
ಚಿಕ್ಕಬಳ್ಳಾಪುರ, (ಮೇ 24): ಸೋದರ ಮಾವನ ಮಗಳ ಜೊತೆ ಮದುವೆಗೆ ನಿರಾಕರಿಸಿದ ಹಿನ್ನೆಲೆಯಲ್ಲಿ ಸಂಬಂಧಿ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಚಿಕ್ಕಬಳ್ಳಾಪುರ (Chikkaballapura) ತಾಲೂಕಿನ ಅಜ್ಜವಾರ ಗ್ರಾಮದಲ್ಲಿ ನಡೆದಿದೆ. ಮಂಜುನಾಥ್(27) ಆತ್ಮಹತ್ಯೆ ಮಾಡಿಕೊಂಡ ಯುವಕ. ಮಂಜುನಾಥ್, ಅಪ್ರಾಪ್ತೆಯಾಗಿದ್ದ ಸೋದರ ಮಾವನ ಮಗಳನ್ನು ಪ್ರೀತಿಸುತ್ತಿದ್ದ. ಅಷ್ಟೇ ಅಲ್ಲ ಆಕೆಯನ್ನು ಮದುವೆಯಾಗಬೇಕೆಂದು ಕನಸು ಕಂಡಿದ್ದ. ಆದ್ರೆ, ಇದಕ್ಕೆ ಹುಡುಗಿ ತಂದೆ(ಮಂಜುನಾಥ್ನ ಮಾವ) ವಿರೋಧ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮನನೊಂದು ಮಂಜುನಾಥ್ ಮನೆಯಲ್ಲೇ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.
ಅಜ್ಜವಾರ ಗ್ರಾಮದ 27 ವರ್ಷದ ಮಂಜುನಾಥ್ ನೇಣಿಗೆ ಶರಣಾದ ದುರ್ದೈವಿ. ಅಂದಹಾಗೆ ಮಂಜುನಾಥ್ ಶಿಡ್ಲಘಟ್ಟ ತಾಲೂಕಿನ ಸೋದರ ಮಾವನ ಅಪ್ರಾಪ್ತ ಮಗಳನ್ನ ಕೆಲ ವರ್ಷಗಳಿಂದ ಪ್ರೀತಿಸುತ್ತಿದ್ದ. ನಿನ್ನೆ ಬಾಲಕಿಯ ಹುಟ್ಟು ಹಬ್ಬದ ಇದ್ದಿದ್ದರಿಂದ ಮಂಜುನಾಥ್ ಆಕೆಯ ಮನೆಗೆ ಹೋಗಿ ವಿಶ್ ಮಾಡಿದ್ದ. ಆದ್ರೆ, ಆ ವೇಳೇ ಅದೇನಾಯ್ತೋ ಏನೋ ಮಂಜುನಾಥ್ ಅಲ್ಲಿಂದ ವಾಪಸ್ ಮನೆಗೆ ಬಂದವನೇ ನೇಣುಬಿಗುದಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮಂಜುನಾಥ್ ಮೂರು ತಿಂಗಳು ಇದ್ದಾಗಲೇ ತಾಯಿ ನಾರಾಯಣಮ್ಮ ಮೃತಪಟ್ಟಿದ್ದರು. ಇದರಿಂದ ನಾರಾಯಣ ತವರು ಮನೆಯವರು, ಅಜ್ಜವಾರದ ಜಯಮ್ಮ ಎನ್ನುವವರು ಮಂಜುನಾಥ್ನನ್ನು ಸಾಕಿದ್ದರು. ಇನ್ನೂ ಮಂಜುನಾಥ್, ಮೇ 20 ರಂದು ಭರ್ಜರಿಯಾಗಿ ತನ್ನ ಬರ್ತ್ಡೇ ಮಾಡಿಕೊಂಡಿದ್ದ. ಇದಾಗಿ ನಾಲ್ಕು ದಿನದಲ್ಲೇ ದುರಂತ ಸಾವು ಕಂಡಿದ್ದಾನೆ.
ಮಂಜುನಾಥ್ ಸೋದರ ಮಾವ ಶಿಡ್ಲಘಟ್ಟದಲ್ಲಿ ಇದ್ದು, ಆತನ ಅಪ್ರಾಪ್ತ ಮಗಳನ್ನು ಮಂಜುನಾಥ್ ಪ್ರೀತಿಸುತ್ತಿದ್ದ. ಆದ್ರೆ, ಮಾವ ತೀವ್ರ ವಿರೋಧ ವ್ಯಕ್ತಪಡಿಸಿದ್ದರಿಂದ ಮಂಜುನಾಥ್ ಸಾವಿನ ಹಾದಿ ಹಿಡಿದ್ದಾನೆ ಎಂದು ತಿಳಿದುಬಂದಿದೆ. ಮಾವನ ಮಗಳಿಗೆ ಇನ್ನೂ ಮದುವೆ ವಯಸ್ಸು ಆಗಿಲ್ಲ. ಮತ್ತೊಂದೆಡೆ ಮಂಜುನಾಥ್ ಗೆ ಮದುವೆ ಮಾಡುವ ವಯಸ್ಸು. ಹೀಗಾಗಿ ಬೇರೆ ಹುಡುಗಿಯನ್ನು ನೋಡಿ ಮದುವೆ ಮಾಡುತ್ತೇವೆಂದು ಮಾವನ ಮನೆ ಕಡೆಯವರು ಹೇಳಿದ್ದರಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಶಂಕಿಸಲಾಗಿದೆ. ಈ ಸಂಬಂಧ ಚಿಕ್ಕಬಳ್ಳಾಪುರ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.