ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ನಾಪತ್ತೆ: ಮನೆಯಲ್ಲಿ ಪತ್ರ ಪತ್ತೆ
Davanagere News: ಷೇರು ಮಾರುಕಟ್ಟೆ ನಷ್ಟದಿಂದಾಗಿ ಸಾಲ ತೀರಿಸಲಾಗದೆ ಒಂದೇ ಕುಟುಂಬದ ನಾಲ್ವರು ಪತ್ರ ಬರೆದಿಟ್ಟು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ಮಕ್ಕಳ ಸಮೇತ ಆಗಸ್ಟ್ 14ರಂದು ಮನೆಬಿಟ್ಟು ತೆರಳಿದ್ದ ದಂಪತಿ ಇದುವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಮೊಬೈಲ್ ಫೋನ್ ಕೂಡ ಸ್ವಿಚ್ ಆಫ್ ಆಗಿದೆ ಎನ್ನಲಾಗಿದೆ. ಈ ಸಂಬಂಧ ವಿದ್ಯಾನಗರ ಠಾಣೆಯಲ್ಲಿ ದೂರು ದಾಖಲಾಗಿದೆ.

ದಾವಣಗೆರೆ, ಆಗಸ್ಟ್ 20: ಒಂದೇ ಕುಟುಂಬದ ನಾಲ್ವರು ಅನುಮಾನಾಸ್ಪದವಾಗಿ ನಾಪತ್ತೆಯಾಗಿರುವ ಘಟನೆ ದಾವಣಗೆರೆಯ ಬನಶಂಕರಿ ಬಡಾವಣೆಯಲ್ಲಿ ನಡೆದಿದೆ. ಪತಿ ರಮೇಶ್ ಕುಮಾರ್(38), ಪತ್ನಿ ಜಯಶೀಲ(36), ಪುತ್ರ ಹಿತೇಶ್(9) ಮತ್ತು ಪುತ್ರಿ ಪ್ರೇರಣ(3) ನಾಪತ್ತೆಯಾದವರಾಗಿದ್ದು, ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿ ಹೋಗಿದ್ದ ಕುಟುಂಬ ವಾಪಸ್ ಬಂದಿಲ್ಲ. ದಾವಣಗೆರೆ ತಾಲೂಕಿನ ಶಾಗಲೆ ಗ್ರಾಮದ ನಿವಾಸಿಯಾಗಿದ್ದ ರಮೇಶ್ ಕುಮಾರ್, ಷೇರು ಹೂಡಿಕೆ ವ್ಯವಹಾರ ಮಾಡಿಕೊಂಡು ದಾವಣಗೆರೆಯಲ್ಲಿ ನೆಲೆಸಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹಿಸಿ ಷೇರು ಮಾರುಕಟ್ಟೆ ಹೂಡಿಕೆ ಮಾಡಿದ್ದರು. ಆದರೆ ಇತ್ತೀಚೆಗೆ ಷೇರು ಮಾರುಕಟ್ಟೆಯಲ್ಲಿ ನಷ್ಟವಾಗಿತ್ತು ಎನ್ನಲಾಗಿದೆ.
ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ!
ಆ.14ರಂದು ಪೋಷಕರಿಗೆ ಕರೆ ಮಾಡಿದ್ದ ರಮೇಶ್ ಕುಮಾರ್, ಬೆಂಗಳೂರಿಗೆ ಹೋಗಿ ಬರುವುದಾಗಿ ಹೇಳಿದ್ದರು. ಕಾರು, ಬೈಕ್ ಮನೆಯ ಬಳಿಯೇ ಬಿಟ್ಟು ಆಟೋದಲ್ಲಿ ಕುಟುಂಬಸ್ಥರು ನಗರದ KSRTC ಬಸ್ ನಿಲ್ದಾಣಕ್ಕೆ ಹೋಗಿದ್ದರು. ಬಳಿಕ ರಮೇಶ್ ಕುಮಾರ್ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಅಂದಿನಿಂದ ಈವರೆಗೂ ಯಾರ ಸಂಪರ್ಕಕ್ಕೂ ಸಿಕ್ಕಿಲ್ಲ. ಸಂಬಂಧಿಕರ ಮನೆಗಳಿಗೂ ಹೋಗಿಲ್ಲ. ಇದರಿಂದ ಆತಂಕಗೊಂಡು ರಮೇಶ್ ಕುಮಾರ್ ಸಂಬಂಧಿಕರ ವಿದ್ಯಾನಗರ ಠಾಣೆಯಲ್ಲಿ ದೂರು ನೀಡಿದ್ದು, ರಮೇಶ್ ಕುಟುಂಬವನ್ನು ಪೊಲೀಸರು ಹುಡುಕಾಡುತ್ತಿದ್ದಾರೆ.
ಇದನ್ನೂ ಓದಿ: ರಸ್ತೆ ಕಾಮಗಾರಿ ನಿರ್ಲಕ್ಷ್ಯಕ್ಕೆ ಕೃಷ್ಣಾ ನದಿಗೆ ಬಿದ್ದ ಕಾರು; ಟೋಲ್ ಗೇಟ್ ಬಳಿ ತಪ್ಪಿದ ಭಾರಿ ದುರಂತ
ಕುಟುಂಬಸ್ಥರು ಬರೆದಿಟ್ಟ ಪತ್ರ ಲಭ್ಯ
ಇನ್ನು, ನಾವು ಬಹಳ ಸಾಲ ಮಾಡಿಕೊಡಿದ್ದೇವೆ, ಆದರೆ ಯಾರಿಗೂ ಅನ್ಯಾಯ ಮಾಡಿಲ್ಲ. ಸಾಲಾ ತಿರಿಸಲು ಆಗದ ಕಾರಣ ನಾವು ದೂರ ಹೋಗುತ್ತಿದ್ದೇವೆ. ನಮ್ಮನ್ನು ಹುಡುಕ ಬೇಡಿ, ನಮ್ಮಿಂದ ಸಂಬಂಧಿಕರ ಹೆಸರು ಹಾಳಾಗಬಾರದು. ಹೀಗಾಗಿ ದೂರ ಹೋಗುತ್ತಿದ್ದೇವೆ ಎಂದು ಮನೆಯಲ್ಲಿ ಕುಟುಂಬಸ್ಥರು ಬರೆದಿಟ್ಟು ಹೋದ ಪತ್ರ ಪೊಲೀಸರಿಗೆ ಸಿಕ್ಕಿದೆ ಎನ್ನಲಾಗಿದೆ. ಆಗಸ್ಟ್ 14ರಂದು ಕುಟುಂಬ ಮನೆಬಿಟ್ಟು ತೆರಳಿತ್ತು ಎನ್ನಲಾಗಿದ್ದು, ಈ ಸಂಬಂಧ ತನಿಖೆ ಮುಂದುವರಿದಿದೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.




