ಚಾಮರಾಜನಗರ: ಮಹರಾಷ್ಟ್ರದ 8 ಮಕ್ಕಳು ವಿಷದ ಹಣ್ಣು ತಿಂದು ಅಸ್ವಸ್ಥ, ಮುಂದುವರಿದ ಚಿಕಿತ್ಸೆ
ಕಬ್ಬು ಕಟಾವು ಮಾಡುವುದಕ್ಕೆಂದು ಮಹಾರಾಷ್ಟ್ರದಿಂದ ಬಂದು ಚಾಮರಾಜನಗರ ಜಿಲ್ಲೆಯ ಯಳಂದೂರು ತಾಲೂಕಿನ ಯರಿಯೂರಿನಲ್ಲಿ ಬಂದು ನೆಲೆ ನಿಂತ ಕುಟುಂಬಗಳೀಗ ಸಂಕಷ್ಟಕ್ಕೆ ಸಿಲುಕಿವೆ. ಅವರ ಮಕ್ಕಳು ಹಾಗೂ ಒಬ್ಬ ಮಹಿಳೆ ಅಸ್ವಸ್ಥರಾಗಿ ಆಸ್ಪತ್ರೆ ಸೇರಿದ್ದಾರೆ. ಅಷ್ಟಕ್ಕೂ, ಇದಕ್ಕೆಲ್ಲ ಕಾರಣವಾಗಿದ್ದು ಅವರೆಲ್ಲ ಒಂದು ಹಣ್ಣನ್ನು ತಿಂದಿರುವುದು! ವಿವರಗಳಿಗೆ ಮುಂದೆ ಓದಿ.

ಚಾಮರಾಜನಗರ, ಆಗಸ್ಟ್ 4: ಅವರೆಲ್ಲಾ ಕಬ್ಬು ಕಟಾವು ಮಾಡುವುದಕ್ಕಾಗಿ ದೂರದ ಮಹರಾಷ್ಟ್ರದಿಂದ (Maharashtra) ಬಂದವರು. ಹೀಗೆ ಬಂದವರು ಕುಟುಂಬ ಸಮೇತ ಚಾಮರಾಜನಗರದಲ್ಲಿ (Chamarajanagar) ನೆಲೆ ನಿಂತಿದ್ದರು. ಆದರೆ ಅವರ ಮಕ್ಕಳು ತಿಂದ ಹಣ್ಣು ಈಗ ಜೀವಕ್ಕೇ ಕುತ್ತು ತಂದಿದೆ. ಕಬ್ಬು ಕಟಾವು ಮಾಡುವುದಕ್ಕಾಗಿ ಮಹರಾಷ್ಟ್ರದಿಂದ ಬರೋಬ್ಬರಿ 13 ಕುಟುಂಬಗಳು ಯಳಂದೂರು ತಾಲೂಕಿನ ಯರಿಯೂರಿಗೆ ಬಂದು ನೆಲೆಸಿದೆ. ಹೀಗೆ ಬಂದವರ ಮಕ್ಕಳು ಭಾನುವಾರ ವಿಷದ ಹಣ್ಣು ತಿಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಪಿಚಣ್ಣು ಎಂಬ ಕಾಡಿನ ಹಣ್ಣನ್ನು ತಿಂದ ಪರಿಣಾಮ ಓರ್ವ ಮಹಿಳೆ ಹಾಗೂ 8 ಮಕ್ಕಳಿಗೆ ಇದ್ದಕ್ಕಿದ್ದಂತೆ ವಾಂತಿ ಶುರುವಾಗಿದೆ. ತಕ್ಷಣವೇ 108 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಲಾಗಿದೆ. ಅಸ್ವಸ್ಥಗೊಂಡ ಎಲ್ಲರನ್ನೂ ತಕ್ಷಣವೇ ಚಾಮರಾಜನಗರದ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸದ್ಯ ಗ್ಲೂಕೋಸ್ ಹಾಗೂ ಆಕ್ಸಿಜನ್ ನೀಡಿ ಮಕ್ಕಳು ಹಾಗೂ ಮಹಿಳೆಗೆ ಚಿಕಿತ್ಸೆ ಮುಂದುವರೆದಿದೆ. ಎಲ್ಲ ರೋಗಿಗಳು ಚೇತರಿಸಿಕೊಂಡಿದ್ದಾರೆ. ಆದರೆ ಮೂವರ ಸ್ಥಿತಿ ಗಂಭೀರವಾಗಿದೆ. ಇವರಿಗೆ ಐಸಿಯುವಿನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಇದನ್ನೂ ಓದಿ: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆಗೆ ಶಾಲೆಯ ಕುಡಿಯುವ ನೀರಿನ ಟ್ಯಾಂಕಿಗೆ ವಿಷ: ಬಿಜೆಪಿ ನಾಯಕರಿಗ ಸಿಎಂ ತರಾಟೆ
ಒಟ್ಟಾರೆ, ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದ್ದು 24 ಗಂಟೆ ನಿಗಾ ವಹಿಸಲಾಗುತ್ತಿದೆ. ಅಸ್ವಸ್ಥರು ಆದಷ್ಟು ಬೇಗ ಚೇತರಿಸಿಕೊಳ್ಳುವ ವಿಶ್ವಾಸವನ್ನು ವೈದ್ಯರು ವ್ಯಕ್ತಪಡಿಸಿದ್ದಾರೆ.







