ಅತ್ತ ಗೆದ್ದು ಬಿಎಸ್​​ವೈ ಭೇಟಿಯಾದ ಜೀವರಾಜ್: ಇತ್ತ ಸಿಎಂ ಭೇಟಿ ಮಾಡಿದ ರಾಜೇಗೌಡ

ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರುಎಣಿಕೆ ಬಿಗ್‌ ಹೈಡ್ರಾಮಾಗೆ ಕಾರಣವಾಗಿತ್ತು. ಮತ್ತೆ ನಾವೇ ಗೆದ್ದಿದ್ದೇವೆ ಅಂತ ಕಾಂಗ್ರೆಸ್ ಸಂಭ್ರಮಾಚರಣೆ ಮಾಡಿತ್ತು. ಆದರೆ ರಾತ್ರಿ ಕಳೆದು ಬೆಳಗಾಗೋದ್ರಲ್ಲೇ ಫಲಿತಾಂಶಕ್ಕೆ ಬಿಗ್‌ ಟ್ವಿಸ್ಟ್‌ ಸಿಕ್ಕಿತ್ತು. ಸದ್ಯ ಬಿಜೆಪಿ ಗೆಲುವು ಸಾಧಿಸಿದೆ. ಇದರ ಬೆನ್ನಲ್ಲೇ ಬಿಜೆಪಿ ನಾಯಕ ಡಿ.ಎನ್. ಜೀವರಾಜ್​​ ಬಿಎಸ್​​ ಯಡಿಯೂರಪ್ಪರನ್ನು ಭೇಟಿ ಮಾಡಿದ್ದಾರೆ. ಇತ್ತ ರಾಜೇಗೌಡ ಕೂಡ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ್ದಾರೆ.

ಅತ್ತ ಗೆದ್ದು ಬಿಎಸ್​​ವೈ ಭೇಟಿಯಾದ ಜೀವರಾಜ್: ಇತ್ತ ಸಿಎಂ ಭೇಟಿ ಮಾಡಿದ ರಾಜೇಗೌಡ
ಡಿ.ಎನ್. ಜೀವರಾಜ್, ಟಿ.ಡಿ. ರಾಜೇಗೌಡ
Image Credit source: tv9 kannada
Edited By:

Updated on: May 06, 2026 | 3:38 PM

ಚಿಕ್ಕಬಳ್ಳಾಪುರ, ಮೇ 04: ಸಾಕಷ್ಟು ಚರ್ಚೆಗೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ (Sringeri Postal Ballots Recount) ಕೊನೆಗೂ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ (MLA DN Jeevaraj)​​ ಗೆಲುವು ಸಾಧಿಸಿದ್ದಾರೆ. ಜಯಗಳಿಸಿದ ಬೆನ್ನಲ್ಲೇ ಡಿ.ಎನ್. ಜೀವರಾಜ್​​ ಇಂದು ಬೆಂಗಳೂರಿನ ಧವಳಗಿರಿಯಲ್ಲಿರುವ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ನಿವಾಸಕ್ಕೆ ಭೇಟಿ ನೀಡಿ ಅವರ ಆಶೀರ್ವಾದ ಪಡೆದುಕೊಂಡರು. ಇದೇ ವೇಳೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರರನ್ನು ಭೇಟಿ ಮಾಡಿದ್ದಾರೆ. ಇನ್ನು ಇತ್ತ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿರುವ ಮಾಜಿ ಶಾಸಕ ರಾಜೇಗೌಡ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಸಿಎಂ ಜತೆ ಮಾತುಕತೆ ಮಾಡಿದ್ದಾರೆ.

3 ವರ್ಷಗಳ ಹೋರಾಟದ ಬಳಿಕ ಜಯ ಸಿಕ್ಕಿದೆ: ಶಾಸಕ ಜೀವರಾಜ್

ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಭೇಟಿ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶೃಂಗೇರಿಯ ನೂತನ ಶಾಸಕ ಜೀವರಾಜ್, 3 ವರ್ಷಗಳ ಬಹಳ ಹೋರಾಟದ ನಡುವೆ ನಿನ್ನೆ ಜಯ ಸಿಕ್ಕಿದೆ. ಎಣಿಕೆ ಬಗ್ಗೆ ಎರಡು ಅರ್ಜಿಗಳನ್ನ ಕೊಟ್ಟರು. ಕಡಿಮೆ ಮತದ ಸೋಲು ಆದರೆ ರಿಟರ್ನಿಂಗ್ ಆಫೀಸರ್ ಮರು ಎಣಿಕೆ ಮಾಡಬೇಕು. ನಮ್ಮ ಅರ್ಜಿಗೆ ಪ್ರತಿಕ್ರಿಯೆ ಕೊಡುವ ಮೊದಲೇ ಅವರಿಗೆ ಫಾರಂ ಕೊಟ್ಟರು. ಹೈಕೋರ್ಟ್ ಕೇಸ್​ಗೆ ವಜಾಗೊಳಿಸುವ ಪ್ರಯತ್ನ ಮಾಡಿದರು. ಸುಪ್ರೀಂ ಕೋರ್ಟ್​ಗೂ ಹೋಗಿದ್ದರು ಮತ್ತೆ ಹೈಕೋರ್ಟ್​ಗೆ ಹೋಗಿದ್ದರು. ಅವರಿಗೆ ಅನುಮಾನ ಇದ್ದ ಕಾರಣ ಸ್ಟೇ ಕೊಡಿ, ಸುಪ್ರೀಂ ಕೋರ್ಟ್ ಗೆ ಹೋಗ್ತೀವಿ ಅಂತ ಹೇಳಿದ್ದರು ಎಂದರು.

ಇದನ್ನೂ ಓದಿ: ಅಂಚೆ ಮತಗಳ ಮರು ಎಣಿಕೆಯಲ್ಲಿ ಗೆದ್ದ ಜೀವರಾಜ್​​ ಈಗ ಶೃಂಗೇರಿಗೆ ಹೊಸ ಶಾಸಕ: MLA ಪ್ರಮಾಣಪತ್ರ ಪಡೆದ ಬಿಜೆಪಿಗ

ಇನ್ನು ಎಣಿಕೆ ಮುಗಿಯುವ ಮುನ್ನವೇ ವಿಜಯೋತ್ಸವ ಮಾಡಿದ್ದರು. ನಾವು, ಬಿಟ್ಟು ಹೋಗಲಿ ಅಂತ ಪ್ರಯತ್ನಿಸಿದರು. ಅವರಿಗೆ ಬಂದ ಮತ ಡಬಲ್‌ ಆಗಿ ಟ್ಯಾಂಪರಿಂಗ್ ಆಗಿದೆ ಅಂದರು. ಅಂಚೆ ಮತ ಮೊದಲಿಗೆ ಎಣಿಕೆ ಆಗಬೇಕು. ಬೆಳಗ್ಗೆ ಶುರು ಮಾಡಿ‌ ಸಂಜೆಯವರೆಗೂ ಏಕೆ ಎಣಿಕೆ ಇಟ್ಟಿಕೊಂಡಿದ್ದರು ಎಂದು ಪ್ರಶ್ನಿಸಿದರು. ರಾಜ್ಯದಲ್ಲಿ 135 ಸೀಟ್ ಬಂದಾಗ ಹಾಗೇ ಫಲಿತಾಂಶ ನೀಡಿದ್ದಾರೆ. 25ಕ್ಕೆ 25 ಅಮಾನ್ಯ ಮತಗಳು ಬಂದ್ದವು ಎಂದು ಹೇಳಿದರು.

ಎಫ್​ಐಆರ್ ವಿಚಾರವಾಗಿ ಮಾತನಾಡಿದ ಅವರು, ಅದು ಕಾನೂನು ಬಾಹಿರವಾಗಿದೆ. ತನಿಖೆಯನ್ನ ಚುನಾವಣಾ ಆಯೋಗ ಮಾಡಬೇಕು. ಹೆದರಿಸುವ ಕೆಲಸ ಮಾಡಬಾರದು. ಉಪಮುಖ್ಯಮಂತ್ರಿಗಳು ಆ ರೀತಿ ಮಾತನಾಡಬಾರದಿತ್ತು. ಸ್ಟ್ರಾಂಗ್ ರೂಂ ಓಪನ್ ಮಾಡಿದಾಗ ಟ್ರಂಕ್​​ಗಳ ಬಗ್ಗೆ ಕೇಳಿದ್ವಿ. ವಿವಿ ಪ್ಯಾಡ್​ಗಳ ಬೀಗ ಒಡೆದುಕೊಂಡು ಬಿದ್ದಿದ್ದವು. ಅವೆಲ್ಲವೂ ವಿಡಿಯೋ ಇದೆ ಎಂದಿದ್ದಾರೆ.

ಬಿಜೆಪಿಗೆ ಜಯ ಬೆನ್ನಲ್ಲೇ ಸಿಎಂ ಭೇಟಿಯಾದ ಮಾಜಿ ಶಾಸಕ ರಾಜೇಗೌಡ

ಇನ್ನು ಶೃಂಗೇರಿ ಕ್ಷೇತ್ರದ ಮತಗಳ ಮರು ಎಣಿಕೆಯಲ್ಲಿ ಬಿಜೆಪಿಗೆ ಜಯ ಬೆನ್ನಲ್ಲೇ ಇತ್ತ ಮಾಜಿ ಶಾಸಕ ರಾಜೇಗೌಡ ಸಿಎಂ ಸಿದ್ದರಾಮಯ್ಯರನ್ನು ಭೇಟಿ ಮಾಡಿದ್ದಾರೆ. ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಭೇಟಿ ಮಾಡಿದ ಅವರು ಅಂಚೆ ಮತ ಎಣಿಕೆಯಲ್ಲಿ ಸೃಷ್ಟಿಯಾಗಿದ್ದ ಗೊಂದಲ ಬಗ್ಗೆ ಚರ್ಚೆ ಮಾಡಿದ್ದಾರೆ. ಜೊತೆಗೆ ಮುಂದೆ ಏನು ಮಾಡಬೇಕು ಎಂಬ ಬಗ್ಗೆ ಕೂಡ ಮಾತುಕತೆ ಮಾಡಿದ್ದಾರೆ.

MLA ಪ್ರಮಾಣಪತ್ರ ಪಡೆದ ಜೀವರಾಜ್

ಇನ್ನು ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯ ಫಲಿತಾಂಶ ಮೊದಲು ಘೋಷಣೆ ಮಾಡಿರಲಿಲ್ಲ. ಇದರಿಂದ ಗೊಂದಲ ಉಂಟಾಗಿತ್ತು. ಆದರೆ ಇದೀಗ ಅಧಿಕೃತವಾಗಿ ಬಿಜೆಪಿ ಅಭ್ಯರ್ಥಿ ಜೀವರಾಜ್ ಗೆಲುವು ಎಂದು ಚುನಾವಣಾಧಿಕಾರಿ ಗೌರವ ಅವರಿಂದ ಪ್ರಮಾಣ‌ಪತ್ರ ನೀಡಲಾಗಿದೆ. ಮರು ಅಂಚೆ ಮತ ಎಣಿಕೆ ವೇಳೆ 52 ಮತಗಳಿಂದ ಜೀವರಾಜ್ ಗೆಲುವು ಸಾಧಿಸಿದ್ದಾರೆ. ಆ ಮೂಲಕ ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರದಲ್ಲಿ ಒಂದು ಕ್ಷೇತ್ರ ಬಿಜೆಪಿ ಪಾಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:01 pm, Mon, 4 May 26

Follow Us