
ಧಾರವಾಡ, ಡಿಸೆಂಬರ್ 30: ಕೃಷಿ ವಿಶ್ವ ವಿದ್ಯಾಲಯದ ವಿದ್ಯಾರ್ಥಿ ಸಂಘದ ಪದಗ್ರಹಣ ಕಾರ್ಯಕ್ರಮದಲ್ಲಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಭಾಗವಹಿಸಲು ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆ ಕಾರ್ಯಕ್ರಮ ರದ್ದಾಗಿದೆ. ಸೂಲಿಬೆಲೆ ಭಾಗವಹಿಸೋದನ್ನು ವಿರೋಧಿಸಿ ದಲಿತ ಸಂಘಟನೆ, ಕೃಷಿ ವಿವಿ ಬೋರ್ಡ್ ಸದಸ್ಯರು ವಿಶ್ವ ವಿದ್ಯಾಲಯದ ಗೇಟ್ ಮುಂದೆ ಧರಣಿ ನಡೆಸಿದ್ದು, ಕಾರ್ಯಕ್ರಮ ರದ್ದಾದರೂ ಪ್ರತಿಭಟನೆ ಮುಂದುವರಿಸಿದ ಪ್ರಸಂಗ ನಡೆದಿದೆ. ಹೀಗಾಗಿ ಪ್ರತಿಭಟನಾನಿರತರನ್ನು ಉಪನಗರ ಠಾಣೆಯ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕೃಷಿ ವಿವಿ ಕುಲಪತಿ ಪಿ.ಎಲ್. ಪಾಟೀಲ್ ಅಧ್ಯಕ್ಷತೆಯಲ್ಲಿ ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗೆ ನಡೆಯುವ ಕಾರ್ಯಕ್ರಮದಲ್ಲಿ ಚಕ್ರವರ್ತಿ ಸೂಲಿಬೆಲೆ ಭಾಗಿಯಾಗುವುದಕ್ಕೆ ತೀವ್ರ ವಿರೋಧ ವ್ಯಕ್ತವಾಗಿದೆ. ಶಾಸಕರು, ಸಚಿವರನ್ನು ಕರೆಯದೆ ಸೂಲಿಬೆಯವರನ್ನೇ ಕರೆದಿದ್ದು ಯಾಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ. ಮನವಿ ಸ್ವೀಕರಿಸಲು ಬಂದಿದ್ದ ಡೀನ್ರನ್ನು ಕೂಡ ತರಾಟೆಗೆ ಪಡೆಯಲಾಗಿದ್ದು, ಕುಲಪತಿಗಳೇ ಬಂದು ನಮ್ಮ ಮನವಿ ಸ್ವೀಕಾರ ಮಾಡಲಿ ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ. ಜೊತೆಗೆ ಕೆಲ ಉದ್ರಿಕ್ತರು ವಿಶ್ವವಿದ್ಯಾಲಯದ ಗೇಟ್ ಏರಿ ಪ್ರತಿಭಟನೆ ನಡೆಸಿದ ಕಾರಣ ಹೈಡ್ರಾಮಾವೇ ನಡೆದಿದೆ.
ಇದನ್ನೂ ಓದಿ: ಶಿಕ್ಷಕರ ಕೊರತೆ; ಸರ್ಕಾರಿ ಶಾಲೆಗಳ ವಿಲೀನಕ್ಕೆ ಶಿಕ್ಷಣ ಇಲಾಖೆ ಚಿಂತನೆ
ಸಮಾಜದಲ್ಲಿ ಕೋಮು ಗಲಭೆಗೆ ಕಾರಣವಾಗುವಂತವರನ್ನು ಕರೆದು ವಿಶ್ವ ವಿದ್ಯಾಲಯಗಳಲ್ಲಿ ವಿದ್ಯಾರ್ಥಿಗಳಿಗೆ ಬೋಧನೆ ಮಾಡಿಸಬಾರದು. ಅದರ ಬದಲು, ಕೃಷಿ ಸಾಧಕರನ್ನೋ, ವಿಜ್ಞಾನಿಗಳನ್ನೋ ಕರೆಸಬಹುದಿತ್ತು. ಸಿಂಂಡಿಕೇಟ್ ಮೆಂಬರ್ಗಳಿಗೆ ತಿಳಿಸದೆ ಕುಲಪತಿಗಳು ಕಾರ್ಯಕ್ರಮ ಮಾಡಲು ಹೊರಟಿದ್ದಾರೆ. ಇದೇ ರೀತಿ ಅವರು ಉದ್ಧಟತನ ಮುಂದುವರಿಸಿದರೆ ಅವರ ಕಚೇರಿಗೆ ನುಗ್ಗಿ ದಾಂಧಲೆ ನಡೆಸುತ್ತೇವೆ ಎಂದು ಡಿಎಸ್ಎಸ್ ಮುಖಂಡ ಪರಮೇಶ್ ಎಚ್ಚರಿಸಿದ್ದಾರೆ. ಮೊನ್ನೆ ನಡೆದ ಬೋರ್ಡ್ ಮೀಟಿಂಗ್ನಲ್ಲಿಯೂ ಕುಲಪತಿಗಳು ಈ ಬಗ್ಗೆ ನಮಗೆ ಮಾಹಿತಿ ನೀಡಿಲ್ಲ. ಶಿಷ್ಟಾಚಾರ ಉಲ್ಲಂಘಿಸಿ ವಿಶ್ವವಿದ್ಯಾಲಯದಲ್ಲಿ ಕಾರ್ಯಕ್ರಮಗಳನ್ನು ಮಾಡಲಾಗ್ತಿದೆ. ಚಕ್ರವರ್ತಿ ಸೂಲಿಬೆಲೆ ಏನು ಚಿನ್ನದ ರಸ್ತೆ ಮಾಡಲು ಇಲ್ಲಿ ಬರುತ್ತಿದಾರಾ? ಎಂದು ಸಿಂಡಿಕೇಟ್ ಸದಸ್ಯ ರವಿ ಪ್ರಶ್ನಿಸಿದ್ದಾರೆ.
ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.
Published On - 5:06 pm, Tue, 30 December 25