ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗ್ತಿದೆ: ಹೊಸ ಬಾಂಬ್ ಸಿಡಿಸಿದ ವಿಜಯೇಂದ್ರ

| Updated By: ರಮೇಶ್ ಬಿ. ಜವಳಗೇರಾ

Updated on: Aug 23, 2024 | 5:55 PM

ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಕಾನೂನು ಹೋರಾಟದ ಜೊತೆ ಜೊತೆಗೇ ರಾಜಕೀಯ ಸಮರಕ್ಕೂ ಮುಂದಾಗಿದ್ದಾರೆ. ಮುಡಾ ಹಗರಣದಲ್ಲಿ ನಾನು ತಪ್ಪು ಮಾಡಿಲ್ಲ, ನಾನು ರಾಜೀನಾಮೆ ಕೊಡೋ ಅಗತ್ಯವೇ ಅಲ್ಲ ಎಂದು ಹೇಳುತ್ತಲೇ ಸಾಲು ಸಾಲು ಸಭೆಯ ಮೂಲಕ ಸಿಎಂ ಪದೇ ಪದೇ ಶಕ್ತಿ ಪ್ರದರ್ಶನ ಮಾಡಿದ್ದಾರೆ. ಇಡೀ ಸಂಪುಟವೇ ನನ್ನ ಜೊತೆ ಇದೆ ಎನ್ನುವ ಮೆಸೇಜ್ ಪಾಸ್ ಪ್ರಯತ್ನವನ್ನೂ ಸಹ ಮಾಡಿದ್ರು. ಇದು ರಾಜ್ಯದಲ್ಲಿ ರಾಜಕೀಯ ಆಟ ಆದ್ರೆ. ಇದೀಗ ಹೈಕಮಾಂಡ್​ ಮಟ್ಟದಲ್ಲಿ ಸಿಎಂ ಹೊಟ ಆಟಕ್ಕೆ ಮುಂದಾಗಿದ್ದಾರೆ. ಇದರ ಬೆನ್ನಲ್ಲೇ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಹೊಸ ಬಾಂಬ್ ಸಿಡಿಸಿದ್ದಾರೆ. ಇದು ರಾಜ್ಯರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿದೆ.

ಸಿಎಂ ಬದಲಾವಣೆ ಬಗ್ಗೆ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗ್ತಿದೆ: ಹೊಸ ಬಾಂಬ್ ಸಿಡಿಸಿದ ವಿಜಯೇಂದ್ರ
ವಿಜಯೇಂದ್ರ, ಸಿದ್ದರಾಮಯ್ಯ
Follow us on

ಹುಬ್ಬಳ್ಳಿ, (ಆಗಸ್ಟ್ 23): ಮುಡಾ ಹಗರಣದ ತೀವ್ರ ಸ್ವರೂಪ ಪಡೆಯುತ್ತಿದ್ದಂತೆಯೇ ಇದೀಗ ಹೈಕಮಾಂಡ್​ ಎಂಟ್ರಿಯಾಗಿದೆ. ಹೀಗಾಗಿ ಈ ಪ್ರಕರಣ ರಾಷ್ಟ್ರ ರಾಜಧಾನಿ ದೆಹಲಿಗೆ ಶಿಫ್ಟ್ ಆಗಿದೆ. ಸಚಿವರ ಬೆಂಬಲ, ಶಾಸಕರ ಬಲ, ಮುಡಾ ದಾಖಲೆಯೊಂದಿಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ ಶಿವಕುಮಾರ್ ಹೈಕಮಾಂಡ್ ನಾಯಕರನ್ನ ಭೇಟಿ ಮಾಡಲು ದೆಹಲಿಗೆ ತೆರಳಿದ್ದು, ಭಾರೀ ಕುತೂಹಲ ಮೂಡಿಸಿದೆ. ಇದರ ಮಧ್ಯ ಇತ್ತ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಅವರು ಸಿಎಂ ಬದಲಾವಣೆ ಚರ್ಚೆ ಆಗುತ್ತಿದೆ ಎಂದು ರಾಜ್ಯ ರಾಜಕಾರಣದಲ್ಲಿ ಹೊಸ ಬಾಂಬ್ ಸಿಡಿಸಿದ್ದಾರೆ. ಹುಬ್ಬಳ್ಳಿ ಮಾಧ್ಯಮಗಳ ಜೊತೆ ಮಾಡಿದ ವಿಜಯೇಂದ್ರ, ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಲ್ಲದಿದ್ದರೆ ಶಾಸಕರನ್ನು ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿರಲಿಲ್ಲ ಎಂದು ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ಸಿಎಂ ಬದಲಾವಣೆ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲಿ ಚರ್ಚೆ ಆಗುತ್ತಿದೆ. ಇಲ್ಲದಿದ್ದರೆ ಶಾಸಕರನ್ನು ಸಿಎಂ ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡ್ತಿರಲಿಲ್ಲ. ನಿನ್ನೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಂಡಿದ್ದನ್ನು ನೋಡಿದರೆ ಸತ್ಯ ಅನಿಸುತ್ತೆ. ನಾನು ಬಂಡೆಗಲ್ಲಿನಂತೆ ನಿಲ್ಲುತ್ತೇನೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ಹೇಳಿದ್ದರು. ಇದು ಸಾಕಷ್ಟು ಅನುಮಾನಕ್ಕೆ ಕಾರಣವಾಗಿದೆ. ಮುಡಾದಲ್ಲಿ ಸಾಕಷ್ಟು ಅವ್ಯವಹಾರವಾಗಿದೆ, ಸಿಎಂ ಬದಲಾವಣೆ ಕಾಲ ಸನ್ನಿಹಿತ. ಸಿಎಂ ರಾಜೀನಾಮೆ ಕೊಡುತ್ತಾರೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಮುಡಾ ಹಗರಣ, ವಾಲ್ಮೀಕಿ ಹಗರಣದಲ್ಲಿ ಸಿಎಂ ನೇರವಾಗಿ ಭಾಗಿ ಆಗಿದ್ದಾರೆ. ಹೀಗಾಗಿ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಕೊಟ್ಟೆ ಕೊಡುತ್ತಾರೆ ಎಂದು ಹೇಳಿದರು.

ಇದನ್ನೂ ಓದಿ: 1494 ಕೋಟಿ ರೂ ಹಣ ದುರುಪಯೋಗ ಆರೋಪ: ಸಿದ್ದರಾಮಯ್ಯ ವಿರುದ್ಧ ರಾಜ್ಯಪಾಲರಿಗೆ ಮತ್ತೊಂದು ದೂರು

ಸರ್ಕಾರ ಬಂದು 18 ತಿಂಗಳಾದರೂ ಉತ್ತರ ಕರ್ನಾಟಕದ ಬಗ್ಗೆ ಕಿಂಚಿತ್ತೂ ಕಾಳಜಿ‌ ಇಲ್ಲ/ ರೈತರ ಪರವಾದ ಕಾಳಜಿ ಇಲ್ಲ, ಇದು ನಿಷ್ಕ್ರಿಯ ಸರ್ಕಾರ. ಕರ್ನಾಟಕದ ಜನತೆಗೆ ಕಾಂಗ್ರೆಸ್‌ ಸರ್ಕಾರ ಇದ್ದು ಸತ್ತಂತೆ ಎಂದು ವಾಗ್ದಾಳಿ ನಡೆಸಿದ ವಿಜಯೇಂದ್ರ, ನಮ್ಮ‌ ಕುಟುಂಬದ ಬಗ್ಗೆ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. ಸಚಿವ ದಿನೇಶ್ ಗುಂಡೂರಾವ್‌ ಬಳಿ ದಾಖಲೆ ಇದ್ದರೆ ಕೊಡಲಿ. ಎಲ್ಲವೂ ಯುಪಿಎ ಕಾಲದಲ್ಲಿ ಆಗಿದ್ದು, ಎಲ್ಲವೂ ಇತ್ಯರ್ಥ ಆಗಿವೆ. ಯಾರು ಯಾರನ್ನ ಮುಗಿಸುತ್ತಾರೆಂದು ನೋಡೋಣ ಎಂದು ತಿರುಗೇಟು ನೀಡಿದರು.

ಇವರು ಅವರ ಮೇಲೆ ಕೇಸ್ ಇದೆ ಎಂದು ಬೊಬ್ಬೆ ಹಾಕುತ್ತಿದ್ದಾರೆ‌. ನಮ್ಮದು ಕೇಸ್ ಇದ್ದರೆ ಹೊರತರಲಿ, ಭ್ರಷ್ಟ ಸರ್ಕಾರ ತೆಗೆಯುತ್ತೇವೆ. ಭ್ರಷ್ಟ ಸರ್ಕಾರ ತೆಗೆಯುವುದು ನಮ್ಮ ಕರ್ತವ್ಯ. ಯಡಿಯೂರಪ್ಪ ವಿರುದ್ಧದ ಕೇಸ್ ಪಟ್ಟಿ ಮಾಡಲು ಖುದ್ದು ಸಿಎಂ ಹೇಳಿದ್ದಾರೆ ಎಂದು ವಿಜಯೇಂದ್ರ ಕಿಡಿಕಾರಿದರು.

ಹೊಸ ಸಿಎಎಂ ಬರೋದು ಸತ್ಯ ಎಂದ ಬೆಲ್ಲದ್

ಇನ್ನು ಇದೇ ವೇಳೆ ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಮಾತನಾಡಿ, ಸೂರ್ಯ ಪೂರ್ವದಲ್ಲಿ ಹುಟ್ಟೋದು ಎಷ್ಟು ಸತ್ಯವೋ ಕರ್ನಾಟಕದಲ್ಲಿ ಸಿದ್ದರಾಮಯ್ಯ ಹೋಗಿ ಹೊಸ ಸಿಎಎಂ ಬರೋದು ಅಷ್ಟೆ ಸತ್ಯ. ರಾಜ್ಯಪಾಲರು ಭಷ್ಟ ರಾಜಕಾರಣಿಗಳನ್ನು ಟಾರ್ಗೆಟ್ ಮಾಡಿದ್ದಾರೆ. ಯಾರೋ ಒಬ್ಬರು ಭಷ್ಟರಿದ್ದಾರೆ ಎಂದು ಕಂಪ್ಲೇಟ್ ಕೊಟ್ಟಿದ್ದಾರೆ. ಹೀಗಾಗಿ ರಾಜಕಾರಣಿಗೆ ನೋಟಿಸ್ ಕೊಟ್ಟಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯಗೆ ಭ್ರಷ್ಟ ರಾಜಕಾರಣಿ ಎಂದ ಟಾಂಗ್ ಕೊಟ್ಟರು.

ಅವರು ಕೊಟ್ಡ ಉತ್ತರ ಸಮಂಜಸ ಇರದ ಕಾರಣ ಅನುಮತಿ ಕೊಟ್ಟಿದ್ದಾರೆ. ಅವರನ್ನು ಅರೆಸ್ಟ್ ಮಾಡಿ‌ ಎಂದು ಹೇಳಿಲ್ಲ.ಅಕಸ್ಮಾತ್ ಅನುಮತಿ ಕೊಡದೆ ಹೋದ್ರೆ ಜನ ಮಾತಾಡಿದ್ರು. ಸಿಎಂ ಇದ್ರೆ ಏನ ಬೇಕಾದರೂ ಮಾಡಬಹುದಾ ಎಂದು ಜನ ಮಾತಾಡ್ತಾರೆ‌. ಹೀಗಾಗಿ ಕಂಪ್ಲೇಟ್ ಬಂದಿದೆ ರಾಜ್ಯಪಾಲರು ತನಿಖೆಗೆ ಆದೇಶ ಮಾಡಿದ್ದಾರೆ. ಇದರಲ್ಲಿ ಏನ ತಪ್ಪಿದೆ ಇದು ಸಹಜ ಎಂದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On - 5:51 pm, Fri, 23 August 24