AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ

ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್. ಪುರದ ಅರಳಿಕೊಪ್ಪ ರಬ್ಬರ್ ತೋಟದಲ್ಲಿ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಅಸ್ಥಿಪಂಜರ ಪತ್ತೆಯಾಗಿದೆ. ಇದು ಕೊಲೆಯಾಗಿರಬಹುದು ಎಂದು ಬಲವಾಗಿ ಶಂಕಿಸಲಾಗಿದೆ. ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್‌ನದ್ದೇ ಈ ಶವವಾಗಿರಬಹುದು ಎಂದು ಊಹಿಸಲಾಗಿದೆ, ಏಕೆಂದರೆ ಆತನ ಜರ್ಕಿನ್ ಸ್ಥಳದಲ್ಲಿ ಸಿಕ್ಕಿದೆ. ಪೊಲೀಸರು ಎಫ್‌ಎಸ್‌ಎಲ್ ತಂಡದೊಂದಿಗೆ ತನಿಖೆ ನಡೆಸುತ್ತಿದ್ದು, ಆರೋಪಿಗಳ ಶೀಘ್ರ ಬಂಧನಕ್ಕೆ ಕ್ರಮ ಕೈಗೊಳ್ಳಲಾಗಿದೆ.

ಚಿಕ್ಕಮಗಳೂರು: ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆ! ನಾಪತ್ತೆಯಾಗಿದ್ದ ಕೇರಳ ಕಾರ್ಮಿಕನ ಹತ್ಯೆ ಶಂಕೆ
ರಬ್ಬರ್ ತೋಟದಲ್ಲಿ ಸುಟ್ಟ ಅಸ್ಥಿಪಂಜರ ಪತ್ತೆImage Credit source: Tv9 kannada
ಅಶ್ವಿತ್ ಮಾವಿನಗುಣಿ, ಚಿಕ್ಕಮಗಳೂರು
| Edited By: |

Updated on: Apr 21, 2026 | 3:42 PM

Share

ಚಿಕ್ಕಮಗಳೂರು, ಏ.21: ಜಿಲ್ಲೆಯ ಎನ್.ಆರ್. ಪುರ ತಾಲೂಕಿನ ಅರಳಿಕೊಪ್ಪ ಗ್ರಾಮದಲ್ಲಿ ಭೀಕರ ಘಟನೆಯೊಂದು ಬೆಳಕಿಗೆ ಬಂದಿದೆ. ಇಲ್ಲಿನ ರಬ್ಬರ್ ತೋಟವೊಂದರಲ್ಲಿ ಯುವಕನೊಬ್ಬನ ಅಸ್ಥಿಪಂಜರ ಸಂಪೂರ್ಣ ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಇದು ಕೊಲೆ ಇರಬಹುದು ಎಂಬ ಬಲವಾದ ಶಂಕೆ ವ್ಯಕ್ತವಾಗಿದೆ.ಅರಳಿಕೊಪ್ಪ ಗ್ರಾಮದ ನಿವಾಸಿ ಎಲ್ಡೋ ಎಂಬುವವರಿಗೆ ಸೇರಿದ ರಬ್ಬರ್ ತೋಟದಲ್ಲಿ ಈ ಅಸ್ಥಿಪಂಜರ ಪತ್ತೆಯಾಗಿದೆ. ಶವವು ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದು, ಕೇವಲ ಮೂಳೆಗಳು ಮಾತ್ರ ಉಳಿದಿವೆ. ಈ ಭೀಕರ ದೃಶ್ಯವನ್ನು ಕಂಡ ತೋಟದ ಕೆಲಸಗಾರರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಮೃತದೇಹವು ಕಳೆದ ಕೆಲವು ದಿನಗಳಿಂದ ನಾಪತ್ತೆಯಾಗಿದ್ದ ಕೇರಳ ಮೂಲದ ಕಾರ್ಮಿಕ ಬಿಬಿನ್ ಎನ್ನುವವನದೇ ಇರಬಹುದು ಎಂದು ಶಂಕಿಸಲಾಗಿದೆ. ಬಿಬಿನ್ ಇದೇ ಎಲ್ಡೋ ಅವರ ತೋಟದಲ್ಲಿ ಕೆಲಸ ಮಾಡುತ್ತಿದ್ದನು. ಅಸ್ಥಿಪಂಜರ ದೊರೆತ ಸ್ಥಳದಲ್ಲಿ ಬಿಬಿನ್ ಬಳಸುತ್ತಿದ್ದ ಜರ್ಕಿನ್ (ಜಾಕೆಟ್) ಪತ್ತೆಯಾಗಿರುವುದು ಈ ಶಂಕೆಯನ್ನು ಬಲಪಡಿಸಿದೆ. ಬಿಬಿನ್ ಸಂಬಂಧಿಕರು ಈಗಾಗಲೇ ಎನ್.ಆರ್. ಪುರ ಪೊಲೀಸ್ ಠಾಣೆಯಲ್ಲಿ ಆತನ ಹತ್ಯೆಯಾಗಿರುವ ಬಗ್ಗೆ ಶಂಕೆ ವ್ಯಕ್ತಪಡಿಸಿ ದೂರು ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯದಲ್ಲಿ ‘ಹೀಟ್ ವೇವ್’ ಅಬ್ಬರ: ಆಸ್ಪತ್ರೆಗಳಲ್ಲಿ ಎಮರ್ಜೆನ್ಸಿ ಬೆಡ್ ಮೀಸಲಿಡಲು ದಿನೇಶ್ ಗುಂಡೂರಾವ್ ಸೂಚನೆ!

ಘಟನಾ ಸ್ಥಳಕ್ಕೆ ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (SP) ಜಿತೇಂದ್ರ ಕುಮಾರ್ ದಯ್ಮಾ ಹಾಗೂ ಎನ್.ಆರ್. ಪುರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶವವನ್ನು ಸುಟ್ಟು ಹಾಕಿ ಸಾಕ್ಷ್ಯ ನಾಶಪಡಿಸಲು ಯತ್ನಿಸಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಎಫ್‌ಎಸ್‌ಎಲ್ (FSL) ತಂಡದ ಸಹಾಯದಿಂದ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದ್ದು, ಶೀಘ್ರದಲ್ಲೇ ಆರೋಪಿಗಳನ್ನು ಬಂಧಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us