ಹೊರನಾಡು ಅನ್ನಪೂರ್ಣೇಶ್ವರಿ ಸನ್ನಿದಾನದಲ್ಲಿ ಬಿಎಸ್​ ಯಡಿಯೂರಪ್ಪ ಕುಟುಂಬದಿಂದ ಚಂಡಿಕಾ ಹೋಮ

ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಕುಟುಂಬ ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದೆ. ಶನಿವಾರ ಸಂಜೆಯೇ ಅನ್ನಪೂರ್ಣೇಶ್ವರಿ ದೇಗುಲಕ್ಕೆ ತೆರಳಿದ್ದ ಬಿಎಸ್​ ಯಡಿಯೂರಪ್ಪ ಕುಟುಂಬ ಇಂದು (ಮಾ.24) ಬೆಳಿಗ್ಗೆ ಸನ್ನಿಧಾನದಲ್ಲಿ ಚಂಡಿಕಾಯಾಗ ನಡೆಸಿತು.

ಚಿಕ್ಕಮಗಳೂರು, ಮಾರ್ಚ್​ 24: ಲೋಕಸಭೆ ಚುನಾವಣೆ (Lok Sabha Election) ಹೊತ್ತಲ್ಲಿ ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ (BS Yediyurappa) ಟೆಂಪಲ್​ ರನ್​ ಮಾಡಿದ್ದಾರೆ. ಬಿಎಸ್​ ಯಡಿಯೂರಪ್ಪ ಕುಟುಂಬ ತಾಲೂಕಿನ ಹೊರನಾಡು ಅನ್ನಪೂರ್ಣೇಶ್ವರಿ (Horanadu Annapurneswari) ದೇವಾಲಯಕ್ಕೆ ತೆರಳಿದೆ. ಶನಿವಾರ (ಮಾ.23) ಸಾಯಂಕಾಲವೇ ಭೇಟಿ ನೀಡಿದ್ದ ಕುಟುಂಬ ದೇಗುಲದಲ್ಲಿ ರಥೋತ್ಸವ ಸೇವೆ ಮಾಡಿ, ವಿಶೇಷ ಪೂಜೆ ಸಲ್ಲಿಸಿತ್ತು. ಈ ರಥೋತ್ಸವ ಸೇವೆಯಲ್ಲಿ ಬಿವೈ ವಿಜಯೇಂದ್ರ (BY Vijayendra) ಕುಟುಂಬ ಸಹ ಭಾಗಿಯಾಗಿತ್ತು. ಇಂದು (ಮಾ.24) ಬೆಳಿಗ್ಗೆ ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ಬಿಎಸ್ ಯಡಿಯೂರಪ್ಪ ಕುಟುಂಬ ಗಣಪತಿ ಪೂಜೆ ಮತ್ತು ಚಂಡಿಕಾ ಯಾಗ ನಡೆಸಿತು. ಏಳಕ್ಕೂ ಹೆಚ್ಚು ಋತ್ವಿಜರಿಂದ ನಡೆದ ಯಾಗದ ಪೂರ್ಣಾಹುತಿಯಲ್ಲಿ ಸಂಸದ ಬಿ.ವೈ ರಾಘವೇಂದ್ರ ಹೊರತುಪಡಿಸಿ ಕುಟುಂಬದ ಎಲ್ಲ ಸದಸ್ಯರು ಭಾಗಿಯಾಗಿದ್ದರು.

ಮೋದಿಗೆ ಮತ್ತಷ್ಟು ಶಕ್ತಿ ಬರಲಿ ಅಂತ ಚಂಡಿಕಾಯಾಗ: ವಿಜಯೇಂದ್ರ

ಹೊರನಾಡಿನಲ್ಲಿ ಯಾಗದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿಗೆ ಮತ್ತಷ್ಟು ಶಕ್ತಿ ಬರಲಿ, ಕರ್ನಾಟಕದಲ್ಲಿ ಹೆಚ್ಚು ಸ್ಥಾನ ಗೆದ್ದು ಅವರ ಕೈ ಬಲಪಡಿಸಲು ಅನ್ನಪೂರ್ಣೇಶ್ವರಿ ಸನ್ನಿಧಿಯಲ್ಲಿ ವಿಶೇಷ ಪೂಜೆ ಸಲ್ಲಿಸಿದ್ದೇವೆ ಎಂದು ಹೇಳಿದರು.

ಕೇಂದ್ರ ಸರ್ಕಾರದ ಬರ ಪರಿಹಾರಕ್ಕಾಗಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್​​ ಮೊರೆ ಹೋಗಿರುವ ವಿಚಾರವಾಗಿ ಮಾತನಾಡಿದ ಅವರು, ಇಂತ ಕೆಟ್ಟ ಪರಿಸ್ಥಿತಿ ರಾಜ್ಯದ ಮುಖ್ಯಮಂತ್ರಿಗೆ ಬರಬಾರದು. ಸರ್ಕಾರ ತನ್ನ ವೈಪಲ್ಯ ಮುಚ್ಚಿಕೊಳ್ಳಲು ಈ ರೀತಿ ನಡೆದುಕೊಳ್ಳುತ್ತಿದೆ. ಚುನಾವಣೆ ಘೋಷಣೆ ಬಳಿಕ ಮುಖ್ಯಮಂತ್ರಿಗಳು ಸುಪ್ರೀಂ ಕೋರ್ಟ್​​​ ಮೊರೆ ಹೋಗುವ ನಾಟಕವಾಡಿದ್ದಾರೆ. ಅವರಿಗೆ ಇದು ಶೋಭೆ ತರಲ್ಲ. ಮುಖ್ಯಮಂತ್ರಿಗಳಿಗೆ ಹಣಕಾಸಿನ ವ್ಯವಸ್ಥೆಯನ್ನು ಸರಿಯಾಗಿ ನಿರ್ವಹಿಸಲು ಆಗುತ್ತಿಲ್ಲ ಎಂದು ವಾಗ್ದಾಳಿ ಮಾಡಿದರು.

ಇದನ್ನೂ ಓದಿ: ಲೋಕಸಭೆ ಚುನಾವಣೆ ಬೆನ್ನಲ್ಲೇ ಅನ್ನಪೂರ್ಣೇಶ್ವರಿ ಮೊರೆಹೋದ ಯಡಿಯೂರಪ್ಪ: ಶತ್ರುನಾಶಕ್ಕೆ ಚಂಡಿಕಾಯಾಗ

ಬಿಜೆಪಿಯವರ ಮನೆ ಹಾಳಾಗ ಎಂಬ ಸಿದ್ದರಾಮಯ್ಯ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ವಿನಾಶ ಕಾಲೇ ವಿಪರೀತ ಬುದ್ಧಿ, ಸೋಲನ್ನು ಎದುರು ನೋಡುತ್ತಿರುವ ಕಾಂಗ್ರೆಸ್ ಈ ರೀತಿ ಹೇಳಿಕೆ ನೀಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ಯಶಸ್ವಿಯಾಗುತ್ತೇವೆ: ಯಡಿಯೂರಪ್ಪ

ರಾಜ್ಯದಲ್ಲಿ 28 ಕ್ಷೇತ್ರಗಳಲ್ಲೂ ನಾವು ಗೆಲ್ಲುತ್ತೇವೆ, ಗೆಲ್ಲುವ ವಿಶ್ವಾಸವಿದೆ. ಹೊರನಾಡು ಅನ್ನಪೂರ್ಣೇಶ್ವರಿ ದರ್ಶನ ಪಡೆದು ತುಂಬಾ ದಿನವಾಗಿತ್ತು. ರಾಜ್ಯದಲ್ಲಿ ಉತ್ತಮ ಮಳೆ, ಬೆಳೆಗಾಗಿ ಪೂಜೆ ಸಲ್ಲಿಸಿದ್ದೇವೆ. ರಾಜ್ಯದ ಸಮೃದ್ಧಿಗಾಗಿ ದೇವಿಯ ಮುಂದೆ ಪ್ರಾರ್ಥನೆ ಮಾಡಿದ್ದೇನೆ. ನರೇಂದ್ರ ಮೋದಿರನ್ನು ಮತ್ತೆ ಪ್ರಧಾನಿ ಮಾಡುವ ಚುನಾವಣೆ ಇದು. ಅನ್ನಪೂರ್ಣೇಶ್ವರಿ ಆಶೀರ್ವಾದದಿಂದ ನಾವು ಯಶಸ್ವಿಯಾಗುತ್ತೇವೆ ಎಂದು ಮಾಜಿ ಮುಖ್ಯಮಂತ್ರಿ ಬಿಎಸ್​ ಯಡಿಯೂರಪ್ಪ ಹೇಳಿದರು.

ಡಿಕೆ ಶಿವಕುಮಾರ್​, ದೇವೇಗೌಡ ಚಂಡಿಕಾಯಾಗ

ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್​ ಅವರು ಕಳೆದ ವಿಧಾನಸಭೆ ಚುನಾವಣೆಗೆ ಪೂರ್ವದಲ್ಲಿ ಶೃಂಗೇರಿ ಶಾರದಾಂಬೆ ದೇಗುಲದಲ್ಲಿ ಚಂಡಿಕಾ ಯಾಗ ಮಾಡಿಸಿದ್ದರು. ಉಡುಪಿಯ ಜ್ಯೋತಿಷಿ ದ್ವಾರಕನಾಥ್ ಸಲಹೆಯಂತೆ 15ಕ್ಕೂ ಹೆಚ್ಚು ಪುರೋಹಿತರ ನೇತೃತ್ವದಲ್ಲಿ ಚಂಡಿಕಾ ಯಾಗ ನಡೆಯಿತು. ಇನ್ನು ಡಿಕೆ ಶಿವಕುಮಾರ್​ ಅವರು 2023ರ ಎಪ್ರೀಲ್​ ಒಂದೇ ತಿಂಗಳಲ್ಲಿ ಎರಡು ಬಾರಿ ಶೃಂಗೇರಿಗೆ ಭೇಟಿ ನೀಡಿದ್ದರು.

ಇನ್ನು 2018ರ ಚುನಾವಣೆ ಸಂದರ್ಭದಲ್ಲಿ ಹೆಚ್​​​ಡಿ ದೇವೇಗೌಡರ ಕುಟುಂಬ ಶೃಂಗೇರಿ ಶಾರದಾ ಪೀಠದಲ್ಲಿ ಚಂಡಿಕಾಯಾಗ ನಡೆಸಿದ್ದರು. ಮುಖ್ಯಮಂತ್ರಿಯಾಗುವ ಮುನ್ನ ಹೆಚ್​ಡಿ ಕುಮಾರಸ್ವಾಮಿ ಶಾರದಾಂಬೆ ದರ್ಶನ ಪಡೆದಿದ್ದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Published On - 12:47 pm, Sun, 24 March 24

Loading...
Unable to load recommendations.
Follow Us