ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು

ಧಾರವಾಡ ತಾಲೂಕಿನ ರೈತರ ಪಹಣಿಯಲ್ಲಿ ತಪ್ಪಾಗಿ ನಮೂದಾಗಿದ್ದ ವಕ್ಫ್ ಆಸ್ತಿಯ ಹೆಸರನ್ನು ತೆಗೆದುಹಾಕಲಾಗಿದೆ. ಉಪ್ಪಿನ ಬೆಟಗೇರಿ ಗ್ರಾಮದ ರೈತರ ದೀರ್ಘಕಾಲದ ಹೋರಾಟಕ್ಕೆ ಇದು ಫಲ ನೀಡಿದೆ. ಇತರ ಗ್ರಾಮಗಳಲ್ಲಿಯೂ ಇಂತಹ ಸಮಸ್ಯೆಗಳಿವೆ ಎಂಬುದು ತಿಳಿದುಬಂದಿದ್ದು, ಅವುಗಳನ್ನು ಬಗೆಹರಿಸುವ ಪ್ರಯತ್ನ ನಡೆಯುತ್ತಿದೆ.

ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು
ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ ಆಸ್ತಿ ಗೊಂದಲಗಳಿಗೆ ಕೊನೆಗೂ ತೆರೆ: ನಿಟ್ಟುಸಿರು ಬಿಟ್ಟ ರೈತರು
Edited By:

Updated on: Nov 14, 2024 | 8:49 PM

ಧಾರವಾಡ, ನವೆಂಬರ್​ 14: ಧಾರವಾಡ ತಾಲೂಕಿನಲ್ಲಿ ಉಂಟಾಗಿದ್ದ ವಕ್ಫ್​ (Waqf) ಆಸ್ತಿ ಸಂಬಂಧಿತ ಗೊಂದಲಗಳಿಗೆ ಕೊನೆಗೂ ತೆರೆ ಬಿದ್ದಿದೆ. ಸರ್ಕಾರದ ಆಶ್ವಾಸನೆ ಬಳಿಕ ಕೊನೆಗೂ ರೈತರ ಪಹಣಿಯಲ್ಲಿ ಇದ್ದ ವಕ್ಫ್ ಆಸ್ತಿ ಅನ್ನೋದು ಮಾಯವಾಗಿದೆ. ಇದರಿಂದಾಗಿ ಆತಂಕಕ್ಕೊಳಗಾಗಿದ್ದ ರೈತರು ನಿರಾಳರಾಗಿದ್ದಾರೆ.

ವಕ್ಫ್​ ಆಸ್ತಿ ಶಬ್ದ ತೆರವು

ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದ ಜವಳಗಿ, ಮಸೂತಿ ಹಾಗೂ ಹುಟಗಿ ಎಂಬ ರೈತ ಕುಟುಂಬಗಳ ಪಹಣಿ ಪತ್ರಿಕೆಯ ಕಾಲಂ ನಂಬರ್ 11ರಲ್ಲಿ ನಮೂದಾಗಿದ್ದ ಸದರಿ ಆಸ್ತಿ ವಕ್ಫ್​ ಆಸ್ತಿಗೆ ಒಳಪಟ್ಟಿದೆ ಎಂಬ ಶಬ್ದ ಇದೀಗ ತೆರವಾಗಿದೆ. ತಮ್ಮ ಜಮೀನಿನ ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ಕಂಡು ರೈತರು ಆತಂಕ ಪಟ್ಟಿದ್ದರು. ಪಹಣಿಯಲ್ಲಿನ ವಕ್ಫ್ ಆಸ್ತಿ ಎಂಬ ಪದವನ್ನು ತೆಗೆಯಬೇಕು ಎಂದು ಆಗ್ರಹಿಸಿ ಉಪ್ಪಿನ ಬೆಟಗೇರಿ ಗ್ರಾಮದ ರೈತರು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ನೇತೃತ್ವದಲ್ಲಿ ದೊಡ್ಡಮಟ್ಟದ ಹೋರಾಟ ಕೂಡ ನಡೆಸಿದ್ದರು.

ಇದನ್ನೂ ಓದಿ: ದಾಖಲೆ ಪರಿಶೀಲನೆ ವೇಳೆ ವಕ್ಫ್​ ಅಧಿಕಾರಿಗಳ ತಪ್ಪು ಸಾಬೀತು, ಸಿಹಿ ಹಂಚಿ ಸಂಭ್ರಮಿಸಿದ ರೈತರು

ಪಹಣಿಯಲ್ಲಿ ನಮೂದಾಗಿದ್ದ ವಕ್ಫ್ ಹೆಸರನ್ನು ತೆರವುಗೊಳಿಸುವಂತೆ ತಹಶೀಲ್ದಾರರಿಗೆ ಗಡುವು ನೀಡಿದ್ದರು. ಇದೀಗ ರೈತರ ಹೋರಾಟಕ್ಕೆ ಜಯ ಸಿಕ್ಕಂತಾಗಿದ್ದು, ಇತ್ತೀಚೆಗೆ ತಹಸೀಲ್ದಾರ ಸಭೆ ನಡೆಸಿದ ಬೆನ್ನಲ್ಲಿಯೇ ಅಧಿಕೃತವಾಗಿ ಪಹಣಿ ಅಪ್ಡೇಟ್ ಆಗಿದ್ದು, ಈಗ ತೆಗೆದುಕೊಂಡ ಪಹಣಿಯಲ್ಲಿ ವಕ್ಫ್ ಹೆಸರು ನಾಪತ್ತೆಯಾಗಿದೆ.

ಉಪ್ಪಿನ ಬೆಟಗೇರಿ ಗ್ರಾಮದ ಒಟ್ಟು ಆರು ಪಹಣಿಗಳಲ್ಲಿ ತಪ್ಪಾಗಿ ವಕ್ಫ್ ಬೋರ್ಡ್ ಹೆಸರು ಬಂದಿದೆ ಅನ್ನೋದು ಇತ್ತೀಚೆಗೆ ತಹಸೀಲ್ದಾರ್ ನಡೆಸಿದ್ದ ಸಭೆಯಲ್ಲಿ ಸಾಬೀತಾಗಿತ್ತು. ವಕ್ಫ್ ಬೋರ್ಡ್ ಅಧಿಕಾರಿಗಳಿಗೆ ಸೂಕ್ತ ದಾಖಲೆ ತರುವಂತೆ ತಹಸೀಲ್ದಾರ ಹೇಳಿದ್ದರು. ಆದರೆ ಸೂಕ್ತ ದಾಖಲೆ ಇಲ್ಲದೇ ಇರುವ ಹಿನ್ನೆಲೆಯಲ್ಲಿ, ಇದು 1965ರಲ್ಲಿ ಸರ್ವೆ ನಂಬರ್ ಬ್ಲಾಕ್​ಗಳಾಗಿ ಪರಿವರ್ತನೆಯಾದಾಗ ಅದನ್ನು ಅಪ್ಡೇಟ್ ಮಾಡಿಕೊಳ್ಳದೇ ವಕ್ಫ್ ಬೋರ್ಡ್ ತಪ್ಪಾಗಿ ಪಹಣಿಯಲ್ಲಿ ನಮೂದು ಮಾಡಿದೆ ಅನ್ನೋದು ಸಾಬೀತಾಗಿತ್ತು. ಹೀಗಾಗಿ ರೈತರ ಪಹಣಿಯಲ್ಲಿದ್ದ ವಕ್ಫ್ ಭಾರ ಇಳಿಸಿದ್ದಾರೆ.

ಇನ್ನು ಕೆಲವು ಗ್ರಾಮಗಳಲ್ಲಿ ವಕ್ಫ್​ಗೆ ಸಂಬಂಧಿಸಿದ ಮಸೀದಿ ಮತ್ತಿತರೆ ಜಾಗಗಳಿದ್ದು, ಅದನ್ನು ಹಾಗೆಯೇ ಬಿಡಲಾಗಿದ್ದು, ಗರಗ ಗ್ರಾಮದಲ್ಲಿ ರೈತರ ಪಹಣಿಯಲ್ಲಿ ವಕ್ಫ್ ಹೆಸರು ಬಂದಿರೋ ದೂರು ತಹಸೀಲ್ದಾರರಿಗೆ ಬಂದಿದೆ. ಅದನ್ನೂ ಸಹ ಈಗ ಇತ್ಯರ್ಥ ಮಾಡಲಿದ್ದಾರೆ ಎಂದು ಧಾರವಾಡ ತಹಸೀಲ್ದಾರ್​ ಡಾ. ಡಿ. ಎಚ್. ಹೂಗಾರ ಹೇಳಿದ್ದಾರೆ.

ಇದನ್ನೂ ಓದಿ: ಬೀದರ್, ಧಾರವಾಡ ಜಿಲ್ಲೆಯಲ್ಲಿ ಗ್ರಾಮಗಳು ವಕ್ಫ್​ ಪಾಲು: ಜನ ಕಂಗಾಲು

ಜಿಲ್ಲೆಯ ಇನ್ನಿತರ ತಾಲೂಕುಗಳಲ್ಲಿಯೂ ಇದೇ ರೀತಿ ಎಡವಟ್ಟಾಗಿದೆ. ಅಂಥ ದೂರುಗಳ ಬಗ್ಗೆಯೂ ಅಲ್ಲಿನ ತಹಸೀಲ್ದಾರರು ವಿಚಾರಣೆ ನಡೆಸಿದ್ದಾರೆ. ಒಟ್ಟಾರೆಯಾಗಿ ರೈತರ ಪಹಣಿ ಪತ್ರಿಕೆಯಲ್ಲಿ ನಮೂದಾಗಿದ್ದ ವಕ್ಫ್ ಹೆಸರು ಇದೀಗ ತೆರವಾಗಿದ್ದು, ಬಾಕಿ ಇರುವ ರೈತರ ಪಹಣಿಯೂ ವಕ್ಪ್ ಮುಕ್ತವಾಗುತ್ತಾ ಅನ್ನೋದನ್ನು ಕಾದು ನೋಡಬೇಕಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us