ಜನವಸತಿ ಪ್ರದೇಶದ ಸಮೀಪವೇ ಅಕ್ರಮ ಗಣಿಗಾರಿಕೆ ಆರೋಪ: ಎಲ್ಲೆಂದರಲ್ಲಿ ಸಿಗುತ್ತಿವೆ ಬ್ಲಾಸ್ಟಿಂಗ್ ಪರಿಕರಗಳು!
Illegal Mining: ದಕ್ಷಿಣ ಕನ್ನಡದ ಉಳ್ಳಾಲ ತಾಲೂಕಿನ ಪಜೀರು ಕೊಪ್ಪಳದಲ್ಲಿ ಜನವಸತಿ ಪ್ರದೇಶಗಳ ನಡುವೆಯೇ ಅಕ್ರಮ ಗಣಿಗಾರಿಕೆ ಮತ್ತು ಬ್ಲಾಸ್ಟಿಂಗ್ ನಡೆಯುತ್ತಿದ್ದು, ಎಲ್ಲೆಂದರಲ್ಲಿ ಸ್ಫೋಟಕ ಪರಿಕರಗಳು ಪತ್ತೆಯಾಗುತ್ತಿರುವುದು ಸ್ಥಳೀಯರಲ್ಲಿ ಭೀತಿ ಮೂಡಿಸಿದೆ. ಈ ಬಗ್ಗೆ ಸಾಕಷ್ಟು ಭಾರಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗೆ ದೂರು ನೀಡಿದ್ರು ಇಲಾಖೆಗಳು ಮಾತ್ರ ಕೈಕಟ್ಟಿ ಕುಳಿತಿವೆ ಎಂಬ ಆರೋಪವೂ ಕೇಳಿಬಂದಿದೆ.

ಮಂಗಳೂರು, ಜುಲೈ 05: ದಕ್ಷಿಣ ಕನ್ನಡ ಜಿಲ್ಲೆಯ ಉಳ್ಳಾಲ ತಾಲೂಕಿನ ಪಜೀರು ಕೊಪ್ಪಳ ಗ್ರಾಮದ ಸರ್ಕಾರಿ ಜಾಗದಲ್ಲಿ ಕಳೆದ 40 ವರ್ಷದಿಂದ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ. ಸರ್ವೆ ನಂ 178, 179ರಲ್ಲಿ ಅಕ್ರಮ ಗಣಿಗಾರಿಕೆ ಮಾಡಲಾಗುತ್ತಿದ್ದು, ಪಕ್ಕದಲ್ಲೇ ಬರೋಬ್ಬರಿ 25 ವರ್ಷಗಳಿಂದ ಕಾನೂನು ಬಾಹಿರವಾಗಿ ಕ್ರಷರ್ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಗಂಭೀರ ಆರೋಪ ಕೇಳಿಬಂದಿದೆ. ಈ ಪ್ರದೇಶದಲ್ಲಿ ಹಗಲು-ರಾತ್ರಿ ಎನ್ನದೆ ಸ್ಫೋಟಕ ಬಳಸಿ ಬ್ಲಾಸ್ಟಿಂಗ್ ಮಾಡಲಾಗುತ್ತಿದ್ದು, ಎಲ್ಲವನ್ನೂ ಕಂಡೂ ಕಾಣದಂತಿರುವ ಸಂಬಂಧ ಪಟ್ಟ ಅಧಿಕಾರಿಗಳ ದಿವ್ಯ ಮೌನದ ಬಗ್ಗೆ ಪ್ರಶ್ನೆಗಳು ಎದ್ದಿವೆ.
ಗಣಿಗಾರಿಕೆ ಸ್ಥಳದ ಸಮೀಪವೇ ಇವೆ ಮನೆಗಳು
ಇನ್ನು ಅಕ್ರಮ ಗಣಿಗಾರಿಕೆ ನಡೆಯುತ್ತಿರುವ ಸಮೀಪದಲ್ಲೇ ಶಾಲೆ, ಮನೆ, ಧಾರ್ಮಿಕ ಕೇಂದ್ರಗಳಿವೆ. ನಾನ್ ಎಲೆಕ್ಟ್ರಿಕ್ ಡಿಟೋನೇಟರ್ಗಳನ್ನು ಗಣಿದಣಿಗಳು ಸಿಕ್ಕ ಸಿಕ್ಕ ಕಡೆ ಬಚ್ಚಿಟ್ಟಿದ್ದು, ಬ್ಲಾಸ್ಟಿಂಗ್ ಪರಿಕರಗಳು ಜನ ವಸತಿ ಪ್ರದೇಶದ ಸುತ್ತಮುತ್ತವೇ ಸಿಗುತ್ತಿವೆ. ಶಾಲಾ ಮಕ್ಕಳು ಓಡಾಡುವ ಜಾಗದ ಸಮೀಪವೇ ಇವುಗಳನ್ನು ಇಡುತ್ತಿರೋದು ಆತಂಕ ಹೆಚ್ಚಿಸಿದೆ. ಒಂದೊಮ್ಮೆ ದಾಳಿ ನಡೆದರೆ ಕೇಸ್ ಆಗಬಾರದು ಎಂದು ಸಾರ್ವಜನಿಕ ಜಾಗಗಳಲ್ಲಿ ಇವುಗಳನ್ನು ದಂಧೆಕೋರರು ಅಡಗಿಸಿಡುತ್ತಿದ್ದಾರೆ ಎಂಬ ಮಾಹಿತಿ ಇದೆ.
ಗಣಿಗಾರಿಕೆಗಾಗಿ ನೇತ್ರಾವತಿ ಉಪನದಿಯೇ ಬಂದ್!
ಗಣಿದಣಿಗಳ ಹಾವಳಿ ಈ ಪ್ರದೇಶದಲ್ಲಿ ಎಷ್ಟಿದೆಯಂದರೆ ಕೃಷಿ ಚಟುವಟಿಕೆಗಳಿಗೆ ನೀರುಣಿಸುತ್ತಿದ್ದ ನೇತ್ರಾವತಿಯ ಉಪ ನದಿಯೇ ಬಂದ್ ಆಗಿದೆ. ಗಣಿ-ಕ್ರಷರ್ ವೇಸ್ಟೇಜ್ ತುಂಬಿದ ಪರಿಣಾಮ ನೀರು ಹರಿಯುವಿಕೆಗೆ ಸಮಸ್ಯೆಯಾಗಿದೆ. ಈ ಬಗ್ಗೆ ಸಾಕಷ್ಟು ಭಾರಿ ಜಿಲ್ಲಾಡಳಿತ ಮತ್ತು ವಿವಿಧ ಇಲಾಖೆಗೆ ದೂರು ನೀಡಿದ್ರು ಇಲಾಖೆಗಳು ಮಾತ್ರ ಕೈಕಟ್ಟಿ ಕುಳಿತಿವೆ ಎಂಬ ಆರೋಪವೂ ಸ್ಥಳೀಯರಿಂದ ಕೇಳಿಬಂದಿದೆ. ಕ್ರಷರ್ಗಳ ಶಬ್ದದಿಂದ ಈ ಪ್ರದೇಶದಲ್ಲಿ ಶಬ್ದ ಮಾಲಿನ್ಯ ಉಂಟಾಗುತ್ತಿರುವ ಜೊತೆಗೆ, ಬ್ಲಾಸ್ಟ್ ವೇಳೆ ಭೂಕಂಪನದ ಅನುಭವ ಆಗುತ್ತಿದೆ. ಸಿಡಿದ ಕಲ್ಲುಗಳು ಮನೆಗಳ ಮೇಲೆ ಬಿದ್ದು ಹಾನಿಯಾಗಿರುವ ಘಟನೆಗಳೂ ನಡೆದಿವೆ ಎಂಬುದು ಇಲ್ಲಿನ ನಿವಾಸಿಗಳ ಅಳಲು.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 11:18 am, Sun, 5 July 26




