ರಾಮ ಮಂದಿರ ದೇಣಿಗೆ ಕಳ್ಳತನ ತನಿಖೆ: ಸುಪ್ರೀಂ ಆದೇಶದಂತೆ ಯುಪಿ ಸರ್ಕಾರದಿಂದ ಎಸ್ಐಟಿ ಪುನಾರಚನೆ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಅಯೋಧ್ಯೆಯ ರಾಮ ಮಂದಿರ ದೇಣಿಗೆ ದುರುಪಯೋಗ ತನಿಖೆಗೆ ಯುಪಿ ಸರ್ಕಾರ ವಿಶೇಷ ತನಿಖಾ ತಂಡ (SIT) ಪುನರ್ರಚಿಸಿದೆ. ತನಿಖೆಯ ಪಾರದರ್ಶಕತೆಗಾಗಿ ಮೂವರು ಹಿರಿಯ ಐಪಿಎಸ್ ಅಧಿಕಾರಿಗಳನ್ನು ಹೊಸ ತಂಡದಲ್ಲಿ ಸೇರಿಸಲಾಗಿದೆ. ಪ್ರಕರಣದ ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಹೊಸ SIT ತನ್ನ ತನಿಖಾ ಪ್ರಗತಿಯ ವರದಿಯನ್ನು ಜುಲೈ 27 ರೊಳಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಲಿದೆ.

ಲಕ್ನೋ,ಜುಲೈ 26: ಅಯೋಧ್ಯೆ(Ayodhya)ಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ಕಾಣಿಕೆಗಳ ದುರುಪಯೋಗಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನದಂತೆ ಉತ್ತರ ಪ್ರದೇಶ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ಪುನರ್ರಚಿಸಿದೆ. ತನಿಖೆಯ ನ್ಯಾಯಸಮ್ಮತತೆ ಮತ್ತು ಪಾರದರ್ಶಕತೆಯನ್ನು ಖಚಿತಪಡಿಸಿಕೊಳ್ಳಲು ಮೂವರು ಹಿರಿಯ ಐಪಿಎಸ್ (IPS) ಅಧಿಕಾರಿಗಳನ್ನು ಹೊಸ ತಂಡದಲ್ಲಿ ಸೇರಿಸಲಾಗಿದೆ.
ಇನ್ಸ್ಪೆಕ್ಟರ್ ಜನರಲ್ (IG) ಕಿರಣ್ ಎಸ್ ತಂಡದ ನೇತೃತ್ವವಹಿಸಿದ್ದಾರೆ. ಅಯೋಧ್ಯೆಯ ಡಿಐಜಿ (DIG) ಸೋಮೆನ್ ವರ್ಮಾ ಮತ್ತು ಅಯೋಧ್ಯೆಯ ಎಸ್ಎಸ್ಪಿ (SSP) ಡಾ. ಗೌರವ್ ಗ್ರೋವರ್ ಕೂಡ ಇದ್ದಾರೆ.
ಲಕ್ನೋ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮತ್ತು ವಿಶೇಷ ಕಾರ್ಯದರ್ಶಿ (ಹಣಕಾಸು) ನೀಲ್ ರತನ್ ಕುಮಾರ್ ಸೇರಿದಂತೆ ಇತರ ಅಧಿಕಾರಿಗಳು ಹಿಂದಿನ ತಂಡದಲ್ಲಿದ್ದರು. ಹೊಸದಾಗಿ ರಚಿಸಲಾದ ಎಸ್ಐಟಿ ತನ್ನ ತನಿಖಾ ಪ್ರಗತಿಯ ಸ್ಥಿತಿಗತಿ ವರದಿಯನ್ನು ಜುಲೈ 27 ರೊಳಗೆ ಸುಪ್ರೀಂ ಕೋರ್ಟ್ಗೆ ಸಲ್ಲಿಸಬೇಕಾಗಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್, ನ್ಯಾಯಮೂರ್ತಿಗಳಾದ ಜೋಯ್ಮಲ್ಯ ಬಾಗ್ಚಿ ಮತ್ತು ವಿ. ಮೋಹನ್ ಅವರನ್ನೊಳಗೊಂಡ ಪೀಠವು ಜುಲೈ 13 ರಂದು ಹಿರಿಯ ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲೇ ಸಮಗ್ರ ತನಿಖೆ ನಡೆಯಬೇಕೆಂದು ಸ್ಪಷ್ಟಪಡಿಸಿತ್ತು. ಪ್ರಮುಖ ಅರ್ಜಿಯ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ಗೂ ನೋಟಿಸ್ ಜಾರಿ ಮಾಡಿದೆ.
ಮತ್ತಷ್ಟು ಓದಿ: ರಾಮ ಮಂದಿರ ದೇಣಿಗೆ ಹಗರಣ: ಜುಲೈ 20 ರಂದು ಸುಪ್ರೀಂಗೆ ಮಧ್ಯಂತರ ವರದಿ ಸಿಲ್ಲಿಸಲಿದೆ ಎಸ್ಐಟಿ
ಅಯೋಧ್ಯೆಯ ರಾಮ ಮಂದಿರದಲ್ಲಿ ಭಕ್ತರು ನೀಡುತ್ತಿದ್ದ ಕಾಣಿಕೆ ಮತ್ತು ನಗದು ಎಣಿಕೆಯಲ್ಲಿ ದೊಡ್ಡಮಟ್ಟದ ಅಕ್ರಮಗಳು ನಡೆದಿವೆ ಎಂದು ಪ್ರಾಥಮಿಕ ತನಿಖೆಯಲ್ಲಿ ಬೆಳಕಿಗೆ ಬಂದಿತ್ತು.ಪ್ರಕರಣದ ಪ್ರಮುಖ ಆರೋಪಿಗಳನ್ನು ಈಗಾಗಲೇ ಬಂಧಿಸಲಾಗಿದ್ದು, ಅವರಿಂದ ಅಕ್ರಮ ಹಣ, ವಾಹನಗಳು ಹಾಗೂ ಹೂಡಿಕೆ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಸ್ತುತ ಹೊಸ ಎಸ್ಐಟಿ ತಂಡವು ತನಿಖೆಯನ್ನು ತೀವ್ರಗೊಳಿಸಿದ್ದು, ಮುಚ್ಚಿದ ಲಕೋಟೆಯಲ್ಲಿ ಸುಪ್ರೀಂ ಕೋರ್ಟ್ಗೆ ವರದಿ ಸಲ್ಲಿಸಲಿದೆ.
ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




