ನಿರ್ಜನ ಪ್ರದೇಶದಲ್ಲಿ ಡ್ರಾಪ್​ ಕೊಡುವ ಮುಂಚೆ ಹುಷಾರ್: ಅರಣ್ಯದೊಳಗೆ ಎಳೆದೊಯ್ದು ಸಾವಿರಾರು ರೂ. ಸುಲಿಗೆ

| Updated By: ಗಂಗಾಧರ​ ಬ. ಸಾಬೋಜಿ

Updated on: Nov 08, 2023 | 10:19 PM

Davanagere News: ಡ್ರಾಪ್‌ ಕೇಳುವ ನೆಪದಲ್ಲಿ ಬೈಕ್‌ ನಿಲ್ಲಿಸಿ ಸವಾರನನ್ನು ಅರಣ್ಯದೊಳಕ್ಕೆ ಎಳೆದೊಯ್ದು 58,500 ಹಣವನ್ನು ಕಿತ್ತುಕೊಂಡ ಘಟನೆ ಜಗಳೂರು ತಾಲ್ಲೂಕಿನ ಬ್ಯಾಟಗಾರನಹಳ್ಳಿ ಕ್ರಾಸ್‌ ಹತ್ತಿರ ನಡೆದಿದೆ. ಅದೇ ರೀತಿಯಾಗಿ ಮತ್ತೊಂದು ಪ್ರಕರಣದಲ್ಲಿ ಮನೆಯ ಬೀಗ ಹೊಡೆದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ಚನ್ನಗಿರಿ ಠಾಣೆ ಪೊಲೀಸರು ಬಂಧಿತನಿಂದ 4.50 ಲಕ್ಷ ಮೌಲ್ಯದ 89.52 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ.

ನಿರ್ಜನ ಪ್ರದೇಶದಲ್ಲಿ ಡ್ರಾಪ್​ ಕೊಡುವ ಮುಂಚೆ ಹುಷಾರ್: ಅರಣ್ಯದೊಳಗೆ ಎಳೆದೊಯ್ದು ಸಾವಿರಾರು ರೂ. ಸುಲಿಗೆ
ಸಾಂದರ್ಭಿಕ ಚಿತ್ರ
Follow us on

ದಾವಣಗೆರೆ, ನವೆಂಬರ್​​​​ 8: ಡ್ರಾಪ್‌ (lift) ಕೇಳುವ ನೆಪದಲ್ಲಿ ಬೈಕ್‌ ನಿಲ್ಲಿಸಿ ಸವಾರನನ್ನು ಅರಣ್ಯದೊಳಕ್ಕೆ ಎಳೆದೊಯ್ದು 58,500 ಹಣವನ್ನು ಕಿತ್ತುಕೊಂಡ ಘಟನೆ ಜಗಳೂರು ತಾಲ್ಲೂಕಿನ ಬ್ಯಾಟಗಾರನಹಳ್ಳಿ ಕ್ರಾಸ್‌ ಹತ್ತಿರ ನಡೆದಿದೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮದ ನಾಗೇಶ್‌ ಹಣ ಕಳೆದುಕೊಂಡವರು. ನವೆಂಬರ್ 6ರಂದು ಸಂಜೆ 6 ಗಂಟೆ ಸುಮಾರಿಗೆ ನಾಗೇಶ್ ಅವರು ಕೃಷಿ ಯಂತ್ರದ ಬಾಡಿಗೆ ಹಣವನ್ನು ಸಂಗ್ರಹಿಸಿ ಜ್ಯೋತಿಪುರದಿಂದ ಜಗಳೂರಿಗೆ ಮರಳುತ್ತಿದ್ದರು. ಆಗ ಅಪರಿಚಿತ ವ್ಯಕ್ತಿಯೊಬ್ಬ ರಸ್ತೆಯಲ್ಲಿ ನಿಂತು ಡ್ರಾಪ್‌ ಕೇಳಿದ್ದಾನೆ. ಬೈಕ್‌ ನಿಲ್ಲಿಸಿದ ಕೂಡಲೇ ಇನ್ನೂ ಮೂವರು ಓಡಿಬಂದು ನಾಗೇಶ್ ಅವರನ್ನು ಅರಣ್ಯದೊಳಕ್ಕೆ ಎಳೆದೊಯ್ದು ಹಣ ಕಸಿದುಕೊಂಡು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಜಗಳೂರು ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ಮನೆ ಬೀಗ ಕ್ಷಣದಲ್ಲಿ ಮುರಿಯುವ ಚಾಲಾಕಿ ಅಂದರ್: 4.50 ಲಕ್ಷ ರೂ ಮೌಲ್ಯದ ಚಿನ್ನ ವಶಕ್ಕೆ

ಮನೆಯ ಬೀಗ ಹೊಡೆದು ಚಿನ್ನಾಭರಣ ದೋಚಿದ್ದ ಆರೋಪಿಯನ್ನು ಬಂಧಿಸಿರುವ ಚನ್ನಗಿರಿ ಠಾಣೆ ಪೊಲೀಸರು ಬಂಧಿತನಿಂದ 4.50 ಲಕ್ಷ ಮೌಲ್ಯದ 89.52 ಗ್ರಾಂ ಬಂಗಾರದ ಆಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚನ್ನಗಿರಿಯ ವಡ್ನಾಳ್ ರಾಜಣ್ಣ ಬಡಾವಣೆಯ ನಿವಾಸಿ ಮಹಮ್ಮದ್ ಗೌಸ್ ಎಸ್‌. ಅಲಿಯಾಸ್ ಅಸ್ಲಾಂ ಬಂಧಿತ ಆರೋಪಿ.

ಇದನ್ನೂ ಓದಿ: ಊರ ಜಾತ್ರೆ ಸಿದ್ಧತೆ ವೇಳೆ ಗಲಾಟೆ; ಪರಿಚಿತರಿಂದಲೇ ಯುವಕನ ಕೊಲೆ

ಅಕ್ಟೋಬರ್ 14ರಂದು ಚನ್ನಗಿಯ ಕಾಳಮ್ಮನ ಬೀದಿಯಲ್ಲಿರುವ ಜ್ಯೋತಿ, ಮಂಜುನಾಥ್ ಎಂಬುವರ ಮನೆಯ ಬೀಗ ಹೊಡೆದು ಬಂಗಾರ, ಬೆಳ್ಳಿ ಆಭರಣ ಹಾಗೂ 1 ಲಕ್ಷ ನಗದು ಹಣವನ್ನು ಕಳ್ಳತನ ಮಾಡಲಾಗಿತ್ತು. ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು.

ಇದನ್ನೂ ಓದಿ: ಚಿತ್ರದುರ್ಗ: ಚಿನ್ನ ಖರೀದಿಸುವ ಸೋಗಿನಲ್ಲಿ ಬಾಲಕನ ಜೊತೆ ಬಂದು ಕಳ್ಳಿಯ ಕೈಚಳಕ, ವಿಡಿಯೋ ವೈರಲ್

ಡಿವೈಎಸ್ಪಿ ಪ್ರಶಾಂತ್ ಜಿ. ಮುನ್ನೋಳಿ ಮಾರ್ಗದರ್ಶನದಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ನಿರಂಜನ ಬಿ. ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ಕಚೇರಿಯ ಪಿ.ಎಸ್.ಐ. ಮಂಜುನಾಥ ಎಸ್. ಕಲ್ಲೇದವರ್, ಎ.ಎಸ್.ಐ. ಶಶಿಧರ್ ಮತ್ತು ಸಿಬ್ಬಂದಿಯಾದ ರುದ್ರೇಶ್, ಬಿರೇಶ್ ಪುಟ್ಟಕ್ಕನವರ್, ನರೇಂದ್ರ ಸ್ವಾಮಿ, ಶ್ರೀನಿವಾಸಮೂರ್ತಿ, ರಮೇಶ, ರಂಗಪ್ಪ, ರೇವಣಸಿದ್ದಪ್ಪ ಅವರ ತಂಡ ಕಾರ್ಯಾಚರಣೆ ನಡೆಸಿತ್ತು. ಬಂಧಿತ ಆರೋಪಿ ವಿರುದ್ಧ ಚಿತ್ರದುರ್ಗ ನಗರ ಹಾಗೂ ಹೊಳಲ್ಕೆರೆ ಠಾಣೆಗಳಲ್ಲೂ ಪ್ರಕರಣ ದಾಖಲಾಗಿವೆ.

ಉಡುಪಿಯಲ್ಲಿ ಕುಡಿದ ಮತ್ತಿನಲ್ಲಿ ಕಿರಿಕ್​

ಉಡುಪಿ: ಕುಡಿದ ಮತ್ತಿನಲ್ಲಿ ಮದ್ಯವೆಸನಿಯೊಬ್ಬ ರಸ್ತೆ ಬದಿ ನಿಲ್ಲಿಸಿದ್ದ ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಉಡುಪಿ ನಗರದ ಸಿಟಿ ಬಸ್ ನಿಲ್ದಾಣ ಬಳಿ ನಡೆದಿದೆ. ಅಷ್ಟೇ ಅಲ್ಲದೆ, ಎರಡು ಕಾರು, ಒಂದು ಸ್ಕೂಟಿಯನ್ನು ನಜ್ಜುಗುಜ್ಜು ಮಾಡಿದ್ದಾನೆ. ಜೊತೆಗೆ ಸಾರ್ವಜನಿಕರ ಜೊತೆ ವಾಗ್ವಾದ ಜಟಾಪಟಿ ನಡೆಸಿದ ವೇಳೆ ಸ್ಥಳಕ್ಕಾಗಮಿಸಿದ ಟ್ರಾಫಿಕ್ ಪೊಲೀಸರ ಜೊತೆಯು ಕಿರಿಕ್ ಮಾಡಿಕೊಂಡಿದ್ದಾನೆ. ಬಳಿಕ ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದು, ಟ್ರಾಫಿಕ್ ಪೊಲೀಸರಿಂದ ಡ್ರಂಕ್ ಆಂಡ್ ಡ್ರೈವ್ ಕೇಸ್ ದಾಖಲು ಮಾಡಲಾಗಿದೆ.

ಮತ್ತಷ್ಟು ಕ್ರೈಂ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.