ಚಲಿಸುತ್ತಿದ್ದ ಬಸ್ಸಿನಿಂದ ರಸ್ತೆಗೆ ಬಿದ್ದು ಪ್ರಜ್ಞೆ ತಪ್ಪಿದ್ದ ತಾಯಿ-ಮಗುವನ್ನು ತಮ್ಮ ಬಸ್ಸಿನಲ್ಲಿ ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಚಾಲಕ, ಕಂಡಕ್ಟರ್
ಮಂಗಳೂರಿನಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ-ಮಗುವನ್ನು ಸಿಟಿ ಬಸ್ ಚಾಲಕ ದಯಾನಂದ್ ಮತ್ತು ನಿರ್ವಾಹಕ ಸಂದೀಪ್ ರಕ್ಷಿಸಿದ್ದಾರೆ. ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಕೆಳಗಿಳಿಸಿ, ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ. ಈ ಮಾನವೀಯ ಕಾರ್ಯಕ್ಕೆ ಸಾರ್ವಜನಿಕ ವಲಯದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಕರಾವಳಿಯ ಜನರ ಮಾನವೀಯತೆಗೆ ಇದು ಮತ್ತೊಂದು ಸಾಕ್ಷಿ.

ಮಂಗಳೂರು, ಮೇ,30 : ಕರಾವಳಿಯ ಜನರ ರಕ್ತದಲ್ಲೇ ಮಾನವೀಯತೆ ಇದೆ ಎಂಬುದಕ್ಕೆ ಮತ್ತೊಂದು ಸಾಕ್ಷಿ ಇದು. ಮಂಗಳೂರು ನಗರದಲ್ಲಿ ಚಲಿಸುತ್ತಿದ್ದ ಬಸ್ಸಿನಿಂದ ಆಕಸ್ಮಿಕವಾಗಿ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ತಾಯಿ ಮತ್ತು ಮಗುವಿನ ರಕ್ಷಣೆಗೆ ಧಾವಿಸಿದ ಸಿಟಿ ಬಸ್ ಚಾಲಕ ಮತ್ತು ನಿರ್ವಾಹಕ, ಸಾರ್ವಜನಿಕ ಪ್ರಯಾಣಿಕರನ್ನು ಕೆಳಗಿಳಿಸಿ ಅದೇ ಬಸ್ಸಿನಲ್ಲಿ ಗಾಯಾಳುಗಳನ್ನು ನೇರವಾಗಿ ಆಸ್ಪತ್ರೆಗೆ ಕೊಂಡೊಯ್ಯುವ ಮೂಲಕ ರಿಯಲ್ ಹೀರೊಗಳಾಗಿದ್ದಾರೆ. ಇದೀಗ ಈ ಬಗ್ಗೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಯನ್ನು ಪಡೆದುಕೊಂಡಿದ್ದಾರೆ.
ಶುಕ್ರವಾರ ಮಂಗಳೂರಿನ ಕಾವೂರು ಕಡೆಯಿಂದ ಕುಂಜತ್ತಬೈಲ್ ಕಡೆಗೆ ಸಾಗುತ್ತಿದ್ದ ರೂಟ್ ನಂಬರ್ 13B ಯ ‘ಮಾಸ್ಟರ್’ (Master) ಹೆಸರಿನ ಸಿಟಿ ಬಸ್ ಮರಕಡ ಜಂಕ್ಷನ್ ತಲುಪುತ್ತಿತ್ತು. ಇದೇ ವೇಳೆ ಎದುರಿನಿಂದ ಬರುತ್ತಿದ್ದ ಮತ್ತೊಂದು ಬಸ್ಸಿನಿಂದ ತಾಯಿ ಮತ್ತು ಆಕೆಯ ಪುಟ್ಟ ಮಗು ಆಕಸ್ಮಿಕವಾಗಿ ಕೆಳಗೆ ಬಿದ್ದಿದ್ದಾರೆ. ಬಿದ್ದ ರಭಸಕ್ಕೆ ಅವರಿಬ್ಬರೂ ರಸ್ತೆಯಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದನ್ನು ನೋಡಿ ಸ್ಥಳೀಯರು ಹಾಗೂ ದಾರಿಹೋಕರು ತೀವ್ರ ಆತಂಕಕ್ಕೆ ಒಳಗಾಗಿದ್ದರು.
ಈ ಭೀಕರ ದೃಶ್ಯವನ್ನು ಗಮನಿಸಿದ ಮಾಸ್ಟರ್ ಬಸ್ ಚಾಲಕ ದಯಾನಂದ್ ಮತ್ತು ನಿರ್ವಾಹಕ (ಕಂಡಕ್ಟರ್) ಸಂದೀಪ್ ಅವರು ಸಮಯ ಪ್ರಜ್ಞೆ ಮೆರೆದಿದ್ದಾರೆ. ತಕ್ಷಣವೇ ತಮ್ಮ ಬಸ್ಸನ್ನು ರಸ್ತೆ ಬದಿಗೆ ನಿಲ್ಲಿಸಿ ಗಾಯಾಳುಗಳ ಬಳಿಗೆ ಧಾವಿಸಿದ್ದಾರೆ. ತಾಯಿ-ಮಗುವಿನ ಸ್ಥಿತಿ ಗಂಭೀರವಾಗಿರುವುದನ್ನು ಅರಿತು ಆಂಬ್ಯುಲೆನ್ಸ್ಗೆ ಕಾಯುತ್ತಾ ಸಮಯ ವ್ಯರ್ಥ ಮಾಡದ ಸಿಬ್ಬಂದಿ, ತಮ್ಮ ಬಸ್ಸಿನಲ್ಲಿದ್ದ ಪ್ರಯಾಣಿಕರಿಗೆ ಪರಿಸ್ಥಿತಿಯನ್ನು ವಿವರಿಸಿ ಕೆಳಗಿಳಿಯಲು ವಿನಂತಿಸಿದ್ದಾರೆ. ತಕ್ಷಣವೇ ಅವರಿಬ್ಬರನ್ನೂ ಅದೇ ಸಿಟಿ ಬಸ್ಸಿಗೆ ಹತ್ತಿಸಿಕೊಂಡು ನೇರವಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಿ ತುರ್ತು ಚಿಕಿತ್ಸೆ ಕೊಡಿಸಿದ್ದಾರೆ.
ಇದನ್ನೂ ಓದಿ: ‘ಸಿಎಂ ಸ್ಥಾನ ಬಿಟ್ಟು ಹೋಗುವ ಮುನ್ನ ಆ 5,000 ಕೋಟಿ ರೂ. ಎಲ್ಲಿದೆ ಹೇಳಿ!’: ಸಿದ್ದರಾಮಯ್ಯಗೆ ಬಹಿರಂಗ ಪತ್ರ ಬರೆದ ಸುರೇಶ್ ಕುಮಾರ್
ಸಕಾಲದಲ್ಲಿ ಸ್ಪಂದಿಸಿ ಇಬ್ಬರು ಅಮೂಲ್ಯ ಜೀವಗಳನ್ನು ಉಳಿಸಿದ ಚಾಲಕ ದಯಾನಂದ್ ಮತ್ತು ಕಂಡಕ್ಟರ್ ಸಂದೀಪ್ ಅವರ ಈ ನಿಸ್ವಾರ್ಥ ಮಾನವೀಯ ಕಾರ್ಯಕ್ಕೆ ಮಂಗಳೂರಿನ ಸಾರ್ವಜನಿಕ ವಲಯದಲ್ಲಿ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಶ್ಲಾಘನೆ ಮತ್ತು ಪ್ರಶಂಸೆ ವ್ಯಕ್ತವಾಗುತ್ತಿದೆ.
ರಾಜ್ಯ ಸುದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ





