
ಧಾರವಾಡ, ಆ.28: ಮರಳು ಸಾಗಣೆ ಮಾಡುವ ಲಾರಿ ಚಾಲಕನಿಂದ ಫೋನ್ ಪೇ (PhonePe) ಮೂಲಕ 30,000 ರೂ. ಲಂಚ ಪಡೆದ ಆರೋಪದಡಿಯಲ್ಲಿ ಮೂವರು ಪೊಲೀಸ್ ಹೆಡ್ ಕಾನ್ಸ್ಟೇಬಲ್ಗಳು ಹಾಗೂ ಓರ್ವ ಗೃಹರಕ್ಷಕ ಸಿಬ್ಬಂದಿಯನ್ನು (Home Guard) ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ ಈ ನಾಲ್ವರು ಆರೋಪಿಗಳು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೊಪ್ಪಳ ಮೂಲದ ಲಾರಿ ಚಾಲಕ ಹನುಮಂತ ಎಂಬುವವರು ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ ಮರಳು ಲಾರಿ ಬಿಡಲು ತಮ್ಮಿಂದ ಲಂಚ ಪಡೆಯಲಾಗಿದೆ ಎಂದು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಆರೋಪಿಗಳು ಯಾವುದೇ ಭಯವಿಲ್ಲದೆ ಡಿಜಿಟಲ್ ರೂಪದಲ್ಲಿ ಅಂದರೆ ಫೋನ್ ಪೇ ಮೂಲಕ 30,000 ರೂ. ಲಂಚದ ಹಣವನ್ನು ಪಡೆದುಕೊಂಡಿದ್ದರು.
ಇದನ್ನೂ ಓದಿ: ಕೊಪ್ಪಳ ನಗರಾಭಿವೃದ್ದಿ ಪ್ರಾಧಿಕಾರದಲ್ಲಿ 8.89 ಕೋಟಿ ರೂ. ಹಗರಣ: ‘ಟೆಂಪಲ್ ರನ್’ ಮಾಡುತ್ತಿದ್ದ ಪ್ರಮುಖ ರೂವಾರಿ ಸೇರಿ ಮೂವರ ಬಂಧನ
ಬಂಧಿತ ಆರೋಪಿಗಳಿಂದ ಲಂಚದ ಹಣ ಪಡೆದಿದ್ದ ಆನ್ಲೈನ್ ಡಿಜಿಟಲ್ ದಾಖಲೆಗಳು ಹಾಗೂ ನಾಲ್ವರ ಮೊಬೈಲ್ಗಳನ್ನು ಲೋಕಾಯುಕ್ತ ಪೊಲೀಸರು ಜಪ್ತಿ ಮಾಡಿದ್ದಾರೆ. ಧಾರವಾಡ ನಗರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಹಸನ್ಸಾಬ ನದಾಫ್, ಧಾರವಾಡ ಸಂಚಾರಿ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಇಮಾಮ್ ಅತ್ತಾರ್, ಹುಬ್ಬಳ್ಳಿ ಗ್ರಾಮಾಂತರ ಪೊಲೀಸ್ ಠಾಣೆಯ ಹೆಡ್ ಕಾನ್ಸ್ಟೇಬಲ್ ಗಿರೀಶ ಮನ್ಸೂರು, ಹೋಮ್ಗಾರ್ಡ್ ಸಿಬ್ಬಂದಿ ಇಕ್ಬಾಲ್ ನದಾಫ್ ಬಂಧಿತ ಅಧಿಕಾರಿಗಳು ಎಂದು ಹೇಳಲಾಗಿದೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ