
ಚಿಕ್ಕಬಳ್ಳಾಪುರ, (ಆಗಸ್ಟ್ 07): ಬಿಜೆಪಿ ಸಂಸದ ಡಾ. ಕೆ ಸುಧಾಕರ್ (Dr K Sudhakar) ಅವರ ಹೆಸರು ಬರೆದಿಟ್ಟು ಗುತ್ತಿಗೆ ನೌಕರ ಆತ್ಮಹತ್ಯೆಗೆ (Suicide) ಶರಣಾಗಿದ್ದಾನೆ. ಜಿಲ್ಲಾ ಪಂಚಾಯತಿ ಮುಖ್ಯ ಲೆಕ್ಕಾಧಿಕಾರಿಯ ಗುತ್ತಿಗೆ ನೌಕರ ಕಾರು ಚಾಲಕನಾಗಿದ್ದ ಬಾಬು, ಇಂದು (ಆಗಸ್ಟ್ 07) ಜಿಲ್ಲಾ ಪಂಚಾಯತಿ (Chikkaballapur Zilla Panchayat) ಸಭಾಂಗಣದ ಪಕ್ಕದ ಮರದಡಿಯಲ್ಲೇ ಸರ್ಕಾರಿ ಕಾರು ನಿಲ್ಲಿಸಿದ್ದಾನೆ. ಬಳಿಕ ಕಾರಿನ ಮೇಲೆ ಹತ್ತಿ ಹೊಂಗೆ ಮರಕ್ಕೆ ನೇಣಿಗೆ ಶರಣಾಗಿದ್ದಾನೆ. ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಚಿಕ್ಕಬಳ್ಳಾಪುರ ಎಸ್ಪಿ ಕುಶಾಲ್ ಚೌಕ್ಸಿ ಸೇರಿದಂತೆ ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಪೊಲೀಸರು ತನಿಖೆ ನಡೆಸಿದ್ದು, ಮೃತನ ಕಾರಿನಲ್ಲಿ 4 ಪುಟಗಳ ಡೆತ್ ನೋಟ್ ಸಿಕ್ಕಿದೆ. ಡೆತ್ ನೋಟ್ ನ ಮೊದಲ ಪುಟದಲ್ಲೇ, ಮೊದಲ ಸಾಲಿನಲ್ಲೇ ನನ್ನ ಸಾವಿಗೆ ಡಾ ಕೆ ಸುಧಾಕರ್ ಕಾರಣ ಹಾಗೂ ನಾಗೇಶ್ ಸೇರಿದಂತೆ ಜಿಲ್ಲಾ ಪಂಚಾಯತಿ ಲೆಕ್ಕ ಪರಿಶೋಧಕ ವಿಭಾಗದ ಎಸ್ ಡಿ ಎ ಮಂಜುನಾಥ್ ಹೆಸರನ್ನ ಉಲ್ಲೇಖಿಸಿದ್ದಾನೆ ಎಂದು ತಿಳಿದುಬಂದಿದೆ.
ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವಂತೆ, ಅಂದಿನ 2021ರಲ್ಲಿ ವೈದ್ಯಕೀಯ ಹಾಗೂ ಆರೋಗ್ಯ ಖಾತೆ ಮಂತ್ರಿ ಡಾ ಕೆ ಸುಧಾಕರ್ ಗೆ ಹೇಳಿ, ಸರ್ಕಾರಿ ಕೆಲಸ ಕೊಡಿಸುವುದಾಗಿ ನಾಗೇಶ್ 25 ಲಕ್ಷ ರೂ. ಹಣ ಪಡೆದು ಪಡೆದುಕೊಂಡಿದ್ದಾನಂತೆ. ಹಿಂಗಂತ ಡೆತ್ ನೋಟ್ ಬರೆದು ಡೆತ್ ನೋಟ್ ನ್ನ ಅದೇ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದ ಶಿಲ್ಪಾ ಎನ್ನುವ ಮಹಿಳೆಯೊಬ್ಬರಿಗೆ ವಾಟ್ಸಾಪ್ ಮೂಲಕ ಕಳುಹಿಸಿದ್ದನಂತೆ.. ಅದನ್ನು ಕಚೇರಿಯ ಶಿಲ್ಪಾ ಮೃತನ ಪತ್ನಿ ಶಿಲ್ಪಾಗೆ ಕಳುಹಿಸಿದ್ದಾಳೆ. ಆದ್ರೆ, ಇದನ್ನು ಯಾರು ಗಂಭೀರವಾಗಿ ತೆಗೆದುಕೊಂಡಿರಲಿಲ್ಲ. ಇದೀಗ ಬಾಬು ಆತ್ಮಹತ್ಯಗೆ ಶರಣಾಗಿದ್ದಾನೆ. ಘಟನೆ ಸಂಬಂಧ ತನಿಖೆಗಿಳಿದ ಪೊಲೀಸರು ಮೃತದೇಹವನ್ನ ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಯ ಶವಗಾರಕ್ಕೆ ರವಾನೆ ಮಾಡಿದ್ದು ಇತ್ತ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ನಾಗೇಶ್ ಗಾಗಿ ಹುಡುಕಾಟ ನಡೆಸಿದ್ದಾರೆ.
ಇನ್ನೂ ವಿಚಾರ ತಿಳಿದು ಸ್ಥಳಕ್ಕೆ ಆಗಮಿಸಿದ ಮೃತನ ಪತ್ನಿ ಶಿಲ್ಪ ಹಾಗೂ ಆತನ ಸಹೋದರ ಲೋಕೇಶ್ ಸೇರಿದಂತೆ ತಾಯಿ ಕಾಳಮ್ಮ ಆಕ್ರಂದನ ಮುಗಿಲುಮುಟ್ಟಿತ್ತು, ಬೆಳಿಗ್ಗೆ ಮಿಟಿಂಗ್ ಇದೆ ಬೇಗ ಹೋಗಬೇಕು ಎಂದು ಗಂಡ 5 ಗಂಟೆಗೆ ಮನೆಯಿಂದ ಬಂದಿದ್ದರು….ಆದ್ರೆ ಈಗ ಯಾಕೆ ಹೀಗೆ ಮಾಡಿಕೊಂಡರು ಗೊತ್ತಿಲ್ಲ ಅಂತ ಗೋಳಾಡಿದರು. ಇನ್ನೂ ತಾಯಿ ಮಗನನ್ನ ಕಳೆದುಕೊಂಡು ಹೊರಳಾಡಿ ಗೋಳಾಡಿದ್ರೆ ಅಣ್ಣ ಸರ್ಕಾರಿ ಕೆಲಸದ ಅಮಿಷ ಹಾಗೂ ಡೆತ್ ನೋಟ್ ಬಗ್ಗೆ ನಮಗೇನು ಸರಿಯಾಗಿ ತಿಳಿದಿಲ್ಲ ಎಂದಿದ್ದಾರೆ.
ಇನ್ನೂ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಬಿಜೆಪಿ ನಾಯಕರ ನಡುವೆ ಪ್ರತಿಭಟನೆ ಪರ ವಿರೋಧಧ ಚರ್ಚೆಗೆ ಕಾರಣವಾಗಿದೆ. ಚಿಕ್ಕಬಳ್ಳಾಪುರ ಗ್ರಾಮಾಂತರ ಠಾಣೆ ಬಳಿ ಬಿಜೆಪಿ ಹಾಗೂ ಕಾಂಗ್ರೇಸ್ ಮುಖಂಡರು ಜಮಾವಣೆ ಆಗಿದ್ದಾರೆ. ಸದ್ಯ ಪ್ರಕರಣದ ಕುರಿತು ವಾದ ವಿವಾದಗಳು ನಡೆಯುತ್ತಿದ್ದು, ಸದ್ಯ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾಂಗ್ರೆಸ್ ಮುಖಂಡರು ಚಿಕ್ಕಬಳ್ಳಾಪುರ ನಗರದ ಅಂಬೇಡ್ಕರ್ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಅಮಾಯಕನ ಸಾವಿಗೆ ಕಾರಣರಾಗಿರೋ ಸಂಸದ ಸುಧಾಕರ್ ಹಾಗೂ ಡೆತ್ ನೋಟ್ ನಲ್ಲಿ ಉಲ್ಲೇಖಿಸಿರುವ ನಾಗೇಶ್ ಹಾಗೂ ಮಂಜುನಾಥ್ ವಿರುದ್ದ ಎಫ್ ಐ ಆರ್ ದಾಖಲಿಸಿ ಕೂಡಲೇ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.