ಕಾವೇರಿ ವಿವಾದ: ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಮುಂದೂಡಿಕೆ, ಕರ್ನಾಟಕಕ್ಕೆ ತಪ್ಪದ ಸಂಕಷ್ಟ

ಕಾವೇರಿ ನೀರು ಹಂಚಿಕೆ ಸಂಬಂಧ ತಮಿಳುನಾಡು ಸಲ್ಲಿಸಿರುವ ಅರ್ಜಿಯನ್ನು ಸುಪ್ರೀಂಕೋರ್ಟ್ ವಿಚಾರಣೆ ನಡೆಸಿದ್ದು, ಎರಡೂ ರಾಜ್ಯಗಳು ಅಂಕಿ-ಅಂಶಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ವಿಚಾರಣೆಯನ್ನು ಆಗಸ್ಟ್ 31ಕ್ಕೆ ಮುಂದೂಡಿದೆ. ಇದರಿಂದ, ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ ಹಳೆ ಆದೇಶವನ್ನು ಪಾಲಿಸಬೇಕಿರುವ ಕರ್ನಾಟಕಕ್ಕೆ ಸದ್ಯಕ್ಕೆ ಸಂಕಷ್ಟ ಮುಂದುವರಿದಂತಾಗಿದೆ.

ಕಾವೇರಿ ವಿವಾದ: ಸುಪ್ರೀಂ ಕೋರ್ಟ್​ನಲ್ಲಿ ಮತ್ತೆ ವಿಚಾರಣೆ ಮುಂದೂಡಿಕೆ, ಕರ್ನಾಟಕಕ್ಕೆ ತಪ್ಪದ ಸಂಕಷ್ಟ
ಸುಪ್ರೀಂಕೋರ್ಟ್‌ ಹಾಗೂ ಕಾವೇರಿ ನದಿ (ಸಂಗ್ರಹ ಚಿತ್ರ)
Image Credit source: PTI

Updated on: Aug 24, 2026 | 1:05 PM

ಮುಖ್ಯಾಂಶಗಳು

  • ಕಾವೇರಿ ನೀರು ವಿವಾದ ವಿಚಾರಣೆ ಆಗಸ್ಟ್ 31ಕ್ಕೆ ಮುಂದೂಡಿಕೆ
  • ಕರ್ನಾಟಕದ ಜಲಾಶಯಗಳಲ್ಲಿ 78 ಟಿಎಂಸಿ ನೀರು
  • ಹೊಸ ಅಂಕಿ ಅಂಶಗಳೊಂದಿಗೆ ಬರುವಂತೆ ಸೂಚನೆ

ನವದೆಹಲಿ, ಆಗಸ್ಟ್ 24: ಕಾವೇರಿ ನೀರು (Cauvery Water Dispute) ಹರಿಸುವಂತೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀಡಿರುವ ನಿರ್ದೇಶನವನ್ನು ಜಾರಿಗೊಳಿಸುವಂತೆ ಕೋರಿ ತಮಿಳುನಾಡು ಸಲ್ಲಿಸಿರುವ ಅರ್ಜಿಯ ವಿಚಾರಣೆ ಸೋಮವಾರ ಸುಪ್ರೀಂಕೋರ್ಟ್‌ನಲ್ಲಿ ನಡೆಯಿತು. ನ್ಯಾಯಮೂರ್ತಿ ವಿಕ್ರಮ್ ನಾಥ್ ಮತ್ತು ನ್ಯಾಯಮೂರ್ತಿ ಸಂದೀಪ್ ಮೆಹ್ತಾ ಅವರನ್ನೊಳಗೊಂಡ ದ್ವಿಸದಸ್ಯ ಪೀಠ ಅರ್ಜಿಯ ವಿಚಾರಣೆ ನಡೆಸಿತು. ಸದ್ಯ, ಅಂಕಿಅಂಶಗಳೊಂದಿಗೆ ಬರುವಂತೆ ಉಭಯ ರಾಜ್ಯಗಳಿಗೆ ಸೂಚಿಸಿರುವ ಸುಪ್ರೀಂ ಕೋರ್ಟ್, ಮುಂದಿನ ಸೋಮವಾರಕ್ಕೆ (ಆಗಸ್ಟ್ 31) ವಿಚಾರಣೆ ಮುಂದೂಡಿದೆ. ಇದರೊಂದಿಗೆ, ಅಲ್ಲಿವರೆಗೂ ಈ ಹಿಂದಿನ ಆದೇಶವನ್ನು (ನಿತ್ಯ 12 ಸಾವಿರ ಕ್ಯೂಸೆಕ್ ನೀರು ಹರಿಸಬೇಕೆಂಬ) ಪಾಲಿಸಬೇಕಾದ ಅನಿವಾರ್ಯತೆ ಕರ್ನಾಟಕಕ್ಕೆ ಎದುರಾಗಿದೆ.

ತಮಿಳುನಾಡು ಪರ ಹಿರಿಯ ವಕೀಲ ಸಿಎಸ್ ವೈದ್ಯನಾಥನ್ ವಾದ ಮಂಡಿಸಿ, ರಾಜ್ಯಕ್ಕೆ ಬರಬೇಕಾದ ಪ್ರಮಾಣದ ಕಾವೇರಿ ನೀರು ಸಿಗುತ್ತಿಲ್ಲ ಎಂದು ಹೇಳಿದರು. ಒಳಹರಿವು, ಬಳಕೆ, ನೀರು ಬಿಡುಗಡೆ, ಜಲಾಶಯಗಳಲ್ಲಿನ ಸಂಗ್ರಹ ಹಾಗೂ ಅನುಮತಿಸಲಾದ ನೀರಿನ ಬಳಕೆಯನ್ನು ನಿರ್ಧರಿಸುವಲ್ಲಿ CWMAಯ ಅಧಿಕಾರ, ಕಾರ್ಯ ಮತ್ತು ಕರ್ತವ್ಯಗಳ ಕುರಿತು ಸುಪ್ರೀಂಕೋರ್ಟ್ ಪರಿಶೀಲನೆ ನಡೆಸಬೇಕು ಎಂದು ಮನವಿ ಮಾಡಿದರು.

ತಮಿಳುನಾಡು ವಾದವೇನು?

Cauvery Water Dispute: Supreme Court Adjourns Tamil Nadu Plea To August 31
ಈ ಹಿಂದೆ ಕರ್ನಾಟಕದಿಂದ ಬಿಡುಗಡೆಯಾದ ನೀರಿನ ಪ್ರಮಾಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯಕ್ಕೆ ಚಾರ್ಟ್ ಸಲ್ಲಿಸಲಾಗಿತ್ತು. ಅದನ್ನು ಉಲ್ಲೇಖಿಸಿದ ನ್ಯಾಯಮೂರ್ತಿ ವಿಕ್ರಮ್ ನಾಥ್, CWMA ಸೂಚನೆಯಂತೆ ಈಗಾಗಲೇ ನೀರು ಒದಗಿಸಿರುವುದನ್ನು ಚಾರ್ಟ್ ತೋರಿಸುತ್ತಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ವೈದ್ಯನಾಥನ್, ಸೋಮವಾರ ಬೆಳಗಿನ ವೇಳೆಗೆ CWMA ನಿರ್ದೇಶಿಸಿದ್ದ ಪ್ರಮಾಣದ ನೀರು ತಮಿಳುನಾಡಿಗೆ ತಲುಪಿದೆ ಎಂದು ತಿಳಿಸಿದರು. ಆದರೆ ಹಿಂದಿನ ದಿನದ ಲೆಕ್ಕಾಚಾರದಲ್ಲಿ ಕೊರತೆ ಇದ್ದು, ತಮಿಳುನಾಡಿಗೆ ಬರಬೇಕಾದ ಪ್ರಮಾಣಕ್ಕೆ ಅನುಗುಣವಾಗಿ ಕರ್ನಾಟಕ ಆ ಕೊರತೆಯನ್ನು ಸರಿದೂಗಿಸುವಂತೆ CWMA ಸೂಚಿಸುತ್ತಿಲ್ಲ ಎಂದು ವಾದಿಸಿದರು.

ಸುಪ್ರೀಂ ಕೋರ್ಟ್​ನಲ್ಲಿ ನಡೆದ ವಾದ-ಪ್ರತಿ ವಾದದ ವಿವರ


ಕರ್ನಾಟಕ ತನ್ನ ಜಲಾಶಯಗಳಲ್ಲಿ ಸುಮಾರು 78 ಟಿಎಂಸಿ ನೀರು ಹೊಂದಿದೆ ಎಂಬುದನ್ನೂ ತಮಿಳುನಾಡು ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು.

CWMA ಸಭೆ ಬಳಿಕ ಸ್ಪಷ್ಟ ಚಿತ್ರಣ

ಕರ್ನಾಟಕದ ಪರ ಹಿರಿಯ ವಕೀಲ ಶ್ಯಾಮ್ ದಿವಾನ್ ವಾದ ಮಂಡಿಸಿ, CWMA ಸಭೆ ಮಂಗಳವಾರ ನಡೆಯಲಿದೆ ಎಂದು ತಿಳಿಸಿದರು. ಕರ್ನಾಟಕವು ಈ ವಿಚಾರವನ್ನು ಪರಿಶೀಲಿಸುತ್ತಿದ್ದು, ರಾಜ್ಯದ ತಿಳುವಳಿಕೆಯ ಪ್ರಕಾರ ಸದ್ಯ ಯಾವುದೇ ಸಮಸ್ಯೆ ಇಲ್ಲ ಎಂದು ಅವರು ನ್ಯಾಯಾಲಯಕ್ಕೆ ತಿಳಿಸಿದರು. ಈ ಸಂದರ್ಭದಲ್ಲಿ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಹಾಗೂ ಕಾವೇರಿ ನೀರು ನಿಯಂತ್ರಣ ಸಮಿತಿ (CWRC) ಸಭೆಗಳ ಬಳಿಕ ಪರಿಸ್ಥಿತಿಯ ಕುರಿತು ಹೊಸ ಅಂಕಿ-ಅಂಶಗಳು ಲಭ್ಯವಾಗಲಿವೆ ಎಂಬ ಅಂಶವೂ ವಿಚಾರಣೆಯಲ್ಲಿ ಪ್ರಸ್ತಾಪವಾಯಿತು.

ಇದನ್ನೂ ಓದಿ: ಕಾವೇರಿ ವಿವಾದ: ಕರ್ನಾಟಕಕ್ಕೆ ಬಿಗ್ ಶಾಕ್, ತಮಿಳುನಾಡಿಗೆ ನೀರು ಹರಿಸುವ CWMA ಸೂಚನೆ ಪಾಲಿಸಲು ಸುಪ್ರೀಂ ಆದೇಶ

ಎರಡೂ ರಾಜ್ಯಗಳ ವಾದಗಳನ್ನು ಆಲಿಸಿದ ನ್ಯಾಯಪೀಠ, ಪ್ರಸ್ತುತ ಲಭ್ಯವಿರುವ ಮಾಹಿತಿಯ ಬದಲು ನವೀಕೃತ ಅಂಕಿ-ಅಂಶಗಳೊಂದಿಗೆ ಮುಂದಿನ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ. CWMA ಸಭೆಯ ಬಳಿಕದ ಬೆಳವಣಿಗೆಗಳನ್ನು ಪರಿಗಣಿಸಲು ಅವಕಾಶ ನೀಡಿದ ನ್ಯಾಯಾಲಯ, ಪ್ರಕರಣದ ವಿಚಾರಣೆಯನ್ನು ಆಗಸ್ಟ್ 31, ಸೋಮವಾರಕ್ಕೆ ಮುಂದೂಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 12:16 pm, Mon, 24 August 26

Loading...
Unable to load recommendations.
Follow Us