ತಪ್ಪಿಸಿಕೊಳ್ಳಲು ಯತ್ನಿಸಿದ ಮಂಗಳೂರು ಬ್ಯಾಂಕ್ ದರೋಡೆಕೋರನಿಗೆ ಗುಂಡೇಟು!
ಅದು ಕರ್ನಾಟಕವನ್ನು ಬೆಚ್ಚಿ ಬೀಳಿಸಿದ್ದ ರಾಬರಿ ಕೇಸ್. ಮಟಮಟ ಮಧ್ಯಾಹ್ನವೇ ಸಹಕಾರಿ ಬ್ಯಾಂಕ್ಗೆ ನುಗ್ಗಿದ್ದ ದರೋಡೆಕೋರರು, ಪಿಸ್ತೂಲ್, ತಲ್ವಾರ್ ತೋರಿಸಿ ಕೆಜಿ ಕೆಜಿ ಚಿನ್ನದೊಂದಿಗೆ ಎಸ್ಕೇಪ್ ಆಗಿದ್ದರು. ಬಳಿಕ ಪೊಲೀಸರು ಅವರನ್ನು ಬಂಧಿಸಿದ್ದರು. ಇತ್ತೀಚೆಗೆ ಮಹಜರ್ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆರೋಪಿಗೆ ಗುಂಡು ಹಾರಿಸಲಾಗಿತ್ತು. ಇದೀಗ ಮತ್ತೊಬ್ಬ ಆರೋಪಿಗೆ ಗುಂಡು ಹಾರಿಸಲಾಗಿತ್ತು.

ಮಂಗಳೂರು, ಫೆಬ್ರವರಿ 01: ನಗರದ ಕೋಟೆಕಾರ್ ಸಹಕಾರಿ ಬ್ಯಾಂಕ್ನಲ್ಲಿ ಚಿನ್ನಾಭರಣ, ನಗದು ದರೋಡೆ (Bank Robbery) ಕೇಸ್ಗೆ ಸಂಬಂಧಿಸಿದಂತೆ ಇದೀಗ ಮತ್ತೊಬ್ಬ ಆರೋಪಿ ಮೇಲೆ ಪೊಲೀಸರು ಗುಂಡಿನ ದಾಳಿ ಮಾಡಿದ್ದಾರೆ. ಮಹಜರ್ ಸಂದರ್ಭದಲ್ಲಿ ಪೊಲೀಸರ ಮೇಲೆ ದಾಳಿ ನಡೆಸಿ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಮುರುಗನ್ ಡಿ ಮೇಲೆ ಪೊಲೀಸರಿಂದ ಗುಂಡು ಹಾರಿಸಲಾಗಿದೆ. ಮಂಗಳೂರು ಹೊರವಲಯದ ಉಳ್ಳಾಲದ ಅಜ್ಜಿನಡ್ಕ ಎಂಬಲ್ಲಿ ಘಟನೆ ನಡೆದಿದ್ದು, ಸದ್ಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.
ಆರೋಪಿ ದರೋಡೆಗೆ ಬಳಸಿದ್ದ ಪಿಸ್ತೂಲ್ ಅನ್ನು ಬಚ್ಚಿಟ್ಟಿದ್ದ. ಅದನ್ನು ರಿಕವರಿ ಮಾಡಲು ಆತನನ್ನು ಸ್ಥಳಕ್ಕೆ ಕರೆದುಕೊಂಡು ಹೋಗಲಾಗಿತ್ತು. ಈ ವೇಳೆ ಪೊಲೀಸ್ ಕಾನ್ಸ್ಟೆಬಲ್ ಮರ್ಮಾಂಗಕ್ಕೆ ಒದ್ದು ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನ ಮಾಡಿದ್ದಾನೆ. ಪಿಸಿ ಮಂಜುನಾಥ್ಗೆ ಗಾಯವಾಗಿದೆ. ಆರೋಪಿ ಮುರುಗನ್ ಡಿ ದೇವರ್ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದಂತೆ ಉಳ್ಳಾಲ ಇನ್ಸ್ಪೆಕ್ಟರ್ ಬಾಲಕೃಷ್ಣ ಆತನ ಕಾಲಿಗೆ ಶೂಟ್ ಮಾಡಿದ್ದಾರೆ.
ಹಾಡಹಗಲೇ ಬ್ಯಾಂಕ್ಗೆ ನುಗ್ಗಿ ಚಿನ್ನಾಭರಣ ದೋಚಿ ಎಸ್ಕೇಪ್ ಆಗಿದ್ದರು. ಜನವರಿ 17 ರಂದು ಮಂಗಳೂರಿನ ಕೋಟೆಕಾರು ಸಹಕಾರಿ ಬ್ಯಾಂಕ್ಗೆ ಎಂಟ್ರಿಕೊಟ್ಟಿದ್ದ ಗ್ಯಾಂಗ್, ಕಾರ್ನಲ್ಲೇ ಎಸ್ಕೇಪ್ ಆಗಿತ್ತು. ಅದೇ ಗ್ಯಾಂಗ್ನ್ನು ಪೊಲೀಸರ ಬಲೆಗೆ ಬಿದ್ದಿತ್ತು. ಕೇರಳ ಮೂಲಕ ತಮಿಳುನಾಡು ಸೇರಿದ್ದ ಮುರುಗನ್ ಡಿ. ದೇವರ್, ಯೋಶುವಾ ರಾಜೇಂದ್ರನ್, ಕಣ್ಣನ್ ಮಣಿಯನ್ನ ಇತ್ತೀಚೆಗೆ ತಮಿಳುನಾಡಿನ ತಿರುವನ್ವೇಲಿಯಲ್ಲಿ ಬಂಧಿಸಲಾಗಿತ್ತು.
ಇದನ್ನೂ ಓದಿ: ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನ: ಮಂಗಳೂರು ಬ್ಯಾಂಕ್ ದರೋಡೆ ಆರೋಪಿಗೆ ಖಾಕಿ ಫೈರಿಂಗ್
ದರೋಡೆಕೋರರನ್ನ ಇತ್ತೀಚೆಗೆ ಮಂಗಳೂರಿಗೆ ಕರೆದುಕೊಂಡು ಬರಲಾಗುತ್ತಿತ್ತು. ಸಂಜೆ 4.20 ರ ಸುಮಾರಿಗೆ ತಲಪಾಡಿ ಅಲಂಗಾರು ಗುಡ್ಡದ ಬಳಿ ಕರೆತಂದು ಸ್ಥಳ ಮಹಜರು ಮಾಡಲಾಗ್ತಿತ್ತು. ಈ ವೇಳೆ ಪ್ರಮುಖ ಆರೋಪಿ ಕಣ್ಣನ್ ಮಣಿ ಬಿಯರ್ ಬಾಟಲಿಯಿಂದ ಪೊಲೀಸರ ಮೇಲೆಯೇ ಹಲ್ಲೆ ನಡೆಸಿದ್ದ. ಪಿಐ ಬಾಲಕೃಷ್ಣ, ಪಿಸಿ ನಿತಿನ್, ಸಿಸಿಬಿ ಸಿಬ್ಬಂದಿ ಅಂಜನಪ್ಪ ಮೇಲೆ ದಾಳಿ ಮಾಡಿದ್ದ. ಕೂಡಲೇ ಅಲರ್ಟ್ ಆದ ಮಂಗಳೂರು ಸಿಸಿಬಿ ಇನ್ಸ್ಪೆಕ್ಟರ್ ರಫೀಕ್, ಆರೋಪಿ ಮೇಲೆ ಗುಂಡಿನ ದಾಳಿ ಮಾಡಿದ್ದರು.
15 ಕೋಟಿ ಮೌಲ್ಯದ ಚಿನ್ನ: 11 ಲಕ್ಷ ರೂ ಹಣ ದರೋಡೆ!
ಇನ್ನು ಕೋಟೆಕಾರು ಬ್ಯಾಂಕ್ನಿಂದ ಎಷ್ಟು ಚಿನ್ನ ದರೋಡೆ ಆಗಿದೆ ಅನ್ನೋ ಮಾಹಿತಿ ಇರ್ಲಿಲ್ಲ. ಆರಂಭದಲ್ಲಿ 12 ಕೋಟಿ ರೂ. ಮೌಲ್ಯದ ಚಿನ್ನ ಅಂತಾ ಹೇಳಿದ್ರೆ, ಪೊಲೀಸರ ಮುಂದೆ ನಾಲ್ಕು ಕೋಟಿ ಮೌಲ್ಯದ ಚಿನ್ನ ಅಂತಾ ಹೇಳಲಾಗಿತ್ತು. ಆದರೆ ಎಲ್ಲಾ ಲೆಕ್ಕಹಾಕಿದ ಬಳಿಕ ಬರೋಬ್ಬರಿ 15 ಕೋಟಿ ರೂ. ಮೌಲ್ಯದ ಚಿನ್ನ ಕಳ್ಳತನ ಆಗಿರೋದು ಗೊತ್ತಾಗಿತ್ತು. ಬ್ಯಾಂಕ್ನಲ್ಲಿ ಆ ದಿನ ಒಟ್ಟು 23 ಕೋಟಿ ರೂ. ಮೌಲ್ಯದ ಚಿನ್ನ ಇತ್ತು. ಆದರೆ ದರೋಡೆಕೋರರು, 15 ಕೋಟಿ ರೂ. ಮೌಲ್ಯದ ಚಿನ್ನವನ್ನ ಮಾತ್ರ ಲೂಟಿ ಮಾಡಿ ಎಸ್ಕೇಪ್ ಆಗಿದ್ದರು. ಇದರ ಜತೆ 11 ಲಕ್ಷ 75 ಸಾವಿರ ರೂ ಹಣವನ್ನೂ ದೋಚಿದ್ದರು.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 2:52 pm, Sat, 1 February 25