ನವೆಂಬರ್ ಕ್ರಾಂತಿ ಕಿಚ್ಚಿನ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಸಚಿವರ ಜತೆ ಡಿನ್ನರ್ ಮೀಟಿಂಗ್

ನಾಯಕತ್ವ ಬದಲಾವಣೆ ಕುರಿತ ಚರ್ಚೆಗಳು, ಶಾಸಕರ, ಸಚಿವರ ಗೊಂದಲಮಯ ಹೇಳಿಕೆಗಳ ಮಧ್ಯೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತ ಸಚಿವರಿಗೆ ಔತಣಕೂಟ ಏರ್ಪಡಿಸಿದ್ದಾರೆ. ಕಾಂಗ್ರೆಸ್ ವಲಯದಲ್ಲಿ ಇದು ಕುತೂಹಲಕ್ಕೆ ಕಾರಣವಾಗಿದ್ದರೆ, ಅತ್ತ ಪ್ರತಿಪಕ್ಷ ಬಿಜೆಪಿಗೆ ಟೀಕಾಸ್ತ್ರ ಒದಗಿಸಿಕೊಟ್ಟಿದೆ. ಇಂದಿನ ಸಭೆಯ ನಂತರ ಕಾಂಗ್ರೆಸ್ ಬೆಳವಣಿಗೆಗಳು ಏನಿರಲಿವೆ ಎಂಬ ಕುತೂಹಲ ಸದ್ಯ ಕರ್ನಾಟಕ ರಾಜಕಾರಣದಲ್ಲಿ ಮೂಡಿದೆ.

ನವೆಂಬರ್ ಕ್ರಾಂತಿ ಕಿಚ್ಚಿನ ಮಧ್ಯೆ ಇಂದು ಸಿಎಂ ಸಿದ್ದರಾಮಯ್ಯ ಸಚಿವರ ಜತೆ ಡಿನ್ನರ್ ಮೀಟಿಂಗ್
ಸಿಎಂ ಸಿದ್ದರಾಮಯ್ಯ
Updated By: Ganapathi Sharma

Updated on: Oct 13, 2025 | 7:03 AM

ಬೆಂಗಳೂರು, ಅಕ್ಟೋಬರ್ 13: ಯಾರ ಕುರ್ಚಿ ಅಲುಗಾಡಲಿದೆ? ಯಾವ ಸಚಿವರಿಗೆ ಕೊಕ್ ಕಾದಿದೆ? ಯಾವ ಹಿರಿ ತಲೆಯ ನಾಯಕರಿಗೆ ಎದುರಾಗುತ್ತೆ ಶಾಕ್? ನವೆಂಬರ್ ಕ್ರಾಂತಿಯೋ, ಇಲ್ಲ ಬ್ರಾಂತಿಯೋ? ನಾಯಕತ್ವ ಬದಲಾವಣೆ ಖಚಿತ ಅಂತಾ ಬಿಜೆಪಿಯವರು ನುಡಿಯುತ್ತಿರುವ ಭವಿಷ್ಯ ನಿಜವಾಗುತ್ತದೆಯಾ? ಈ ಎಲ್ಲಾ ಪ್ರಶ್ನೆಗಳು ಈಗ ಕರ್ನಾಟಕ ರಾಜಕೀಯದಲ್ಲಿ (Karnataka Politics) ಹೆಚ್ಚಾಗಿವೆ. ಇದೆಲ್ಲರದ ಮಧ್ಯೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah)ಆಪ್ತ ಸಚಿವರ ಜತೆ ಡಿನ್ನರ್ ಮೀಟಿಂಗ್ ನಡೆಸಲಿದ್ದಾರೆ.

ಸಚಿವರಿಗೆ ಔತಣಕೂಟ; ಶುರುವಾಗುತ್ತಾ ಅಸಲಿ ಆಟ?

ಕಾಂಗ್ರೆಸ್ ಮನೆಯಲ್ಲಿ ಪಟ್ಟದ ಕಲಹ ಜೋರಾಗಿಯೇ ನಡೆಯುತ್ತಿದೆ. ಈ ನಡುವೆ ಸಿಎಂ ಸಿದ್ದರಾಮಯ್ಯ ಇಂದು ಸಚಿವರಿಗೆ ಔತಣಕೂಟ ಏರ್ಪಡಿಸಿದ್ದು, ಸಂಪುಟ ಪುನಾರಚನೆಯ ಲೆಕ್ಕಾಚಾರ ಹಾಕಿದ್ದಾರೆ ಎನ್ನಲಾಗಿದೆ. ಈ ನಡುವೆ ಕ್ರಾಂತಿ ಕಿಚ್ಚು ಎಬ್ಬಿಸಿದವರಿಗೆ ಸಿಎಂ ಆಪ್ತ ಬಣ ಕೌಂಟರ್ ಕೊಟ್ಟಿದೆ.

ಕಾಂಗ್ರೆಸ್ ನಾಯಕರೆಲ್ಲಾ, ಸಂಪುಟ ಪುನಾರಚನೆ ಬಗ್ಗೆ ಹೈಕಮಾಂಡ್ ನಿರ್ಧರಿಸುತ್ತದೆ. ಯಾವ ಕ್ರಾಂತಿಯೂ ಇಲ್ಲ ಎಂದು ಸಾರಸಗಟಾಗಿ ತಳ್ಳಿ ಹಾಕುತ್ತಿದ್ದಾರೆ. ಆದರೆ, ಶಾಸಕ ಲಕ್ಷ್ಮಣ ಸವದಿ, ಡಿಸೆಂಬರ್‌ನಲ್ಲಿ ನನಗೆ ಶುಕ್ರದೆಸೆ ಶುರುವಾಗುತ್ತದೆ ಎನ್ನುವ ಮೂಲಕ ಪರೋಕ್ಷವಾಗಿ ಸಚಿವನಾಗುತ್ತೇನೆ ಎಂದಿದ್ದಾರೆ.

ಬಿಜೆಗೆ ಅಸ್ತ್ರವಾದ ಕಾಂಗ್ರೆಸ್ ಸಂಘರ್ಷ

ಅತ್ತ ಕಾಂಗ್ರಸ್​​​ ಒಳಗಿನ ಬೆಳವಣಿಗೆ, ಗೊಂದಲಗಳು ಪ್ರತಿಪಕ್ಷ ಬಿಜೆಪಿಗೆ ಅಸ್ತ್ರವಾಗಿ ಪರಿಣಮಿಸಿದೆ. ಕಾಂಗ್ರೆಸ​ನಲ್ಲಿ ಗೊಂದಲ ಸೃಷ್ಟಿಯಾಗಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಟೀಕಿಸಿದ್ದಾರೆ. ಸಿಎಂ ಸಿದ್ದರಾಮಯ್ಯ ಡಿನ್ನರ್ ಮೀಟಿಂಗ್ ಅನ್ನು ‘ಮೋಜಿನ ಸಭೆ’ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಲೇವಡಿ ಮಾಡಿದ್ದಾರೆ. ಮತ್ತೊಂದೆಡೆ, ಸಿಎಂ ಮೇಲೆ ಮಾಟ-ಮಂತ್ರ ಮಾಡಲಾಗಿದೆ ಎಂದು ಬಿಜೆಪಿ ಶಾಸಕ ಮುನಿರತ್ನ ಆರೋಪಿಸಿದ್ದಾರೆ.

ಇದನ್ನೂ ಓದಿ: ಕಾಂಗ್ರೆಸ್ ನವೆಂಬರ್ ಕ್ರಾಂತಿ ಬೆನ್ನಲ್ಲೆ ಬಿಜೆಪಿ ಅಲರ್ಟ್: ಸಿಎಂ ಕುರ್ಚಿ ಮೇಲೆ ನಿಗಾ, ತಂತ್ರ ರೂಪಿಸಿದ ಕೇಸರಿ ಪಡೆ

ಒಟ್ಟಿನಲ್ಲಿಇಂದಿನ ಸಿಎಂ ಡಿನ್ನರ್ ಸಭೆಯತ್ತ ಕಾಂಗ್ರೆಸ್ ಪಡೆಯ ಚಿತ್ತ ನೆಟ್ಟಿದೆ. ಇಂದು ರಾತ್ರಿ ಊಟ ಮುಗಿದ ಬಳಿಕ ಹೊಸ ಆಟ ಶುರುವಾಗುತ್ತದೆಯಾ ಎಂಬ ಕುತೂಹಲ ಮೂಡಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ