ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಬಿಡಬೇಕೆಂಬ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಕರ್ನಾಟಕ ನಿರ್ಧಾರ

ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಹರಿಸಬೇಕೆಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ (CWMA) ಆದೇಶದ ವಿರುದ್ಧ ಕರ್ನಾಟಕ ಮುಂದಿನ ವಾರ ಸುಪ್ರೀಂ ಕೋರ್ಟ್ ಮೊರೆ ಹೋಗಲಿದೆ. ಸದ್ಯ ಆದೇಶ ಪಾಲಿಸುವುದಾಗಿ ಸರ್ಕಾರ ತಿಳಿಸಿದ್ದು, ರಾಜ್ಯದ ಮಳೆ ಕೊರತೆ ನೀಗಿಸಲು ₹27 ಕೋಟಿ ವೆಚ್ಚದಲ್ಲಿ 60 ದಿನಗಳ ಮೋಡ ಬಿತ್ತನೆ ಕಾರ್ಯಾಚರಣೆಗೆ ಸಿದ್ಧತೆ ನಡೆಸಿದೆ.

ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಬಿಡಬೇಕೆಂಬ ಆದೇಶದ ವಿರುದ್ಧ ಸುಪ್ರೀಂ ಮೊರೆ ಹೋಗಲು ಕರ್ನಾಟಕ ನಿರ್ಧಾರ
ಸುಪ್ರೀಂ ಕೋರ್ಟ್ & ಕಾವೇರಿ ನೀರು
Image Credit source: PTI

Updated on: Aug 26, 2026 | 12:26 PM

ಮುಖ್ಯಾಂಶಗಳು

  • ಕರ್ನಾಟಕದಿಂದ ಸುಪ್ರೀಂ ಕೋರ್ಟ್ ಮೊರೆ
  • ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಆದೇಶದ ವಿರುದ್ಧ ಅಸಮಾಧಾನ
  • 9,000 ಕ್ಯೂಸೆಕ್ ನೀರು ಬಿಡುಗಡೆಗೆ ಆದೇಶಿಸಿದ್ದ CWMA

ಬೆಂಗಳೂರು, ಆಗಸ್ಟ್​ 26: ತಮಿಳುನಾಡಿಗೆ 9,000 ಕ್ಯೂಸೆಕ್ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ಆದೇಶದ ವಿರುದ್ಧ ಸುಪ್ರೀಂ ಕೋರ್ಟ್ (Supreme Court) ಮೊರೆ ಹೋಗಲು ಕರ್ನಾಟಕ ನಿರ್ಧರಿಸಿದೆ. ಮುಂದಿನ ವಾರ ಅರ್ಜಿ ಸಲ್ಲಿಸಿ, ತಮಿಳುನಾಡಿಗೆ ಬಿಡಬೇಕಾದ ನೀರಿನ ಪ್ರಮಾಣವನ್ನು ಕಡಿಮೆ ಮಾಡುವಂತೆ ಮನವಿ ಮಾಡಲಾಗುವುದು ಎಂದು ಜಲಸಂಪನ್ಮೂಲ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. ಆದರೆ, ಸುಪ್ರೀಂ ಕೋರ್ಟ್‌ನಲ್ಲಿ ಕಾನೂನು ಹೋರಾಟ ನಡೆಸುವ ನಡುವೆಯೂ CWMA ಆದೇಶವನ್ನು ಸದ್ಯಕ್ಕೆ ಪಾಲಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ರಾಜ್ಯದ ಪ್ರಸ್ತುತ ಒಳಹರಿವು ಸುಮಾರು 14,000 ಕ್ಯೂಸೆಕ್ ಇದ್ದು, ಜಲಾಶಯಗಳಿಗೆ ಹರಿದುಬರುವ ನೀರನ್ನು ಸಂಪೂರ್ಣವಾಗಿ ತಡೆಯಲು ಸಾಧ್ಯವಿಲ್ಲ ಎಂದು ಅವರು ಹೇಳಿದ್ದಾರೆ. ಭಾನುವಾರ ಉತ್ತಮ ಮಳೆಯಾಗಿದ್ದು, ಹಾರಂಗಿ ಜಲಾಶಯ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ 15,000ರಿಂದ 20,000 ಕ್ಯೂಸೆಕ್‌ವರೆಗೆ ಒಳಹರಿವು ಬರುವ ನಿರೀಕ್ಷೆಯಿದೆ ಎಂದಿದ್ದಾರೆ.

ಮಳೆಯೇ ನೀರಿನ ಬಿಕ್ಕಟ್ಟಿಗೆ ಶಾಶ್ವತ ಪರಿಹಾರವಾಗಿದ್ದು, ಉತ್ತಮ ಮಳೆಯಾಗಲಿ ಎಂದು ಮುಖ್ಯಮಂತ್ರಿ ಸೇರಿದಂತೆ ಸರ್ಕಾರ ಪ್ರಾರ್ಥಿಸುತ್ತಿದೆ ಎಂದು ಸಚಿವರು ಹೇಳಿದ್ದಾರೆ.

ಕರ್ನಾಟಕದಲ್ಲಿ ಮೋಡ ಬಿತ್ತನೆಗೆ ಸಿದ್ಧತೆ

ರಾಜ್ಯದ ಮಳೆ ಕೊರತೆ ನೀಗಿಸುವ ಉದ್ದೇಶದಿಂದ ಕ್ಲೌಡ್ ಸೀಡಿಂಗ್ (ಮೋಡ ಬಿತ್ತನೆ) ಕಾರ್ಯಾಚರಣೆ ಇನ್ನೆರಡು ದಿನಗಳಲ್ಲಿ ಆರಂಭವಾಗುವ ಸಾಧ್ಯತೆ ಇದೆ. ಸುಮಾರು 60 ದಿನಗಳ ಕಾಲ ಕಾರ್ಯಾಚರಣೆ ನಡೆಸಲು ಯೋಜಿಸಲಾಗಿದ್ದು, ಒಟ್ಟು 200 ಗಂಟೆಗಳಷ್ಟು ವಿಮಾನ ಹಾರಾಟ ನಡೆಸಲು ಅಂದಾಜಿಸಲಾಗಿದೆ. ಇದಕ್ಕಾಗಿ ಸುಮಾರು ₹27 ಕೋಟಿ ವೆಚ್ಚವಾಗಲಿದೆ. ಪ್ರತಿದಿನ ಬೆಳಗ್ಗೆ 8ರಿಂದ ಸಂಜೆ 6ರವರೆಗೆ ಕ್ಲೌಡ್ ಸೀಡಿಂಗ್ ಕಾರ್ಯಾಚರಣೆ ನಡೆಸಲಾಗುವುದು. ಸೆಪ್ಟೆಂಬರ್‌ನಲ್ಲಿ ದಟ್ಟ ಮೋಡಗಳ ಲಭ್ಯತೆ ಹೆಚ್ಚಾಗುವ ನಿರೀಕ್ಷೆಯಿದ್ದು, ಅಕ್ಟೋಬರ್‌ನಲ್ಲಿ ಅದು ಕಡಿಮೆಯಾಗುವ ಸಾಧ್ಯತೆ ಇರುವುದರಿಂದ ಈಗಿನ ಅವಧಿ ಸೂಕ್ತವಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕಾರ್ಯಕ್ರಮವನ್ನು ತ್ವರಿತಗೊಳಿಸಿ ಮೇಲ್ವಿಚಾರಣೆ ನಡೆಸಲು ಸರ್ಕಾರ ಮೂರು ಸಮಿತಿಗಳನ್ನು ರಚಿಸಲಿದೆ. ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಮೇಲ್ವಿಚಾರಣಾ ಸಮಿತಿ, ಐಐಟಿ, ಐಐಎಸ್‌ಸಿ ಹಾಗೂ ಹವಾಮಾನ ಇಲಾಖೆಯ ತಜ್ಞರನ್ನು ಒಳಗೊಂಡ ತಾಂತ್ರಿಕ ಸಮಿತಿ ಮತ್ತು ಕ್ಷೇತ್ರ ಕಾರ್ಯಾಚರಣೆ ಹಾಗೂ ಮೌಲ್ಯಮಾಪನ ಸಮಿತಿಗಳನ್ನು ರಚಿಸಲಾಗುತ್ತದೆ ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಕರ್ನಾಟಕಕ್ಕೆ ಮತ್ತೆ ಹಿನ್ನಡೆ: ತಮಿಳುನಾಡಿಗೆ ನೀರು ಬಿಡಬೇಕೆಂಬ CWRC ಆದೇಶ ಎತ್ತಿಹಿಡಿದ CWMA

ರಾಜ್ಯದಲ್ಲಿ ಈ ಹಿಂದೆ ಮೂರು ಬಾರಿ ಮೋಡ ಬಿತ್ತನೆಗೆ ಪ್ರಯತ್ನಿಸಲಾಗಿದ್ದು, ಶೇಕಡ 18ರಿಂದ 20ರಷ್ಟು ಯಶಸ್ಸು ಕಂಡಿತ್ತು. ಈ ಬಾರಿ ಶೇಕಡ 30ರಷ್ಟು ಯಶಸ್ಸು ದೊರೆತರೆ ಯೋಜನೆ ಸಾರ್ಥಕವಾಗಲಿದೆ ಎಂದು ಚೆಲುವರಾಯಸ್ವಾಮಿ ತಿಳಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us