ಅಂಗಾಂಗ ದಾನದಲ್ಲಿ ಧಾರವಾಡ ಜಿಲ್ಲೆಗೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!

ದಾನಗಳಲ್ಲೇ ರಕ್ತದಾನ, ನೇತ್ರದಾನ ಹಾಗೂ ದೇಹದಾನಗಳು ಶ್ರೇಷ್ಠ ದಾನ ಎಂಬ ಮಾತಿದೆ. ಇದೀಗ ಅಂಗಾಂಗ ಹಾಗೂ ಅಂಗಾಂಶ ದಾನವೂ ಅಷ್ಟೇ ಮಹತ್ವ ಪಡೆಯುತ್ತಿದೆ. ಅಂಗಾಂಗ ದಾನದಲ್ಲಿ ದೇಶದಲ್ಲೇ ಧಾರವಾಡ ಜಿಲ್ಲೆ 2ನೇ ಹಾಗೂ ಕರ್ನಾಟಕದಲ್ಲಿ ಮೊದಲ ಸ್ಥಾನದಲ್ಲಿದೆ. ಇದು ಸಾಧ್ಯವಾಗಿದ್ದು ಹೇಗೆ? ಧಾರವಾಡದ ಸಾಧನೆ ಬಗ್ಗೆ ಇಲ್ಲಿದೆ ವಿವರ.

ಅಂಗಾಂಗ ದಾನದಲ್ಲಿ ಧಾರವಾಡ ಜಿಲ್ಲೆಗೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
ಅಂಗಾಂಗ ದಾನದಲ್ಲಿ ಧಾರವಾಡಕ್ಕೆ ದೇಶದಲ್ಲೇ 2ನೇ, ರಾಜ್ಯದಲ್ಲಿ ಮೊದಲ ಸ್ಥಾನ!
Updated By: Ganapathi Sharma

Updated on: May 16, 2025 | 7:54 AM

ಧಾರವಾಡ, ಮೇ 16: ಅಪಘಾತ ಸೇರಿದಂತೆ ವಿವಿಧ ತುರ್ತು ಪರಿಸ್ಥಿತಿಗಳಲ್ಲಿ ಮನುಷ್ಯನ ಮೆದುಳು ಕೆಲವೊಮ್ಮೆ ನಿಷ್ಕ್ರಿಯಗೊಂಡು ಬಿಡುತ್ತದೆ. ಆಗ ಆ ವ್ಯಕ್ತಿ ಸಹಜವಾಗಿ ಕೋಮಾ ಸ್ಥಿತಿಗೆ ಹೋಗುತ್ತಾನೆ. ಅಂಥ ವ್ಯಕ್ತಿ ಜೀವಂತವಾಗಿದ್ದರೂ ಇಲ್ಲದಂತಾಗಿರುತ್ತಾನೆ. ಮತ್ತೆ ಆತನಿಗೆ ಪ್ರಜ್ಞೆ ಬರುವ ಸಾಧ್ಯತೆಯೇ ಇಲ್ಲ ಎಂಬಂಥ ಸ್ಥಿತಿಯಲ್ಲಿ ವೈದ್ಯಕೀಯ ಪರಿಭಾಷೆಯಲ್ಲಿ ‘‘ಬ್ರೈನ್​ ಡೆಡ್’’ ಎಂದು ಘೋಷಿಸಲಾಗುತ್ತದೆ. ಆದರೆ, ಇಂಥ ಸಂದರ್ಭದಲ್ಲಿ ಆ ವ್ಯಕ್ತಿಯ ಇತರೆ ಅಂಗಾಂಗಗಳು ಐದಾರು ಜನರ ಜೀವ ಉಳಿಸುವ ಸಾಮರ್ಥ್ಯ ಹೊಂದಿರುತ್ತವೆ. ಆ ರೀತಿ ಮೆದುಳು ನಿಷ್ಕ್ರಿಯಗೊಳ್ಳುವ ವ್ಯಕ್ತಿಯ ಅಂಗಾಂಗ ಮತ್ತು ಅಂಗಾಂಶಗಳನ್ನು ದಾನ (Organ donation) ಮಾಡುವ ಪ್ರಕ್ರಿಯೆ ಇತ್ತೀಚಿಗೆ ಹೆಚ್ಚಾಗುತ್ತಿದೆ. ಇದಕ್ಕಾಗಿ ಕೇಂದ್ರ ಸರ್ಕಾರ ವೆಬ್‌ಸೈಟ್‌ನ್ನೂ ತೆರೆದಿರುವುದು ವಿಶೇಷ. ರಾಷ್ಟ್ರೀಯ ಅಂಗಾಂಗ ಮತ್ತು ಅಂಗಾಂಶಗಳ ದಾನ ನೀಡಲು ಮಾಡಿರುವ ವೆಬ್‌ಸೈಟ್ ಇದು. ಇದರಲ್ಲಿ ಯಾರಾದರೂ ಕೂಡ ತಮ್ಮ ಹೆಸರನ್ನು ನೋಂದಣಿ ಮಾಡಬಹುದಾಗಿದೆ. ಇಂಥದ್ದೊಂದು ಅಭಿಯಾನದಲ್ಲಿ ಧಾರವಾಡ (Dharawad) ಜಿಲ್ಲೆಯ ದೇಶದಲ್ಲಿಯೇ ಎರಡನೇ ಸ್ಥಾನದಲ್ಲಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿ ನಿಂತಿದೆ.

ವೆಬ್​ಸೈಟ್ ನಲ್ಲಿ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವವರು, ‘‘ಒಂದು ವೇಳೆ ಮೆದುಳು ನಿಷ್ಕ್ರಿಯಗೊಂಡರೆ ನಾನು ನನ್ನ ಅಂಗಾಂಗ ಹಾಗೂ ಅಂಗಾಂಶಗಳನ್ನು ದಾನ ಮಾಡಲು ಸಿದ್ಧನಿದ್ದೇನೆ’’ ಎಂದು ವಾಗ್ದಾನ ಮಾಡಬೇಕಾಗುತ್ತದೆ. ಒಂದು ವೇಳೆ ಹಾಗೇನಾದರೂ ಮೆದುಳು ನಿಷ್ಕ್ರಿಯಗೊಂಡರೆ ಆ ವ್ಯಕ್ತಿಯ ವಿವಿಧ ಅಂಗಾಂಶ ಹಾಗೂ ಅಂಗಾಂಗಳನ್ನು ಅಗತ್ಯವಿರುವ ವ್ಯಕ್ತಿಗೆ ನೀಡಿ ಕಸಿ ಮಾಡಿ ಆತನನ್ನು ಬದುಕಿಸಬಹುದಾಗಿದೆ.

ಧಾರವಾಡದಲ್ಲಿ 8,177 ಮಂದಿಯಿಂದ ಅಂಗಾಂಗ ದಾನಕ್ಕೆ ನೋಂದಣಿ

ಏಪ್ರಿಲ್ ತಿಂಗಳ ಅಂತ್ಯದವರೆಗೆ ಕರ್ನಾಟಕದಲ್ಲಿ 35,868 ಜನರು ಅಂಗಾಂಗ ದಾನಕ್ಕೆ ಒಪ್ಪಿ, ಸ್ವಯಂಪ್ರೇರಿತವಾಗಿ ನೋಂದಣಿ ಮಾಡಿಸಿದ್ದಾರೆ. ಅದರಲ್ಲಿ ಧಾರವಾಡ ಜಿಲ್ಲೆಯ 8,177 ಜನರು ಅಂಗಾಂಗ ಹಾಗೂ ಅಂಗಾಂಶಗಳ ದಾನಕ್ಕೆ ನೋಂದಣಿ ಮಾಡಿಸಿದ್ದಾರೆ. ಇದರಿಂದಾಗಿ ಧಾರವಾಡ ಜಿಲ್ಲೆ ದೇಶದಲ್ಲೇ ಎರಡನೆಯ ಜಿಲ್ಲೆಯಾಗಿದ್ದರೆ, ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಸ್. ಎಂ. ಹೊನಕೇರಿ ತಿಳಿಸಿದ್ದಾರೆ.

ಇದನ್ನೂ ಓದಿ
ಕಾನೂನು ಮಾಪನ ನಿರೀಕ್ಷಕರ ಬಳಿ 4 ಕೋಟಿ ರೂ. ಆಸ್ತಿ, 9 ಎಕರೆ ಜಮೀನು!
ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಜೋಶಿ ಎಚ್ಚರಿಕೆ
ಚಿನ್ನಾಭರಣ ಕದ್ದು ಬೇರೆ ಬ್ಯಾಂಕ್​ಗಳಲ್ಲಿ ಅಡವಿಟ್ಟ ಗೋಲ್ಡ್ ಲೋನ್ ಆಫೀಸರ್!
ಬೆಂಗಳೂರು ಸೇರಿ ಕರ್ನಾಟಕದ ವಿವಿಧೆಡೆ ಮಳೆ ಅಬ್ಬರ: ಸಾಲು ಅವಾಂತರ

ಆರೋಗ್ಯ ಇಲಾಖಯಿಂದ ಅಂಗಾಂಗ ದಾನದ ಬಗ್ಗೆ ಜಾಗೃತಿ ಕಾರ್ಯಕ್ರಮ

ಅಂಗಾಂಗ ದಾನದ ಬಗ್ಗೆ ಆನ್‌ಲೈನ್‌ನಲ್ಲಿಯೂ ನೋಂದಣಿ ಮಾಡಬಹುದು ಎಂಬುದು ಅನೇಕರಿಗೆ ಗೊತ್ತಿಲ್ಲ. ಆದರೆ, ಧಾರವಾಡ ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ ಈ ಬಗ್ಗೆ ಹೆಚ್ಚಿನ ಜಾಗೃತಿ ಮೂಡಿಸಿದೆ. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಜಾಥಾ, ಆಶಾ ಕಾರ್ಯಕರ್ತರು, ತಾಲೂಕು ಮಟ್ಟದ ಅಧಿಕಾರಿಗಳ ಶ್ರಮದಿಂದಾಗಿ ಈ ಸಾಧನೆ ಮಾಡಲು ಸಾಧ್ಯವಾಗಿದೆ.

ಇದನ್ನೂ ಓದಿ: ಇ-ಕಾಮರ್ಸ್‌ ತಾಣಗಳಲ್ಲಿ ಪಾಕ್‌ ಸರಕು ಮಾರಿದರೆ ಹುಷಾರ್‌: ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಎಚ್ಚರಿಕೆ

ಒಟ್ಟಿನಲ್ಲಿ ದೇಶ ಹಾಗೂ ರಾಜ್ಯಮಟ್ಟದಲ್ಲಿ ಇದೀಗ ಧಾರವಾಡ ಜಿಲ್ಲೆ ಅಂಗಾಂಗ ಹಾಗೂ ಅಂಗಾಂಶ ದಾನದಲ್ಲಿ ಬಹಳ ಎತ್ತರದ ಸ್ಥಾನದಲ್ಲಿರೋದು ಹೆಮ್ಮೆಯ ಸಂಗತಿಯೇ ಸರಿ.

ಕರ್ನಾಟಕದ ಇನ್ನಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ