ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!

ದೇವರಿಗೆ ಪೂಜೆ ಸಲ್ಲಿಸಲು ತೆಂಗಿನ ಕಾಯಿಯನ್ನು ಕಲ್ಲಿನಿಂದಲೋ, ಮಚ್ಚಿನಿಂದಲೋ ಒಡೆಯುವುದು ಸಾಮಾನ್ಯ. ಆದರೆ ಚಾಮರಾಜನಗರದ ಕಮರವಾಡಿಯಲ್ಲಿ ಮುದುಕಮಾರಮ್ಮ ಹಬ್ಬದಲ್ಲಿ ತೆಂಗಿನ ಕಾಯಿಗಳನ್ನು ಹರಕೆ ಹೊತ್ತ ಭಕ್ತರ ತಲೆಗೆ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ದತಿ ಇದೆ. ತೆಂಗಿನ ಕಾಯಿಗಳನ್ನು ತಲೆ ಮೇಲೆ ಒಡೆದರೂ ಅವರ ತಲೆಗೆ ನೋವಾಗಲಿ ಒಂದು ಹನಿ ರಕ್ತವಾಗಲಿ ಬರುವುದಿಲ್ಲ! ವಿಡಿಯೋ ಸಹಿತ ಮಾಹಿತಿ ಇಲ್ಲಿದೆ.

ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಾರೆ, ಆದ್ರೂ ಗಾಯವಾಗಲ್ಲ ರಕ್ತ ಬರಲ್ಲ!
ಭಕ್ತರ ತಲೆ ಮೇಲೆಯೇ ತೆಂಗಿನ ಕಾಯಿ ಒಡೆಯುತ್ತಿರುವುದು
Image Credit source: tv9
Edited By:

Updated on: Mar 06, 2026 | 7:58 AM

ಚಾಮರಾಜನಗರ, ಮಾರ್ಚ್ 6: ದೇವರಿಗೆ ಪೂಜೆ ಸಲ್ಲಿಸುವ ವೇಳೆ ತೆಂಗಿನಕಾಯಿ ಒಡೆಯುವುದು ಸಾಮಾನ್ಯ ಸಂಪ್ರದಾಯ. ಆದರೆ ಚಾಮರಾಜನಗರ (Chamarajanagar) ಜಿಲ್ಲೆಯ ಒಂದು ಗ್ರಾಮದಲ್ಲಿ ನಡೆಯುವ ಹಬ್ಬದಲ್ಲಿ ಭಕ್ತರ ತಲೆಯ ಮೇಲೆಯೇ ತೆಂಗಿನಕಾಯಿ ಒಡೆದು ಪೂಜೆ ಸಲ್ಲಿಸುವ ವಿಶಿಷ್ಟ ಪದ್ಧತಿ ಇಂದಿಗೂ ಆಚರಣೆಯಲ್ಲಿದೆ. ಈ ಅಪರೂಪದ ಆಚರಣೆ ಗಡಿ ನಾಡು ಚಾಮರಾಜನಗರ ಜಿಲ್ಲೆಯ ಕಮರವಾಡಿ ಗ್ರಾಮದಲ್ಲಿ ನಡೆಯುವ ಗ್ರಾಮದೇವತೆ ಮೂಗುಮಾರಮ್ಮ ಜಾತ್ರೆಯ ವಿಶೇಷವಾಗಿದೆ.

ಚಾಮರಾಜನಗರ ತಾಲೂಕಿನ ಕಮರವಾಡಿ ಗ್ರಾಮದಲ್ಲಿ ಪ್ರತಿ ವರ್ಷ ಮೂಗುಮಾರಮ್ಮ ದೇವಿಯ ಜಾತ್ರೆ ಮೂರು ದಿನಗಳ ಕಾಲ ಭಕ್ತಿಭಾವದಿಂದ ಆಚರಿಸಲಾಗುತ್ತದೆ. ಈ ಜಾತ್ರೆಯ ಪ್ರಮುಖ ಆಕರ್ಷಣೆ ಎಂದರೆ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದು ದೇವಿಗೆ ಪೂಜೆ ಸಲ್ಲಿಸುವುದು. ಜಾತ್ರೆಯ ಮೊದಲ ದಿನ ದೇವಿಯ ಮೆರವಣಿಗೆ ನಡೆಯುವ ವೇಳೆ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಮೂಲಕ ವಿಶೇಷ ಪೂಜೆ ನೆರವೇರಿಸಲಾಗುತ್ತದೆ.

ತಲೆಯ ಮೇಲೆ ತೆಂಗಿನ ಕಾಯಿ ಒಡೆಯುವ ವಿಡಿಯೋ


ಜಾತ್ರೆಯ ಎರಡನೇ ದಿನ ದೇವಿಗೆ ವಿವಿಧ ವಿಶೇಷ ಪೂಜೆಗಳು ಮತ್ತು ಧಾರ್ಮಿಕ ವಿಧಿವಿಧಾನಗಳು ನಡೆಯುತ್ತವೆ. ಮೂರನೇ ದಿನ ಗ್ರಾಮಸ್ಥರು ಮನೆ ಮನೆಗೆ ತೆರಳಿ ಅಕ್ಕಿ, ಬೆಲ್ಲ ಸೇರಿದಂತೆ ಪಡಿತರ ಸಂಗ್ರಹಿಸುವ ಸಂಪ್ರದಾಯ ಇದೆ. ಈ ಸಂದರ್ಭದಲ್ಲಿ ಹರಕೆ ಹೊತ್ತ ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆಯುವ ಪದ್ಧತಿ ಕೂಡ ನಡೆಯುತ್ತದೆ. ಗ್ರಾಮದ ಪ್ರತಿಯೊಂದು ಮನೆಯ ಮುಂದೆಯೇ ಈ ಪೂಜೆ ನೆರವೇರಿಸಲಾಗುತ್ತದೆ.

ಗಾಯವಾಗಲ್ಲ, ರಕ್ತ ಬರಲ್ಲ!

ಆಶ್ಚರ್ಯಕರ ಸಂಗತಿ ಏನೆಂದರೆ, ಭಕ್ತರ ತಲೆಯ ಮೇಲೆ ತೆಂಗಿನಕಾಯಿ ಒಡೆದರೂ ಅವರಿಗೆ ಯಾವುದೇ ರೀತಿಯ ಗಾಯವಾಗುವುದಿಲ್ಲ, ರಕ್ತವೂ ಹರಿಯುವುದಿಲ್ಲ ಎಂದು ಗ್ರಾಮಸ್ಥರು ಹೇಳುತ್ತಾರೆ. ಇದು ಗ್ರಾಮದೇವತೆ ಮೂಗುಮಾರಮ್ಮನ ಪವಾಡ ಎಂದು ಭಕ್ತರು ನಂಬಿಕೆ ವ್ಯಕ್ತಪಡಿಸುತ್ತಾರೆ. ತಲೆಯ ಮೇಲೆ ಹೊಡೆಯುವ ತೆಂಗಿನಕಾಯಿ ಒಂದೇ ಹೊಡೆತದಲ್ಲಿ ಎರಡು ಭಾಗಗಳಾಗಿ ಒಡೆಯುವುದು ಈ ಆಚರಣೆಯ ವಿಶೇಷವಾಗಿದೆ.

ಇದನ್ನೂ ಓದಿ: ಓಡಿಬಂದು ಮುಳ್ಳಿನ ಪೊದೆಗೆ ಹಾರ್ತಾರೆ, ಆದ್ರೂ ಏನಾಗಲ್ಲ! ಚಾಮರಾಜನಗರ ಗೂಳಿಪುರದಲ್ಲಿ ವಿಶೇಷ ಹಬ್ಬ, ವಿಡಿಯೋ ಇಲ್ಲಿದೆ ನೋಡಿ

ತಲೆತಲಾಂತರಗಳಿಂದ ನಡೆದುಬರುತ್ತಿರುವ ಈ ಅಪರೂಪದ ಸಂಪ್ರದಾಯವನ್ನು ಇಂದಿಗೂ ಗ್ರಾಮಸ್ಥರು ಭಕ್ತಿಭಾವದಿಂದ ಮುಂದುವರಿಸಿಕೊಂಡು ಬರುತ್ತಿದ್ದಾರೆ. ಈ ವಿಶಿಷ್ಟ ಆಚರಣೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿಯೂ ವೈರಲ್ ಆಗಿದ್ದು, ಜನರ ಗಮನ ಸೆಳೆಯುತ್ತಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Suraj Prasad SN

ಸೂರಜ್ ಪ್ರಸಾದ್ ಎಸ್.ಎನ್ ಆದ ನಾನು ಹುಟ್ಟಿದ್ದು ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯಲ್ಲಿ. ಬೆಳೆದಿದ್ದು ದಾವಣಗರೆ ಜಿಲ್ಲೆ ನ್ಯಾಮತಿ ತಾಲೂಕಿನಲ್ಲಿ. ಶಿವಮೊಗ್ಗದ ಸಹ್ಯಾದ್ರಿ ಕಾಲೇಜ್ ನಲ್ಲಿ ಪತ್ರಿಕೋದ್ಯಮದಲ್ಲಿ ಪದವಿಪೂರ್ವ ಶಿಕ್ಷಣ ಪಡೆದಿದ್ದು 2014ರಿಂದ ನನ್ನ ಎಲೆಕ್ಟ್ರಾನಿಕ್ ಮಾದ್ಯಮದ ವೃತ್ತಿ ಜೀವನವನ್ನ ಬೆಂಗಳೂರಿನಲ್ಲಿ ಕ್ರೈಂ ಬೀಟ್ ವರದಿಗಾರನಾಗಿ ಆರಂಭಿಸಿದ್ದು ಬೆಂಗಳೂರಿನಲ್ಲಿ 8 ವರ್ಷಗಳ ಕ್ರೈಂ ವರದಿಗಾರನಾಗಿ ಸೇವೆ ಸಲ್ಲಿಸಿ. ನಾಲ್ಕು ಸಂಸ್ಥೆಯಲ್ಲಿ ಕ್ರೈಂ ರಿಪೋರ್ಟರ್ ಹಾಗೂ ಕ್ರೈಂ ಇನ್ವೆಸ್ಟಿಗೇಟಿವ್ ವರದಿಗಾರನಾಗಿ ಹಾಗೂ ಸ್ಟಿಂಗ್ ಅಪರೇಷನ್ ಗಳನ್ನ ಮಾಡಿದ್ದೇನೆ. ಗೌರಿ ಲಂಕೇಶ್ ಕೊಲೆ ಕೇಸನ್ನ ರಾಜ್ಯದಲ್ಲೇ ಮೊದಲು ಬ್ರೇಕ್ ಮಾಡಿ ಈ ಹಿಂದಿನ ಸಂಸ್ಥೆಯಿಂದ ಪ್ರಶಂಸೆ ಪಡೆದಿರುತ್ನೇನೆ2019 ರಲ್ಲಿ ಪಿಎಸ್ಐ ಅಕ್ರಮದ ಸ್ಟಿಂಗ್ ಆಪರೇಷನ್ ಹಾಗೂ ಬೆಂಗಳೂರು ಸಿಂಥಟಿಕ್ ಡ್ರಗ್ ಮಾಫಿಯಾದ ಸ್ಟಿಂಗ್ ಆಪರೇಷನ್ ಮಾಡಿದ್ದು. ಕಳೆದ 10 ವರ್ಷಗಳಿಂದ ಸಕ್ರೀಯವಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೆ ಮಂಡ್ಯ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡಿ ಬಳಿಕ ಚಾಮರಾಜನಗರಕ್ಕೆ ವರ್ಗಾವಣೆಯಾಗಿ ಈಗ ಪ್ರಸ್ಥುತ ಚಾಮರಾಜನಗರ ಜಿಲ್ಲಾ ವರದಿಗಾರನಾಗಿ ಕೆಲಸ ಮಾಡುತ್ತಿದ್ದೇನೆ. ಹವ್ಯಾಸ ಅಡಿಗೆ ಮಾಡುವುದು, ಕ್ರಿಕೆಟ್ ಆಡುವುದು ಕ್ರೈಂ ಇನ್ವೆಷ್ಟಿಗೇಷನ್ ನಾವೆಲ್ ಗಳನ್ನ ಓದುವುದು.

Read More
Follow Us