
ದಾವಣಗೆರೆ, ಸೆಪ್ಟೆಂಬರ್ 17: ಹರಿಹರ ಪಂಚಮಸಾಲಿ ಮಠದ ಟ್ರಸ್ಟ್ನಿಂದ 10 ಕೋಟಿ ರೂಪಾಯಿ ಅವ್ಯವಹಾರ ನಡೆದಿದೆ ಎಂದು ಮಠದ ಲೆಕ್ಕಕೊಡಿ ಚಳುವಳಿ ಸಮಿತಿ ಗಂಭೀರ ಆರೋಪ ಮಾಡಿದ್ದು, ಈ ಬಗ್ಗೆ ತನಿಖೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಮಠಕ್ಕೆ ರಾಜ್ಯ ಸರ್ಕಾರದ ಹಿಂದುಳಿದ ವರ್ಗಗಳ ಇಲಾಖೆಯಿಂದ ಹತ್ತು ಕೋಟಿ, ಪಂಚಾಯತ ರಾಜ್ ಇಲಾಖೆಯಿಂದ 3 ಕೋಟಿ ಸೇರಿದಂತೆ ವಿವಿಧ ಇಲಾಖೆಗಳಿಂದ ಒಟ್ಟು 16 ಕೋಟಿ ರೂಪಾಯಿ ಹಣ ಬಂದಿದೆ. ಆದರೆ ಆ ಪೈಕಿ ಆರು ಕೋಟಿ ರೂಪಾಯಿ ಕಾಮಗಾರಿ ಆಗಿದ್ದು, ಉಳಿದ 10 ಕೋಟಿ ಹಣದಲ್ಲಿ ಏನೂ ಮಾಡಿಲ್ಲ ಎಂದು ಸಮಿತಿ ದೂರಿದೆ.
ಕಾಮಗಾರಿ ಆಧಾರದ ಮೇಲೆ ಹಣ ಬಿಡುಗಡೆ ಮಾಡಬೇಕು. ಆದರೆ ಇಲ್ಲಿ ಮಾತ್ರ ಕಟ್ಟಡವೇ ಇಲ್ಲದಿದ್ದರೂ ಹಣ ಬಿಡುಗಡೆಯಾಗಿದೆ. ಕೇವಲ 44 ದಿನಗಳಲ್ಲಿ ಹತ್ತುಕೋಟಿ ಹಣ ನೀಡಲಾಗಿದೆ. ಸರ್ಕಾರಕ್ಕೆ ತಪ್ಪು ಮಾಹಿತಿ ನೀಡಿ ಅನುದಾನ ಬಳಕೆ ಪ್ರಮಾಣ ಪತ್ರ ನೀಡಲಾಗಿದ್ದು, ಸರ್ಕಾರವು ಮಠಕ್ಕೆ ನೀಡಿದ್ದ ಅನುದಾನವನ್ನು ಕೆಲವು ಟ್ರಸ್ಟಿಗಳು ತಮ್ಮ ಸ್ವಂತಕ್ಕೆ ದುರ್ಬಳಕೆ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಈ ಬಗ್ಗೆ ಸತ್ಯಾಸತ್ಯತೆ ತಿಳಿಯಲು ಈ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಒಳಪಡಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ಅಲ್ಲದೆ, ದುರ್ಬಳಕೆಯಾದ ಅನುದಾನವನ್ನು ಅದನ್ನು ದುರ್ಬಳಕೆ ಮಾಡಿಕೊಂಡವರಿಂದಲೇ ವಸೂಲಿ ಮಾಡಬೇಕು ಎಂದು ಲೆಕ್ಕಕೊಡಿ ಚಳುವಳಿ ಸಮಿತಿ ಆಗ್ರಹಿಸಿದೆ.
ಇದನ್ನೂ ಓದಿ: ದಾವಣಗೆರೆಯ ತುಲಾಭವನಕ್ಕೆ ಮಾರುಹೋದ ಆಕ್ಸ್ಫರ್ಡ್ ವಿವಿ! ತೂಕ-ಅಳತೆ ಸಾಧನಗಳ ಕುರಿತು ಉಪನ್ಯಾಸಕ್ಕೆ ಬಸವರಾಜ್ ಯಳಮಲ್ಲಿಗೆ ಆಹ್ವಾನ
ಸರ್ಕಾರವು ಅನುದಾನ ಬಿಡುಗಡೆಗೆ ವಿಧಿಸಿದ ಷರತ್ತು ಮತ್ತು ನಿಬಂಧನೆಗಳನ್ನು ಅಂದಿನ ಡಿಸಿ, ಹಿಂದುಳಿದವರ ಕಲ್ಯಾಣ ಇಲಾಖೆ ಅಧಿಕಾರಿಗಳು ಗಾಳಿಗೆ ತೂರಿದ್ದಾರೆ. ಕಟ್ಟಡ ಕಾಮಗಾರಿ ಮತ್ತು ಸ್ಥಳ ಪರಿಶೀಲನೆ ಮಾಡದೆ ಮಠದ ಕೆಲವು ಟ್ರಸ್ಟಿಗಳೊಂದಿಗೆ ಶಾಮೀಲಾಗಿ, ಕಾಮಗಾರಿ ಪೂರ್ಣಗೊಳ್ಳದಿದ್ದರೂ ಕೇವಲ 44 ದಿನಗಳಲ್ಲಿ ಹಣ ಬಿಡುಗಡೆ ಮಾಡಿ ಸರ್ಕಾರದ ದುಡ್ಡನ್ನು ದುರುಪಯೋಗ ಮಾಡಿದ್ದಾರೆ ಎಂದು ಲೆಕ್ಕಕೊಡಿ ಚಳುವಳಿ ಸಮಿತಿ ಆರೋಪಿಸಿದೆ. ಮನವಿಯ ಜೊತೆಗೆ ಕೆಲ ದಾಖಲೆಗಳ ಪ್ರತಿಯನ್ನು ಸಹ ಸಮಿತಿ ಸಲ್ಲಿಸಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.