ಪಾಳುಬಿದ್ದ ಸರ್ಕಾರಿ ಶಾಲೆಗೆ ಲಕ್ಷ ಲಕ್ಷ ಸುರಿದು ಅಭಿವೃದ್ಧಿ ಮಾಡಿದ ಸಮಾಜಮುಖಿ ತಂಡ! ಉಜಿರೆಯಲ್ಲೊಂದು ಮಾದರಿ ಕೆಲಸ

ಪಾಳುಬಿದ್ದ ಸರ್ಕಾರಿ ಶಾಲೆಯೊಂದನ್ನು ಸಮಾಜಮುಖಿ ತಂಡವೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸರ್ಕಾರಕ್ಕೆ ಹಸ್ತಾಂತರಿಸಿದ ಅಪರೂಪದ ವಿದ್ಯಮಾನ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ನಡೆದಿದೆ. ತಂಡದ ಮಾದರಿ ಕಾರ್ಯದಲ್ಲಿ ಸಾರ್ವಜನಿಕರು, ಪತ್ರಕರ್ತರೂ ಕೈಜೋಡಿಸಿದ್ದಾರೆ. ಆ ಕುರಿತ ವಿವರ ಇಲ್ಲಿದೆ.

ಪಾಳುಬಿದ್ದ ಸರ್ಕಾರಿ ಶಾಲೆಗೆ ಲಕ್ಷ ಲಕ್ಷ ಸುರಿದು ಅಭಿವೃದ್ಧಿ ಮಾಡಿದ ಸಮಾಜಮುಖಿ ತಂಡ! ಉಜಿರೆಯಲ್ಲೊಂದು ಮಾದರಿ ಕೆಲಸ
ಪಾಳುಬಿದ್ದ ಸರ್ಕಾರಿ ಶಾಲೆಗೆ ಲಕ್ಷ ಲಕ್ಷ ಸುರಿದು ಅಭಿವೃದ್ಧಿ ಮಾಡಿದ ಸಮಾಜಮುಖಿ ತಂಡ!
Edited By:

Updated on: May 25, 2024 | 4:15 PM

ಮಂಗಳೂರು, ಮೇ 25: ಸರ್ಕಾರಿ ಶಾಲೆಗಳತ್ತ (Government Schools) ಸರ್ಕಾರವೇ ಗಮನ ಹರಿಸುವುದಿಲ್ಲ ಎಂಬ ಆರೋಪಗಳು ಆಗಾಗ ಕೇಳಿಬರುತ್ತವೆ. ಆದರೆ, ಪಾಳುಬಿದ್ದ ಸ್ಥಿತಿಯಲ್ಲಿದ್ದ ಅಂತಹ ಸರ್ಕಾರಿ ಶಾಲೆಯೊಂದನ್ನು ಸಮಾಜಮುಖಿ ತಂಡವೊಂದು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಅದನ್ನು ಅಭಿವೃದ್ಧಿಪಡಿಸಿ ಸರ್ಕಾರಕ್ಕೆ ಹಸ್ತಾಂತರಿಸಿರುವ ಅಪರೂಪದ ಮಾದರಿ ವಿದ್ಯಮಾನ ದಕ್ಷಿಣ ಕನ್ನಡ (Dakshina Kannada) ಜಿಲ್ಲೆಯ ಎಜುಕೇಷನ್ ಹಬ್ ಎಂದೇ ಖ್ಯಾತಿ ಪಡೆದ ಉಜಿರೆಯಲ್ಲಿ (Ujire) ನಡೆದಿದೆ. ಈ ಕೆಲಸಕ್ಕೆ, ಸಂಘಸಂಸ್ಥೆಗಳು, ಪರ್ತಕರ್ತರು ಕೂಡ ಸಾಥ್ ನೀಡಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಉಜಿರೆಯ ಹಳೇಪೇಟೆಯಲ್ಲಿರುವ ಸರ್ಕಾರಿ ಶಾಲೆಯ ಹೆಂಚುಗಳು ಹಾರಿ ಹೋಗಿ, ರೀಪು ಪಕ್ಕಾಸುಗಳೂ ಮುರಿದು ಬಿದ್ದ ಘಟನೆ ಕಳೆದ ವರ್ಷ ಸಂಭವಿಸಿತ್ತು. ಆ ಸಂದರ್ಭದಲ್ಲಿ ಶಾಲೆಯ ಒಂದು ಕಾರ್ಯಕ್ರಮಕ್ಕೆ ‘ಬದುಕು ಕಟ್ಟೋಣ ಬನ್ನಿ’ ಎಂಬ ತಂಡದ ಮೋಹನ್ ಕುಮಾರ್ ಹಾಜರಾಗಿದ್ದರು. ಈ ವೇಳೆ ಅವರ ಎದುರಿಗೇ ಹಂಚೊಂದು ಬಿದ್ದಿತ್ತು. ಅದನ್ನು ನೋಡಿ ಶಾಲೆಯ ಕಾಯಕಲ್ಪಕ್ಕೆ ಕೈ ಹಾಕಲು ಅವರು ಮನ ಮಾಡಿದ್ದರು. ನಂತರ ಅವರು ರೋಟರಿ ಸೇರಿದಂತೆ ವಿವಿಧ ಸಂಘಟನೆಗಳ ಸಹಾಯ ಪಡೆದರು. ಬೆಳ್ತಂಗಡಿ ಪರ್ತಕರ್ತರ ಸಂಘ ಕೂಡ ಕೈಜೋಡಿಸಿತ್ತು. ಶಾಲೆಯ ಅಭಿವೃದ್ಧಿಗೆ 35 ಲಕ್ಷ ರೂಪಾಯಿ ಬೇಕಾಗಿದ್ದು ಅದನ್ನು ಇವರೆಲ್ಲಾ ಹೊಂದಿಸಿದ್ದಾರೆ.

ಅಭಿವೃದ್ಧಿಗೊಂಡ ಸರ್ಕಾರಿ ಶಾಲೆಯ ತರಗತಿ ಕೊಠಡಿ

‘ಬದುಕು ಕಟ್ಟೋಣ ಬನ್ನಿ ಸೇವಾ ಟ್ರಸ್ಟ್’ನಿಂದ ‘ನಮ್ಮೂರ ಕನ್ನಡ ಶಾಲೆ ಉಳಿಸೋಣ ಬನ್ನಿ’ ಎಂಬ ಕಾರ್ಯಕ್ರಮದ ಅಡಿ ಇದೇ ರೀತಿ ಈಗಾಗಲೇ 2 ಶಾಲೆಗಳನ್ನು ನವೀಕರಿಸಲಾಗಿದೆ. ಇನ್ನು ಮತ್ತೊಂದು ಸರ್ಕಾರಿ ಕನ್ನಡ ಮಾದ್ಯಮ ಶಾಲೆಯ ಕೆಲಸ ಶೇ 80 ರಷ್ಟಾಗಿದೆ.

ಹಸ್ತಾಂತರ ಕಾರ್ಯಕ್ರಮವನ್ನು ಉಜಿರೆಯಲ್ಲಿ ಹಮ್ಮಿಕೊಳ್ಳಲಾಗಿತ್ತು. ಎಸ್​ಡಿಎಂ ಕಾಲೇಜಿನ ಮಾಜಿ ಪ್ರಾಂಶುಪಾಲ ದಿ. ಡಾ ಯಶೋವರ್ಮ ನೆನೆಪಿನಾರ್ಥ ಸುಸಜ್ಜಿದ ಶಾಲೆಯನ್ನು ಸರ್ಕಾರಕ್ಕೆ ಹಸ್ತಾಂತರ ಮಾಡಲಾಯಿತು. ಈ ವೇಳೆ ಎರಡೂ ಶಾಲೆಯ ವಿದ್ಯಾರ್ಥಿಗಳಿಗೆ ಶಾಲಾ ಬ್ಯಾಗ್ ಮತ್ತು ಶೂ ವಿತರಿಸಲಾಯಿತು.

ಸರ್ಕಾರಿ ಶಾಲೆ ದುಸ್ಥಿತಿಯಲ್ಲಿದ್ದ ಸಂದರ್ಭದ ಚಿತ್ರ

ಇದನ್ನೂ ಓದಿ: ಹರೀಶ್ ಪೂಂಜಾ ವಿರುದ್ಧ ಕೇಸ್​: ಬೆಂಗಳೂರಿನತ್ತ ಹೊರಟ ಶಾಸಕ, ಹೈಕೋರ್ಟ್​ಗೆ ಅರ್ಜಿ ಸಲ್ಲಿಕೆ ಸಾಧ್ಯತೆ

ಈ ಕಾರ್ಯಕ್ರಮದಡಿ ಒಟ್ಟು 25 ಶಾಲೆಗಳನ್ನು ಅಭಿವೃದ್ಧಿಪಡಿಸುವ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಅದರಲ್ಲಿ ಈಗ ಮೂರು ಶಾಲೆಯ ಅಭಿವೃದ್ಧಿ ಕಾರ್ಯ ಮುಗಿದಿದ್ದು ಇನ್ನು ಒಂದು ಕಾಮಗಾರಿ ಹಂತದಲ್ಲಿದೆ. ಈ ಟ್ರಸ್ಟ್ ಈ ಹಿಂದೆ ಪ್ರವಾಹದಿಂದ ಮನೆ ಕಳೆದುಕೊಂಡಿದ್ದ ಚಾರ್ಮಡಿ ನಿವಾಸಿಗಳಿಗೆ ಮನೆ ನಿರ್ಮಿಸಿಕೊಟ್ಟಿತ್ತು. ಇನ್ನು ಸಾಕಷ್ಟು ಸಮಾಜಮುಖಿ ಕಾರ್ಯ ಮಾಡುತ್ತಾ ಬೆಳ್ತಂಗಡಿ ಸುತ್ತಾಮುತ್ತ ಜನರ ಮೆಚ್ಚುಗೆಗೆ ಕಾರಣವಾಗಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ

Loading...
Unable to load recommendations.
Follow Us