AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ, ಅವಕಾಶ ಕೊಟ್ರೆ ನಾವೇ ನಿರ್ವಹಣೆ ಮಾಡ್ತೇವೆ‌: ಪ್ರಮೋದಾದೇವಿ

ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ರಚನೆ ವಿಚಾರ ಸದ್ಯ ಸರ್ಕಾರ ಮತ್ತು ರಾಜಮನೆತನ ಮಧ್ಯೆ ಜಟಾಪಟಿಗೆ ಕಾರಣವಾಗಿದೆ. ಹೀಗಾಗಿ ಇಂದು ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ಮಾಡಿದ ರಾಜಮಾತೆ ಪ್ರಮೋದಾದೇವಿ ಒಡೆಯರ್​ ಸರ್ಕಾರದ ನಡೆ ವಿರುದ್ಧ ಸಿಡಿದೆದ್ದಿದ್ದಾರೆ. ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ. ಅವಕಾಶ ಕೊಟ್ಟರೆ ನಾವೇ ನಿರ್ವಹಣೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ, ಅವಕಾಶ ಕೊಟ್ರೆ ನಾವೇ ನಿರ್ವಹಣೆ ಮಾಡ್ತೇವೆ‌: ಪ್ರಮೋದಾದೇವಿ
ಚಾಮುಂಡೇಶ್ವರಿ ದೇವಸ್ಥಾನ ನಮ್ಮ‌ ಆಸ್ತಿ, ಅವಕಾಶ ಕೊಟ್ರೆ ನಾವೇ ನಿರ್ವಹಣೆ ಮಾಡ್ತೇವೆ‌: ಪ್ರಮೋದಾದೇವಿ
Follow us
ರಾಮ್​, ಮೈಸೂರು
| Updated By: ಗಂಗಾಧರ​ ಬ. ಸಾಬೋಜಿ

Updated on:Aug 12, 2024 | 5:57 PM

ಮೈಸೂರು, ಆಗಸ್ಟ್​ 12: ಚಾಮುಂಡಿ ಬೆಟ್ಟ (Chamundi Hill) ಪ್ರಾಧಿಕಾರ ರಚನೆಗೆ ರಾಜಮನೆತನ ಆಕ್ಷೇಪ ವ್ಯಕ್ತಪಡಿಸಿದೆ. ಹೀಗಾಗಿ ರಾಜವಂಶಸ್ಥರು ಕೋರ್ಟ್ ಮೆಟ್ಟಿಲೇರಿದ್ದು, ಪ್ರಾಧಿಕಾರ ರಚನೆಗೆ ತಡೆಯಾಜ್ಞೆ ತಂದಿದ್ದಾರೆ. ಈ ಬಗ್ಗೆ ಇಂದು ಮೈಸೂರು ಅರಮನೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ (Pramoda Devi Wadiyar), ಚಾಮುಂಡೇಶ್ವರಿ ದೇವಸ್ಥಾನ ನಮ್ಮ ಖಾಸಗಿ ಆಸ್ತಿಯ ಪಟ್ಟಿಯಲ್ಲಿದೆ. ಅದರ ಪ್ರಾಧಿಕಾರ ಮಾಡುವುದು ಕಾನೂನುಬದ್ಧವಲ್ಲ. ದೇಗುಲದ ನಿರ್ವಹಣೆ ನಮಗೆ ನೀಡಿದರೆ ನಾವು ಮಾಡಲು ಸಿದ್ಧ ಎಂದು ಹೇಳಿದ್ದಾರೆ.

ಪ್ರಾಧಿಕಾರಕ್ಕೆ ವಿರೋಧವಿದೆ, ಅದಕ್ಕೆ ಕೋರ್ಟ್‌ ಮೊರೆ ಹೋಗಲಾಗಿದೆ. ಪ್ರಾಧಿಕಾರದ ಹೆಸರಲ್ಲಿ ಸರ್ಕಾರ ರೂಲಿಂಗ್ ಮಾಡಲು ಆಗುವುದಿಲ್ಲ. ದೇವಸ್ಥಾನದಲ್ಲಿ ಸಮಸ್ಯೆ ಆದಾಗ ಮಾತ್ರ ಸರ್ಕಾರ ಮಧ್ಯಪ್ರವೇಶಿಸಬಹುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಆಸ್ತಿಗೆ ಕೈಹಾಕಿ ಮೂರೇ ತಿಂಗಳಲ್ಲಿ ಸಿಎಂಗೆ ಮುಡಾ ಉರುಳು! ಸರ್ಕಾರದ ನಡೆಗೆ ಹೈಕೋರ್ಟ್ ತಾತ್ಕಾಲಿಕ ಬ್ರೇಕ್

ಖಾಸಗಿ ಪ್ರಾಪರ್ಟಿ ಯಾವುದು ಅಂತಾ ರಾಜ್ಯ ಸರ್ಕಾರಕ್ಕೆ ಗೊತ್ತಿದೆ. 2001ರ ಕೇಸ್ ಪೆಂಡಿಗ್ ಇದೆ, ಇದಕ್ಕೂ ಮೊದಲೇ ಪ್ರಾಧಿಕಾರ ರಚನೆ ಏಕೆ? 2001ರ ಕೇಸ್ ಕ್ಲಿಯರ್ ಆಗಲಿ. 1974ರಲ್ಲಿ ನಿರ್ವಹಣೆ ಮಾಡಲು ಕಷ್ಟ ಅಂತಾ ಪತ್ರ ಬರೆದಿದ್ದು ನಿಜ. ಅಂದು ಬೇರೆ ಬೇರೆ ಕಾರಣ ಇತ್ತು. ಆ ರೀತಿ ಮ್ಯಾನೇಜ್ ಮಾಡಿ ಅಂತಾ ಕೊಟ್ಟಾಗ ನಿರ್ವಹಣೆ ಮಾಡಲಿ. ಆದರೆ ನೀವೇ ಸ್ವಂತ ಮಾಡಿಕೊಳ್ಳಿ ಅಂತಾ ನಾವು ಕೊಟ್ಟಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ಪ್ರಾಧಿಕಾರ ಮಾಡಿರುವುದು ಸರಿಯಿಲ್ಲ

2001ರ ಕೇಸ್‌ನ ತೀರ್ಪು ನಮ್ಮ ಪರ ಬಂದರೆ ನಾವೇ ನಿರ್ವಹಿಸುತ್ತೇವೆ. ಪೂರ್ವಜರ ಹಾದಿಯಲ್ಲೇ ಸಾಗುತ್ತಿದ್ದೇವೆ, ಬೇರೆ ಮಾರ್ಗದಲ್ಲಿ ಹೋಗಲ್ಲ. ಚಾಮುಂಡಿಬೆಟ್ಟ ಉಳಿಸಿಕೊಳ್ಳಲು ಹೊರಟಿದ್ದೇವೆ, ಬೆಟ್ಟ ಬೆಟ್ಟದ ರೀತಿ ಇರಲಿ. ವಯನಾಡು, ಕೊಡಗು ರೀತಿ ಆಗದೆ ಇರಲಿ ಎನ್ನುವುದು ನಮ್ಮ ಉದ್ದೇಶ. 1950ರಲ್ಲಿ ಖಾಸಗಿ ಪ್ರಾಪರ್ಟಿ ಲಿಸ್ಟ್ ಮಾಡಿದ್ದರು, ಖರಾಬು ಇರಲಿ ಏನೇ ಇರಲಿ, ಆವಾಗ ಲಿಸ್ಟ್‌ನಲ್ಲಿ ಕೊಟ್ಟಿದ್ದು ಬಿಟ್ಟು ಬೇರೇನೂ ನಾವು ಇಟ್ಟುಕೊಂಡಿಲ್ಲ. ಬೇರೆ ಏನನ್ನೂ ಕೇಳುತಿಲ್ಲ, ಅನೇಕ ಕಾರ್ಖಾನೆಗಳನ್ನು ಬಿಟ್ಟುಕೊಟ್ಟಿದ್ದೇವೆ. ಅದನ್ನು ಕೇಳಿದ್ದೇವಾ? ಸರ್ಕಾರ ಬದಲಾದಾಗ ಪರಿಸ್ಥಿತಿ ಸಹ ಬದಲಾಗುತ್ತಿದೆ. ಪ್ರಾಧಿಕಾರ ಮಾಡಿರುವುದು ಸರಿಯಿಲ್ಲ, ಸರ್ಕಾರದ ಈ ನಡೆ ಸರಿಯಿಲ್ಲ ಎಂದಿದ್ದಾರೆ.

ಇದನ್ನೂ ಓದಿ: ಚಾಮುಂಡಿ ಪ್ರಾಧಿಕಾರ ಜಟಾಪಟಿ: ಪ್ರಮೋದದೇವಿ ಒಡೆಯರ್ ಸುದ್ದಿಗೋಷ್ಠಿ 

ಸಂಸ್ಥಾನದ ಖಾಸಗಿ ಆಸ್ತಿಗಳ ಪಟ್ಟಿಯಲ್ಲಿ ಬೆಟ್ಟದ ಅರಮನೆ, ನಂದಿ, ಚಾಮುಂಡೇಶ್ವರಿ ಹಾಗೂ ಮಹಾಬಲೇಶ್ವರ ದೇವಸ್ಥಾನ, ದೇವಿಕೆರೆ ಸುತ್ತಮುತ್ತಲ‌ ಪ್ರದೇಶ ಸೇರಿದೆ. ಕೋರ್ಟ್ ಕೇವಲ ಸ್ಟೇಟಸ್ ಕೊಟ್ಟಿಲ್ಲ. ಪ್ರಾಧಿಕಾರವೇ ಜಾರಿಯಲ್ಲಿ ಇರುವುದಿಲ್ಲ. 1950ರಲ್ಲೇ ನಮ್ಮ ಸಂಸ್ಥಾನದಿಂದ ಖಾಸಗಿ ಆಸ್ತಿಗಳ ಪಟ್ಟಿ ಕೊಟ್ಟಿರುವುದು. ಕೇಂದ್ರ ಸರ್ಕಾರ 1972ರಲ್ಲಿ ಮಾಡಿರುವ ಆದೇಶದ ಪ್ರಕಾರ ಅವುಗಳನ್ನು ನಾವು ಅನುಭವಿಸಬಹುದು ಎಂದು ಹೇಳಿದ್ದಾರೆ.

ನಾನು ರಾಜಕೀಯದಿಂದ ದೂರ

ನಮ್ಮ ಖಾಸಗಿ ಆಸ್ತಿಗಳ ರಕ್ಷಣೆಗಾಗಿ ಯಾವುದೇ ಕಾರಣಕ್ಕೂ ರಾಜಕೀಯ ಪ್ರಭಾವ ಬೀರುವುದಿಲ್ಲ. ನನ್ನ ಪತಿ ನಾಲ್ಕು ಬಾರಿ ಸಂಸದರಾಗಿದ್ದರು. ಆಗಲೂ ಅವರು ರಾಜಕೀಯವಾಗಿ ಪ್ರಭಾವ ಬೀರಲಿಲ್ಲ. ಯಾವುದೇ ಅಧಿಕಾರಿಗಳ ಬಳಿ ನಮ್ಮ ಆಸ್ತಿ ರಕ್ಷಣೆಗಾಗಿ ಪ್ರಭಾವ ಬೀರಲಿಲ್ಲ. ಈಗ ನನ್ನ ಮಗ ಸಂಸದನಾಗಿದ್ದಾರೆ. ಅವರ ಮೂಲಕವೂ ನಾನು ಪ್ರಭಾವ ಬೀರುವುದಿಲ್ಲ. ನಾನು ರಾಜಕೀಯದಿಂದ ದೂರ ಇದ್ದೇನೆ. ಕಾನೂನಾತ್ಮಕ ಹೋರಾಟವನ್ನು ಮುಂದುವರಿಸುತ್ತೇ‌‌ನೆ ಎಂದು ತಿಳಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:55 pm, Mon, 12 August 24