ ದೇಣಿಗೆ ಮತ್ತು ಕಾಣಿಕೆಗಳಿಗೆ ಸಂಬಂಧಿಸಿದಂತೆ ನಡೆದಿರುವ ಕೋಟ್ಯಂತರ ರೂಪಾಯಿ ಅಕ್ರಮಗಳ ದೂರಿನ ಹಿನ್ನೆಲೆಯಲ್ಲಿ ಉತ್ತರಾಖಂಡ ಸರ್ಕಾರ ಉನ್ನತ ಮಟ್ಟದ ಸಮಿತಿ ತನಿಖೆಗೆ ಆದೇಶಿಸಿದೆ. ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರ ನೇರ ಸೂಚನೆಯ ಮೇರೆಗೆ ಮೂರು ಸದಸ್ಯರ ಹೈ-ಲೆವೆಲ್ ಕಮಿಟಿ ರಚಿಸಲಾಗಿದೆ.
-
ಬೆಳಗಾವಿಯಲ್ಲಿ ಪ್ರವಾಹದ ಭೀತಿ: ಕಾರದಗಾ ಗ್ರಾಮಕ್ಕೆ ನುಗ್ಗಿದ ದೂದಗಂಗಾ ನದಿ ನೀರು
ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಬೆಳಗಾವಿ ಜಿಲ್ಲೆಯ ನಿಪ್ಪಾಣಿ ತಾಲೂಕಿನ ಕಾರದಗಾ ಗ್ರಾಮಕ್ಕೆ ಪ್ರವಾಹದ ಆತಂಕ ಶುರುವಾಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿರುವ ದೂದಗಂಗಾ ನದಿಯ ನೀರು ನೇರವಾಗಿ ಗ್ರಾಮದ ಊರ ಬಾಗಿಲಿಗೆ ಬಂದು ತಲುಪಿದೆ.
-
ರಾಜ್ಯಾದ್ಯಂತ ಏಕಕಾಲಕ್ಕೆ ಹಲವು ಅಧಿಕಾರಿಗಳ ಮನೆ, ಕಚೇರಿ ಮೇಲೆ ಲೋಕಾಯುಕ್ತ ದಾಳಿ
ರಾಜ್ಯದಲ್ಲಿ ಭ್ರಷ್ಟಾಚಾರ ನಿಗ್ರಹಕ್ಕೆ ಕಂಕಣ ಬದ್ಧವಾಗಿರುವ ಲೋಕಾಯುಕ್ತ ಪೊಲೀಸರು ಇಂದು ಬೆಳ್ಳಂಬೆಳಗ್ಗೆ ಭ್ರಷ್ಟ ಅಧಿಕಾರಿಗಳಿಗೆ ಭಾರಿ ಶಾಕ್ ನೀಡಿದ್ದಾರೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ಅಧಿಕಾರಿಗಳ ನಿವಾಸ, ಕಚೇರಿ ಹಾಗೂ ಸಂಬಂಧಿಕರ ಮನೆಗಳ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.
Published On - Jul 08,2026 9:30 AM




