
ಕಲಬುರಗಿ, (ಆಗಸ್ಟ್ 06): ಚಾಮರಾಜನಗರ (Chamrajnagar) ಜಿಲ್ಲೆಯ ಗುಂಡ್ಲುಪೇಟೆಯ ಚೌಡಹಳ್ಳಿಯ ಮಠದ ಪೀಠಾಧಿಪತಿಯಾಗಿದ್ದ ನಿಜಲಿಂಗ ಸ್ವಾಮೀಜಿ ((Nijalinga Swamiji) ಮುಸ್ಲಿಂ ಸಮುದಾಯಕ್ಕೆ ಸೇರಿದವರು ಎಂದು ತಡವಾಗಿ ತಿಳಿದುಬಂದಿದೆ. ವಿಚಾರ ತಿಳಿಯುತ್ತಿದ್ದಂತೆಯೇ ಭಾರೀ ಚರ್ಚೆಗೆ ಗ್ರಾಸವಾಗಿದೆ. ಯಾದಗಿರಿ ಜಿಲ್ಲೆ ಶಹಪುರ ಮೂಲದ ನಿಜಲಿಂಗ ಸ್ವಾಮೀಜಿ ಪೂರ್ವಾಶ್ರಮದಲ್ಲಿ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರು. ಪೂರ್ವಾಶ್ರಮದಲ್ಲಿ ಇವರ ಹೆಸರು ಮಹಮದ್ ನಿಸಾರ್ (Mohammed Nisar) ಎಂದು ಇತ್ತು. ಈ ವಿಚಾರ ಗೊತ್ತಾಗುತ್ತಿದ್ದಂತೆಯೇ ಚೌಡಹಳ್ಳಿ ಗ್ರಾಮಸ್ಥರು ವ್ಯಾಪಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರ ಬೆನ್ನಲ್ಲೇ ಸ್ವಾಮೀಜಿ ಪೀಠತ್ಯಾಗ ಮಾಡಿ ಮಠದಿಂದ ಹೊರ ನಡೆದಿದ್ದಾರೆ. ಇನ್ನು ಮುಸ್ಲಿಂ ಸಮುದಾಯದ ಮಹಮದ್ ನಿಸಾರ್ ನಿಜಲಿಂಗ ಸ್ವಾಮೀಜಿಯಾಗಿಬದಲಾಗಿದ್ಹೇಗೆ ಎನ್ನುವುದನ್ನು ಸ್ವತಃ ತಾಯಿ ಬಿಚ್ಚಿಟ್ಟಿದ್ದಾರೆ.
ಕಲಬುರಗಿ ಜಿಲ್ಲೆ ಕಾಳಗಿ ತಾಲೂಕಿನ ರಾಜಪೂರ ಗ್ರಾಮದಲ್ಲಿ ಮಹಮ್ಮದ್ ನಿಸಾರ್ ತಾಯಿ ರೇಹನಾ ಬೇಗಂ ಮಾತನಾಡಿದ್ದು, ನನ್ನ ಮಗ ಐದನೇ ಕ್ಲಾಸ್ ನಿಂದ ಲಿಂಗ ಪೂಜೆ ಬಸವತತ್ವದ ಬಗ್ಗೆ ಇಷ್ಟಪಡುತ್ತಿದ್ದ. ಬಸವಣ್ಣನ ಪ್ರಭಾವದಿಂದ ಲಿಂಗದೀಕ್ಷೆ ಪಡೆದುಕೊಂಡಿದ್ದೆನೆ ಎಂದಿದ್ದ. ನನ್ನ ಮಗ ಮನೆಗೆ ಲಿಂಗ ತಂದು ಲಿಂಗ ಪೂಜೆ ಮಾಡುತ್ತಿದ್ದ. ನಾನು ಆ ಲಿಂಗವನ್ನ ಬಿಸಾಕಿದ್ದರೂ ಮತ್ತೆ ಲಿಂಗ ಪೂಜೆ ಮಾಡುತ್ತೇನೆಂದು ಹಠ ಮಾಡುತ್ತಿದ್ದ. ಏಳನೇ ತರಗತಿ ಆದ ಮೇಲೆ ಬಸವಕಲ್ಯಾಣ ಹೋಗಿ ಅಲ್ಲೆ ಸ್ವಾಮೀಜಿ ಬಳಿ ಉಳಿದುಕೊಂಡಿದ್ದ ಎಂದು ಸ್ಪಷ್ಟಪಡಿಸಿದ್ದಾರೆ.
ಕಳೆದ ಐದು ವರ್ಷದಿಂದ ಆತ ಮನೆಗೆ ಬಂದಿರಲಿಲ್ಲ. ತಂದೆ ಸಾವನ್ನಪ್ಪಿದ್ರು ಆತ ಅಂತ್ಯಸಂಸ್ಕಾರಕ್ಕೆ ಬಂದಿರಲಿಲ್ಲ. ಸ್ವಂತ ತಂಗಿಯ ಮದುವೆಗೂ ಆತ ಬಂದಿರಲಿಲ್ಲ. ಆತ ಕುಡಿಯುತ್ತಿರಲಿಲ್ಲ ಅವನ ಕುಡಿಯುವ ವಿಡಿಯೋ ನನಗೆ ಗೊತ್ತಿಲ್ಲ. ಅವನಿಗೆ ಆಗದವರು ಆರೋಪ ಮಾಡುತ್ತಿರಬಹುದು. ಆತ ನಮ್ಮ ಪಾಲಿಗೆ ಸತ್ತಿದ್ದಾನೆ ಅಂದುಕೊಂಡು ಜೀವನ ಮಾಡುತ್ತಿದ್ದೇನೆ ಹೇಳಿದ್ದಾರೆ.
ಇನ್ನೂ ನಿಸಾರ್ ಅಹ್ಮದ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವಾಗಲೇ ಹೆಚ್ಚಾಗಿ ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ಹೊಂದಿದ್ದ ಎನ್ನುವುದನ್ನು ಪಾಠ ಹೇಳಿದ್ದ ಶಿಕ್ಷಕರೇ ತಿಳಿಸಿದ್ದಾರೆ. ನಿಸಾರ್ ಅಹ್ಮದ್ ಓದಿದ ಶಾಲೆಯ ಶಿಕ್ಷಕ ಮಹೇಶ ಬಡಿಗೇರ್ ಮಾತನಾಡಿ, ಅಂದಿನ ನಿಸಾರ್ ಅಹ್ಮದ್ ವಿಧ್ಯಾರ್ಥಿ ಜೀವನದಲ್ಲೆ ಆಧ್ಯಾತ್ಮದ ಬಗ್ಗೆ ಒಲವು ಹೊಂದಿದ್ದ. ಆಧ್ಯಾತ್ಮಿಕದ ಬಗ್ಗೆಯೇ ಚರ್ಚೆ ಮಾಡುತ್ತಿದ್ದ. 2020 ರಲ್ಲಿ ನಮ್ಮ ಶಾಲೆಯಿಂದ ಎಸ್ ಎಸ್ ಎಲ್ ಸಿ ತೇರ್ಗಡೆಯಾಗಿದ್ದ. ಲಬುರಗಿ ಜಿಲ್ಲೆ ಕಾಳಗಿ ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜಿನಲ್ಲಿ ಎಸ್ ಎಸ್ ಎಲ್ ಸಿ ಮುಗಿಸಿದ್ದ. ಅದಕ್ಕೂ ಮೊದಲೇ ಆತ ಲಿಂಗದೀಕ್ಷೆ ತೆಗೆದುಕೊಂಡಿರುವುದಾಗಿ ಹೇಳುತ್ತಿದ್ದ. ಕೊನೆದಾಗಿ ತನ್ನ ಅಂಕಪಟ್ಟಿ ತೆಗೆದುಕೊಳ್ಳುವುದಕ್ಕೆ ಎಂದು ಶಾಲೆಗೆ ಬಂದಿದ್ದ. ಆ ವೇಳೆ ಕಾವಿ ವೇಶಧಾರಿಯಾಗೇ ಶಾಲೆಗೆ ಬಂದಿದ್ದ ಎಂದು ತಿಳಿಸಿದ್ದಾರೆ.
ವಿದ್ಯಾರ್ಥಿ ಜೀವನದಲ್ಲೇ ಆತ ವಚನ ಬರೆಯುತ್ತಿದ್ದ. ಸಾಕಷ್ಟು ವಚನಗಳನ್ನ ಕೂಡಾ ಬರೆದಿದ್ದ. ಉರ್ದು ಮಾತೃಭಾಷೆಯಾಗಿದ್ದರೂ ಕನ್ನಡ ಚೆನ್ನಾಗಿ ಕಲಿತಿದ್ದ. ಅಲ್ಲದೇ ಕನ್ನಡದಲ್ಲೇ ವಚನಗಳನ್ನ ಬರೆಯುತ್ತಿದ್ದ. ಆತ ಲಿಂಗದೀಕ್ಷೆ ಪಡೆಯೋ ಬಗ್ಗೆ ಕೆಲವರ ವಿರೋಧವಿತ್ತು ಎಂದಿದ್ದಾರೆ.
Published On - 6:53 pm, Wed, 6 August 25