ಅತ್ಯಂತ ಸುಶಿಕ್ಷಿತ, ಸ್ಥಿತಿವಂತ ಕುಟುಂಬದ ಯುವತಿಗೆ ಆ ಖದೀಮ ಬರೋಬ್ಬರಿ 2.5 ಕೋಟಿ ಪಂಗನಾಮ ಹಾಕಿದ! ಜೊತೆಗೆ…ಉಂಡೂ ಹೋದ ಕೊಂಡೂ ಹೋದವನ ಕತೆಯಿದು!
ಒಟ್ಟಾರೆಯಾಗಿ ವಿದೇಶದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಭಾರೀ ಭಾರೀ ವಂಚನೆ ಮಾಡಿದ ಪ್ರಕರಣ ಚಿತ್ರದುರ್ಗದಂತಹ ಭದ್ರಕೋಟೆ ನಾಡಿನಲ್ಲಿ ನಡೆದಿದೆ. ಚಿತ್ರದುರ್ಗದ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ವಂಚನೆ ಪ್ರಕರಣದ ಅಸಲಿಯತ್ತೇನೆಂಬುದನ್ನು ಬಯಲುಗೊಳಿಸಬೇಕಿದೆ.

ಇಂಜಿನಿಯರ್ ಪದವೀಧರೆ ಆಗಿದ್ದವಳಿಗೆ ವಿದೇಶದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗಕ್ಕೆ ಸೇರುವ ಕನಸಿತ್ತು. ಅವಳ ಕನಸನ್ನೇ ಬಂಡವಾಳ ಮಾಡಿಕೊಂಡ ವಂಚಕನೋರ್ವ ನಂಬಿಸಿ ಕೋಟ್ಯಾಂತರ ಹಣ ಪೀಕಿದ್ದಾನೆ. ಅಲ್ಲದೆ ಸಲುಗೆಯನ್ನು ದುರ್ಬಳಕೆ ಮಾಡಿಕೊಂಡು ಅತ್ಯಾಚಾರ ಎಸಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ. ಉಂಡೂ ಹೋದ ಕೊಂಡೂ ಹೋದವನ ಸ್ಟೋರಿ ಇಲ್ಲಿದೆ ನೋಡಿ. ನಂಬಿ ಮೋಸ ಹೋದ ಯುವತಿ ಮತ್ತು ಕುಟುಂಬಸ್ಥರು ಕಂಗಾಲು. ಎರಡೂವರೆ ಕೋಟಿ ಹಣ ಪಡೆದು ಭಾರೀ ವಂಚನೆ. ಸಲುಗೆಯಿಂದ ಕರೆಸಿಕೊಂಡು ಯುವತಿ ಮೇಲೆ ಅತ್ಯಾಚಾರ ಆರೋಪ. ಹೌದು, ಚಿತ್ರದುರ್ಗ ನಗರ ಮೂಲದ ಯುವತಿ (ಪಲ್ಲವಿ) ಬಿಇ ಓದಿಕೊಂಡಿದ್ದು 2019ರಲ್ಲಿ ಬೆಂಗಳೂರಲ್ಲಿ ಕಂಪ್ಯೂಟರ್ ಸೈನ್ಸ್ (ಸಿಎಸ್) ಗೆ ಸಂಬಂಧಿಸಿದ ಕೋರ್ಸ್ ಮಾಡುತ್ತಿದ್ದರು. ಆಗ ಚಿತ್ರದುರ್ಗ ಮೂಲದ ಸೌರಭ್ ಪರಿಚಯ ಆಗಿದ್ದಾನೆ.
ಈ ಸೌರಭ ಅಮೆರಿಕಾದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿದ್ದಾನೆ. ಯುವತಿಯ ತಂದೆ (ಗೋವಿಂದಪ್ಪ) ನಿವೃತ್ತ ಬ್ಯಾಂಕ್ ಉದ್ಯೋಗಿ ಆಗಿದ್ದು ಪುತ್ರಿ (ಪಲ್ಲವಿ), ಪುತ್ರ (ಕಿಶೋರ್) ಇಬ್ಬರೂ ಇಂಜಿನಿಯರ್ ಆಗಿದ್ದು ವಿದೇಶದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಉದ್ಯೋಗ ಕೊಡಿಸುವಂತೆ ಕೇಳಿಕೊಂಡಿದ್ದಾರೆ. ಇಡೀ ಫ್ಯಾಮಿಲಿಗೆ ನಂಬಿಸಿದ ಆರೋಪಿ ಸೌರಭನಿಗೆ ಅವರ ಪೋಷಕರು ಕೇಳ್… ಕೇಳಿದಷ್ಟು ಹಣ ನೀಡುತ್ತಾ ಬಂದಿದ್ದಾರೆ. 2 ಕೋಟಿ 55 ಲಕ್ಷ 30 ಸಾವಿರದ 531 ರೂಪಾಯಿ ಹಣ ನೀಡಿದ್ದಾರೆ!
ಚಾಲಾಕಿ ಸೌರಭ್ ಕೆಲ ಕಂಪನಿಗಳ ಹೆಸರಲ್ಲಿ ನಕಲಿ ಅಪಾಯಿಂಟ್ಮೆಂಟ್ ಕಾಪಿಗಳನ್ನು ಸಿದ್ದಪಡಿಸಿ ಕೊಟ್ಟಿದ್ದಾನೆ. ಪಾಸ್ ಪೋರ್ಟ್ ಸಿದ್ಧವಾಗಿದೆ ಎಂದೆಲ್ಲಾ ನಂಬಿಸಿದ್ದಾನೆ. ಇನ್ನೇನು ಅಮೆರಿಕಾಕ್ಕೆ ಹೋಗುವುದಕ್ಕೆ ಮುಹೂರ್ತ ಫಿಕ್ಸ್ ಆಗಿದೆ ಎಂದು ನಂಬಿಸಿ ಯುವತಿಯನ್ನು ಕರೆಸಿಕೊಂಡಿದ್ದಾನೆ. ಬೆಂಗಳೂರಿನ ಖಾಸಗಿ ಲಾಡ್ಜ್ ಮತ್ತು ಚಿತ್ರದುರ್ಗದ ಚಂದ್ರವಳ್ಳಿ ಬಳಿ ಕರೆಸಿಕೊಂಡು ಬಲಾತ್ಕಾರ ನಡೆಸಿದ್ದಾನೆಂದು ಯುವತಿ ಮತ್ತು ಪೋಷಕರು ಆರೋಪಿಸಿ ದೂರು ದಾಖಲಿಸಿದ್ದಾರೆ.
ಇನ್ನು ವಿದೇಶದಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿದ ಸೌರಭ್ ಎರಡೂವರೆ ಕೋಟಿ ರೂಪಾಯಿ ಹಣ ಪಡೆದು ವಂಚಿಸಿರುವುದಾಗಿ ಸಂತ್ರಸ್ತ ಯುವತಿಯ ತಂದೆ (ಗೋವಿಂದಪ್ಪ) ಸಿಇಎನ್ ಠಾಣೆಗೆ ದೂರು ದಾಖಲಿಸಿದ್ದಾರೆ. ಸೌರಭ್ ಜೊತೆಗೆ ಬಸವರಾಜ್ ಮತ್ತು ಮಲ್ಲಿ ಎಂಬುವವರೂ ವಂಚಿಸಿದ್ದಾರಂತೆ. ಅಂತೆಯೇ ಸಂತ್ರಸ್ತ ಯುವತಿ ಮಹಿಳಾ ಠಾಣೆಗೆ ದೂರು ನೀಡಿದ್ದು ಸೌರಭ್ ಕೆಲಸ ಕೊಡಿಸುವ ನೆಪದಲ್ಲಿ ಹಣ ಪಡೆದು ಮೋಸ ಮಾಡಿದ್ದಲ್ಲದೆ ಸಲುಗೆಯಿಂದ ಕರೆಸಿಕೊಂಡು ಅತ್ಯಾಚಾರ ಎಸಗಿದ್ದಾನೆಂದು ಆರೋಪಿಸಿದ್ದಾಳೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಸೌರಭ್ ನನ್ನು ಬಂಧಿಸಿದ್ದಾರೆ.
ಒಟ್ಟಾರೆಯಾಗಿ ವಿದೇಶದಲ್ಲಿ ಮಲ್ಟಿ ನ್ಯಾಷನಲ್ ಕಂಪನಿಯಲ್ಲಿ ಕೆಲಸ ಕೊಡಿಸುವುದಾಗಿ ನಂಬಿಸಿ ಭಾರೀ ಭಾರೀ ವಂಚನೆ ಮಾಡಿದ ಪ್ರಕರಣ ಚಿತ್ರದುರ್ಗದಂತಹ ಭದ್ರಕೋಟೆ ನಾಡಿನಲ್ಲಿ ನಡೆದಿದೆ. ಚಿತ್ರದುರ್ಗದ ಪೊಲೀಸರು ಸದ್ಯ ದೂರು ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಪ್ರಕರಣದ ತನಿಖೆ ನಡೆಸಿ ವಂಚನೆ ಪ್ರಕರಣದ ಅಸಲಿಯತ್ತೇನೆಂಬುದನ್ನು ಬಯಲುಗೊಳಿಸಬೇಕಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 2:30 pm, Fri, 3 November 23