ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ

ಹರಿಹರದ ಪಂಚಮಸಾಲಿ ಗುರುಪೀಠದಲ್ಲಿ ವಚನಾನಂದ ಶ್ರೀಗಳು ಮತ್ತು ಧರ್ಮದರ್ಶಿ ಮಂಡಳಿ ನಡುವಿನ ವಿವಾದ ಮುಂದುವರಿದಿದೆ. ಉಚ್ಚಾಟನೆಯ ಹೊರತಾಗಿಯೂ ಸ್ವಾಮೀಜಿ ಮಠದಲ್ಲೇ ಉಳಿದಿದ್ದು, ನ್ಯಾಯಾಲಯಕ್ಕೆ ಕೇವಿಯಟ್ ಸಲ್ಲಿಸಿದ್ದಾರೆ. ತಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ. ಭಕ್ತರು ಶ್ರೀಗಳಿಗೆ ಬೆಂಬಲ ಸೂಚಿಸಿ ಕಾವಲು ನಿಂತಿದ್ದಾರೆ.

ಉಚ್ಛಾಟನೆಯಾದರೂ ಮಠದಲ್ಲೇ ಉಳಿದ ವಚನಾನಂದ ಶ್ರೀಗೆ ಭಕ್ತರೇ ಕಾವಲು: ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಭದ್ರತೆ
ಸ್ವಾಮೀಜಿಗೆ ಭಕ್ತರ ಭದ್ರತೆ
Image Credit source: Tv9 Kannada
Edited By:

Updated on: Apr 17, 2026 | 11:49 AM

ದಾವಣಗೆರೆ, ಏಪ್ರಿಲ್​​ 17: ಸಾಲು ಸಾಲು ಆರೋಪಗಳನ್ನು ಮಾಡುವ ಮೂಲಕ ಧರ್ಮದರ್ಶಿ ಮಂಡಳಿ ಪಂಚಮಸಾಲಿ ಗುರುಪೀಠದ ವಚನಾನಂದ ಶ್ರೀಗಳನ್ನು ಉಚ್ಛಾಟನೆ ಮಾಡಿದೆಯಾದರೂ ಸ್ವಾಮೀಜಿ ಮಾತ್ರ ಇನ್ನೂ ಮಠದಲ್ಲೇ ತಂಗಿದ್ದಾರೆ. ಏ.13ರಂದು ಪೀಠದಿಂದ ವಚನಾನಂದಶ್ರೀ ಉಚ್ಚಾಟನೆ ಮಾಡಲಾಗಿದ್ದು, ಅವರ ವೈಯಕ್ತಿಕ ಸಾಮಾಗ್ರಿಗಳ ಜೊತೆಗೆ ಮಠ ತೊರೆಯುವಂತೆ ಸೂಚಿಸಲಾಗಿತ್ತು. ಇಲ್ಲದಿದ್ದರೆ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಲಾಗಿತ್ತು. ಹೀಗಿದ್ದರೂ ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಹನಗವಾಡಿ ಬಳಿಯ ಮಠದಲ್ಲಿಯೇ ಸ್ವಾಮೀಜಿ ತಂಗಿದ್ದಾರೆ. ಕೋರ್ಟ್​ಗೆ ಕೇವಿಯಟ್ ಹಾಕಿ ಮಠದಲ್ಲೇ ವಾಸ್ತವ್ಯ ಮುಂದುವರಿಸಿದ್ದಾರೆ.

ಶ್ರೀಗಳಿಗೆ ಗ್ರಾಮಸ್ಥರ ಕಾವಲು

ಇನ್ನು ಉಚ್ಚಾಟನೆಗೊಂಡಿರುವ ವಚನಾನಂದ ಶ್ರೀಗಳಿಗೆ ಧರ್ಮದರ್ಶಿ ಸಮಿತಿಯಿಂದ ಯಾವುದೇ ರೀತಿಯ ತೊಂದರೆ ಆಗದಂತೆ ನೋಡಿಕೊಳ್ಳುವ ನಿಟ್ಟಿನಲ್ಲಿ ಭಕ್ತರೇ ಸ್ವಾಮೀಜಿಗೆ ಕಾವಲಾಗಿದ್ದಾರೆ. ಹರಿಹರ ತಾಲೂಕಿನ ಹಳ್ಳಿಗಳಿಂದ ಮಠ ಕಾಯಲು ಭಕ್ತರು ಬರುತ್ತಿದ್ದು, ಲೆಕ್ಕ ಕೊಡಿ ಅಭಿಯಾನದ ಉಸ್ತುವಾರಿ ಆಗಿರುವ ಸಿರಿಗೆರೆ ಪರಮೇಶ್ವರ ಗೌಡ ನೇತೃತ್ವದಲ್ಲಿ ಮಠದಲ್ಲಿ ಠಿಕಾಣಿ ಹೂಡಿದ್ದಾರೆ. ಮತ್ತೊಂದೆಡೆ ಶ್ರೀಗಳು ಮಕ್ಕಳಿಂದ ಮಸಾಜ್​​ ಮಾಡಿಸಿಕೊಳ್ಳುತ್ತಿದ್ದರು ಎಂದು ಆರೋಪಿಸಿದ್ದ ಧರ್ಮದರ್ಶಿ ಮಂಡಳಿ, ಮಕ್ಕಳಿಗೆ ವಚನಾನಂದಶ್ರೀ ಹಿಂಸೆ ನೀಡಿದ್ದಾರೆ ಎಂದು ಮಕ್ಕಳ ಹಕ್ಕು ಕಲ್ಯಾಣ ಮಂಡಳಿಗೆ ದೂರು ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.

ಇದನ್ನೂ ಓದಿ: ವಚನಾನಂದ ಸ್ವಾಮೀಜಿ ಉಚ್ಛಾಟನೆ; ಕಠಿಣ ನಿರ್ಧಾರಕ್ಕೆ ಹಲವು ಕಾರಣ ಕೊಟ್ಟ ಧರ್ಮದರ್ಶಿ ಸಮಿತಿ

ಧರ್ಮದರ್ಶಿ ಮಂಡಳಿ ನಿರ್ಧಾರ ಖಂಡಿಸಿದ್ದ ಶ್ರೀಗಳು

ಪಂಚಮಸಾಲಿ ಗುರುಪೀಠದಿಂದ ತಮ್ಮನ್ನು ಉಚ್ಛಾಟಿಸುತ್ತಿದ್ದಂತೆ ಪ್ರತಿಕ್ರಿಯಿಸಿದ್ದ ವಚನಾನಂದ ಶ್ರೀಗಳು ನಿರ್ಧಾರ ಹಾಸ್ಯಾಸ್ಪದ ಎಂದಿದ್ದರು. ಟ್ರಸ್ಟ್​ನವರಿಗೆ ಲೆಕ್ಕ ಕೇಳಿದ್ದಕ್ಕೆ ಟಾರ್ಗೆಟ್​ ಮಾಡುತ್ತಿದ್ದಾರೆ. ವ್ಯವಸ್ಥಿತವಾಗಿ ಷಡ್ಯಂತ್ರ ಮಾಡಿ ನನ್ನನ್ನು ಉಚ್ಚಾಟನೆ ಮಾಡಿದ್ದಾರೆ. ಶ್ವಾಸಪೀಠದಿಂದಲೇ ನನ್ನನ್ನು ಸಮಾಜ ಗುರುತಿಸಿದೆ. ಶ್ವಾಸಪೀಠ ಹಾಗೂ ನನ್ನ ಹೆಸರಿನಲ್ಲಿ ಒಂದು ಇಂಚು ಭೂಮಿ ಇಲ್ಲ. ಪೀಠಾಧ್ಯಕ್ಷರಾದ ಬಳಿಕ ಪೂರ್ವಾಶ್ರಮಕ್ಕೆ ಒಮ್ಮೆಯೂ ಭೇಟಿ ನೀಡಿಲ್ಲ. ನಾನು ಲಕ್ಷಾಂತರ ಭಕ್ತರಿಗೆ ಉತ್ತರಿಸಬೇಕು, ಈ 12 ಜನರಿಗೆ ಉತ್ತರಿಸಲ್ಲ. ಟ್ರಸ್ಟ್​ನ ಸದಸ್ಯರು ಕೋಟ್ಯಂತರ ರೂಪಾಯಿ ಅವ್ಯವಹಾರ ಮಾಡಿದ್ದಾರೆ. ತಮ್ಮ ಅವ್ಯವಹಾರ ಮುಚ್ಚಿ ಹಾಕಿಕೊಳ್ಳಲು ನನ್ನ ಟಾರ್ಗೆಟ್ ಮಾಡಿದ್ದಾರೆ ಎಂದು ದೂರಿದ್ದರು.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On - 11:49 am, Fri, 17 April 26

Follow Us