ಜಾತಿ ಸಮೀಕ್ಷೆ ಅವಧಿ ವಿಸ್ತರಣೆ: ಕರ್ನಾಟಕದಾದ್ಯಂತ ಶಾಲಾ ಸಮಯವೂ ಬದಲಾವಣೆ

ಕರ್ನಾಟಕದಾದ್ಯಂತ ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆ ಪೂರ್ಣಗೊಳ್ಳದ ಹಿನ್ನೆಲೆ ಸಮೀಕ್ಷೆ ದಿನಾಂಕವನ್ನು ವಿಸ್ತರಣೆ ಮಾಡಲಾಗಿದೆ. ಇದರಿಂದಾಗಿ ರಾಜ್ಯದ ಶಾಲೆಗಳ ಸಮಯವನ್ನು ಬದಲಾವಣೆ ಮಾಡಲಾಗಿದೆ. ಇನ್ನು ಮುಂದೆ ಬೆಳಗ್ಗೆ 8 ರಿಂದ ಮಧ್ಯಾಹ್ನ 1ರವರೆಗೆ ತರಗತಿಗಳು ನಡೆಯಲಿದ್ದು, ನಂತರ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗವಹಿಸುವಂತೆ ಆದೇಶಿಸಲಾಗಿದೆ.

ಜಾತಿ ಸಮೀಕ್ಷೆ ಅವಧಿ ವಿಸ್ತರಣೆ: ಕರ್ನಾಟಕದಾದ್ಯಂತ ಶಾಲಾ ಸಮಯವೂ ಬದಲಾವಣೆ
ಪ್ರಾತಿನಿಧಿಕ ಚಿತ್ರ
Updated By: ಗಂಗಾಧರ​ ಬ. ಸಾಬೋಜಿ

Updated on: Oct 06, 2025 | 9:36 PM

ಬೆಂಗಳೂರು, ಅಕ್ಟೋಬರ್​ 06: ರಾಜ್ಯ ಸರ್ಕಾರದಿಂದ ನಡೆಸಲಾಗುತ್ತಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಉರಫ್​ ಜಾತಿ ಗಣತಿ (Caste Census) ಮುಗಿಯದ ಹಿನ್ನೆಲೆ ಅವಧಿ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಕರ್ನಾಟಕದಾದ್ಯಂತ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಸಮಯ (school timings) ಬದಲಾವಣೆ ಮಾಡಿ ಶಾಲಾ ಶಿಕ್ಷಣ ಇಲಾಖೆ ಸೋಮವಾರ ಮಹತ್ವದ ಆದೇಶ ಹೊರಡಿಸಿದೆ.

ಕಳೆದ 14 ದಿನಗಳಿಂದ ಅಂದರೆ ಸೆಪ್ಟೆಂಬರ್ 22ರಿಂದ ಜಾತಿ ಸಮೀಕ್ಷೆ ಆರಂಭಗೊಂಡಿದೆ. ಈ ಗಣತಿಗೆ ರಾಜ್ಯ ಸರ್ಕಾರ ಡೆಡ್​ಲೈನ್ ಕೊಟ್ಟಿತ್ತು. ಅಕ್ಟೋಬರ್ 7ಕ್ಕೆ ಮುಗಿಸುವಂತೆ ಹೇಳಿತ್ತು. ಸರ್ಕಾರಕ್ಕೆ ಕೊಟ್ಟ ಈ ಗಡುವಿಗೆ ನಾಳೆಯೇ ಕೊನೆಯ ದಿನ. ಆದರೆ ಅಂದುಕೊಂಡಂತೆ ಸಮೀಕ್ಷೆ ಮುಕ್ತಾಯವಾಗಿಲ್ಲ. ಸಮೀಕ್ಷೆ ಇನ್ನು ಬಾಕಿ ಉಳಿದ ಹಿನ್ನೆಲೆ ಬೆಂಗಳೂರು ಹೊರತುಪಡಿಸಿ ರಾಜ್ಯದಲ್ಲಿ ಅ.12ರವರೆಗೆ ಸಮೀಕ್ಷೆ ದಿನಾಂಕ ವಿಸ್ತರಣೆ ಮಾಡಲಾಗಿದೆ. ಹೀಗಾಗಿ ಅಕ್ಟೋಬರ್ 8 ರಿಂದ ಶಾಲಾ ಸಮಯವನ್ನು ಪರಿಷ್ಕರಣೆ ಮಾಡಲಾಗಿದೆ.

ಇದನ್ನೂ ಓದಿ: ನಾಳೆಗೆ ಮುಗಿಯಲ್ಲ ಜಾತಿ ಗಣತಿ? ಅವಧಿ ವಿಸ್ತರಣೆ ಸುಳಿವು ಕೊಟ್ಟ ಸಚಿವ ಪರಮೇಶ್ವರ

ರಾಜ್ಯದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅ. 08 ರಿಂದ 12ರ ವರೆಗೆ ಶಾಲಾ ತರಗತಿಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆಯವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಶಿಕ್ಷಕರು ಸಮೀಕ್ಷಾ ಕಾರ್ಯದಲ್ಲಿ ಭಾಗಿ ಆಗಬೇಕು. ಸಮೀಕ್ಷೆಯನ್ನು ರಜಾ ದಿನಗಳಲ್ಲಿಯೂ ಕೈಗೊಳ್ಳುವಂತೆ ಆದೇಶಿಸಲಾಗಿದೆ.

ಇನ್ನು ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲೂ ಸರ್ಕಾರಿ ಮತ್ತು ಶಾಲಾ ಅನುದಾನಿತ ಶಾಲೆಗಳಲ್ಲಿ ಅ. 08ರಿಂದ 24ರ ವರೆಗೆ ತರಗತಿಗಳನ್ನು ಬೆಳಿಗ್ಗೆ 8 ಗಂಟೆಯಿಂದ ಮಧ್ಯಾಹ್ನ 1 ಗಂಟೆ ವರೆಗೆ ನಿರ್ವಹಿಸಿ, ನಂತರದ ಅವಧಿಯಲ್ಲಿ ಸಮೀಕ್ಷೆ ಕಾರ್ಯಕ್ಕೆ ನಿಯೋಜಿಸಿರುವ ಶಿಕ್ಷಕರು ಸಮೀಕ್ಷಾ ಕಾರ್ಯವನ್ನು ನಿರ್ವಹಿಸುವಂತೆ ಆದೇಶಿಸಲಾಗಿದೆ. ಗ್ರೇಟರ್ ಬೆಂಗಳೂರು ವ್ಯಾಪ್ತಿಯಲ್ಲಿ ಅಕ್ಟೋಬರ್ 24 ವರೆಗೆ ಸಮೀಕ್ಷೆ ಕಾರ್ಯಕ್ಕೆ ಶಿಕ್ಷಕರಿಗೆ ಅವಧಿ ವಿಸ್ತರಣೆ ಮಾಡಲಾಗಿದೆ.

ಇದನ್ನೂ ಓದಿ: ಜಾತಿ ಗಣತಿ ಡೆಡ್​ಲೈನ್ ಅ.7ಕ್ಕೆ ಅಂತ್ಯ: ಅವಧಿ ಮುಂದೂಡುತ್ತಾ ಸರ್ಕಾರ? ಎಲ್ಲೆಲ್ಲಿ ಎಷ್ಟಾಯ್ತು ಸಮೀಕ್ಷೆ? ಮಾಹಿತಿ ಇಲ್ಲಿದೆ

ಕರ್ನಾಟಕದಾದ್ಯಂತ ಸಮೀಕ್ಷೆಯನ್ನು ಅಕ್ಟೋಬರ್ 12ರ ಅಂತ್ಯದೊಳಗೆ ಪೂರ್ಣಗೊಳಿಸಬೇಕು. ಗ್ರೇಟರ್‌ ಬೆಂಗಳೂರಿನಲ್ಲಿ ಅಕ್ಟೋಬರ್ 24 ರೊಳಗೆ ಪೂರ್ಣಗೊಳಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಶಿಕ್ಷಕರಿಗೆ ಗಡುವು ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 9:36 pm, Mon, 6 October 25