AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಈತ ನಿಜಕ್ಕೂ ವಿಚಿತ್ರ ಮನುಷ್ಯನೇ! ಕಠಿಣ ತಪಸ್ಸಿನಂತೆ 5 ವರ್ಷದಿಂದ ವಿಭಿನ್ನ ಆಹಾರ ತಿನ್ನುತ್ತಿದ್ದಾರೆ! ಯಾಕೆ ಗೊತ್ತಾ?

5 ವರ್ಷದಿಂದ ಕಠಿಣ ತಪಸ್ಸು ಎಂಬಂತೆ ವಿಭಿನ್ನ ಆಹಾರ ಪದ್ಧತಿ ಅಳವಡಿಸಿಕೊಂಡಿರುವ ಧಾರವಾಡದ ಶಿವಾನಂದ ಅವರ ಜೀವನ ಕ್ರಮವೇ ಒಂದು ರೋಚಕ. ಈ ರೀತಿಯ ಆಹಾರ ಪದ್ಧತಿಯಿಂದಾಗಿ ಅವರಲ್ಲಿದ್ದ ರೋಗಗಳು ದೂರವಾಗಿದ್ದು, 20 ಕಿಮೀ ನಡೆದು ಬಂದರೂ ಸುಸ್ತಾಗುವುದಿಲ್ಲವಂತೆ. ಶಿವಾನಂದ ಅವರ ಪತ್ನಿ ಪವಿತ್ರಾ ಕೂಡ ಅವರಿಗೆ ಹಸಿ ತರಕಾರಿಗಳನ್ನೇ ಆಹಾರವಾಗಿ ನೀಡುತ್ತಾರೆ. ಬೇರೆ ಕಾರ್ಯಕ್ರಮಕ್ಕೆ ಹೋದಾಗಲೂ ಶಿವಾನಂದ ಅಲ್ಲಿ ಊಟ ಮಾಡದೇ ಮನೆಗೆ ಬಂದು ಹಸಿ ತರಕಾರಿಗಳನ್ನೇ ಸೇವಿಸುತ್ತಾರಂತೆ!

ನರಸಿಂಹಮೂರ್ತಿ ಪ್ಯಾಟಿ, ಧಾರವಾಡ
| Updated By: ಸಾಧು ಶ್ರೀನಾಥ್​|

Updated on:Mar 12, 2024 | 11:06 AM

Share

ಆತ ಕಳೆದ ಐದು ವರ್ಷದಿಂದ ಬೇಯಿಸಿದ ಅನ್ನ, ರೊಟ್ಟಿ, ಚಪಾತಿ ಯಾವುದನ್ನೂ ಸೇವಿಸುತ್ತಿಲ್ಲ. ಪ್ರತಿನಿತ್ಯ ಆತ ಸೇವಿಸುತ್ತಿರುವುದು ಹಸಿ ತರಕಾರಿ, ಬೇವಿನ ಸೊಪ್ಪು, ಕೊಬ್ಬರಿ ಹಾಗೂ ಇತ್ಯಾದಿ ಸೊಪ್ಪು ಮಾತ್ರ (Food). ಇಷ್ಟಕ್ಕೂ ಆ ವ್ಯಕ್ತಿ ಹೀಗೇಕೆ ಬದುಕುತ್ತಿದ್ದಾರೆ? ಯಾರು ಆ ವ್ಯಕ್ತಿ? ಯಾಕೆ ಹೀಗೆಲ್ಲ ಮಾಡುತ್ತಿದ್ದಾರೆ? ಇಲ್ಲಿದೆ ನೋಡಿ… ಹಸಿ ಹಸಿ ಹೀರೇಕಾಯಿ, ಹಸಿ ಆಲೂಗಡ್ಡೆ, ಕೊಬ್ಬರಿ, ಮೆಣಸಿನಕಾಯಿ ತಿನ್ನುತ್ತಿರೋ ಈ ವ್ಯಕ್ತಿಯ ಹೆಸರು ಶಿವಾನಂದ ಬಳ್ಳೂರ. ವಯಸ್ಸು ಈಗಷ್ಟೇ 34 ವರ್ಷ. ಇವರಿಗೆ 29 ವರ್ಷ ವಯಸ್ಸಿದ್ದಾಗಲೇ ಬಿಪಿ, ಸಕ್ಕರೆ ಕಾಯಿಲೆ, ಥೈರಾಯ್ಡ್, ಕಿಡ್ನಿ ಸಮಸ್ಯೆ ಕಾಡಿತ್ತಂತೆ. ಎಲ್ಲ ವೈದ್ಯರನ್ನೂ (Health) ಭೇಟಿ ಮಾಡಿ ಚಿಕಿತ್ಸೆ ಪಡೆದರೂ ಇವರ ದೇಹಕ್ಕೆ ಅಂಟಿಕೊಂಡಿದ್ದ ರೋಗಗಳು ದೂರವಾಗಿರಲಿಲ್ಲವಂತೆ (Dharwad News).

2019 ಕ್ಕಿಂತ ಮೊದಲು ಈತ ಪ್ರತಿ ದಿನ ಚಿಕನ್, ಮಟನ್, ಎಗ್​​ರೈಸ್, ಕರಿದ ಪದಾರ್ಥಗಳನ್ನೇ ತಿನ್ನುತಿದ್ದ. ಯಾವಾಗ ರೋಗಗಳು ಮೈಯಲ್ಲಿ ಸೇರಿಕೊಂಡವೋ ಆಗ ಈತ ಹಸಿ ತರಕಾರಿ ತಿನ್ನೋಕೆ ಆರಂಭ ಮಾಡಿದನಂತೆ. ಸದ್ಯ ಎಲ್ಲ ಔಷಧಿಗಳನ್ನು ಬಿಟ್ಟು ಕೇವಲ ಹಸಿ ತರಕಾರಿ, ಬೇವಿನ ಸೊಪ್ಪು, ಇತ್ಯಾದಿ ಔಷಧಿ ಗುಣಗಳುಳ್ಳ ಸೊಪ್ಪನ್ನು ಹಾಗೆಯೇ ಸೇವಿಸಲಾರಂಭಿಸಿದರಂತೆ. ಅಂದಹಾಗೆ ಈತ ಈತ ಧಾರವಾಡದ ಹೆಬ್ಬಳ್ಳಿ ಅಗಸಿ ಬಡಾವಣೆಯ ಜೀವಿ.

ಐದು ವರ್ಷಗಳಿಂದ ಬೆಳಿಗ್ಗೆ ಎದ್ದ ತಕ್ಷಣ ಬೇವಿನ ಸೊಪ್ಪು, ವಿವಿಧ ಹಣ್ಣು, ಮಧ್ಯಾಹ್ನ ವಿವಿಧ ಹಸಿ ತರಕಾರಿ, ರಾತ್ರಿ ಮತ್ತೆ ಹಸಿ ತರಕಾರಿಗಳನ್ನೇ ಸೇವಿಸಲಾರಂಭಿಸಿದರು. ಕಳೆದ ಐದು ವರ್ಷಗಳಿಂದ ಯಾವುದೇ ಬೇಯಿಸಿದ ಆಹಾರ ಸೇವಿಸದ ಶಿವಾನಂದ ಕೇವಲ ಹಸಿ ತರಕಾರಿ ಮೇಲೆಯೇ ಅವಲಂಬಿತರಾಗಿದ್ದಾರೆ. ಇದರಿಂದ ಅವರ ದೇಹಕ್ಕೆ ಅಂಟಿಕೊಂಡಿದ್ದ ರೋಗಗಳು ದೂರವಾಗಿವೆ. ಈಗ ಉಲ್ಲಾಸದಿಂದ ಇದ್ದು, ಸಾಮಾನ್ಯರಂತೆಯೇ ಬದುಕು ನಡೆಸುತ್ತಿದ್ದಾರೆ.‌

ಇದನ್ನೂ ಓದಿ: ಬೇಸಿಗೆಯಲ್ಲಿ ಸೌತೆಕಾಯಿ ತಿಂದರೆ ಏನಾಗುತ್ತೆ ಗೊತ್ತಾ? ಮೊದಲು ತಿಳಿದುಕೊಳ್ಳಿ

ಇವರ ಮನೆಯ ಸದಸ್ಯರೆಲ್ಲ ಬೇಯಿಸಿದ ಆಹಾರ ತಿನ್ನುವಾಗ ಇವರು ಮಾತ್ರ ಹಸಿ ತರಕಾರಿಯನ್ನು ಸೇವಿಸುತ್ತಾರೆ. ಐದು ವರ್ಷಗಳಿಂದ ಈ ರೀತಿಯ ಆಹಾರ ಪದ್ಧತಿ ಅಳವಡಿಸಿಕೊಂಡಿರುವುದರಿಂದ ಅವರಲ್ಲಿದ್ದ ರೋಗಗಳು ದೂರವಾಗಿದ್ದು, 20 ಕಿಲೋ ಮೀಟರ್ ನಡೆದುಕೊಂಡು ಬಂದರೂ ಅವರಿಗೆ ಸುಸ್ತಾಗುವುದಿಲ್ಲವಂತೆ. ಶಿವಾನಂದ ಅವರ ಪತ್ನಿ ಪವಿತ್ರಾ ಕೂಡ ಶಿವಾನಂದ ಅವರಿಗೆ ಹಸಿ ತರಕಾರಿಗಳನ್ನೇ ಆಹಾರವಾಗಿ ನೀಡುತ್ತಾರೆ. ಬೇರೆ ಕಾರ್ಯಕ್ರಮಕ್ಕೆ ಹೋದಾಗಲೂ ಶಿವಾನಂದ ಅಲ್ಲಿ ಊಟ ಮಾಡದೇ ಮನೆಗೆ ಬಂದು ಹಸಿ ತರಕಾರಿಗಳನ್ನೇ ಸೇವಿಸುತ್ತಾರಂತೆ!

Also Read: ಜನ್ರ ಮುಂದೆ ತಮ್ಮ ದೈತ್ಯಾಕಾರ ದೇಹಗಳ ಪ್ರದರ್ಶಿಸಿ, ಶಕ್ತಿ ಪ್ರದರ್ಶನ ಮಾಡಿ, ಪ್ರಶಸ್ತಿ ಹಣ ಬಾಚಿಕೊಂಡ ನೂರಾರು ದೇಹದಾರ್ಢ್ಯ ಪಟುಗಳು , ಯಾವೂರಲ್ಲಿ

ಈಗ ಯಾವುದೇ ರೋಗವಿಲ್ಲದೇ ಶಿವಾನಂದ ಉಲ್ಲಾಸದಿಂದ ಇದ್ದು, ಇದೇ ರೀತಿಯ ಆಹಾರ ಪದ್ಧತಿಗೆ ಅಂಟಿಕೊಂಡಿದ್ದಾರೆ. ಬೇಯಿಸಿದ ಆಹಾರದಲ್ಲಿ ಸತ್ವ ಇರುವುದಿಲ್ಲ. ಹಸಿ ಆಹಾರದಲ್ಲೇ ಎಲ್ಲಾ ರೀತಿಯ ಪೌಷ್ಠಿಕಾಂಶ ಇರುತ್ತದೆ. ಈ ಆಹಾರ ಮನುಷ್ಯನನ್ನು ರೋಗದಿಂದ ಮುಕ್ತ ಮಾಡಬಲ್ಲದು ಎಂಬುದು ಶಿವಾನಂದ ಅವರ ವಾದ. ಏನೇ ಆಗಲಿ ಐದು ವರ್ಷಗಳಿಂದ ಕಠಿಣ ತಪಸ್ಸು ಎಂಬಂತೆ ಈ ರೀತಿಯ ಆಹಾರ ಪದ್ಧತಿ ಅಳವಡಿಸಿಕೊಂಡು ಬಂದಿರುವ ಶಿವಾನಂದ ಅವರ ಜೀವನ ಕ್ರಮವೇ ಒಂದು ರೋಚಕ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 10:21 am, Tue, 12 March 24