ಹರಿಹರ ಪಂಚಮಸಾಲಿ ಪೀಠದಲ್ಲಿ ಲೆಕ್ಕ ಸಮರ: ವಚನಾನಂದ ಶ್ರೀ V/s ಟ್ರಸ್ಟಿಗಳ ನಡುವೆ ಮಠದ ಆವರಣದಲ್ಲಿ ಹೈಡ್ರಾಮಾ!
ಹರಿಹರ ಪಂಚಮಸಾಲಿ ಮಠದಲ್ಲಿ ವಚನಾನಂದ ಶ್ರೀ ಹಾಗೂ ಟ್ರಸ್ಟಿಗಳ ನಡುವೆ ಲೆಕ್ಕಪತ್ರದ ವಿಚಾರವಾಗಿ ಭಾರಿ ಸಂಘರ್ಷ ಏರ್ಪಟ್ಟಿದೆ. 10 ಕೋಟಿ ರೂ. ಸರ್ಕಾರಿ ಅನುದಾನ ದುರ್ಬಳಕೆಯ ಆರೋಪ ಕೇಳಿಬಂದಿದೆ. ಶ್ರೀಗಳ ಉಚ್ಚಾಟನೆ ಮತ್ತು ಮಠದ ಆಡಳಿತದ ಹಗ್ಗಜಗ್ಗಾಟ ತಾರಕಕ್ಕೇರಿದ್ದು, ಸೋಮವಾರ ಹೈಡ್ರಾಮಾ ನಡೆಯಿತು.

ದಾವಣಗೆರೆ, ಏಪ್ರಿಲ್ 27: ಹರಿಹರದ ಪಂಚಮಸಾಲಿ ಪೀಠದಲ್ಲಿ (Harihara Panchamasali Peeth) ದಶಕಗಳಿಂದ ನಡೆಯುತ್ತಿದ್ದ ಶೀತಲ ಸಮರ ಈಗ ಬಹಿರಂಗ ಸಂಘರ್ಷಕ್ಕೆ ತಿರುಗಿದೆ. ಮಠದ ಅನುದಾನ ಮತ್ತು ಭಕ್ತರ ದೇಣಿಗೆಯ ಲೆಕ್ಕಾಚಾರದ ವಿಚಾರದಲ್ಲಿ ವಚನಾನಂದ ಸ್ವಾಮೀಜಿ (Vachanananda Swamiji) ಮತ್ತು ಟ್ರಸ್ಟಿಗಳ ನಡುವೆ ತೀವ್ರ ಗುದ್ದಾಟ ಆರಂಭವಾಗಿದೆ. ಮಠದ ಆವರಣ ಸೋಮವಾರ (ಏಪ್ರಿಲ್ 37) ಹೈಡ್ರಾಮಾ ನಡೆಯಿತು. ಮಠದ ಆವರಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಸಹ ಮಾಡಲಾಗಿದೆ.
ಏನಿದು ಲೆಕ್ಕದ ಲಡಾಯಿ?
ಮಠದ ಆಡಳಿತ ಮಂಡಳಿಯು ಭಕ್ತರ ದೇಣಿಗೆ ಮತ್ತು ಸರ್ಕಾರದ ಅನುದಾನದಲ್ಲಿ ಭಾರಿ ಅವ್ಯವಹಾರ ನಡೆಸಿದೆ ಎಂದು ವಚನಾನಂದ ಸ್ವಾಮೀಜಿ ಗಂಭೀರ ಆರೋಪ ಮಾಡಿದ್ದಾರೆ. ಮುಖ್ಯವಾಗಿ, ರಾಜ್ಯ ಸರ್ಕಾರದಿಂದ ವಸತಿಗೃಹ, ಹಾಸ್ಟೆಲ್ ಮತ್ತು ಸಮುದಾಯ ಭವನ ನಿರ್ಮಾಣಕ್ಕಾಗಿ ಬಂದಿದ್ದ 10 ಕೋಟಿ ರೂಪಾಯಿ ಅನುದಾನದಲ್ಲಿ ಗೋಲ್ಮಾಲ್ ನಡೆದಿದೆ ಎಂಬುದು ಶ್ರೀಗಳ ವಾದ. 2021ರಲ್ಲಿ ಟ್ರಸ್ಟಿಗಳು ಮತ್ತು ಆಡಳಿತಾಧಿಕಾರಿಗಳು ನಕಲಿ ಸಹಿ ಮಾಡಿ ಅನುದಾನ ಬಿಡುಗಡೆ ಮಾಡಿಸಿಕೊಂಡಿದ್ದಾರೆ, ಆದರೆ ಕಟ್ಟಡಗಳೇ ನಿರ್ಮಾಣವಾಗಿಲ್ಲ ಎಂದು ಭಕ್ತರು ದೂರಿದ್ದಾರೆ.
ಟ್ರಸ್ಟಿಗಳು ಹೇಳೋದೇನು?
ಶ್ರೀಗಳ ಆರೋಪಕ್ಕೆ ಪ್ರತಿಯಾಗಿ ಟ್ರಸ್ಟ್ನ ಪ್ರಧಾನ ಧರ್ಮದರ್ಶಿ ಬಿ.ಸಿ. ಉಮಾಪತಿ ಅವರು 2008ರಿಂದ 2026ರವರೆಗಿನ ಸಂಪೂರ್ಣ ಲೆಕ್ಕಪತ್ರಗಳ ಬ್ಯಾಗ್ ಹಿಡಿದು ಮಠಕ್ಕೆ ಆಗಮಿಸಿದರು. ‘ನಾವು ಪಾರದರ್ಶಕವಾಗಿದ್ದೇವೆ, ಶ್ರೀಗಳು ತಮ್ಮ ಉಚ್ಚಾಟನೆಯ ವಿಷಯವನ್ನು ದಾರಿ ತಪ್ಪಿಸಲು ಲೆಕ್ಕದ ನಾಟಕವಾಡುತ್ತಿದ್ದಾರೆ. ಈಗ ಲೆಕ್ಕ ನೀಡಿದ್ದೇವೆ, ಶ್ರೀಗಳು ಕೂಡಲೇ ಮಠವನ್ನು ಬಿಟ್ಟು ಹೋಗಲಿ’ ಎಂದು ಗುಡುಗಿದ್ದಾರೆ.
ಮಠದ ಆವರಣದಲ್ಲಿ ಹೈಡ್ರಾಮಾ
ಟ್ರಸ್ಟ್ ಸದಸ್ಯರು ಲೆಕ್ಕ ನೀಡಲು ಆಗಮಿಸುತ್ತಿದ್ದಂತೆಯೇ ವಚನಾನಂದ ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟಿಗಳ ಬೆಂಬಲಿಗರ ನಡುವೆ ಘೋಷಣೆಗಳ ಯುದ್ಧ ನಡೆಯಿತು. ಉಭಯ ಗುಂಪುಗಳು ಮುಖಾಮುಖಿಯಾಗಿದ್ದರಿಂದ ಪರಿಸ್ಥಿತಿ ಉದ್ವಿಗ್ನಗೊಂಡಿತ್ತು. ‘ನಾನು ಮಠವನ್ನು ಬಿಟ್ಟು ಹೋಗುವುದಿಲ್ಲ, ಇಲ್ಲಿ ನಡೆದಿರುವ ಲೂಟಿಯ ತನಿಖೆಯಾಗಲಿ’ ಎಂದು ವಚನಾನಂದ ಶ್ರೀಗಳು ಪಟ್ಟು ಹಿಡಿದು ಕುಳಿತಿದ್ದಾರೆ.
ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ



