Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಯ್ಯಪ್ಪ ಮೂರ್ತಿ ಪ್ರತ್ಯಕ್ಷ: ಹರಿದು ಬರುತ್ತಿರುವ ಭಕ್ತರು

ಧಾರವಾಡ ಕೃಷಿ ವಿಶ್ವವಿದ್ಯಾಲಯದ ಆವರಣದಲ್ಲಿ ಸ್ಥಾಪಿಸಲಾದ ಅಯ್ಯಪ್ಪ ಸ್ವಾಮಿ ಮೂರ್ತಿಯನ್ನು ತೆರವುಗೊಳಿಸಲು ವಿಶ್ವವಿದ್ಯಾಲಯ ಯತ್ನಿಸಿದಾಗ, ಭಕ್ತರು ಮತ್ತು ಶ್ರೀರಾಮ ಸೇನೆ ಕಾರ್ಯಕರ್ತರು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಭಕ್ತರು ಅಯ್ಯಪ್ಪ ಸ್ವಾಮಿ ಪೂಜೆಗೆ ಅವಕಾಶ ನೀಡುವಂತೆ ಒತ್ತಾಯಿಸುತ್ತಿದ್ದಾರೆ.ಮೂರ್ತಿ ಪ್ರತಿಷ್ಠಾಪನೆ ಸ್ಥಳಕ್ಕೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಭೇಟಿ ನೀಡಿದರು.

ಧಾರವಾಡ ಕೃಷಿ ವಿವಿ ಆವರಣದಲ್ಲಿ ಅಯ್ಯಪ್ಪ ಮೂರ್ತಿ ಪ್ರತ್ಯಕ್ಷ: ಹರಿದು ಬರುತ್ತಿರುವ ಭಕ್ತರು
ಕೃಷಿ ವಿವಿ ಆವರಣದಲ್ಲಿರುವ ಅಯ್ಯಪ್ಪ ಮೂರ್ತಿ
Follow us
ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ವಿವೇಕ ಬಿರಾದಾರ

Updated on: Jan 03, 2025 | 12:02 PM

ಧಾರವಾಡ, ಜನವರಿ 03: ಧಾರವಾಡ ಕೃಷಿ ವಿಶ್ವವಿದ್ಯಾಲಯದ (Dharwad Agricultural University) ಆವರಣದಲ್ಲಿ ಅಯ್ಯಪ್ಪ ಸ್ವಾಮಿ (Ayyappa Swamy) ಮೂರ್ತಿ ಪ್ರತಿಷ್ಠಾಪನೆ ವಿವಾದ ಹೊಸ ತಿರುವು ಪಡೆದುಕೊಂಡಿದೆ. ಆವರಣದಲ್ಲಿನ ಅಯ್ಯಪ್ಪ ಮೂರ್ತಿ ತೆರಿವಿಗೆ ಮುಂದಾಗಿದ್ದ ವಿಶ್ವವಿದ್ಯಾಲಯದ ಸಿಬ್ಬಂದಿ ವಿರುದ್ಧ ಅಯ್ಯಪ್ಪ ಮಾಲಾಧಾರಿಗಳು ಮತ್ತು ಶ್ರೀರಾಮಸೇನೆ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅಯ್ಯಪ್ಪ ಮೂರ್ತಿ ಪ್ರತಿಷ್ಠಾಪನೆ ಮಾಡಿರುವ ಸ್ಥಳಕ್ಕೆ ಶ್ರೀರಾಮಸೇನೆ ಕಾರ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಭೇಟಿ ನೀಡಿದರು. ಬಳಿಕ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ ಅವರು, ವಿಶ್ವವಿದ್ಯಾಲಯದ ಆವರಣದಲ್ಲಿ ಅನಧಿಕೃತ ಮಸೀದಿ, ದರ್ಗಾ ಮತ್ತು ಗೋರಿಗಳಿರುವಾಗ, ಅಯ್ಯಪ್ಪನ ಮೂರ್ತಿ ಯಾಕೆ ಬೇಡ? ಅಯ್ಯಪ್ಪನ ಮೂರ್ತಿಯೂ ಇರಲಿ ಎಂದಿದ್ದಾರೆ.

ಧಾರವಾಡದ ಕೃಷಿ ವಿಶ್ವವಿದ್ಯಾಲಯದ ಮಾವಿನ ತೋಟದಲ್ಲಿ, ಧಾರವಾಡ-ಬೆಳಗಾವಿ ರಸ್ತೆಯ ಪಕ್ಕದಲ್ಲಿ ಕಳೆದ ಎರಡು ದಿನಗಳ ಹಿಂದೆ ರಾತ್ರೋರಾತ್ರಿ ಅಯ್ಯಪ್ಪ ಮತ್ತು ನಾಗದೇವರ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಆಗಿನಿಂದಲೇ ಜನರು ಮಾತ್ರವಲ್ಲ ಅಯ್ಯಪ್ಪ ಮಾಲಾಧಾರಿಗಳು ತಂಡೋಪ ತಂಡವಾಗಿ ಇಲ್ಲಿಗೆ ಬಂದು ದರ್ಶನ ಪಡೆಯುತ್ತಿದ್ದಾರೆ. ಮೊದಲ ದಿನವೇ ಮೂರ್ತಿ ತೆರುವುಗೊಳಿಸಲು ಕೃಷಿ ವಿವಿ ಮುಂದಾದಾಗ ಮಾಲಾಧಾರಿಗಳು ವಿರೋಧ ವ್ಯಕ್ತಪಡಿಸಿದ್ದರಿಂದ ಕೃಷಿ ವಿಶ್ವವಿದ್ಯಾಲಯ ಯಥಾಸ್ಥಿತಿ ಕಾಯ್ದುಕೊಂಡಿತ್ತು.

ಇದನ್ನೂ ಓದಿ: ಹುಬ್ಬಳ್ಳಿ ಸಿಲಿಂಡರ್ ಸ್ಫೋಟ: ಪವಾಡ ಸದೃಶ ರೀತಿಯಲ್ಲಿ ಬದುಕುಳಿದ ವಿನಾಯಕ್ ಬಾರಕೇರ

ಇದೀಗ ಶ್ರೀರಾಮ ಸೇನೆ ಎಂಟ್ರಿ ಕೊಟ್ಟಿದ್ದು ಅಯ್ಯಪ್ಪ ಮಾಲಾಧಾರಿಗಳ ಬೆಂಬಲಕ್ಕೆ ನಿಂತಿದೆ. ಈ ಜಾಗವನ್ನು ಕೃಷಿ ವಿವಿ ನಮಗೆ ಬಿಟ್ಟು ಕೊಡಲಿ, ಅವರಿಂದ ಖರೀದಿ ಮಾಡಿಕೊಳ್ಳುತ್ತೇವೆ. ಇಲ್ಲವೇ ಪರ್ಯಾಯ ಜಾಗ ಕೊಡುತ್ತೇವೆ ಅನ್ನೋ ಸವಾಲು ಸಹ ಶ್ರೀರಾಮ ಸೇನೆ ಹಾಕಿದೆ. ಇನ್ನು, ಅಯ್ಯಪ್ಪ ಮಾಲಾಧಾರಿಗಳು ನಾವು ಯಾವುದೇ ಬೇರೆ ಧರ್ಮದ ಬಗ್ಗೆ ಮಾತನಾಡುವುದಿಲ್ಲ. ಅಯ್ಯಪ್ಪಸ್ವಾಮಿ ಸೇವೆ ಮಾಡೋಕೆ ಸಿದ್ದರಿದ್ದೇವೆ. ಹೀಗಾಗಿ, ನಮಗೆ ಅಯ್ಯಪ್ಪಸ್ವಾಮಿ ಪೂಜೆಗೆ ಇಲ್ಲಿ ಅವಕಾಶ ಕೊಡಬೇಕು ಎಂದು ಪಟ್ಟು ಹಿಡಿದಿದ್ದಾರೆ.

ಸದ್ಯ, ಅಯ್ಯಪ್ಪ ಸ್ವಾಮಿ ದರ್ಶನ ಪಡೆಯಲು ಬರುವ ಭಕ್ತರ ಸಂಖ್ಯೆಯೂ ಹೆಚ್ಚುತ್ತಿದ್ದು, ಮುಖ್ಯ ರಸ್ತೆಯಲ್ಲಿ ಈಗ ಓಂ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಸಮಿತಿ, ಧಾರವಾಡ ಎಂಬ ಬ್ಯಾನರ್ ಸಹ ಹಾಕಲಾಗಿದೆ. ಅಯ್ಯಪ್ಪಸ್ವಾಮಿ ಸನ್ನಿಧಾನ ಎಂದು ಜನರಿಗೆ ತಿಳಿಸುವ ಪ್ರಯತ್ನವೂ ಆಗುತ್ತಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ