AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ 22 ಮಕ್ಕಳು ನಾಪತ್ತೆ, ಈ ಮಕ್ಕಳು ಮಠದ ಪಾಲಾಗಿದ್ದು ಹೇಗೆಂಬುದೇ ಪ್ರಶ್ನೆ

ನಾಪತ್ತೆಯಾಗಿರುವವರ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳಿದ್ದಾರೆ. ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿಲ್ಲ.

ಚಿತ್ರದುರ್ಗ: ಮುರುಘಾ ಮಠದಲ್ಲಿದ್ದ 22 ಮಕ್ಕಳು ನಾಪತ್ತೆ, ಈ ಮಕ್ಕಳು ಮಠದ ಪಾಲಾಗಿದ್ದು ಹೇಗೆಂಬುದೇ ಪ್ರಶ್ನೆ
ಚಿತ್ರದುರ್ಗದ ಮುರುಘಾ ಮಠ
Follow us
TV9 Web
| Updated By: Ghanashyam D M | ಡಿ.ಎಂ.ಘನಶ್ಯಾಮ

Updated on:Dec 01, 2022 | 11:50 AM

ಚಿತ್ರದುರ್ಗ: ಮುರುಘಾ ಮಠದ ಹಾಸ್ಟೆಲ್​ನಲ್ಲಿ ವಾಸವಿದ್ದ 22 ಅನಾಥ ಮಕ್ಕಳು ನಾಪತ್ತೆಯಾಗಿರುವ ಗಂಭೀರ ಆರೋಪ ಕೇಳಿಬಂದಿದೆ. ನಾಪತ್ತೆಯಾಗಿರುವವರ ಪೈಕಿ 14 ಹೆಣ್ಣು ಹಾಗೂ 8 ಗಂಡು ಮಕ್ಕಳಿದ್ದಾರೆ. ಅನಾಥ ಮಕ್ಕಳು ಮಠಕ್ಕೆ ಸಿಕ್ಕಿದ್ದು ಹೇಗೆ? ಅನಾಥ ಮಕ್ಕಳನ್ನು ಸಾಕಲು ಸರ್ಕಾರದಿಂದ ಅನುಮತಿ ಪಡೆಯಲಾಗಿತ್ತೇ ಎಂಬ ಪ್ರಶ್ನೆಗಳು ಇದೀಗ ಉದ್ಭವಿಸಿವೆ. ‘ಬಸವ ಕುಟೀರ’ಕ್ಕೆ ಈ ಹಿಂದೆ ಸರ್ಕಾರದಿಂದ ಅನುದಾನ ಸಿಗುತ್ತಿತ್ತು. ಅದರೆ 2012ರಲ್ಲಿ ಈ ಅನುದಾನವನ್ನು ಶಿವಮೂರ್ತಿ ಮುರುಘಾ ಶರಣರು ನಿರಾಕರಿಸಿದ್ದರು. ಸರ್ಕಾರದ ಅನುದಾನ ಬಳಕೆ ಮಾಡಿಕೊಳ್ಳದ ಸಂಸ್ಥೆಯ ಬಗ್ಗೆ ಅಧಿಕಾರಿಗಳು ಹೆಚ್ಚು ಗಮನ ನೀಡುತ್ತಿರಲಿಲ್ಲ. ಹೀಗಾಗಿ ಮಕ್ಕಳು ನಾಪತ್ತೆಯಾದ ವಿಚಾರವೂ ತಡವಾಗಿ ಬೆಳಕಿಗೆ ಬಂದಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ನಾಪತ್ತೆಯಾಗಿರುವ ಮಕ್ಕಳು ಎಲ್ಲಿದ್ದಾರೆ? ಹೇಗಿದ್ದಾರೆ ಎಂಬ ಬಗ್ಗೆಯೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ. ದೂರು ನೀಡಿರುವ ಮಕ್ಕಳಲ್ಲದೇ ಇತರ ಅನಾಥ ಮಕ್ಕಳ ಮೇಲೆಯೂ ಶಿವಮೂರ್ತಿ ಮುರುಘಾ ಶರಣ ದೌರ್ಜನ್ಯ ಎಸಗಿರಬಹುದು ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ. ಮಕ್ಕಳ ನಾಪತ್ತೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಬೇಕು ಎಂದು ಚಿತ್ರದುರ್ಗದ ಆರ್​ಟಿಐ ಕಾರ್ಯಕರ್ತ ಬಿ.ಎಚ್.ಗೌಡ್ರು ಒತ್ತಾಯಿಸಿದ್ದಾರೆ. ಈ ಸಂಬಂಧ ಎಡಿಜಿಪಿ ಅಲೋಕ್ ಕುಮಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳು, ಜಿಲ್ಲಾಧಿಕಾರಿ ದಿವ್ಯಪ್ರಭು, ಎಸ್​ಪಿ ಕೆ.ಪರಶುರಾಮ್ ಅವರಿಗೆ ಮನವಿ ಪತ್ರ ಸಲ್ಲಿಸಲಾಗಿದೆ.

2ನೇ ಪ್ರಕರಣದ ಜಾಮೀನು ಅರ್ಜಿ ವಿಚಾರಣೆ

ಶಿವಮೂರ್ತಿ ಮುರುಘಾ ಶರಣರು ತಮ್ಮ ವಿರುದ್ಧ ದಾಖಲಾಗಿರುವ 2ನೇ ಪೊಕ್ಸೋ ಪ್ರಕರಣಕ್ಕೆ ಸಂಬಂಧಿಸಿದಂತೆ ಸಲ್ಲಿಸಿರುವ ಜಾಮೀನು ಅರ್ಜಿಯ ವಿಚಾರಣೆ ಇಂದು (ಡಿ 1) ಚಿತ್ರದುರ್ಗದ 2ನೇ ಹೆಚ್ಚುವರಿ ಸೆಷನ್ಸ್ ಕೋರ್ಟ್​ನಲ್ಲಿ ನಡೆಯಲಿದೆ. ಮುರುಘಾ ಶರಣರು ಕಳೆದ 3 ತಿಂಗಳಿಂದ ನ್ಯಾಯಾಂಗ ಬಂಧನದಲ್ಲಿದ್ದಾರೆ.

ಒಡನಾಡಿ ಪರಶುರಾಮ್​ಗೆ ನೊಟೀಸ್

ಚಿತ್ರದುರ್ಗ ಮುರುಘಾ ಮಠದ ವಿದ್ಯಾರ್ಥಿನಿಯರ ಮೇಲೆ ನಡೆದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಂದು ಮಹತ್ವದ ಬೆಳವಣಿಗೆ ನಡೆದಿದೆ. ವಿದ್ಯಾರ್ಥಿನಿಯರಿಗೆ ನೈತಿಕ ಬಲ ತುಂಬಿ, ದೂರು ನೀಡಲು ಸಹಕರಿಸಿದ್ದ ಒಡನಾಡಿ ಸಂಸ್ಥೆಯ ಪರಶುರಾಮ್ ಅವರಿಗೆ ಪ್ರಕರಣದ ವಿಚಾರದಲ್ಲಿ ಸುಮ್ಮನಾಗಲು ಅಥವಾ ಹಿಂದೆ ಸರಿಯಲು ₹ 3 ಕೋಟಿ ಆಮಿಷ ಒಡ್ಡಲಾಗಿತ್ತು ಎಂಬ ಮಾತುಗಳು ಕೇಳಿಬಂದಿದ್ದವು. ಈ ಕುರಿತು ಪರಶುರಾಮ್ ಅವರೇ ಅಧಿಕೃತವಾಗಿ ಮಾತನಾಡಿದ ನಂತರ ಆರೋಪಕ್ಕೆ ಪುಷ್ಟಿ ಸಿಕ್ಕಂತೆ ಆಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೂರಕ ಸಾಕ್ಷ್ಯ ನೀಡಬೇಕು ಎಂದು ಕೋರಿ ಪರಶುರಾಮ್ ಅವರಿಗೆ ಪ್ರಕರಣದ ತನಿಖಾಧಿಕಾರಿ ಡಿವೈಎಸ್‌ಪಿ ಲೋಕೇಶ್‌ ನೋಟಿಸ್‌ ಜಾರಿ ಮಾಡಿದ್ದಾರೆ. ಅನಾರೋಗ್ಯ ಕಾರಣದಿಂದ ವಿಚಾರಣೆಗೆ ಹಾಜರಾಗಲು ಸಾಧ್ಯವಿಲ್ಲ. ಆನ್​ಲೈನ್​ ವಿಚಾರಣೆ ಎದುರಿಸುತ್ತೇನೆ’ ಎಂದು ಪರಶುರಾಮ್ ಹೇಳಿದ್ದಾರೆ.

ಇದನ್ನೂ ಓದಿ: ಚಿತ್ರದುರ್ಗ: ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ವಿರುದ್ಧ ವಿಚಾರಣೆಗೆ ಆದೇಶ, ಮುರುಘಾ ಮಠದಲ್ಲಿ ಅಧಿಕಾರ ನೀಡಲು ರಾಜವಂಶಸ್ಥರ ತಾಕೀತು

ಚಿತ್ರದುರ್ಗ ಜಿಲ್ಲೆಯ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ

Published On - 11:38 am, Thu, 1 December 22